Homeಕರ್ನಾಟಕಕುಂಕುಮ ವಿಚಾರ: ಮಹಿಳೆಯನ್ನು ನಿಂದಿಸಿದ ಮುನಿಸ್ವಾಮಿಗೆ ಜನರಿಂದ ತರಾಟೆ

ಕುಂಕುಮ ವಿಚಾರ: ಮಹಿಳೆಯನ್ನು ನಿಂದಿಸಿದ ಮುನಿಸ್ವಾಮಿಗೆ ಜನರಿಂದ ತರಾಟೆ

- Advertisement -
- Advertisement -

”ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ಲವಾ? ವೈಷ್ಣವಿ ಎಂಬುದಾಗಿ ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಯಾರೊ ಕಾಸು ಕೊಡುತ್ತಾರೆ ಅಂತ ಸುಜಾತ ಅಂತ ಹೆಸರು ಇಟ್ಟುಕೊಂಡಿದ್ದೀಯಾ? ಗಂಡ ಬದುಕಿದ್ದಾನೆ ತಾನೇ? ನಿನಗೆ ಕಾಮನ್ ಸೆನ್ಸ್ ಇಲ್ಲ. ತಂದೆ ಹೆಸರು ಬದಲಾಯಿಸುತ್ತೀಯಾ ನೀನು? ಅದನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲ ನಿನಗೆ..”- ಹೀಗೆ ಕೋಲಾರ ಸಂಸದ ಮುನಿಸ್ವಾಮಿಯವರು ದುಡಿಯುವ ಮಹಿಳೆಯೊಬ್ಬರನ್ನು ನಿಂದಿಸಿದ್ದಾರೆ.

ಸಾಂವಿಧಾನಿಕ ಮೌಲ್ಯಗಳನ್ನು ಮರೆತು ಮುನಿಸ್ವಾಮಿ ವರ್ತಿಸಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮುನಿಸ್ವಾಮಿಯವರ ಹೇಳಿಕೆಯನ್ನು ಹಂಚಿಕೊಂಡು ಬುದ್ಧಿಮಾತು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಈ ಘಟನೆ ನಡೆದಿರುವುದನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಕೀಲರಾದ ಅಖಿಲಾ ವಿದ್ಯಾಸಂದ್ರ ಈ ಕುರಿತು ಪೋಸ್ಟ್ ಮಾಡಿದ್ದು, “ಇಂತಹ ಅಧಿಕ ಪ್ರಸಂಗ ಮೆರೆಯಲು ಈ ಸಂಸದನಿಗೆ ಅಧಿಕಾರ ಕೊಟ್ಟವರು ಯಾರು? ಪ್ರತಿಸಲ ಮುಖ ತೊಳೆದಾಗ ಹರಿದು ಚರಂಡಿನೀರಿನೊಂದಿಗೆ ಮಿಳಿತವಾಗುವ ಕುಂಕುಮದಲ್ಲಿದೆಯೇ ಆಕೆಯ ಗಂಡನ ಜೀವ? ತಲೆಯೊಳಗೆ ಮತಿಯಿಲ್ಲದ ಕೂಪಮಂಡೂಕಗಳಿವು. ಆ ಸ್ವಾವಲಂಬಿ ಮಹಿಳೆಯರನ್ನು ಅವಮಾನಗೊಳಿಸಲೆಂದೇ ಅಂತಾರಾಷ್ಟ್ರೀಯ ಮಹಿಳಾ ದಿನದ ಆ ಕಾರ್ಯಕ್ರಮಕ್ಕೆ ಹೋಗಿದ್ದೇನು ಈ ‘ಮನು’ಜ? ಛೀ ಧಿಕ್ಕಾರವಿರಲಿ ಈತನ ವ್ಯಕ್ತಿತ್ವಕ್ಕೆ” ಎಂದಿದ್ದಾರೆ.

