Homeಮುಖಪುಟಪೊಲೀಸಿಂಗ್ ಮತ್ತು ಭಾರತದ ಪ್ರಜಾಪ್ರಭುತ್ವ: ಡಾ.ಕೆ.ಪಿ ನಟರಾಜ

ಪೊಲೀಸಿಂಗ್ ಮತ್ತು ಭಾರತದ ಪ್ರಜಾಪ್ರಭುತ್ವ: ಡಾ.ಕೆ.ಪಿ ನಟರಾಜ

- Advertisement -
- Advertisement -

ಚಿಕ್ಕ‌ಮಗಳೂರು ಜಿಲ್ಲೆಯ ಕೊಪ್ಪದಂತಹ ಸಣ್ಣ ಊರಿನಲ್ಲಿ‌ ಕರ್ನಾಟಕ‌ ಕೋಮು ಸೌಹಾರ್ದ ವೇದಿಕೆಯ ಮುಖಂಡರಾದ ಕೆ. ಎಲ್.ಅಶೋಕ್ ಅವರು ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿಕೊಂಡಿದ್ದಕ್ಕಾಗಿ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೆಬಲ್  ಇಬ್ಬರೂ ಅವಾಚ್ಯವಾಗಿ‌ ನಿಂದಿಸಿ, ಪ್ರಕರಣ ದಾಖಲಿಸಿದ್ದರು.

ಕೆ. ಎಲ್.ಅಶೋಕ್ ಚಿಕ್ಕ‌ಮಗಳೂರು ಜಿಲ್ಲೆಯಲ್ಲಿ ಎಡಪಂಥೀಯ ಸಂಘಟನೆಗಳ  ನಾಯಕರೂ ಆಗಿರುವುದರಿಂದ ಇದು ಉದ್ದೇಶ ಪೂರ್ವಕ ನಿಂದನೆ  ಮತ್ತು ದಾಳಿಯಾಗಿದೆ ಎಂದು ಸ್ಥಳೀಯ ಸ್ನೇಹಿತರು ಆರೋಪಿಸುತ್ತಾರೆ.

ಇದು ನಿಜವಿರಬಹುದು, ಯಾಕೆಂದರೆ ಕೊಪ್ಪದಂತಹ ಪುಟ್ಟ ಊರುಗಳಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡದಿರಲಾರದು.. ಹೀಗಾಗಿ ಈ ಪೊಲೀಸ್ ‘ಕಾರ್ಯಾಚರಣೆ’ ಸ್ಥಳೀಯ ರಾಜಕೀಯದಿಂದ  ಪ್ರಚೋದಿತವೆನ್ನಿಸದೆ ಇರದು.

ನೆನ್ನೆ ಮೊನ್ನೆ ನಡೆದ ಈ ಘಟನೆ  ಈ ಪೊಲೀಸ್ ‘ಕಾರ್ಯಾಚರಣೆ’ಯ ಸಣ್ಣ ಉದಾಹರಣೆ  ಮಾತ್ರ…

ನಾವು ಸ್ವಾತಂತ್ರ್ಯೋತ್ತರದ ಈ ದೀರ್ಘಾವಧಿಯ ಇತಿಹಾಸದುದ್ದಕ್ಕೂ ದೇಶದ ಜನರ ಚಳವಳಿಗಳನ್ನು ಪೊಲೀಸ್ ಶಕ್ತಿಯನ್ನು ಬಳಸಿ ದಮನ ಮಾಡಿದ್ದು ಗೋಚರಿಸುತ್ತದೆ. 1975ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ  ದಮನ ಮತ್ತು  ಹಿಂಸೆಯ ವರದಿಗಳನ್ನು ನೋಡಿದ್ದೆವೆ.

ಇದನ್ನೂ ಓದಿ: ಲಾಕಪ್ ಡೆತ್: ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಪ್ರಕರಣ ದಾಖಲು!

