Homeಕರ್ನಾಟಕಜಿಲ್ಲಾ ಉಸ್ತುವಾರಿ ಸಚಿವರು ಎಂಬ ಕಲ್ಪನೆ ಮತ್ತು ಮಹತ್ವ

ಜಿಲ್ಲಾ ಉಸ್ತುವಾರಿ ಸಚಿವರು ಎಂಬ ಕಲ್ಪನೆ ಮತ್ತು ಮಹತ್ವ

- Advertisement -
- Advertisement -

ಆಡಳಿತಾತ್ಮಕ ಅನುಕೂಲಕ್ಕಾಗಿ ಕೆಲ ರಾಜ್ಯಗಳಲ್ಲಿ ಮಾತ್ರ ಸೃಷ್ಟಿಯಾದ ಜಿಲ್ಲಾ ಉಸ್ತುವಾರಿ ಸಚಿವರು ಎಂಬ ಹುದ್ದೆಯು ಸದ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಮಹಾರಾಷ್ಟ್ರದಲ್ಲಿ ಪಾಲಿಕ ಸಚಿವರು ಎಂಬುದಾಗಿ ಅದನ್ನು ಕರೆಯಲಾಗುತ್ತಿತ್ತು. ತದನಂತರ ಕರ್ನಾಟಕದಲ್ಲಿ 70-80ರ ದಶಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎಂಬ ಹುದ್ದೆಗಳನ್ನು ಸೃಷ್ಟಿಸಲಾಯಿತು. ಇಂಗ್ಲಿಷ್‌ನಲ್ಲಿ District In-Charge Minister ಎಂಬುದನ್ನು Guardian minister ಅಂತಲೂ ಕರೆಯುತ್ತಾರೆ. ತೀರಾ ಇತ್ತೀಚೆಗೆ 2021ರಲ್ಲಿ ಅಸ್ಸಾಂ ರಾಜ್ಯ ಸಹ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕಲ್ಪನೆ ಹೇಗೆ ಬಂತು?

ರಾಜ್ಯದೊಳಗಿನ ಹಲವು ಜಿಲ್ಲೆಗಳಲ್ಲಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜಿಲ್ಲೆಯ ಅಧಿಕಾರಿಗಳ ಜೊತೆಗೆ ಸರ್ಕಾರದ ಕಡೆಯಿಂದ ಒಬ್ಬ ಮಂತ್ರಿ ಇದ್ದರೆ ಅನುಕೂಲ ಎಂದು ಭಾವಿಸಿ ಈ ಹುದ್ದೆಯನ್ನು ಸೃಷ್ಟಿಸಲಾಯಿತು. ಇದು ಸಾಂವಿಧಾನಿಕ ಹುದ್ದೆಯಲ್ಲ. ಬದಲಿಗೆ ಆಡಳಿತದ ಅನುಕೂಲಕ್ಕಾಗಿ ಸೃಷ್ಟಿಸಿದ ಹುದ್ದೆಯಾಗಿದೆ. ಆದರೆ ಉಪಮುಖ್ಯಮಂತ್ರಿ ಹುದ್ದೆಯ ರೀತಿಯ ಮಹತ್ವ ಮತ್ತು ಪ್ರತಿಷ್ಠೆಯನ್ನು ಇದು ಹೊಂದಿದೆ. ಈಗಾಗಲೇ ಮಂತ್ರಿಯಾಗಿ ಸಂಪುಟದಲ್ಲಿ ಸ್ಥಾನ ಪಡೆದವರಿಗೆ ಕೆಲ ಜಿಲ್ಲೆಗಳ ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ವಹಿಸುತ್ತಾರೆ.

