ಮಧ್ಯಪ್ರದೇಶ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ರವರ ಸಂವಹನ (ಮಾಧ್ಯಮ) ಸಲಹೆಗಾರರಾಗಿ ತುಷಾರ್ ಪಾಂಚಾಲ್ ಅವರನ್ನು ಅಧಿಕೃತವಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಅವರಿಗೆ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ (ಒಎಸ್ಡಿ) ಸ್ಥಾನಮಾನ ನೀಡಲಾಗಿತ್ತು. ಆದರೆ ಇಂದು ಮಧ್ಯಾಹ್ನ ತುಷಾರ್ ಪಾಂಚಾಲ್ ಆ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.
ಆದರೆ ಅವರನ್ನು ಕೂಡಲೇ ತೆಗೆದು ಹಾಕುವಂತೆ ಕಟ್ಟಾ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಟ್ವೀಟರ್ ಅಭಿಯಾನವನ್ನೂ ಶುರು ಮಾಡಿದ್ದಾರೆ.
ಏಕೆ ಅಂತೀರಾ? ಹಿಂದೆಲ್ಲ ಮೋದಿ ಮತ್ತು ಹಿಂದುತ್ವದ ವಿರುದ್ಧ ಪಾಂಚಾಲ್ ಬರೆದಿದ್ದಾರೆ. ಅವರ ಟ್ವೀಟ್ಗಳಂತೂ ಮೋದಿ ಮತ್ತು ಹಿಂದುತ್ವವಾದಿಗಳನ್ನು ಮೊನಚಾಗಿ ತಿವಿಯುವಂತಿವೆ.
ಪಾಂಜಾಲ್ ಅವರ ಹಿಂದಿನ ‘ಹಿಂದುತ್ವ ವಿರೋಧಿ’ ಮತ್ತು ಮೋದಿ ವಿರೋಧಿ ಟ್ವೀಟ್ಗಳನ್ನು ಉಲ್ಲೇಖಿಸಿ ಬಿಜೆಪಿ, ಆರ್ಎಸ್ಎಸ್ ಮುಖಂಡರು, ಬೆಂಬಲಿಗರು ತುಷಾರ್ ಪಾಂಚಾಲ್ ಅವರನ್ನು ಒಎಸ್ಡಿ ಸ್ಥಾನದಿಂದ ತೆಗೆದುಹಾಕುವಂತೆ ಸಿಎಂ ಶಿವರಾಜ್ ಚೌಹಾಣ್ ಅವರನ್ನು ಒತ್ತಾಯಿಸಿದ್ದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತುಷಾರ್ ಪಾಂಚಾಲ್ ಅವರನ್ನು ತಮ್ಮ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಒಎಸ್ಡಿ) ನೇಮಕ ಮಾಡಿದ ಒಂದು ದಿನದ ನಂತರ, ಹಲವಾರು ಬಿಜೆಪಿ, ಆರೆಸ್ಸೆಸ್ ಮುಖಂಡರು ಮತ್ತು ಬೆಂಬಲಿಗರು ಟ್ವಿಟರ್ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಅನೇಕರು, ಚೌಹಾಣರಿಗೆ ಪಾಂಚಾಲ್ರಂತಹ ಜನರು ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರಲ್ಲದೇ, ಪಾಂಚಾಲ್ ಅವರನ್ನು “ಮೋದಿ ದ್ವೇಷಿ” ಎಂದೂ ಕರೆದಿದ್ದಾರೆ.
“ಸ್ನೇಹಿತರೇ, ನಿಮ್ಮಲ್ಲಿ ಹಲವರು ನನ್ನನ್ನು ಪರದೆಯ ಹಿಂದೆ ಇರುವ ವ್ಯಕ್ತಿ ಎಂದು ತಿಳಿದಿದ್ದೀರಿ. ನಾನು 2001ರಿಂದ ದೇಶಾದ್ಯಂತ ಅನೇಕ ಸಿಎಂಗಳು ಮತ್ತು ರಾಜಕೀಯ ಮುಖಂಡರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ” ಎಂದು ಪಾಂಚಾಲ್ ಸೋಮವಾರ ಟ್ವೀಟ್ ಮಾಡಿದ್ದಾರೆ.
“ಇಂದು, ನನ್ನ ಹಣೆಬರಹ ನನ್ನನ್ನು ಮುಖ್ಯಮಂತ್ರಿ ಚೌಹಾಣ್ ಅವರ ಸಂವಹನ ಸಲಹೆಗಾರನ ಕಚೇರಿಯಲ್ಲಿ ಇರಿಸಿದೆ. ದಯವಿಟ್ಟು ನನಗೆ ಶುಭ ಹಾರೈಸಿ. ಹೆಚ್ಚಿನ ವಿವರಗಳನ್ನು ನಂತರ ನೀಡುವೆ” ಎಂದು ಟ್ವೀಟ್ನಲ್ಲಿ ಕೋರಿದ್ದರು.
