Homeಮುಖಪುಟಗಣರಾಜ್ಯೋತ್ಸವ ವಿಶೇಷ: ಸಾಂವಿಧಾನಿಕ ನೈತಿಕತೆಯ ಕೊರತೆಯನ್ನು ನೆನಪಿಸುವ ಗಣರಾಜ್ಯೋತ್ಸವ

ಗಣರಾಜ್ಯೋತ್ಸವ ವಿಶೇಷ: ಸಾಂವಿಧಾನಿಕ ನೈತಿಕತೆಯ ಕೊರತೆಯನ್ನು ನೆನಪಿಸುವ ಗಣರಾಜ್ಯೋತ್ಸವ

ನಾವು ಮತ್ತೆ ಸಾಂವಿಧಾನಿಕ ಪರಂಪರೆಯನ್ನು ಹೋರಾಟದ ಪ್ರತಿಫಲವೆಂದು ಭಾವಿಸಬೇಕಾದರೆ, ತಮ್ಮ ಮೇಲೆ ದೇಶದ್ರೋಹದ ಆರೋಪ ಬಂದಾಗ ಗಾಂಧಿ ಆಡಿದ ಈ ಪ್ರಸಿದ್ಧ ಮಾತುಗಳನ್ನು ನೆನಪಿಸಿಕೊಳ್ಳಬೇಕು: ದೇಶದ್ರೋಹವು ’ಪ್ರಭುತ್ವದ ವಿರುದ್ಧ ಉತ್ಸಾಹಿ ಅಸಮಾಧಾನ’ದ ಅಪರಾಧವಾಗಿದೆ. ದೇಶದ್ರೋಹದ ಈ ಆರೋಪಕ್ಕೆ ಸಂಬಂಧಿಸಿದಂತೆ, ಸೆರೆಮನೆಯಿಂದ ಗಾಂಧಿ ಈ ಹೇಳಿಕೆಯನ್ನು ನೀಡಿದ್ದರು.

- Advertisement -
- Advertisement -

ಭಾರತೀಯ ಗಣರಾಜ್ಯ ಸ್ಥಾಪನೆಯಾದ 72ನೇ ವಾರ್ಷಿಕೋತ್ಸವವನ್ನು ಇನ್ನೇನು ಆಚರಿಸಲಿದ್ದೇವೆ. ವೈವಿಧ್ಯತೆಯಿಂದ ಕೂಡಿದ ಈ ರಾಷ್ಟ್ರದ ಏಕತೆಯ ಒಂದು ಅಂಶವೆಂದರೆ ಸಂವಿಧಾನದ ನಿಷ್ಠೆ ಎಂಬುದು ಸ್ಪಷ್ಟವಾಗಿದೆ. ನಾವು ನಿಷ್ಠೆ ಎಂದು ಹೇಳುವಾಗ ನಿಷ್ಠೆಯು ಸರಿಯಾದ ಪದವಾಗಿರದೆ ಇರಬಹುದು, ನಾವು ಒಂದು ನಿರ್ದಿಷ್ಟ ರೀತಿಯ ಆಡಳಿತದ ಅಧಿಕಾರಕ್ಕೆ ನಿಷ್ಠೆಯನ್ನು ಹೊಂದಿದ್ದೇವೆ ಎಂದರ್ಥ. ಸಂವಿಧಾನಕ್ಕೆ ಸಂಬಂಧಿಸಿದಂತೆ, ಈ ಲಿಖಿತ ದಾಖಲೆಗೆ ಸಾಮಾನ್ಯ ಜನರ ಭಾವನೆಯನ್ನು ಬಹುಶಃ ಹೆಚ್ಚು ಸೂಕ್ತವಾಗಿ ’ಸಾಂವಿಧಾನಿಕ ಪ್ರೀತಿಯ’ ಒಂದು ರೂಪವೆಂದು ಬಣ್ಣಿಸಬಹುದು.

ಸಂವಿಧಾನದ ಬಗ್ಗೆ ನಮಗೆ ಈ ಬಾಂಧವ್ಯ ಏಕೆ? ಸಂವಿಧಾನವು ನಮಗೆ ಏಕೆ ಮುಖ್ಯವಾಗಿದೆ? ಸಂವಿಧಾನಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಮಹತ್ವ ನೀಡಲಾಗಿದೆ ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಅದು ಉಳಿದ ಎಲ್ಲಕ್ಕಿಂತ ಪ್ರಸ್ತುತವೇನಲ್ಲ ಎನ್ನಬಹುದು ಮತ್ತು ಅದಕ್ಕಾಗಿ ಸಂವಿಧಾನವಿಲ್ಲದೆ ಶತಮಾನಗಳಿಂದಲೂ ಉಳಿದುಕೊಂಡ ಗ್ರೇಟ್ ಬ್ರಿಟನ್‌ನ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಬ್ರಿಟನ್‌ಗೆ ಅದು ಸಾಧ್ಯವಾಗಿದ್ದರೆ, ನಾವು ಸಂವಿಧಾನವನ್ನು ಹೊಂದುವುದಕ್ಕೆ ಮಾತ್ರವಲ್ಲದೆ, ಅದಕ್ಕೆ ರಾಜತ್ವದ ಪೂಜ್ಯತೆಯನ್ನು ನೀಡುವಂತೆ ಏಕೆ ಒತ್ತಾಯಿಸುತ್ತೇವೆ?

