| ನಾನುಗೌರಿ ಡೆಸ್ಕ್ |
ಕನ್ನಡದ ಯುವ ಬರಹಗಾರ ಹನಮಂತ ಹಾಲಿಗೇರಿಯವರ ಇದುವರೆಗಿನ ಸಾಹಿತ್ಯ ಅದು ಸಮಾಜಮುಖಿಯಾಗಿರುವಂತದ್ದು. ಬದುಕು ಮತ್ತು ಬರಹ ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಆಶಯ ಅವರದು. ಅವರ ಕೆಂಗುಲಾಬಿ ಕಾದಂಬರಿ ಬಹಳ ಪ್ರಸಿದ್ದಿ ಪಡೆದು ಸಿನಿಮಾ ಆಗುವತ್ತ ಹೆಜ್ಜೆ ಇಟ್ಟರೆ, ಊರು ಸುಟ್ಟರೂ ಹನಮಪ್ಪ ಹೊರಗ ಎಂಬ ನಾಟಕ ಇದವರೆಗು 320 ಪ್ರದರ್ಶನಗಳನ್ನು ಕಂಡಿದ್ದು ಜೈ ಕೇಸರಿನಂದನ ಎಂಬ ಸಿನೆಮಾ ಆಗಿಯೂ ತೆರೆಕಂಡಿದೆ. ಇಂತಹ ಯುವಪ್ರತಿಭೆಯ ಹೊಸ ಕಥೆ ನಗ್ನ 99 ಎಂಬುದು ನಾಟಕರೂಪಕ್ಕೆ ಬಂದು ಪ್ರದರ್ಶನಕ್ಕೆ ಸಿದ್ದವಾಗಿದೆ.
ಏನಿದು ನಗ್ನ 99?
ಅರೆಹುಚ್ಚನೊಬ್ಬನ ಮಾನಸಿಕ ತೊಳಲಾಟಗಳ ಸುತ್ತ ಇರುವ ಈ ನಾಟಕ, ಸಮಾಜದ ತುಂಬಿಕೊಂಡಿರುವ ಹುಚ್ಚತನಗಳನ್ನು ಬಯಲಿಗೆಳೆಯುವ ಆಶಯ ಹೊಂದಿರುವಂಥದ್ದು. ಬುದ್ಧಿಮಾಂದ್ಯರಿಗೆ ಮತ್ತು ಅಂಗವಿಕಲರಿಗೂ ನಿಸರ್ಗದತ್ತ ಲೈಂಗಿಕ ಬದುಕು ದಕ್ಕಬೇಕು ಎಂಬ ಮನೋವೈಜ್ಞಾನಿಕ ನೆಲೆಯ ಆಶಯವನ್ನು ನಾಟಕ ಹೊಂದಿದೆ.
ವಯೋಮಾನಕ್ಕೆ ತಕ್ಕಂತೆ ಸಹಜ ಲೈಂಗಿಕತೆಗಾಗಿ ಹಪಹಪಿಸುತ್ತಿರುವ ಅರೆಹುಚ್ಚನ ವಯಕ್ತಿಕ ಬದುಕನ್ನು ಜಗಜ್ಜಾಹೀರುಗೊಳಿಸಲು ಸ್ಪರ್ಧೆಗಿಳಿಯುವ ಇಂದಿನ ದೃಶ್ಯ ಮಾದ್ಯಮಗಳ ಕ್ರೌರ್ಯದ ಹಸಿವನ್ನೂ ಸಹ ಈ ಕಥನ ಬೆತ್ತಲುಗೊಳಿಸುತ್ತದೆ. ಹುಚ್ಚನೊಬ್ಬ ಕಾಲೇಜು ಹುಡುಗಿಯರನ್ನ ದಾರಿಯಲ್ಲಿ ನಿಂತು ನೋಡುತ್ತಿದ್ದ ಎಂಬ ಏಕೈಕ ಕಾರಣಕ್ಕೆ ಅವನನ್ನು ಗಿಡಕ್ಕೆ ಕಟ್ಟಿಸುವ ಟಿವಿ ರಿಪೋರ್ಟರ್ ನಿತೀಶ್, ಕಾಲೇಜು ಹುಡುಗರಿಂದ ಆ ಹುಡುಗನ ಮುಖಮೋತಿಯೆನ್ನದೇ ರಕ್ತ ಒಸರುವಂತೆ ಹೊಡೆಸುವ ದೃಶ್ಯದಿಂದ ನಾಟಕ ಶುರುವಾಗುತ್ತದೆ.
