Homeಮುಖಪುಟಮೈಕೆಲ್ ಹನೆಕೆಯ ’ದ ಹಿಡನ್': ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

ಮೈಕೆಲ್ ಹನೆಕೆಯ ’ದ ಹಿಡನ್’: ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

- Advertisement -
- Advertisement -

ಸಾಮಾನ್ಯ ಹೊರಜಗತ್ತಿಗೆ ಯುರೋಪ್ ಎಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಉದಾತ್ತ ಆಶಯಗಳನ್ನು ಮೈಗೂಡಿಸಿಕೊಂಡಂತ ದೇಶಗಳ ಖಂಡ. ಸಮಕಾಲಿನ ಯುರೋಪ್ ಸಿನಿಮಾಗಳಲ್ಲಿ ಕಾಣುವುದು ಇವೇ ಸಂಗತಿಗಳನ್ನು. (ನಾನು ನೋಡಿರುವ ಬಹುತೇಕ ಸಿನಿಮಾಗಳಲ್ಲಿ). ಇನ್ನು ಇವರ ಸಿನಿಮಾಗಳಿಗೆ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಕುರಿತಾದ ವಿಷಯಗಳಿಗೆ ವಸ್ತುವಾಗುವುದು ಎರಡನೇ ಮಹಾಯುದ್ಧದಲ್ಲಿ ಜರ್ಮನಿ ನಡೆಸಿದ ಕ್ರೌರ್ಯ ಮತ್ತು ಅವು ಮನುಷ್ಯನಲ್ಲಿ ಉಂಟು ಮಾಡಿದ ಅಸ್ತಿತ್ವದ ಪ್ರಶ್ನೆಗಳಲ್ಲಿ ಮಾತ್ರ. ಒಂದು ಕಾಲಕ್ಕೆ ಸಾಮ್ರಾಜ್ಯಶಾಹಿಗಳಾಗಿದ್ದ ಯುರೋಪ್‌ನ ಹಲವು ದೇಶಗಳು ಇತರೆ ಖಂಡಗಳಲ್ಲಿ ನಡೆಸಿದ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಇವರ ಸಿನಿಮಾಗಳಿಗೆ ವಸ್ತುಗಳಾಗುವುದು ವಿರಳ. ಈ ಗತದ ಕೃತ್ಯಗಳಿಗೆ ಇವರ ಸಿನಿಮಾಗಳಲ್ಲಿ ಪಶ್ಚಾತ್ತಾಪಕ್ಕೂ ಜಾಗ ಸಿಕ್ಕುವುದಿಲ್ಲ.

’ದ ಹಿಡನ್’ (2005)