ಲೇಖಕಿ ಮಮತಾ ಅರಸೀಕೆರೆ ಪ್ರತಿಕ್ರಿಯಿಸಿ, “ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ಎಂದು ಸಂಸದರೊಬ್ಬರು ಮಹಿಳೆಯರೊಬ್ಬರನ್ನು ದಬಾಯಿಸಿದ್ದಾರೆ. ನಿನ್ನ ಗಂಡ ಬದುಕಿದ್ದಾನೆ ತಾನೆ ಕುಂಕುಮ ಇಟ್ಟುಕೊ ಅಂದಿದ್ದಾರೆ. ಈ ಅಂಶಗಳೆಲ್ಲ ವೈಯಕ್ತಿಕ ವಿಷಯಗಳು. ಭಾರತೀಯ ಸಂಸ್ಕೃತಿ ಹೆಸರಲ್ಲಿ ಹೇರುವ ಪ್ರವೃತ್ತಿ ಸಲ್ಲದು. ಅದರಲ್ಲೂ ಹೆಣ್ಣುಮಕ್ಕಳೆಂದರೆ ಸಾಕು ಅವರನ್ನೇ ಸತತ ಗಮನಿಸುವ, ಕಾಯ್ದುಕೊಂಡಿದ್ದು ಯಾವುದಾದರೂ ವಿಷಯವನ್ನೆತ್ತಿ ತಿವಿಯುವ ಈ ಪುರುಷರ ಮನಃಸ್ಥಿತಿ ಅದ್ಯಾವಾಗ ಬದಲಾಗುವುದೊ ತಿಳಿಯದು. ಬಾಹ್ಯ ಲಕ್ಷಣಗಳು , ಸಂಕೇತಗಳ ಮೂಲಕ ಮಹಿಳೆಯರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ನಡೆಗಳನ್ನು ಯಾವತ್ತೂ ವಿರೋಧಿಸಬೇಕು” ಎಂದು ತಿಳಿಸಿದ್ದಾರೆ.

ಮುಂದುವರಿದು, “ಸಂಸ್ಕೃತಿ ಹೆಸರಲ್ಲಿ ಮಾಡುವ ಅನಾಚಾರಗಳನ್ನು ಮೊದಲು ಬದಲಾಯಿಸಲಿ. ಅಷ್ಟಕ್ಕೂ ಸಂಸ್ಕೃತಿ ಉಳಿಸುವ ಜವಾಬುದಾರಿಕೆಯನ್ನು ಯಾರು ಯಾರಿಗೂ ಕೊಟ್ಟಿಲ್ಲ. ದಬಾಯಿಸುವ ಹಕ್ಕು ಯಾರಿಗೂ ಇಲ್ಲ. ದಬಾಯಿಸಲು, ಬದಲಾಯಿಸಲು, ಬೇಕಾದಷ್ಟು ಸಮಾಜ ಬಾಹಿರ ಅಪಸವ್ಯಗಳಿವೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳ ಬಗ್ಗೆ ಖಂಡತುಂಡವಾಗಿ ಮಾತನಾಡಲಿ ನೋಡುವ. ಅಂತಹ ಕಡೆಯೆಲ್ಲಾ ಈ ಜೋರು ಮನೋಭಾವ ಮಾಡಿ ತೋರಿಸಲಿ. ಹೊರಗೊಂದು ಒಳಗೊಂದು ಪ್ರವೃತ್ತಿಯನ್ನು ಬಿಟ್ಟು ನಡೆ ನುಡಿ ಸಮತೋಲದಲ್ಲಿಟ್ಟುಕೊಂಡಿರಲಿ ಸಾಕು ಈ ಪುರುಷವರ್ಗಗಳೆಲ್ಲ” ಎಂದಿದ್ದಾರೆ.

ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ವಕೀಲರಾದ ಅಂಜಲಿ ರಾಮಣ್ಣ ಪ್ರತಿಕ್ರಿಯಿಸಿ, “ಸಿರಿವಂತರು ಅವರ ಧಿರಿಸಿಗೆ match ಆಗಲ್ಲ ಅಂತ ಕುಂಕುಮ ಇಟ್ಟುಕೊಂಡಿರಲ್ಲ. ಮಧ್ಯಮದವರು matching ಬೊಟ್ಟು ಇಟ್ಟುಕೊಂಡಿರುತ್ತಾರೆ. ದುಡಿಯುವ ಮಹಿಳೆಯರು ಕುಂಕುಮ, ಬಳೆ ಏನೂ ತೊಟ್ಟಿರುವುದಿಲ್ಲ, ಅವರ ಕೈ ಬಿರುಕುಗಳಿಂದ, ಹಣೆ ಧೂಳಿನಿಂದ, ಕೂದಲು ಬಿಸಿಲಿನಿಂದ ತುಂಬಿರುತ್ತದೆ. ಇವರೆಲ್ಲರ ಗಂಡಂದಿರು ಪೂರ್ತಿ ಆಯುಷ್ಯ ಬದುಕಿದವರನ್ನು ಕಂಡಿದ್ದೇನೆ. ಸಂಸದ ಮುನಿಸ್ವಾಮಿ ಮಹಾಶಯರು ಚಿತ್ರಗುಪ್ತನ ಕೆಲಸ ಬಿಟ್ಟು ಜನರ ಜವಾಬ್ದಾರಿ ನೋಡುವುದು ಒಳಿತು” ಎಂದು ಬುದ್ಧಿ ಹೇಳಿದ್ದಾರೆ.

