ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ತಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಹ್ವಾನಿಸಿರುವ ಚರ್ಚೆಯ ಕಾವು ಇನ್ನೂ ಆರಿಲ್ಲ. ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ಹೋಗಬಾರದೆಂದು ಮನವಿ ಮಾಡಿದ್ದ ಬಹುಭಾಷ ನಟ ಪ್ರಕಾಶ್ ರಾಜ್, “ನಿಮ್ಮೊಳಗಿನ ವಿಷ ಅರಿಯದ, ವಿಷಾದ ಪಡಲೇಬೇಕಾದ ದಿನಗಳು” ಎಂದು ವಿಶ್ವೇಶ್ವರ ಭಟ್ ಕುರಿತು ಹೇಳಿದ್ದಾರೆ.
ಜುಲೈ 22ರಂದು ಬೆಂಗಳೂರಿನ ಟೌನ್ಹಾಲ್ನಲ್ಲಿ ವಿಶ್ವವಾಣಿ ಪ್ರಕಟಿಸಿರುವ ಆರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಈ ಪುಸ್ತಕಗಳ ಲೋಕಾರ್ಪಣೆಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದು, ಆಹ್ವಾನ ಪತ್ರಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಶ್ವೇಶ್ವರ ಭಟ್ ಪತ್ರಕರ್ತರಾಗಿ ಕೆಲಸ ಮಾಡುವುದಕ್ಕಿಂತಲೂ ಮಹಿಳೆಯರನ್ನು ಹೀಗಳೆಯುತ್ತಾ, ಸಾವುಗಳನ್ನು ಸಂಭ್ರಮಿಸುತ್ತಾ ವಿಕೃತತೆ ಮೆರೆದಿದ್ದಾರೆ. ತಮ್ಮ ಲೇಖನದಲ್ಲಿ ರಾಷ್ಟ್ರಪತಿ ಮುರ್ಮುರವರ ಬಣ್ಣವನ್ನು ಹೀಯಾಳಿಸಿ ಜನಾಂಗೀಯತೆ ಮೆರೆದಿದ್ದಾರೆ. ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯನ್ನು ಸಮರ್ಥಿಸಿದ್ದಾರೆ. ಅಂತಹ ವ್ಯಕ್ತಿಯ ಪುಸ್ತಕಗಳನ್ನು ಜಾತ್ಯಾತೀತರೆನಿಸಿಕೊಂಡ ಸಿದ್ದರಾಮಯ್ಯನವರು ಬಿಡುಗಡೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಜೋರಾಗಿ ಕೇಳಿಬಂದಿದೆ.
ಇದೇ ಹಿನ್ನಲೆಯಲ್ಲಿ ಟ್ವೀಟ್ ಮಾಡಿದ್ದ ಪ್ರಕಾಶ್ ರಾಜ್ರವರು, “ಸನ್ಮಾನ್ಯ ಸಿದ್ದರಾಮಯ್ಯನವರೇ.. ದಯವಿಟ್ಟು ಒಮ್ಮೆ ಯೋಚಿಸಿ .. ಇದು ತಮಗೆ ಶೊಭೆಯಲ್ಲ ಎಂದು ಮನವಿ ಮಾಡಿದ್ದರು.
ಸನ್ಮಾನ್ಯ @siddaramaiah ರವರೆ… ದಯವಿಟ್ಟು ಒಮ್ಮೆ ಯೋಚಿಸಿ .. ಇದು ತಮಗೆ ಶೊಭೆಯಲ್ಲ … 🙏🏿🙏🏿🙏🏿#justasking pic.twitter.com/LoI9uwfbW6
— Prakash Raj (@prakashraaj) July 16, 2023
ಇದಕ್ಕೆ ತಿರುಗೇಟು ನೀಡಿದ ವಿಶ್ವೇಶ್ವರ ಭಟ್, “ನೆನಪುಗಳು ಮಾಸುವುದಿಲ್ಲ! ನನ್ನ ಪುಸ್ತಕ ಬಿಡುಗಡೆಗೆ ಹೋಗಬೇಡಿ ಎನ್ನುವವರು, ನನ್ನೊಂದಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇಕೋ? ಡಬಲ್ ಸ್ಟ್ಯಾಂಡರ್ಡ್ ಅಂದ್ರೆ ಇದೇ ನೋಡಿ. (ಅವರು ನನ್ನೊಂದಿಗೆ ಭಾಗವಹಿಸಿದ ಹಲವು ಕಾರ್ಯಕ್ರಮಗಳ ಇನ್ನೂ ಅನೇಕ ಫೋಟೋಗಳು ನನ್ನ ಸಂಗ್ರಹದಲ್ಲಿದೆ. ಆಸಕ್ತಿಯಿದ್ದರೆ ಹೇಳಿ, ಬಿಡುಗಡೆ ಮಾಡುವೆ.)” ಎಂದು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, “Yes .. regrettable Memories of not knowing the poison within you … ನಿಮ್ಮೊಳಗಿನ ವಿಷ ಅರಿಯದ ..ವಿಷಾದ ಪಡಲೇಬೇಕಾದ ದಿನಗಳು” ಎಂದು ಮರು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
Yes .. regretable Memories of not knowing the poison within you … ನಿಮ್ಮೊಳಗಿನ ವಿಷ ಅರಿಯದ ..ವಿಷಾದ ಪಡಲೇಬೇಕಾದ ದಿನಗಳು @VishweshwarBhat #justasking https://t.co/GrOjxzMApi
— Prakash Raj (@prakashraaj) July 17, 2023
ವಿಶ್ವೇಶ್ವರ್ ಭಟ್ ಕೋಮುವಾದಿ, ಜಾತೀವಾದಿ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಪತ್ರಕರ್ತರಾಗಿದ್ದಾರೆ. ಜೀವಪರ ವ್ಯಕ್ತಿಗಳ ವಿರುದ್ಧ ಸದಾ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಕೆಟ್ಟ ಪದಗಳಿಂದ ಅವಹೇಳನ ಮಾಡಿದ್ದರೆ. ಇದೀಗ ಸಮಾಜವಾದಿ ಚಿಂತನೆಗಳಿಂದಲೇ ನಾಡಿನಾದ್ಯಂತ ಹೆಸರು ಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಮುವಾದಿ ಪತ್ರಕರ್ತರ ಕಾರ್ಯಕ್ರಮಕ್ಕೆ ಹೋಗುತ್ತಾರೆ ಎನ್ನುವ ವಿಚಾರಕ್ಕೆ ನಾಡಿನಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ವಿಶ್ವೇಶ್ವರ ಭಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ: ತೀವ್ರ ಆಕ್ರೋಶ