ಯಾರನ್ನ ನಾವು ಬೌದ್ಧಿಕ ಮೇಲ್ಪಂಕ್ತಿಯಲ್ಲಿ ಇಟ್ಟು ಕಾಣುತ್ತೇವೆಯೋ, ಅದೇ ಯುರೋಪ್ ದೇಶಗಳ ಸಮುದಾಯಗಳು ತಾವು ನಡೆಸಿದ ರಾಜಕೀಯ ಕ್ರೌರ್ಯಗಳಿಗೆ ಜಾಣ ಕುರುಡಾಗಿರುವುದನ್ನು ಮತ್ತು ಅವರ ಬೂರ್ಜ್ವಾ ಗುಣ, ಹೇಡಿತನ ಹಾಗೂ ಅವರು ಹೊರಜಗತ್ತಿನ ಸಮುದಾಯವನ್ನ ಗ್ರಹಿಸುವ ರೀತಿಯನ್ನು ಹನೆಕೆ ತನ್ನ ’ದ ಹಿಡನ್’ ಸಿನಿಮಾದಲ್ಲಿ ಚರ್ಚಿಸುತ್ತಾರೆ. ಹನೆಕೆ ಆಸ್ಟ್ರಿಯಾ ದೇಶದವರಾದರು ’ದ ಹಿಡನ್’ ಸಿನಿಮಾದ ಕಾಲ ದೇಶಗಳು ಮಾತ್ರ ಫ್ರಾನ್ಸಿನದು. ಅಲ್ಜೀರಿಯಾ ಯುದ್ಧದ (1954-62) ಸಂದರ್ಭದಲ್ಲಿ, ಅಲ್ಜೀರಿಯನ್ ನ್ಯಾಷನಲ್ ಲಿಬರಲ್ ಫ್ರಂಟ್ ಸಂಘಟನೆಯ ಸುಮಾರು 30 ಸಾವಿರ ಜನ ನಡೆಸುತ್ತಿದ್ದ ಶಾಂತಿಯುತ ಮೆರವಣಿಗೆಯ ಮೇಲೆ ಫ್ರಾನ್ಸ್ ಪೊಲೀಸ್ ನಡೆಸಿದ ಹತ್ಯಾಕಾಂಡದಲ್ಲಿ ಸುಮಾರು 300 ಜನ ಸಾಯುತ್ತಾರೆ ಮತ್ತು ಹಲವರು ಕಣ್ಮರೆಯಾಗುತ್ತಾರೆ. ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಫ್ರಾನ್ಸ್‌ನ ಮಧ್ಯಮ ವರ್ಗದ ಬೌದ್ಧಿಕ ಪರಿಸರದಲ್ಲಿ ಬದುಕುತ್ತಿರುವ ಕುಟುಂಬವೊಂದರ ಖಾಸಗಿ ಬದುಕಿನ ಘಟನೆಗಳನ್ನು ಹನೆಕೆ ಚಿತ್ರಿಸುತ್ತಾರೆ. ಖಾಸಗಿ ಸಂಗತಿಯಲ್ಲಿ ಮಾಡುವ ಪಶ್ಚಾತ್ತಾಪ ನಿರಾಕರಣೆ ಹೇಗೆ ಇಡೀ ದೇಶದ ಪಶ್ಚಾತ್ತಾಪದ ನಿರಾಕರಣೆ ಆಗಿರುತ್ತದೆ ಎಂಬುದನ್ನು ಹನಕೆ ಹೊಸ ಮಾದರಿಯ ದೃಶ್ಯಕಟ್ಟುವಿಕೆಯ ಮೂಲಕ ಹೆಣೆಯುತ್ತಾರೆ. ಇದಕ್ಕೆ ಸಿನಿಮಾದ ಪ್ರಾರಂಭದ ದೃಶ್ಯವೇ ಸಾಕ್ಷಿಯಾಗಿದೆ.

ಬೌದ್ಧಿಕ ಪ್ರತಿನಿಧಿಗಳಂತಿರುವ ಜಾರ್ಜ್ ಮತ್ತು ಅನ್ನೆ ದಂಪತಿಗಳು ಫ್ರಾನ್ಸ್ ನಗರದ ಸುಸಜ್ಜಿತ ಮನೆಯೊಂದರಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದಾರೆ. ಜಾರ್ಜ್ ಟಿವಿ ಒಂದರಲ್ಲಿ ಸಾಹಿತ್ಯ ಕುರಿತಾದ ಕಾರ್ಯಕ್ರಮ ನಡೆಸಿಕೊಡುವ ನಿರೂಪಕನ ವೃತ್ತಿಯಲ್ಲಿದ್ದರೆ, ಅನ್ನೆ ಪುಸ್ತಕ ಪ್ರಕಾಶನ ಸ್ವರೂಪದ ವೃತ್ತಿಯಲ್ಲಿ ಇದ್ದಾಳೆ. ಜಾರ್ಜ್ ಮತ್ತು ಅನ್ನೆಯರ ನೆಮ್ಮದಿ ಬದುಕು ಒಂದು ದಿನ ದಿಢೀರ್ ಎಂದು ಬರುವ ವಿಡಿಯೋಟೇಪ್‌ನಿಂದ ಡಿಸ್ಟರ್ಬ್ ಆಗುತ್ತದೆ. ಇವರದ್ದೇ ಮನೆ ಮತ್ತು ದಿನಚರಿಯ ದೃಶ್ಯಗಳನ್ನು ಗೌಪ್ಯ ಕ್ಯಾಮೆರಾ ಮೂಲಕ ಆ ವಿಡಿಯೋದಲ್ಲಿ ಸೆರೆಹಿಡಿಯಲಾಗಿರುತ್ತದೆ. ಜಾರ್ಜ್ ದಂಪತಿಗಳಿಗೆ ನಾವು ಯಾರದೋ ಕಣ್ಗಾವಲಿನಲ್ಲಿ ಇದ್ದೇವೆ ಮತ್ತು ಈ ಮೂಲಕ ನಮ್ಮನ್ನು ಯಾರೋ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಮುಂದೆ ಬರುವ ವಿಡಿಯೊ ಟೇಪ್ ಮತ್ತು ಅದರೊಂದಿಗೆ ಬರುವ ಡ್ರಾಯಿಂಗ್‌ನಿಂದ, ಜಾರ್ಜ್‌ಗೆ ತನ್ನ ಬಾಲ್ಯದ ದಿನಗಳು ನೆನಪಾಗುತ್ತವೆ ಮತ್ತು ಈ ವಿಡಿಯೋ ಕಳುಹಿಸುತ್ತಿರುವವರು ಯಾರೆಂಬ ಬಗ್ಗೆ ಒಂದು ಅಂದಾಜಿಗೆ ಬರುತ್ತಾನೆ.