ಪಕ್ಕದ ಆಂಧ್ರದಲ್ಲಿ ಕಳೆದ ಐದು ದಶಕಗಳಲ್ಲಿ ನಕ್ಸಲ್ ಚಳವಳಿ ತಾರಕಾವಸ್ಥೆ ಮುಟ್ಟಿದ್ದಾಗ ನಡೆಯುತ್ತಿದ್ದ ಪೊಲೀಸ್ ಎನ್‌ಕೌಂಟರ್‌ಗಳು ಮತ್ತು ಪೊಲೀಸರ ಹೇಳಿಕೆಗಳ  ಅಸಲುತನದ ತನಿಖೆಗಾಗಿ ಗದ್ದರ್ ಅವರಂತಹವರು ಕಾನೂನು ಹೋರಾಟಕ್ಕೆ ಮುಂದಾಗಿದ್ದನ್ನು ನೋಡಿದ್ದೆವೆ. ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ನಗರಿ ಬಾಬಯ್ಯ ಅವರನ್ನು ನಕ್ಸಲ್ ಸಂಪರ್ಕ ಹೊಂದಿದ್ದರು ಎಂದು ಬಂಧಿಸಿ ಚಿತ್ರಹಿಂಸೆ ಕೊಟ್ಟ ಇತಿಹಾಸ ಕೂಡ ನಮ್ಮ ಕಣ್ಣೆದುರಿಗಿದೆ.

ಮೊನ್ನೆ ಮೊನ್ನೆಯಷ್ಟೇ ಮಕ್ಕಳ  ಸಾವನ್ನು ತಪ್ಪಿಸಲು ಹೋರಾಡುತ್ತಾ ಅದರ ಭಾಗವಾಗಿ  ವ್ಯವಸ್ಥೆಯ ದೋಷವನ್ನು ಪ್ರಶ್ನಿಸಿದ  ಮಕ್ಕಳ ವೈದ್ಯ ಡಾ.ಕಫೀಲ್ ಖಾನ್  ಅವರತ್ತ ಕೆಂಗಣ್ಣು ಬೀರಿ ದೇಶದ್ರೋಹದ ಆರೋಪ ಹೊರಿಸಿ ಏಳೆಂಟು ತಿಂಗಳ ಕಾಲ ಜೈಲಿನಲ್ಲಿ ಕೊಳೆಸಿದ ಯೋಗಿ ಆದಿತ್ಯ ನಾಥರ ಉತ್ತರ ಪ್ರದೇಶದ ಪೊಲೀಸರು  ನೆನಪಾಗುತ್ತಾರೆ.

ಚಳವಳಿಗಳನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದಕ್ಕೆ ತಮ್ಮನ್ನು ಎನ್ ಕೌಂಟರ್ ಮಾಡಿ ಕೊಲ್ಲದೆ ಇದ್ದುದಕ್ಕೆ  ಎಸ್ಐಟಿಗೆ ಕೃತಜ್ಞತೆ ಸಲ್ಲಿಸಿದ ಕಫೀಲ್ ಖಾನ್, ಪೊಲೀಸರಿಗೆ ಹೆದರಿ ತಮ್ಮ ರಾಜ್ಯವಾದ ಉತ್ತರ ಪ್ರದೇಶ ಬಿಟ್ಟು ರಾಜಸ್ತಾನದಲ್ಲಿ ಆಶ್ರಯ ಪಡೆಯಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಇದನ್ನೂ ಓದಿ: ಮಾಸ್ಕ್ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾದ ದಲಿತ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವು!

ದೆಹಲಿಯ ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿ ಹಲ್ಲೆ, ದಾಂಧಲೆ ನಡೆಸಿದ  ಎಬಿವಿಪಿ ಗೂಂಡಾಗಳನ್ನು ರಕ್ಷಿಸಿ ಬೆಂಗಾವಲಾಗಿ ನಿಂತ ಪೊಲೀಸರು, CAA, NRC ವಿರೋಧಿಸುತ್ತಿದ್ದ ಚಳವಳಿಗಾರರ ಮೇಲೆ ಗುಂಡು ಹಾರಿಸಲು ಮುಂದಾದ ಪುಂಡನೊಬ್ಬನನ್ನು  ತಡೆಯದೆ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಪೊಲೀಸರು ಸರ್ಕಾರರದ ಪೊಲೀಸಿಂಗ್ ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುತ್ತಾರೆ.