ಇದಾದ ನಂತರ, ದೆಹಲಿ ಬಿಜೆಪಿ ವಕ್ತಾರ ತಾಜಿಂದರ್ ಬಗ್ಗ ಅವರು ಪಾಂಚಾಲ್ ಅವರ ಹಳೆಯ ಟ್ವೀಟ್ನ ಸ್ಕ್ರೀನ್ಶಾಟ್ ಅನ್ನು ಪೋಸ್ಟ್ ಮಾಡಿ, ಪಾಂಚಾಲ್ ಅವರಂತಹ “ಜನರು” ಅಗತ್ಯವಿದೆಯೇ ಎಂದು ಸಿಎಂ ಚೌಹಾಣ್ ಅವರನ್ನು ಕೇಳಿದ್ದಾರೆ.
@ChouhanShivraj ji do you need people Like this ? pic.twitter.com/zXBRWv4V9H
— Tajinder Pal Singh Bagga (@TajinderBagga) June 8, 2021
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೆಹಲಿ ರಾಜ್ಯ ಕಾರ್ಯವಾಹಕ ಸದಸ್ಯ ರಾಜೀವ್ ಟುಲಿ ಕೂಡ ಪಾಂಚಾಲ್ ಅವರ ಹಳೆಯ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. “ಚೌಹಾನ್ ಶಿವರಾಜ್ ಜಿ ಅವರಿಗೆ ನಿಜವಾಗಿಯೂ ಅಗತ್ಯವಿದೆಯೇ? ಮಧ್ಯಪ್ರದೇಶವು ನಮ್ಮ ಸಿದ್ಧಾಂತ ನಂಬುವ ಪ್ರಖ್ಯಾತ ಪತ್ರಕರ್ತರ ಶ್ರೀಮಂತ ಸಂಸ್ಕೃತಿಯನ್ನು ನೀಡಿದೆ. ಹೀಗಿರುವಾಗ ನಮ್ಮವರಲ್ಲದ ಪಾಂಚಾಲ್ ಬೇಕಿತ್ತೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇತರ ಕಾರ್ಯಕರ್ತರು ಕೂಡ ಪಾಂಚಾಲ್ ಅವರ ಟ್ವೀಟ್ಗಳ ಬಗ್ಗೆ ಪೋಸ್ಟ್ ಮಾಡಿ, ಅವರ ನೇಮಕಾತಿಯನ್ನು ಪ್ರಶ್ನಿಸಿದ್ದಾರೆ. ಆದರೂ ಕೆಲವರು ಅವರನ್ನು ಬೆಂಬಲಿಸಿದ್ದಾರೆ.
ಪಾಂಚಾಲ್ ಅವರು ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಸ್ವಲ್ಪ ಸಮಯದಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮಾಜಿಕ ಮಾಧ್ಯಮವನ್ನು ಸಹ ನಿರ್ವಹಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
“ಇದು ರಾಜಕೀಯ ಪ್ರೇರಿತ ಅಭಿಯಾನವಲ್ಲದೆ ಮತ್ತೇನಲ್ಲ. ಅವರ ಹಳೆಯ ಟ್ವೀಟ್ಗಳನ್ನು ಸಂದರ್ಭವಿಲ್ಲದೆ ಪೋಸ್ಟ್ ಮಾಡಲಾಗಿದೆ. ಅವರು ಚೌಹಾಣ್ ಜೊತೆಯಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಯಾವಾಗಲೂ ಪಕ್ಷಕ್ಕೆ ಮೊದಲ ಸ್ಥಾನ ನೀಡುತ್ತಾರೆ” ಎಂದು ಮೂಲವೊಂದು ತಿಳಿಸಿದೆ.
ಮಧ್ಯಪ್ರದೇಶದ ಹಿರಿಯ ಬಿಜೆಪಿ ಮುಖಂಡರ ಪ್ರಕಾರ, 2018ರ ಚುನಾವಣೆಯ ಸಮಯದಲ್ಲಿ ಪಾಂಚಾಲ್ ತಂಡವು ಚೌಹಾಣ್ ಮತ್ತು ಅವರ ಸರ್ಕಾರದ ಸಾಮಾಜಿಕ ಮಾಧ್ಯಮ ಕಾರ್ಯಗಳನ್ನು ನೋಡಿಕೊಂಡಿತ್ತು.