ಜಾರ್ಜ್ 5 ವರ್ಷದವನಿದ್ದಾಗ ಅವನ ತಂದೆ, 1961ರ ಫ್ರಾನ್ಸ್ ಹತ್ಯಾಕಾಂಡದಲ್ಲಿ ಮೃತನಾಗಿರಬಹುದಾದ ಅಥವಾ ಕಣ್ಮರೆಯಾಗಿದ್ದ ಅಲ್ಜೀರಿಯನ್ ದಂಪತಿಗಳ ಮಗುವೊಂದನ್ನು ದತ್ತು ಪಡೆದು ತನ್ನ ಹಳ್ಳಿ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ವಯಸ್ಸಿನಲ್ಲಿ ಜಾರ್ಜ್‌ಗಿಂತ ಹಿರಿಯನಾದ ಆ ನಿರಾಶ್ರಿತ ಮಗುವಿನ ಹೆಸರು ಮಜೀದ್. ಮಜೀದ್ ಮನೆಗೆ ಬಂದ ನಂತರ ಜಾರ್ಜ್‌ಗೆ ಮನೆಯಲ್ಲಿ ತಾನು ಒಬ್ಬನೇ ಇದ್ದಾಗಿನ ಕಂಫರ್ಟ್ ಈಗಿಲ್ಲ ಎಂಬ ಭಾವನೆ ಪ್ರಾರಂಭವಾಗಿ, ತನಗಿಂತ ಬಲಶಾಲಿಯಾದ ಮಜೀದ್‌ನನ್ನು ನೋಡಿದಾಗಲೆಲ್ಲ ಅಭದ್ರತೆಗೆ ಒಳಗಾಗುತ್ತಾನೆ. ತನ್ನ ತಂದೆ ತಾಯಿಗೆ ಮಜೀದ್ ಮೇಲೆ ಸುಳ್ಳು ಅರೋಪಗಳನ್ನು ಮಾಡಿ ಅವನನ್ನು ಮನೆಯಿಂದ ಅನಾಥಾಶ್ರಮಕ್ಕೆ ಸಾಗಿಹಾಕಲು ಕಾರಣವಾಗುತ್ತಾನೆ.

