ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫ್ಯಾಸಿಸ್ಟ್ ಪಡೆಗಳನ್ನು ಸೋಲಿಸುವುದಾಗಿ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ವಾಗ್ದಾನ ಮಾಡಿದ್ದಾರೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು 2024ರಲ್ಲಿ ಬಿಜೆಪಿ ಮಣಿಸಲು ಶುಕ್ರವಾರ ವಿರೋಧ ಪಕ್ಷಗಳ ಬೃಹತ್ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಹಲವು ಪ್ರತಿಪಕ್ಷಗಳ ಮುಖಂಡರು ಪಾಟ್ನಾದ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆ ಕುರಿತು ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ತೇಜಸ್ವಿ ಯಾದವ್, ”ಈ ಸಭೆಯಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗಿನ ವಿವಿಧ ಪಕ್ಷದ ನಾಯಕರು ಪಾಲ್ಗೊಂಡಿದ್ದರು. ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವುದೇ ಅವರ ಏಕೈಕ ಗುರಿಯಾಗಿದೆ” ಎಂದು ಹೇಳಿದರು.
ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಕಾಂಗ್ರೆಸ್ನಿಂದ ಬೆಂಬಲ ನೀಡದಿದ್ದ ಕಾರಣಕ್ಕೆ ಸುದ್ದಿಗೋಷ್ಠಿಯಲ್ಲಿ ಗೈರುಹಾಜರಾದ ಎಎಪಿ ಧೋರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ”ಸಭೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಪ್ರತಿಯೊಂದು ವಿಷಯವನ್ನೂ ಸೌಹಾರ್ದಯುತವಾಗಿ ಚರ್ಚಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ದು ‘ಭಾರತ್ ಜೋಡೊ’, ಬಿಜೆಪಿಯದ್ದು ಭಾರತ್ ತೋಡೊ ಸಿದ್ದಾಂತ; ಪಾಟ್ನಾ ಸಭೆಯಲ್ಲಿ ರಾಹುಲ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ಸಭೆಯನ್ನು ”ಫೋಟೊ ಸೆಷನ್” ಹೋಲಿಸಿ ಗೇಲಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ, ”ಶಾ ಅವರಿಗೆ ಫೋಟೊ ಸೆಷನ್ ಬಗ್ಗೆ ಮಾತ್ರ ಗೊತ್ತಿದೆ. ನಮಗೆ ಜನರ ನಡುವೆ ಕೆಲಸ ಮಾಡುವುದಷ್ಟೇ ಗೊತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.
”ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಹೋರಾಟ ಕೇವಲ ಪ್ರಧಾನಿ ನರೇಂದ್ರ ಮೋದಿ ಅಥವಾ ಯಾವುದೇ ವ್ಯಕ್ತಿಯ ವಿರುದ್ಧ ಆಗಿರುವುದಿಲ್ಲ, ನಮ್ಮಗಳ ಹೋರಾಟ ಫ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವುದಾಗಿದೆ. ದೇಶದ ಜನರ ಹಿತಾಸಕ್ತಿ ಕಾಪಾಡುವುದೇ ನಮ್ಮ ಧೈಯವಾಗಿದೆ” ಎಂದು ಹೇಳಿದರು.
ಪಾಟ್ನಾ ಸಭೆಯ ಕೊನೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ಒಪ್ಪಿದ್ದೇವೆ. ಮುಂದಿನ ಸಭೆ ಶಿಮ್ಲಾದಲ್ಲಿ ನಡೆಯಲಿದ್ದು, ಆ ಸಭೆಯಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ಚಂಪಾರಣ್ಯ ಸತ್ಯಾಗ್ರಹ ಹಾಗೂ ಜೆ.ಪಿ ಚಳವಳಿ ನಡೆದ ಬಿಹಾರವು ಈ ಹೋರಾಟದ ನೇತೃತ್ವವಹಿಸಿದೆ” ಎಂದರು.