ಗಲಭೆಗಳು , ಮಾಬ್ ಲಿಂಚ್ , ಮಾರಲ್ ಪೊಲೀಸಿಂಗ್‌ಗಳು ನಡೆಯುವಾಗ ಪೊಲೀಸರು ಒಂದೋ ಮೂಕ ಪ್ರೇಕ್ಷಕರಂತೆ ನಿಂತು ಗಲಭೆಕೋರರಿಗೆ ಸಹಕರಿಸುವ, ಇಲ್ಲವೇ  ದುರ್ಬಲರನ್ನು  ಪೊಲೀಸ್ ಬಲ ಬಳಸಿ ಸುಮ್ಮನಾಗಿಸುತ್ತಾರೆ. ಇಂತಹ ಪೊಲೀಸ್ ವ್ಯವಸ್ಥೆ ನೋಡಿದರೆ,  ಸ್ವಾತಂತ್ರ್ಯ ಪೂರ್ವದ ಜಲಿಯನ್ ವಾಲಾಭಾಗ್ ಘಟನೆ, 1975ರ ತುರ್ತು ಪರಿಸ್ಥಿತಿ , 1984ರಲ್ಲಿ ದೆಹಲಿಯಲ್ಲಿ ನಡೆದ  ಸಿಖ್ಖರ ನರಮೇಧ , 2002ರ ಗುಜರಾತ್ ಮುಸ್ಲಿಂ ನರಮೇಧಗಳು ಮತ್ತು ವರ್ತಮಾನದ  CAA  ಚಳವಳಿಯನ್ನು ಹತ್ತಿಕ್ಕಲು  ನಡೆಸಿದ ದಿಲ್ಲಿ ಗಲಭೆಗಳು ನೆನಪಾಗಿ ನಾವು ಸ್ವತಂತ್ರ ರಾಷ್ಟ್ರದಲ್ಲಿದ್ದೇವೆಯೇ ಎಂಬ ಸಂಶಯ ಹುಟ್ಟಿಸುತ್ತವೆ.

ಆರ್‌ಎಸ್‌ಎಸ್

ಈ ಎಲ್ಲಾ ಸಂದರ್ಭಗಳಲ್ಲೂ ಪೊಲೀಸರು ಆಡಳಿತಾರೂಢ ಸರ್ಕಾರಗಳ ಖಾಸಗಿ‌ ಸುಸಜ್ಜಿತ ಗೂಂಡಾ ಪಡೆಯಂತೆ ವರ್ತಿಸಿರುವುದು ಆಘಾತಕಾರಿಯಾದ ಮತ್ತು ವಾಸ್ತವ ಸಂಗತಿಯಾಗಿದೆ.  ದೇಶದ ನಾಗರಿಕರ ತೆರಿಗೆಯ ಹಣದಲ್ಲಿ ನಡೆಯುವ ಈ ಪೊಲೀಸ್ ವ್ಯವಸ್ಥೆ ನಾಗರಿಕರು ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಟಕ್ಕಿಳಿದಾಗಲೆಲ್ಲ ಪ್ರಜಾಪ್ರಭುತ್ವದ ರಕ್ಷಕನಂತಲ್ಲದೆ ಆಳುವವರ ಕೂಲಿಯಾಳುಗಳಂತೆ ನಡೆದುಕೊಂಡಿದೆ.

ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್‌ ಪ್ರಕರಣ: 9 ಪೊಲೀಸರ ವಿರುದ್ಧ ಚಾರ್ಜ್‌ಶೀಟ್

ಪೊಲೀಸಿಂಗ್ ವ್ಯವಸ್ಥೆಯನ್ನು ಸ್ವಾಯತ್ತಗೊಳಿಸಲಾಗದೆ…?

ಈ ಹಿನ್ನೆಲೆಯಲ್ಲಿ ” ಪೊಲೀಸಿಂಗ್” ಅನ್ನು  (ಪೊಲೀಸ್, CBI, ED ಇತ್ಯಾದಿ ) ಯನ್ನಾಗಿ ಪುನಾರಚಿಸಿ  ಸ್ವತಂತ್ರಗೊಳಿಸಬಾರದೇಕೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ . ಇದು ಪ್ರಜಾಪ್ರಭುತ್ವದ ಸ್ಫೂರ್ತಿಯಿಂದ, ಕಾಳಜಿಯಿಂದ ಹುಟ್ಟಿದ ಪ್ರಶ್ನೆಯಾಗಿದೆ . ಹೀಗೆ ಪೊಲೀಸ್ ವ್ಯವಸ್ಥೆಯನ್ನು  ಸ್ವತಂತ್ರಗೊಳಿಸಿ ನಮ್ಮ ರಾಷ್ಟ್ರದ ಸಂವಿಧಾನವನ್ನು ಅದರ ಮಾರ್ಗದರ್ಶಿ ಸಂಹಿತೆಯನ್ನಾಗಿ ಮಾಡದೆ ಇದ್ದರೆ , ದೇಶದಾದ್ಯಂತ ವರದಿಯಾಗುತ್ತಿರುವ Police atrocities ಗಳು ಮತ್ತು ಸರ್ಕಾರಗಳ ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತ ನಡೆಸುವ ಮಾನವ ಹಕ್ಕು ದಮನದ  ದೌರ್ಜನ್ಯಗಳಿಗೆ  ಭವಿಷ್ಯದಲ್ಲಿಯೂ ಕೊನೆ ಎನ್ನುವುದು ಇರುವುದಿಲ್ಲ.