ಲೇಖಕಿ ಭಾರತಿ ಹೆಗಡೆಯವರು ಪ್ರತಿಕ್ರಿಯಿಸಿ, “ಪರವಾಗಿಲ್ಲ ಸಂಸದರೇ‌. ಇದು ಬಹಳ ಬೇಗ ಕಣ್ಣಿಗೆ ಬೀಳತ್ತೆ. ಹಾಸಿ ಹೊದೆಯಷ್ಟಿರುವ ಬಡತನ, ನೀರಿನ ಸಮಸ್ಯೆ, ಹೆಚ್ಚುತ್ತಾ ಇರೋ ಹೆಣ್ಣಿನ ಮೇಲಿನ ದೌರ್ಜನ್ಯ ಅತ್ಯಾಚಾರಗಳು, ಇದ್ಯಾವುದೂ ತಮ್ಮ ಗಮನಕ್ಕೆ ಬರೋದಿಲ್ಲ. ಕುಂಕುಮ ಇಟ್ಗೊಳೋದು ಬಿಡೋದು ಅವರವರ ವೈಯಕ್ತಿಕ ನಿಲುವು. ಅದಕ್ಕಾಗಿ ಸರ್ವಾಜನಿಕವಾಗಿ ಒಬ್ಬ ಮಹಿಳೆಯನ್ನು ನಿಂದಿಸಿದ ತಮ್ಮ ಕುರಿತು ಏನೆನ್ನಬೇಕು?” ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಘಟನೆಯನ್ನು ಖಂಡಿಸಿದ್ದು, “ಈ ಮನಃಸ್ಥಿತಿಗೆ ಧಿಕ್ಕಾರ ಹೇಳುತ್ತಲೇ. ಇದರ ಮೂಲ ಹುಡುಕಿ ಅದನ್ನು ಸಂಪೂರ್ಣ ತೊಲಗಿಸುವ ಪ್ರಯತ್ನ ಮಾಡದೇ ಹೋದರೆ ಇಂಥ ಮನಃಸ್ಥಿತಿಗಳು ಮತ್ತೆ ಮತ್ತೆ ಎದ್ದು ನಮಗೆ ಜಾಡಿಸುವ ಸಂಭವ ಸೃಷ್ಟಿಯಾಗುತ್ತಲೇ ಇರುತ್ತದೆ. ಇದು ನನ್ನ ಪ್ರಕಾರ ಈ ಮಹನೀಯರ ಹೆಗಲ ಮೇಲಿಟ್ಟು ಬೇರೆಯವರು ಗುರಿ ಇಟ್ಟು ಹೊಡೆದ ಪಿಸ್ತೂಲ್. ಹೆಗಲು ಕೊಟ್ಟವರನ್ನು ಧಿಕ್ಕರಿಸುತ್ತಲೇ , ಬೇರೆಯವರ ಹೆಗಲ ಮೇಲೆ ತಮ್ಮ ಸಿದ್ಧಾಂತದ ಗುರಿಯನ್ನು ಇಟ್ಟು ಹೊಡೆವ ಮನಸ್ಥಿತಿಯನ್ನು ಸಂಪೂರ್ಣ ಧಿಕ್ಕರಿಸಬೇಕಾಗಿದೆ. ಮಹಿಳೆಯರ ಸ್ವಯಂ ಅಸ್ಮಿತೆಯನ್ನು ಒಪ್ಪದ ಎಲ್ಲ ಜಾತಿ ಧರ್ಮದ ಮೂಲಭೂತವಾದಿ ಮನಃಸ್ಥಿತಿಗಳಿಗೆ ಧಿಕ್ಕಾರ ಹೇಳಬೇಕಾಗಿದೆ” ಎಂದಿದ್ದಾರೆ.

