ಗುಜರಾತ್ ವಿಧಾನಸಭೆಯಲ್ಲಿ ಮಂಡಿಸಲಾದ ನಾನಾವತಿ-ಮೆಹ್ತಾ ಆಯೋಗದ ವರದಿಯಲ್ಲಿ, ಗೋಧ್ರಾ ರೈಲು ದುರಂತದ ನಂತರದ ಗಲಭೆಗಳು ಯೋಜಿತವಾಗಿ ಆಯೋಜಿಸಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ವರದಿಯು ನರೇಂದ್ರ ಮೋದಿ ನೇತೃತ್ವದ ಅಂದಿನ ಗುಜರಾತ್ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಎಎನ್ಐ ವರದಿ ಮಾಡಿದೆ.
ಗುಜರಾತಿನ ಗೃಹ ಮಂತ್ರಿ ಪ್ರದೀಪ್ ಸಿನ್ಹ ಜಡೇಜ ಇಂದು ಗುಜರಾತ್ನ ಅಸೆಂಬ್ಲಿಯಲ್ಲಿ ಈ ವಿಚಾರವನ್ನು ಚರ್ಚೆಗೆ ತಂದಿದ್ದಾರೆ.
ನಾನಾವತಿ ಮೆಹ್ತಾ ಆಯೋಗದ ಅಂತಿಮ ವರದಿಯ ಇಂದು ಚರ್ಚೆಗೆ ಬರಲಿದೆ. ಇದರ ಮೊದಲ ಭಾಗದ ವರದಿಯು ಕಳೆದ ವರ್ಷ ಬಿಡುಗಡೆಯಾಗಿತ್ತು. ಅದು ಸಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್6 ಬೋಗಿಯನ್ನು ಸುಟ್ಟುಹಾಕಿದ್ದು ಯೋಜಿತ ಕ್ರಿಯೆಯಾಗಿತ್ತು ಎಂದು ತಿಳಿಸಿತ್ತು.
ಇಂದು ಬಿಡುಗಡೆಯಾಗಿರುವ ಪೂರ್ಣ ವರದಿಯಲ್ಲಿ ಆ ನಂತರ ನಡೆದ ಗುಜರಾತ್ ಗಲಭೆಗಳಲ್ಲಿ ಮೋದಿಯವರ ನೇತೃತ್ವದ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದು ಹೇಳುವ ಮೂಲಕ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದೆ.
ಗಲಭೆಗಳು ನಡೆದಿದ್ದು ನಿಜ. ಕೆಲವೆಡೆ ಪೊಲೀಸರು ಗಲಭೆಗಳನ್ನು ನಿಯಂತ್ರಿಸಲು ವಿಫಲವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.