ಆಡಳಿತಾರೂಢ ಶಾಸಕಾಂಗ ಮತ್ತು  ಕಾರ್ಯಾಂಗಗಳ  ಸೂಚನೆಯಂತೆ ಕೆಲಸ ಮಾಡುವ ಪೊಲೀಸ್ ವ್ಯವಸ್ತೆಯ  ತಾತ್ವಿಕ ರೂಪುರೇ಼ಷೆಯು  ದೋಷರಹಿತವಾಗಿ ಕಂಡರೂ ಕಳೆದ ಎಪ್ಪತ್ಮೂರು ವರ್ಷಗಳ ಭಾರತೀಯ ನಾಗರಿಕರ  ಅನುಭವದಲ್ಲಿ ಅದು ಒಂದು ದುಃಸ್ವಪ್ನದಂತೆ ಕಂಡಿದೆ. ಇತಿಹಾಸದಿಂದ ವರ್ತಮಾನದವರೆಗೆ ನಾನು ನೆನಪಿನಿಂದ ಉಲ್ಲೇಖಿಸಿದ ಮೇಲಿನ ಕೆಲವು ಘಟನೆಗಳಿಂದ ಹಿಡಿದು ವರ್ತಮಾನದ ಘಟನೆಗಳವರೆಗೆ ಲೆಕ್ಕವಿಲ್ಲದಷ್ಟು ಘಟನೆಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಗಲಭೆಗಳು, ಹಲ್ಲೆಗಳು ಮಾಬ್ ಲಿಂಚ್‌ಗಳು ನಡೆದಾಗಲೆಲ್ಲಾ ನಾಗರಿಕ ಸಮಾಜ, ಮಾದ್ಯಮಗಳು, ಸಾರ್ವಜನಿಕ ಕ್ಷೇತ್ರದ ರಾಜಕೀಯ ಮುತ್ಸದ್ದಿಗಳು , ಬುದ್ದಿಜೀವಿಗಳು ಪೊಲೀಸರ ಪಕ್ಷಪಾತ ಧೋರಣೆಯನ್ನು ಪ್ರಶ್ನಿಸುವುದು , ಖಂಡಿಸುವುದು ಇವನ್ನೆಲ್ಲ ನೋಡುತ್ತಲೇ ಇದ್ದರೂ ಪೊಲೀಸ್ ಕಾರ್ಯಾಚರಣೆಗಳ ವಿರುದ್ದ ಒಂದು ರಾಷ್ಟ್ರವ್ಯಾಪಿ  ಅಭಿಪ್ರಾಯವನ್ನು ರೂಪಿಸಲು ಮುಂದಾಗದೆ ಇರುವುದು ವಿಷಾದವೇ ಸರಿ.

ಇದನ್ನೂ ಓದಿ: ಸಾತಾನ್ ಕುಳಂ ಲಾಕಪ್ ಸಾವಿನಿಂದ ಕಲಿಯಬೇಕಾಗಿರುವ ಪಾಠಗಳು

ಪೊಲೀಸ್ ವ್ಯವಸ್ಥೆಯನ್ನು ಆಡಳಿತಾರೂಢ ಸರ್ಕಾರಿ ಶಕ್ತಿಯಿಂದ ಪ್ರತ್ಯೇಕಿಸಿ ಸ್ವಾಯತ್ತಗೊಳಿಸಿದರೆ  ಪೊಲೀಸರು ಒತ್ತಡ ಮುಕ್ತವಾಗಿ  ಸಾಂವಿಧಾನಿಕವಾಗಿ, ಸ್ವತಂತ್ರ ನಿರ್ಧಾರಗಳನ್ನು ತಳೆಯಲು ಮತ್ತು ಪ್ರಜಾಪ್ರಭುತ್ವದ ಸಂವೇದನೆಯಿಂದ  ಕಾರ್ಯಾಚರಣೆ  ನಡೆಸಲು ಅನುಕೂಲ ಮಾಡಿದಂತಾಗುತ್ತದೆ.