ದೇವರಾಜ ಅರಸು

ಆಯಾಯ ಜಿಲ್ಲೆಯ ಸಚಿವರು ತಮ್ಮದೇ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡರೆ ಸರಾಗವಾಗಿ ಕೆಲಸ ಮಾಡಬಹುದು ಎಂಬ ಕಲ್ಪನೆಯೊಂದಿಗೆ ಸಾಮಾನ್ಯವಾಗಿ ಸಚಿವರನ್ನು ನೇಮಿಸಲಾಗುತ್ತದೆ. ಆದರೆ ಒಂದು ಜಿಲ್ಲೆಯಿಂದ ಇಬ್ಬರು-ಮೂವರು ಸಚಿವರಿದ್ದಾಗ ಅವರಲ್ಲಿ ಒಬ್ಬರನ್ನು ಮತ್ತು ಆಡಳಿತ ಪಕ್ಷದ ಸಚಿವರು ಇಲ್ಲದ ಜಿಲ್ಲೆಗಳಲ್ಲಿ ಬೇರೆ ಜಿಲ್ಲೆಯ ಸಚಿವರೊಬ್ಬರನ್ನು ನಿಯೋಜಿಸುವುದು ವಾಡಿಕೆಯಲ್ಲಿದೆ. ಕೆಲ ಸಚಿವರಿಗೆ ಎರಡೆರಡು ಜಿಲ್ಲೆಗಳ ಹೊಣೆ ಸಹ ಇರುತ್ತದೆ. ಉಸ್ತುವಾರಿ ಸಚಿವರು ತಾವು ಜವಾಬ್ದಾರಿ ವಹಿಸಿಕೊಂಡ ಜಿಲ್ಲೆಗಳ ಸಮಗ್ರ ಅಭಿವೃದ್ದಿಯ ಹೊಣೆ ಹೊತ್ತಿರುತ್ತಾರೆ. ತಮ್ಮ ಜಿಲ್ಲೆಗಳ ಬೇಕುಬೇಡಗಳನ್ನು ಗ್ರಹಿಸಿ ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯಗತಗೊಳಿಸುವುದು ಅವರ ಕೆಲಸ.

ಒಂದರ್ಥದಲ್ಲಿ ಉಸ್ತುವಾರಿ ಮಂತ್ರಿಗಳು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದ ನಡುವಿನ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಪ್ರತಿ ತಿಂಗಳು ಎಲ್ಲಾ ಇಲಾಖೆಗಳ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯ ಮೇಲ್ವಿಚಾರಣೆ ಮಾಡಬೇಕಿರುತ್ತದೆ. ಜಿಲ್ಲೆಗೆ ಬೇಕಾದ ಅನುದಾನ ತರಲು ಯತ್ನಿಸಬೇಕು, ಜಿಲ್ಲೆಯಲ್ಲಿ ನಡೆಯುವ ಯಾವುದೇ ಅವಘಡದ, ಸಮಸ್ಯೆಗಳ ಹೊಣೆ ಹೊರಬೇಕು- ಹೀಗೆ ಮುಂತಾದ ಜವಾಬ್ದಾರಿಗಳು ಇರುತ್ತವೆ. ಉತ್ತರ ಪ್ರದೇಶದಂತಹ ಕೆಲ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ರಾಜ್ಯಗಳು ಈ ಮಾದರಿಯನ್ನು ಅಳವಡಿಸಿಕೊಂಡಿವೆ.

ಕರ್ನಾಟಕದಲ್ಲಿ ಉಸ್ತುವಾರಿ ಮಂತ್ರಿಗಳಿಗೆ ಇರುವ ಮಹತ್ವ

ಜಿಲ್ಲೆಯ ಯಾವುದೇ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಉಸ್ತುವಾರಿ ಸಚಿವರೇ ನೆರವೇರಿಸಬೇಕೆಂಬ ಪ್ರೊಟೋಕಾಲ್‌ಅನ್ನು ರಾಜ್ಯದಲ್ಲಿ ವಿಧಿಸಿಕೊಳ್ಳಲಾಗಿದೆ. ಸಚಿವರು ನಿಜವಾಗಿಯೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಾದರೆ, ಇಡೀ ಜಿಲ್ಲೆಯಲ್ಲಿ ತಮ್ಮ ವರ್ಚಸ್ಸು ಮತ್ತು ಆಡಳಿತ ಸರ್ಕಾರದ ಪ್ರಭಾವ ಬೀರಬಹುದು. ಹಿಂದೆ ಮಹಾರಾಷ್ಟ್ರದ ಪುಣೆ ನಗರದ ಉಸ್ತುವಾರಿ ವಹಿಸಿಕೊಂಡ ಎನ್‌ಸಿಪಿ ಪಕ್ಷದ ಅಜಿತ್ ಪವಾರ್‌ರವರು ಅಲ್ಲಿ ಸಾಕಷ್ಟು ಪ್ರಭಾವ ಬೀರಿದ ನಂತರ, ಅಲ್ಲಿಯವರೆಗೂ ಅಷ್ಟೇನೂ ನೆಲೆ ಹೊಂದಿರದ ಎನ್‌ಸಿಪಿ ಪಕ್ಷವು ನಂತರದ ದಿನಗಳಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಸೇರಿದಂತೆ ಇತರ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು ಎಂದು ಹೇಳಲಾಗುತ್ತದೆ.