ಪ್ರೊ.ಪುರುಷೋತ್ತಮ ಬಿಳಿಮಲೆಯವರು ಹೀಗೆ ಪೋಸ್ಟ್ ಮಾಡಿದ್ದಾರೆ:

ಅಯ್ಯಾ ಮುನಿಸ್ವಾಮೀ,
ಬಡ ಮಹಿಳೆಯರ ಕುಂಕುಮ ಬೆವರಲ್ಲಿ ಕರಗಿ ಹೋಗುತ್ತೆ.
ಕುಂಕುಮ ತರಲು ಮತ್ತೆ ಗಂಡನಿಗೆ ಹೇಳಬೇಕು,
ನಿನ್ನ ಕುಂಕುಮ ನಿನ್ನ ಹಣೆಯಲಿ ಭದ್ರವಾಗಿರಲಿ
ಕಂಡ ಕಂಡವರಿಗೆಲ್ಲ ನಾಮ ಹಾಕಲು ಬೇಕಾಗಬಹುದು ನಿನಗೆ
ದುಡಿವ ಮಹಿಳೆಯ ಬಳೆಗಳು ಕೆಲಸದ ನಡುವೆ ಒಡೆದು ಚೂರಾಗುತ್ತವೆ.
ಮತ್ತೆ ಕೊಳ್ಳಲು ಊರ ಜಾತ್ರೆಗೆ ಕಾಯಬೇಕು.
ಹಬ್ಬದಲಿ ಬಳೆಮಾರುವನಿಗೆ ತಡೆ ಒಡ್ಡಲಾಗಿದೆಯಂತೆ
ಈಗ ನಿನ್ನ ಬಳೆಗಳ ನೀನೇ ಇಟ್ಟುಕೋ
ಜಾತಿ ಮತಗಳ ಹೆಸರಿನಲಿ ಜನಗಳಿಗೆ ತೊಡಿಸಲು ಬೇಕಾಗಬಹುದು ನಿನಗೆ
ತಾಯಂದಿರ ಹೊಟ್ಟೆ ಬೆನ್ನಿಗಂಟಿದ್ದು ನಿನಗೆ ಕಾಣಲಿಲ್ಲ
ಎಣ್ಣೆಯಿಲ್ಲದೆ ಅವರ ನೆತ್ತಿ ಒಣಗಿದ್ದು ನಿನಗೆ ಗೊತ್ತಿಲ್ಲ
ಗುಡಿಸಲುಗಳು ಸೋರುತ್ತಿರುವುದ ನೀನು ನೋಡಲಿಲ್ಲ,
ಮಕ್ಕಳು ಶಾಲೆಕಾಣದ ಬಗೆಗೆ ನಿನಗೆ ಅರಿವು ಮೂಡಲಿಲ್ಲ.
ವಯಸಾದರೂ ನಿನಗೆ ತಾಯಿಯ ಮುಖ ದರ್ಶನವಾಗಲೇ ಇಲ್ಲ.

ಕವಿತಾ ಕವಿ ಎಂಬವರು ಪ್ರತಿಕ್ರಿಯಿಸಿ, “ನನ್ನಂಥವರನ್ನು ಕೇಳಬೇಕಿತ್ತು. ಗ್ರಹಚಾರ ಬಿಡಿಸ್ತಿದ್ದೆ. ಜನಪ್ರತಿನಿಧಿಯಾಗಿರುವುದು ಜನಸೇವೆ ಮಾಡಲೆಂದೇ ಹೊರತು ದಬ್ಬಾಳಿಕೆ ನಡೆಸಲು ಅಲ್ಲ. ಮೊದಲು ನಿಮ್ಮನ್ನು ಗಾದಿಗೇರಿಸಿದ ಸಂವಿಧಾನ ಓದಿ. ನಂತರ ಮತ ಕೇಳಲು ಬನ್ನಿ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಗುಜರಾತ್‌ನ ಅದಾನಿ ಬಂದರಿನ ಮೂಲಕ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ...

0
ಗುಜರಾತ್‌ನ ಅದಾನಿ ಬಂದರಿನ ಮೂಲಕ ಟ್ರಕ್‌ಗಳಲ್ಲಿ ಸಾವಿರಾರು ಹಸುಗಳನ್ನು ತುಂಬಿ ವಧೆಗಾಗಿ ಅರಬ್‌ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿನಾಯಕ್ ಕಟ್ಟಿಕ್ಕರ ಕನ್ನಡಿಗ ಎಂಬ ಫೇಸ್‌ಬುಕ್ ಬಳಕೆದಾರ...