ಮುಂದೆ ಹಲವಾರು ತಿರುವುಗಳನ್ನು ಪಡೆದುಕೊಂಡು ಸಮಾಜದ ಒರೆಕೋರೆಗಳನ್ನು ವಿಡಂಭಿಸುವ ಈ ನಾಟಕ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ, ತನ್ನ ಮನೆಯಲ್ಲಿನ ಸಾಕುಪ್ರಾಣಿಗಳು ಬೆದೆ ಬಂದಿದ್ದರೆ ಅವುಕ್ಕೆ ಊರೆಲ್ಲ ಹುಡುಕಾಡಿ ಸಂಗಾತಿಯನ್ನು ಕರೆತಂದು ಸಂಯೋಗ ಮಾಡಿಸುವ ಮನುಷ್ಯ, ತನ್ನ ಮನೆಯಲ್ಲಿನ ಬುದ್ಧಿ ಮಾಂದ್ಯರನ್ನು ಮಾತ್ರ ಪ್ರಾಣಿಗಳಿಗಿಂತ ಕಡೆಯಾಗಿ ನೋಡುವ ಮನೋ ಸ್ಥಿತಿ ಸಮಾಜದಲ್ಲಿದೆ. ಈ ವೈಪರಿತ್ಯದ ನಿಷ್ಕರುಣೆಯನ್ನು ಎತ್ತಿ ತೋರಿಸುವ ರಂಗಕೃತಿಯು ನಾಟಕಕಾರರ “ಸಕಲರೊಳು ಲಿಂಗಾತ್ಮ ಕಾಣಾ” ಎಂಬ ಕಥೆಯನ್ನು ಆಧರಿಸಿದ್ದುದಾಗಿದೆ.
ಮೊದಲ ಪ್ರದರ್ಶನ ಇದೇ ಭಾನುವಾರ
ಹೆಜ್ಜೆ ಥಿಯೇಟರ್ (ರಿ) ನಿರ್ಮಾಣದಲ್ಲಿ ಮೂಡಿಬರಲಿರುವ ನಗ್ನ 99 ನಾಟಕದ ನಿರ್ದೇಶನದ ಜಬಾಬ್ದಾರಿಯನ್ನು ಸಂವಾದ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಹೇಮಂತ್ ಕುಮಾರ್ ರವರು ಹೊತ್ತಿದ್ದಾರೆ. ಈ ಮೊದಲು ಅವರು ‘ಕರ್ಣಭಾರ’ ನಾಟಕವನ್ನು ನಿರ್ದೇಶಿಸಿ ಪ್ರಸಂಶೆ ಪಡೆದಿದ್ದರು. ಜೂನ್ 02ರ ಭಾನುವಾರ ಸಂಜೆ 7:30ಕ್ಕೆ ಮಲ್ಲೇಶ್ವರಂನ ಸೇವಾಸದನದಲ್ಲಿ ನಗ್ನ 99 ನಾಟಕದ ಮೊದಲ ಪ್ರದರ್ಶನವಿದೆ. ಆಸಕ್ತರು ಟಿಕೆಟ್ ಗಾಗಿ 9535253595 ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ.
Nice
ತುಂಬಾ ಚೆನ್ನಾಗಿದೆ. ಮನಃ ಮುಟ್ಟುವಂತ ಲೇಖನ. ನಿಮಗೆ ಶುಭವಾಗಲಿ