ಸಿದ್ದರಾಮಯ್ಯ

ಕರ್ನಾಟಕದಲ್ಲಿ ದೇವರಾಜ ಅರಸುರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಈ ಉಸ್ತುವಾರಿ ಸಚಿವರು ಬಹಳ ಒಳ್ಳೆಯ ಕೆಲಸ ಮಾಡಿದ್ದರೆಂಬ ಅಭಿಪ್ರಾಯಗಳಿವೆ. ನಜೀರ್ ಸಾಬ್‌ರವರು ಸೇರಿದಂತೆ ಹಲವು ಸಚಿವರ ಪರಿಣಾಮಕಾರಿಯಾಗಿ ಕೆಲಸ ಮಾಡಿ ಹೆಸರುಗಳಿಸಿದ್ದಾರೆ.

ಸಾಧಕ-ಬಾಧಕಗಳು

ಸಚಿವರು ತಮ್ಮದಲ್ಲದ ಜಿಲ್ಲೆಗೆ ಉಸ್ತುವಾರಿಯಾದಾಗ ಹೆಚ್ಚಿನ ಸಮಯ ಕೊಡಲಾಗುವುದಿಲ್ಲ ಎಂಬ ಆರೋಪವಿದೆ. ಅದರಲ್ಲಿಯೂ ಅವರ ಸ್ವಕ್ಷೇತ್ರ ಮತ್ತು ಉಸ್ತುವಾರಿ ಜಿಲ್ಲೆಯ ನಡುವಿನ ಅಂತರ ಹೆಚ್ಚಿದ್ದಷ್ಟು ಅವರ ಭೇಟಿ ಕಡಿಮೆಯಾಗುತ್ತಿರುತ್ತದೆ. ಇನ್ನೊಂದೆಡೆ ಸ್ವಂತ ಜಿಲ್ಲೆಯ ಉಸ್ತುವಾರಿ ಪಡೆದವರು ಸಹ ತಮ್ಮತಮ್ಮ ಕ್ಷೇತ್ರಕ್ಕೆ ಮಾತ್ರ ಹೆಚ್ಚು ಸೀಮಿತರಾಗಿರುತ್ತಾರೆಯೇ ಹೊರತು ಇಡೀ ಜಿಲ್ಲೆಯ ಅಭಿವೃದ್ಧಿ ಕುರಿತು ಗಮನವಹಿಸುವುದಿಲ್ಲ ಎಂಬ ಆಪಾದನೆಗಳಿವೆ.

ಇದನ್ನೂ ಓದಿ: ಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

ಗಮನಿಸಬೇಕಾದ ಅಂಶವೆಂದರೆ ಕಳೆದ ಬೊಮ್ಮಾಯಿಯವರ ಸರ್ಕಾರದಲ್ಲಿ ಬಿ.ಶ್ರೀರಾಮುಲು ಒಬ್ಬರು ತಮ್ಮ ಸ್ವಂತ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಆದರೆ ಅವರು ಶಾಸಕರಾಗಿ ಆಯ್ಕೆಯಾಗಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ. ಉಳಿದ 30 ಸಚಿವರಿಗೆ ತಮ್ಮದಲ್ಲದ ಬೇರೆಯ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ತುಮಕೂರಿನವರಾದ ಬಿ.ಸಿ ನಾಗೇಶ್ ಅವರಿಗೆ ಕೊಡಗು ಜಿಲ್ಲೆಯ ಜವಾಬ್ದಾರಿ ನೀಡಿದರೆ, ಶಿವಮೊಗ್ಗದ ಆರಗ ಜ್ಞಾನೇಂದ್ರರವರಿಗೆ ತುಮಕೂರಿನ ಜವಾಬ್ದಾರಿ ವಹಿಸಲಾಗಿತ್ತು. ಅದಕ್ಕೂ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ 8 ಸಚಿವರಿಗೆ ಮಾತ್ರ ಅವರ ಸ್ವಂತ ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿತ್ತು. 11 ಸಚಿವರಿಗೆ ತಲಾ 2 ಜಿಲ್ಲೆಗಳ ಉಸ್ತುವಾರಿ ನೀಡಲಾಗಿತ್ತು.