ಜಾರ್ಜ್‌ನ ಬಾಲ್ಯದ ನೆನಪು ಅನಾಮಧೇಯವಾಗಿ ಬಂದ ವಿಡಿಯೋ ಟೇಪ್ ಕಾರಣವಾಗಿ ನೆನಪಿಗೆ ಬರುತ್ತದೆಯೇ ಹೊರತು ಆ ಘಟನೆಯ ಬಗ್ಗೆ ಪಶ್ಚಾತ್ತಾಪ ಇರುವುದಿಲ್ಲ. ಅನ್ನೆಯಳಿಗೆ ಈ ಘಟನೆಯನ್ನು ವಿವರಿಸುವಾಗ ಕೂಡ ಜಾರ್ಜ್ ತನ್ನ ಪೋಷಕರಿಗೆ ಮಜೀದ್ ವಿರುದ್ಧ ಹೇಳಿದ ಸುಳ್ಳುಗಳು ಬಾಲ್ಯದ ಸಹಜ ವರ್ತನೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಈ ವಿಡಿಯೋಗಳನ್ನು ಮಜೀದ್ ತನ್ನ ಮೇಲಿನ ಪ್ರತೀಕಾರಕ್ಕೆ ಕಳುಹಿಸುತ್ತಿದ್ದಾನೆ ಎಂಬ ಖಚಿತ ನಿಲುವಿಗೆ ಜಾರ್ಜ್ ಬರುತ್ತಾನೆ. ಎಲ್ಲೋ ಒಂದು ಇಕ್ಕಟ್ಟಾದ ವಸತಿ ಸಂಕೀರ್ಣದಲ್ಲಿ ಬದುಕುತ್ತಿರುವ ಮಜೀದ್‌ನನ್ನು ಹುಡುಕುವ ಜಾರ್ಜ್, ಅವನಿಗೆ ಈ ರೀತಿಯ ವಿಡಿಯೋಗಳನ್ನು ಯಾಕೆ ಕಳುಹಿಸುತ್ತಿದ್ದೀಯಾ ಎಂದು ಕೇಳುತ್ತಾನೆ. ಮಜೀದ್ ಈ ಅರೋಪವನ್ನು ನಿರಾಕರಿಸುತ್ತಾನೆ. ಆದರೂ ಜಾರ್ಜ್ ಅವನಿಗೆ ಎಚ್ಚರಿಕೆ ನೀಡುತ್ತಾನೆ. ಈ ಎಚ್ಚರಿಕೆ ನೀಡಿದ ದೃಶ್ಯಗಳಿರುವ ವಿಡಿಯೋ ಟೇಪ್ ಜಾರ್ಜ್ ಕಚೆರಿಯ ವಿಳಾಸಕ್ಕೆ ಮರುದಿನ ತಲುಪುತ್ತದೆ. ಆ ರಾತ್ರಿ ಜಾರ್ಜ್ ಮಗ ಪಿರ್ರೋಟ್ ಮನೆ ತಲುಪುವುದಿಲ್ಲ. ಇದು ಮಜೀದ್‌ನದೆ ಕೃತ್ಯ ಎಂದು ನಿರ್ಧರಿಸುವ ಜಾರ್ಜ್ ಪೊಲೀಸ್ ಕಂಪ್ಲೇಟ್ ನೀಡುತ್ತಾನೆ. ಮಜೀದ್‌ನನ್ನು ಬಂಧಿಸಲಾಗುತ್ತದೆ. ಪಿರ್ರೋಟ್ ಕಾಣಿಯಾಗಿರುವ ಬಗ್ಗೆ ಮಜೀದ್ ಕೈವಾಡ ಇಲ್ಲವಾಗಿ ಮಾರನೆ ದಿನ ಅವನು ಬಿಡುಗಡೆಯಾಗುತ್ತಾನೆ. ಪಿರ್ರೋಟ್ ತನ್ನ ತಾಯಿಯ ಮೇಲಿನ ಕೋಪಕ್ಕೆ ರಾತ್ರಿ ಮನೆಗೆ ಬಂದಿರುವುದಿಲ್ಲ ಎಂದು ತಿಳಿಯುತ್ತದೆ. ಮಾರನೆಯ ದಿನ ಮಜೀದ್ ಜಾರ್ಜ್‌ನನ್ನು ತನ್ನ ಮನೆಗೆ ಅಹ್ವಾನಿಸುತ್ತಾನೆ. ಜಾರ್ಜ್ ಮಜೀದ್ ಮನೆಗೆ ಬಂದು ಮಾತು ಪ್ರಾರಂಭಿಸುತ್ತಿದ್ದಂತೆಯೇ ’ನಾನು ಕರೆದದ್ದು ಇದರ ಸಲುವಾಗಿ’ ಎಂದು ಹೇಳುತ್ತಾ ಮಜೀದ್ ತನ್ನ ಜೇಬಿನಲ್ಲಿದ್ದ ರೇಜರ್ ತೆಗೆದು ತನ್ನ ಕತ್ತನ್ನು ಕೊಯ್ದುಕೊಂಡು ಸಾಯುತ್ತಾನೆ.