ಈ ಪರಿಷ್ಕೃತ ಸುಧಾರಿತ ಪೊಲೀಸಿಂಗ್ ನಮ್ಮ ತ್ರಿವಳಿ ಅಂಗಗಳ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದರೂ ಅವುಗಳ‌ ಗುಲಾಮರಾಗಿರುವುದಿಲ್ಲ, ಬದಲಾಗಿ ಪ್ರಜಾಪ್ರಭುತ್ವದ  ಮೌಲ್ಯಗಳಾದ ವ್ಯಕ್ತಿ ಸ್ವಾತಂತ್ರ್ಯ , ಅಭಿವ್ಯಕ್ತಿ  ಸ್ವಾತಂತ್ರ್ಯ ಮತ್ತು ಬಾಳುವ ಹಕ್ಕುಗಳನ್ನೂ ಒಳಗೊಂಡ ವಿಸ್ತೃತ  ಸಂವಿಧಾನ ಪ್ರತಿಪಾದಿತ ಮಾರ್ಗದರ್ಶಿ ಸೂತ್ರಗಳಡಿ ಕಾರ್ಯನಿರ್ವಹಿಸುತ್ತದೆ.

ಸತತವಾಗಿ ಪೊಲೀಸ್ ದೌರ್ಜನ್ಯದ ಬಲಿಪಶುಗಳಾಗುವ ಚಿಂತಕರು, ಬರಹಗಾರರು, ಪ್ರಾಧ್ಯಾಪಕರು, ಮಹಿಳೆಯರು, ಅಲ್ಪಸಂಖ್ಯಾತ ಜಾತಿ‌ ಮತ್ತು ಧಾರ್ಮಿಕ ಸಮುದಾಯಗಳು, ಮಾನವ ಹಕ್ಕುಗಳ  ರಕ್ಷಣೆಗಾಗಿ ಕೆಲಸ ಮಾಡುತ್ತಿರುವ  ಸಂಘಟನೆಗಳು  ಈ ಜ್ವಲಂತ ಸಮಸ್ಯೆಯ  ಬಗ್ಗೆ ರಾಷ್ಟ್ರ ಮಟ್ಟದ ಅಭಿಪ್ರಾಯ ರೂಪಿಸಲು ಒತ್ತಡ ತರುವ ಕಾರ್ಯ ಮಾಡಬೇಕಾಗಿದೆ.

ಸಂವಿಧಾನ ತಜ್ಞರು‍, ರಾಜಕೀಯ ಪಕ್ಷಗಳು, ವಿವಿಧ ವಿಶ್ವ ವಿದ್ಯಾನಿಲಯಗಳ  ಪ್ರಾಧ್ಯಾಪಕರು, ಮುತ್ಸದ್ಧಿಗಳು, ಜನಪರ  ಸಂಘಟನೆಗಳು ಈ ಪ್ರಸ್ತಾವದ ಸಾಧಕ ಬಾಧಕಗಳ ಬಗ್ಗೆ ವಿಸ್ತೃತವಾಗಿ  ಚರ್ಚಿಸಲು ಮುಂದೆ ಬರಬೇಕಾಗಿದೆ.

ಕಾನೂನು ಸುವ್ಯವಸ್ಥೆಯ ನಿತ್ಯದ ಅವಶ್ಯಕತೆಗಳನ್ನೂ ಒಳಗೊಂಡು  ಪ್ರಜಾಪ್ರಭುತ್ವವು  ಮುಂದೊಡ್ಡುವ  ಸವಾಲುಗಳನ್ನು ಸ್ವತಂತ್ರವಾಗಿ ನಿರ್ವಹಿಸಲು  ಸ್ವಾಯತ್ತತೆಯನ್ನು, ಪರಮಾಧಿಕಾರವನ್ನು ನೀಡುವ ಮೂಲಕ ಪೊಲೀಸ್ ವ್ಯವಸ್ಥೆಯನ್ನು  ಸ್ವತಂತ್ರ ಸಾಂವಿಧಾನಿಕ ವ್ಯವಸ್ಥೆಯನ್ನಾಗಿ ಪುನರ್ರಚಿಸಬೇಕಾಗಿದೆ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವ, ಮಾನವ ಹತ್ಯೆಗಳನ್ನು ತಡೆಯುವುದಕ್ಕಾಗಿ ತುರ್ತಾಗಿ ಆಗಬೇಕಾದ ಕಾರ್ಯವಾಗಿದೆ.


ಇದನ್ನೂ ಓದಿ: ದೆಹಲಿ ಗಲಭೆ: ಪೊಲೀಸರು ಅಮಾಯಕರಿಗೆ ಅಪರಾಧಿ ಪಟ್ಟ ಕಟ್ಟುತ್ತಿದ್ದಾರೆ- ಪ್ರಶಾಂತ್‌ ಭೂಷಣ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...