ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ಸಾಲ ಕೊಡಲು ಹಿಂದೇಟು ಹಾಕಿದ ಬ್ಯಾಂಕ್ಗಳ ಮುಂದೆ ಕಸದ ತ್ಯಾಜ್ಯವನ್ನು ಎಸೆದ ಪೌರ ಕಾರ್ಮಿಕರು, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿಶಿಷ್ಟ ಪ್ರತಿಭಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ವಯ್ಯೂರು ನಗರದ ವ್ಯಾಪ್ತಿಯಲ್ಲಿ ನಡೆದಿದೆ.
ಇದರಿಂದ ಕೆಲವು ಗಂಟೆಗಳ ಕಾಲ ಆತಂಕ ಸೃಷ್ಟಿಯಾಗಿತ್ತು. ಆಂಧ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಸಿಂಡಿಕೇಟ್ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ಒಟ್ಟು 4 ಬ್ಯಾಂಕ್ಗಳಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ‘ಕನ್ನಡ’ದ ಸಿನೆಮಾ ಅಂದ್ರೆ ಯಾವುದು? : ಕೆ.ಫಣಿರಾಜ್
ನಂತರ, ಕಲೆಕ್ಟರ್ ಇಮ್ತಿಯಾಜ್ ಅವರ ನಿರ್ದೇಶನದ ಮೇರೆಗೆ, ವಯ್ಯೂರು ನಗರ ಪಂಚಾಯತ್ ಆಯುಕ್ತ ಪ್ರಕಾಶ್ ರಾವ್, ಪೌರ ಕಾರ್ಮಿಕರ ಈ ಪ್ರತಿಭಟನೆಯನ್ನು ನಿಲ್ಲಿಸಲು ಮತ್ತು ಬ್ಯಾಂಕ್ ಮುಂದೆ ಎಸೆಯಲ್ಪಟ್ಟ ಕಸವನ್ನು ತೆರವುಗೊಳಿಸಲು ಆದೇಶಿಸಿದರು.
“ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ಸಾಲ ನೀಡುವಂತೆ ಕೋರಿಕೆ ಸಲ್ಲಿಸಿದ್ದೇವೆ. ಕೊನೆಗೆ ನಗರ ಪಂಚಾಯತ್ ಆಯುಕ್ತ ಪ್ರಕಾಶ್ ರಾವ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ನಂತರವೂ ಬ್ಯಾಂಕ್ಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮಗೆ ಬೇರೆ ಆಯ್ಕೆ ಉಳಿದಿಲ್ಲ. ಬ್ಯಾಂಕರ್ಗಳ ವಿರುದ್ಧ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ತ್ಯಾಜ್ಯವನ್ನು ಎಸೆದಿದ್ದೇವೆ” ಎಂದು ಪೌರ ಕಾರ್ಮಿಕ ಸೂರಿ ಬಾಬು ಹೇಳಿದರು.
ಇದನ್ನೂ ಓದಿ: ಮಾಸ್ಕ್ ಹಾಕಿದ್ದರೂ ದಂಡ ವಸೂಲಿ ಆರೋಪ: ದೂರು ನೀಡಿದ ಬಿಜೆಪಿ ಶಾಸಕ
ಇದರ ನಡುವೆ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಸದಸ್ಯರು ಕಾರ್ಮಿಕರ ಈ ಪ್ರತಿಭಟನೆಯನ್ನು ಖಂಡಿಸಿದ್ದಾರೆ. “ಬ್ಯಾಂಕುಗಳಲ್ಲಿನ ಅಧಿಕಾರಿಗಳೊಂದಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ, ತಮ್ಮ ಬೇಡಿಕೆಗಳಿಗಾಗಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಆದರೆ ಇಂತಹ ಕೆಲಸಕ್ಕೆ ಕೈ ಹಾಕಬಾರದು” ಎಂದು ಸಂಘದ ಸದಸ್ಯ ವೈ ಶ್ರೀನಿವಾಸ ರಾವ್ ಹೇಳಿದರು.
ಕಲೆಕ್ಟರ್ ಇಮ್ತಿಯಾಜ್ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೊತೆಗೆ ಫಲಾನುಭವಿಗಳಿಗೆ ತ್ವರಿತವಾಗಿ ಸಾಲ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: PM-CARES ಸರ್ಕಾರದ ನಿಯಂತ್ರಣದಲ್ಲಿದೆ; ಆದರೆ RTI ವ್ಯಾಪ್ತಿಗೆ ಬರುವುದಿಲ್ಲ ಎಂದ ಸರ್ಕಾರ!