ಇದಿಷ್ಟು ಕಥಾಹಂದರ. ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಯಾರು ಎಂಬ ಸಸ್ಪೆನ್ಸ್ ಬಿಡಿಸುವ ಮತ್ತು ಆ ಮೂಲಕ ಪ್ರೇಕ್ಷಕನನ್ನು ಥ್ರಿಲ್ ಮೂಡ್‌ಗೆ ಒಳಪಡಿಸುವ ಯಾವ ಇರಾದೆಯೂ ಹನೆಕೆಗೆ ಇಲ್ಲ ಎಂಬುದು ಬಹಳ ನಿಧಾನಕ್ಕೆ ತಿಳಿಯುತ್ತದೆ. ಜಾರ್ಜ್ ಹುಡುಕಹೊರಡುವುದು ವಿಡಿಯೋ ಮುಖಾಂತರ ತನ್ನ ಕುಟುಂಬವನ್ನು ಭಯಪಡಿಸುತ್ತಿರುವವರು ಯಾರೆಂದು. ಹನೆಕೆ ಹುಡುಕುತ್ತಿರುವುದು ಭಯಭೀತನಾದ ಜಾರ್ಜ್‌ನ ಗತದ ಕೃತ್ಯ ಯಾವುದು ಮತ್ತು ಆ ಕೃತ್ಯದ ಬಗ್ಗೆ ಅವನಿಗಿರುವ ಅಭಿಪ್ರಾಯವಾದರೂ ಏನೆಂಬುದನ್ನು. ಅಮೆರಿಕಾದ 9/11ರ ಘಟನೆ ಮತ್ತು ಆನಂತರದ ಅಮೆರಿಕದ ವರ್ತನೆಗಳೆ ಹನೆಕೆಗೆ ಈ ಸಿನಿಮಾಗೆ ಮೂಲ ಪ್ರೇರಣೆ ಎಂದು ಒಂದು ಕಡೆ ಓದಿದ ನೆನಪು.

ಜಾರ್ಜ್ ತನ್ನ ಬಾಲ್ಯದಲ್ಲಿ ಮಜೀದ್ ವಿಚಾರವಾಗಿ ತಾಳಿದ ಅಸಹನೆ ಮತ್ತು ಅವನ ಮೇಲೆ ಮಾಡಿದ ಸುಳ್ಳು ಆರೋಪದಿಂದ ಮಜೀದ್ ತನಗೆ ದೊರಕಬಹುದಾಗಿದ್ದ ಉತ್ತಮ ಶಿಕ್ಷಣ, ಆರೈಕೆ ಮತ್ತು ಭವಿಷ್ಯದಿಂದ ವಂಚಿತನಾಗಿದ್ದಾನೆ. ಜಾರ್ಜ್‌ನ ಈ ಕೃತ್ಯದ ಬಗ್ಗೆ ನೆನಪು ಮಾಡಲು ಪ್ರಯತ್ನಿಸುವ ಮತ್ತು ಅದಕ್ಕಾಗಿ ಕಿಂಚಿತ್ ಪಶ್ಚಾತ್ತಾಪ ಏನಾದರೂ ಇದೆಯಾ ಎಂದು ಹುಡುಕುವ ಮಜೀದ್ ಮಾತುಗಳು; ಇದಕ್ಕೆ ಜಾರ್ಜ್ ತೋರಿಸುವ ನಿರ್ಲಕ್ಷ್ಯ ಮತ್ತು ತನ್ನ ತಪ್ಪುಗಳಿಗೆ ಅವನು ಕೊಡುವ ಸಮರ್ಥನೆ; ಇವು ದಬ್ಬಾಳಿಕೆ ನಡೆಸುವ ಪ್ರತಿಯೊಂದು ದೇಶ, ಸಮುದಾಯ ಕೊಡುವ ಸಮರ್ಥನೆಗಳೂ ಹೌದು. ಜಾರ್ಜ್‌ನ ವೈಯಕ್ತಿಕ ಪಶ್ಚಾತ್ತಾಪದ ನಿರಾಕರಣೆ, ದೇಶ ಮತ್ತು ಸಮುದಾಯಗಳ ಸಾಮೂಹಿಕ ಪಶ್ಚಾತ್ತಾಪದ ನಿರಾಕರಣೆಯೂ ಹೌದು. ಹನೆಕೆ ಈ ಸಿನಿಮಾದಲ್ಲಿ ಹೇಳಹೊರಟಿರುವುದು ಅದನ್ನೇ ಅನಿಸುತ್ತದೆ.


ಇದನ್ನೂ ಓದಿ: ‘ಗರಂ ಹವಾ’: ಒಂದು ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...