“ಕೊರೋನಾ ಎರಡನೇ ಅಲೆಯಿಂದ ರಾಜ್ಯ ಹಾನಿಗೊಳಗಾಯಿತು, ಅದು ರಾಜ್ಯ ಸರ್ಕಾರದ ಇಮೇಜ್ ಮೇಲೆ ನೇರವಾಗಿ ಪರಿಣಾಮ ಬೀರಿತು. ನಂತರ ಮುಖ್ಯಮಂತ್ರಿ ತುಷಾರ್ ಪಾಂಚಾಲ್ ಅವರನ್ನು ಸಂವಹನ ಸಲಹಾ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಲು ನಿರ್ಧರಿಸಿದರು. ಮೊದಲಿಲ್ಲದ ಆಕ್ಷೇಪ ಈಗ ಅಧಿಕೃತ ನೇಮಕದ ನಂತರ ಶುರುವಾಗಿದೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಕೂಡ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಎತ್ತಿದೆ. “ಶಿವರಾಜ್ ಸಿಂಗ್ ಮೋದಿಯ ವಿರುದ್ಧ ಯುದ್ಧ ಮಾಡುತ್ತಿದ್ದಾರೆ! ಏಕೆಂದರೆ, ಮೋದಿಯವರನ್ನು ಅವರ ಹೊಸ ಸಲಹೆಗಾರರು ತೀವ್ರವಾಗಿ ವಿರೋಧಿಸಿದ್ದರು” ಎಂದು ಪಕ್ಷದ ಅಧಿಕೃತ ಹ್ಯಾಂಡಲ್ ಪೋಸ್ಟ್ ಮಾಡಿದೆ. ಮೋದಿಯವರನ್ನು ಸೋಶಿಯಲ್ ಮೀಡಿಯಾದಲ್ಲಿ ಅಪಹಾಸ್ಯ ಮಾಡಿದ, ಅವರ ನಿಲುವನ್ನು ಟೀಕಿಸಿದ ಮತ್ತು ಬಿಜೆಪಿಯ ತತ್ವಗಳ ಬಗ್ಗೆ ಅನಿಯಂತ್ರಿತ ಟೀಕೆಗಳನ್ನು ಮಾಡಿದವರನ್ನು ಶಿವರಾಜ್ ಸಿಂಗ್ ಚೌಹಾಣ್ ಅವರು ಒಎಸ್ಡಿ ಮಾಡಿದ್ದಾರೆ. ಯೋಗಿಯ ನಂತರ, ಈಗ ಶಿವರಾಜ್ ಮೋದಿಯ ಆಡಳಿತವನ್ನು ದುರ್ಬಲಗೊಳಿಸುತ್ತಾರೆ’ ಎಂದು ಕಾಂಗ್ರೆಸ್ ಹೇಳಿದೆ.
ಪಾಂಚಾಲ್ ಅವರ ಹಳೆಯ ಟ್ವೀಟ್ಗಳು ಮೊನಚಾಗಿವೆ: ‘ಮೋದಿ ಪುಣ್ಯಶಾಲಿ, ಪ್ರಶ್ನೆ ಕೇಳಲು ವಿಪಕ್ಷ ನಾಯಕನಿಲ್ಲ, ಮನೆಯಲ್ಲಿ ಪತ್ನಿಯಿಲ್ಲ…’ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು.
‘ದೇಸಿ ಸಾರಾಯಿ ಜೊತೆಗೆ ಗೋಮೂತ್ರ ಮಿಕ್ಸ್ ಮಾಡಿ ಕುಡಿದರೆ ಕೊರೋನಾ ಹೋಗುತ್ತಂತೆ. ಬೇಕಾದವರು ಪರೀಕ್ಷಿಸಿ ಅನುಭವಿಸಿ’ ಎಂದು ರಾಮದೇವ್ ಅವರನ್ನು ಟೀಕಿಸಿದ್ದರು.
I have decided to not accept the responsibility offered to me by @chouhanshivraj ji and have communicated my inability to the CM.
— Tushar (@tushar) June 8, 2021
ತೀವ್ರ ಟೀಕೆಗಳು ಕೇಳಿಬಂದ ನಂತರ “ಸಿಎಂ ಶಿವರಾಜ್ಸಿಂಗ್ ಚೌಹಾಣ್ರವರು ನನಗೆ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸದಿರಲು ನಾನು ನಿರ್ಧರಿಸಿದ್ದೇನೆ. ಈ ನನ್ನ ಅಸಾಮರ್ಥ್ಯವನ್ನು ಸಿಎಂಗೆ ತಿಳಿಸಿದ್ದೇನೆ” ಎಂದು ತುಷಾರ್ ಪಾಂಚಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ; ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?