ಸದ್ಯ ಸಿದ್ದರಾಮಯ್ಯನವರ ಸಂಪುಟದಲ್ಲಿ 18 ಸಚಿವರು ತಮ್ಮ ಸ್ವಂತ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 8 ಸಚಿವರಿಗೆ ಅಕ್ಕಪಕ್ಕದ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಉಳಿದ 5 ಸಚಿವರು ಮಾತ್ರ ದೂರದ ಬೇರೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಜೊತೆಗೆ ಕೃಷ್ಣಭೈರೇಗೌಡ ಮತ್ತು ರಹೀಂ ಖಾನ್ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಿಲ್ಲ. ಅಷ್ಟರಮಟ್ಟಿಗೆ ಉಸ್ತುವಾರಿ ಹಂಚಿಕೆಯಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಕಾರಾತ್ಮಕ ಬದಲಾವಣೆ ಬಂದಿದೆ ಎನ್ನಬಹುದು. ಆದರೆ ಈ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಮಾಡುವ ಕೆಲಸವನ್ನು ಪರಾಮರ್ಶಿಸಲು ಇನ್ನೂ ಸಾಕಷ್ಟು ಸಮಯವಿದೆ.

ಉಸ್ತುವಾರಿ ಸಚಿವರು ತಮ್ಮ ಇಡೀ ಜಿಲ್ಲೆಯನ್ನು ಸುತ್ತಿ ಜನರ ಸಂಕಷ್ಟಗಳನ್ನು ಆಲಿಸಿ ಪರಿಹಾರ ಸೂಚಿಸಬೇಕು. ಅವರು ಒಂದು ಇಲಾಖೆಯ ಸಚಿವರೂ ಸಹ ಆಗಿರುವುದರಿಂದ ಅವರಿಗೆ ಇಡೀ ರಾಜ್ಯದ ಪರಿಚಯವಿರಬೇಕು ಮತ್ತು ಇಡೀ ರಾಜ್ಯವನ್ನು ಸುತ್ತಬೇಕು. ಕೇವಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರೆ ಪ್ರಯೋಜನವಾಗುವುದಿಲ್ಲ. ಏಕೆಂದರೆ ಅಧಿಕಾರಿಗಳು ಎಂದಿಗೂ ತಮ್ಮ ವಶನ್ ಹೇಳುತ್ತಾರೆಯೇ ಹೊರತು ಜನರ ಧ್ವನಿಯಾಗಿರುವುದಿಲ್ಲ. ಇನ್ನು ಸಚಿವರು ಬೇರೆ ಜಿಲ್ಲೆಗಳಿಗೆ ಹೋದಾಗಲೆಲ್ಲ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳೇ ಅವರನ್ನು ಸುತ್ತುವರೆದಿರುತ್ತಾರೆ. ಹಾಗಾಗಿ ನಿಜವಾಗಿಯೂ ಜನರ ಸ್ಥಿತಿ ಅರಿಯಲು ಸಾಧ್ಯವಾಗುವುದಿಲ್ಲ. ಈ ಎಲ್ಲಾ ಅಡೆತಡೆಗಳನ್ನು ಮೀರಲು ಸಚಿವರು ಯತ್ನಿಸಬೇಕು. ಅದರಲ್ಲಿಯೂ ದೂರದ ಜಿಲ್ಲೆಗಳ ಉಸ್ತುವಾರಿ ಹೊತ್ತವರಂತೂ ಅದೇ ಜಿಲ್ಲೆಯ ತಾಲ್ಲೂಕು ಕೇಂದ್ರದಲ್ಲಿ ವಾಸ್ತವ್ಯ ಹೂಡಬೇಕು. ಆಗ ಮಾತ್ರ ಜನರ ಸ್ಥಿತಿ ಸ್ವಲ್ಪಮಟ್ಟಿಗೆ ಅವರ ಅರಿವಿಗೆ ಬರಲು ಸಾಧ್ಯ. ಆದರೆ ಇಷ್ಟು ಬದ್ಧತೆಯನ್ನು ನಮ್ಮ ಸಚಿವರು ತೋರುತ್ತಾರೆಯೇ? ಅವರು ಹಾಗೆ ಮಾಡಲು ಜನರು ಒತ್ತಡ ಹೇರುತ್ತಾರೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...