ಭಾರತದಲ್ಲಿ ರಾಜಕೀಯವು ಹೋರಾಟವು ಒಂದು “ಮಹಾತ್ಮ ಗಾಂಧಿಯವರ ದೃಷ್ಟಿಕೋನ” ಮತ್ತು ಅವರ ಹಂತಕ “ನಾಥುರಾಮ್ ಗೋಡ್ಸೆ ಅವರ ದೃಷ್ಟಿಕೋನದ” ನಡುವೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಪ್ರಸ್ತುತ ಯುರೋಪ್ ರಾಷ್ಟ್ರಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ದೇಶದಲ್ಲಿ ಒಡಕು ಮೂಡಿಸುತ್ತಿದ್ದಾರೆ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಆಶ್ರಯ ನೀಡುತ್ತಿದ್ದಾರೆಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೆಪ್ಟೆಂಬರ್ 8 ರಂದು ಬ್ರಸೆಲ್ಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಯುರೋಪಿಯನ್ ಸಂಸದರೊಂದಿಗಿನ ತಮ್ಮ ಸಭೆಯ ಕುರಿತು ಮಾಹಿತಿ ನೀಡಿದ್ದು, ಸಭೆಯಲ್ಲಿ ಭಾರತದ ಪ್ರಜಾಪ್ರಭುತ್ವವು ಪ್ರಸ್ತುತ ಆರ್ಥಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲಾಗಿದೆ . ಭಾರತ ಎದುರಿಸುತ್ತಿರುವ ಆರ್ಥಿಕ ಸವಾಲುಗಳು, ಇತರ ಸವಾಲುಗಳು, ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಸಾಮಾನ್ಯ ರೀತಿಯ ದಾಳಿ ಬಗ್ಗೆ ಅವರಿಗೆ ಅರಿವು ನೀಡಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ನಡೆದಿದೆ ಮತ್ತು ಅಲ್ಪಸಂಖ್ಯಾತ , ದಲಿತ ಸಮುದಾಯಗಳು, ಬುಡಕಟ್ಟು, ಕೆಳ ಜಾತಿಯ ಸಮುದಾಯಗಳು ದಾಳಿಗೆ ಒಳಗಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಮ್ಮ ದೇಶದ ಸ್ವರೂಪವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನದಲ್ಲಿ ನಮ್ಮ ದೇಶವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ ಮತ್ತು ನಮ್ಮ ಒಕ್ಕೂಟದ ಅತ್ಯಂತ ಮುಖ್ಯ ಅಂಶವೆಂದರೆ ನಮ್ಮ ಒಕ್ಕೂಟದ ಸದಸ್ಯರ ನಡುವಿನ ಸಂಭಾಷಣೆಯಾಗಿದೆ. ಆದರೆ ಈಗ ಪರ್ಯಾಯ ದೃಷ್ಟಿ ಇದೆ, ಅದು ಬಿಜೆಪಿ ದೃಷ್ಟಿಕೋನವಾಗಿದೆ, ಇದು ಅಧಿಕಾರವನ್ನು ಕೇಂದ್ರೀಕರಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಪರ್ಯಾಯ ದೃಷ್ಟಿ ಕೋನವು ಸಂಪತ್ತು ಕೇಂದ್ರೀಕೃತವಾಗಬೇಕು ಮತ್ತು ಒಕ್ಕೂಟದ ಸದಸ್ಯರ ನಡುವಿನ ಸಂಭಾಷಣೆಯನ್ನು ದಮನ ಮಾಡಬೇಕು ಎಂದು ಹೇಳುತ್ತದೆ. ಭಾರತದಲ್ಲಿರುವುದು ಎರಡು ದೃಷ್ಟಿಕೋನಗಳ ನಡುವಿನ ಹೋರಾಟವಾಗಿದೆ. ಒಂದು ಮಹಾತ್ಮಾ ಗಾಂಧಿಯವರ ದೃಷ್ಟಿ ಮತ್ತು ಇನ್ನೊಂದು ನಾಥೂರಾಂ ಗೋಡ್ಸೆ ಅವರ ದೃಷ್ಟಿಕೋನವಾಗಿದೆ. ನಾಥೂರಾಂ ಗೋಡ್ಸೆ, ಗಾಂಧೀಜಿಯನ್ನು ಹತ್ಯೆ ಮಾಡಿದ ವ್ಯಕ್ತಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತದಲ್ಲಿ ನಾವು ಮಾಡುತ್ತಿರುವುದು ಪ್ರಜಾಸತ್ತಾತ್ಮಕ ಹೋರಾಟ ಮತ್ತು ಇದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಸಂಸ್ಥೆಗಳ ಮೇಲೆ ಮತ್ತು ನಮ್ಮ ಸ್ವಾತಂತ್ರ್ಯದ ಮೇಲೆ ಆಕ್ರಮಣವನ್ನು ನಿಲ್ಲಿಸುತ್ತೇವೆ ಎಂಬ ಭರವಸೆಯನ್ನು ಪ್ರತಿಪಕ್ಷಗಳು ನೀಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಯುರೋಪ್ನಲ್ಲಿರುವ ಭಾರತೀಯರನ್ನು ಭೇಟಿ ಮಾಡಲು ಮತ್ತು ಅವರು ಭಾರತವನ್ನು ಹೇಗೆ ನೋಡುತ್ತಾರೆ ಮತ್ತು ಭವಿಷ್ಯದಲ್ಲಿ ಏನು ಮಾಡಬೇಕೆಂದು ಅರ್ಥೈಸಲು ಬಂದಿದ್ದೇನೆ. ನಾನು ಸಾವಿರಾರು ಯುವಕರನ್ನು ಭೇಟಿಯಾಗಿದ್ದೇನೆ. ಅವರು ಹೇಳಿದ ಮೂರು ವಿಷಯಗಳೆಂದರೆ, ನಿರುದ್ಯೋಗ, ಬಡತನದ ಮಟ್ಟದಲ್ಲಿ ಭಾರಿ ಹೆಚ್ಚಳ ಮತ್ತು ಸಂಪೂರ್ಣವಾಗಿ ಅಸಮಾನ ಆದಾಯ ಹಂಚಿಕೆಗಳಾಗಿದೆ. ಇದರಿಂದಾಗಿ ಕೆಲ ಜನರು ಹೆಚ್ಚು ಶ್ರೀಮಂತರಾಗುತ್ತಾರೆ ಮತ್ತು ಹೆಚ್ಚಿನ ಜನರು ಮತ್ತೆ ಬಡತನಕ್ಕೆ ತಳ್ಳಲ್ಪಡತ್ತಾರೆ ಎಂದು ಹೇಳಿದ್ದಾರೆ.
ಬೆಲೆಗಳ ಏರಿಕೆ ಮತ್ತು ಹಣದುಬ್ಬರ ಇವೆ. ನಿಜವಾದ ಸಂಗತಿಯೆಂದರೆ ಭಾರತವು ಕಳೆದ 40 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ಹೊಂದಿದೆ. ಆರ್ಥಿಕ ನೀತಿ ತಪ್ಪಾಗಿದೆ. ಸರ್ಕಾರಕ್ಕೆ ಸಾಕಷ್ಟು ಮಾಧ್ಯಮ ಬೆಂಬಲವಿದೆ. ಆದ್ದರಿಂದ ಆ ರೀತಿಯ ವಿಷಯಗಳು ಹೊರಬರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಜಿ20 ಶೃಂಗಸಭೆಯ ಔತಣ ಕೂಟಕ್ಕೆ ಖರ್ಗೆಗಿಲ್ಲ ಆಹ್ವಾನ