ಗ್ರೇಟ್ ಬ್ರಿಟನ್ ಸಂವಿಧಾನವನ್ನು ಹೊಂದಿಲ್ಲದಿದ್ದರೂ, ಅದು ಸಾಂವಿಧಾನಿಕ ಪರಂಪರೆಯನ್ನು ಹೊಂದಿದೆ ಮತ್ತು ಸಾಂವಿಧಾನಿಕ ನೈತಿಕತೆಯ ಭಾವ ಅಲ್ಲಿ ಆಳವಾಗಿ ಬೇರೂರಿದೆ. ಬ್ರಿಟಿಷ್ ಪರಂಪರೆಯ ಭಾಗವಾಗಿರುವ ಈ ಸಾಂವಿಧಾನಿಕತೆಯು, ಹೋರಾಟದ ಇತಿಹಾಸದಿಂದ ಹುಟ್ಟಿಕೊಂಡಿದೆ. 1215 ರಲ್ಲಿ ಮ್ಯಾಗ್ನಾ ಕಾರ್ಟಾಗೆ (Magna Carta) ಸಹಿ ಹಾಕಿದ್ದು, ಬಹುಶಃ ಬ್ರಿಟಿಷ್ ಸಾಂವಿಧಾನಿಕ ಪರಂಪರೆಯ ಪ್ರಮುಖ ಮೈಲಿಗಲ್ಲು. ’ಯಾವುದೇ ಸ್ವತಂತ್ರ ಮನುಷ್ಯನನ್ನು’ ಜೈಲಿನಲ್ಲಿರಿಸಲಾಗುವುದಿಲ್ಲ ಅಥವಾ ’ನೆಲದ ಕಾನೂನು’ ಹೊರತುಪಡಿಸಿ ಆತ/ಆಕೆ ತನ್ನ ಆಸ್ತಿ ಕಳೆದುಕೊಳ್ಳುವುದಿಲ್ಲ ಎಂದು ಅದು ಖಾತರಿಪಡಿಸಿತು. ಸರಳವಾಗಿ ಹೇಳುವುದಾದರೆ, ಮ್ಯಾಗ್ನಾ ಕಾರ್ಟಾದ ಈ ಷರತ್ತು, ಕಾನೂನಿನ ನಿಯಮದ ಮುಖ್ಯ ತತ್ವವಾಗಿದ್ದು, ಅಪರಾಧಕ್ಕೆ ನೀಡುವ ಶಿಕ್ಷೆಯನ್ನು ಕಾನೂನು ಅಧಿಕೃತಗೊಳಿಸಬೇಕು ಮತ್ತು ಕಾನೂನಿನ ಅಧಿಕಾರವಿಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಲಾಗುವುದಿಲ್ಲ ಎಂದು ಅದು ವಿಷದಪಡಿಸುತ್ತದೆ.

ಕ್ರಿ.ಶ 1215 ರಲ್ಲಿ ತಿಳಿಸಲಾದ ಈ ತತ್ವವು ಇನ್ನೂ ಇಂಗ್ಲಿಷ್ ನ್ಯಾಯಶಾಸ್ತ್ರಕ್ಕೆ ಜೀವ ತುಂಬುತ್ತದೆ ಮತ್ತು ಅದು ಬ್ರಿಟಿಷ್ ಜನರ ಮಾನಸಿಕ ಭಾವನೆಗಳ ಒಂದು ಭಾಗವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಮಾನ್ಯ ಜನರ ಯೋಚನೆಯ ಒಂದು ಬಗೆಯ ಭಾಗವಾಗಿ ಸಾಂವಿಧಾನಿಕ ತತ್ವ ಬೆಳೆದಿದೆ ಮತ್ತು ಇದು ಯಾವ ಮಟ್ಟಕ್ಕೆ ಅಲ್ಲಿ ಹಾಸುಹೊಕ್ಕಿದೆ ಎಂಬುದಕ್ಕೆ ಉದಾಹರಣೆಯೆಂದರೆ, ನಾಜಿ ಬೆದರಿಕೆ ಉತ್ತುಂಗದಲ್ಲಿದ್ದ ಎರಡನೆಯ ಮಹಾಯುದ್ಧದ ಸಮಯದಲ್ಲಿಯೂ ಸಹ, ಸಂಶಯದ ಆಧಾರದ (ಪ್ರಿವೆನ್ಟಿವ್) ಬಂಧನವು ಒಂದು ಅಪವಾದವಾಗಿತ್ತೇ ಹೊರತು (ಕೇಸ್ ಟು ಕೇಸ್ ಆಧಾರದ ಮೇಲೆ ಬಂಧನವನ್ನು ಸಮರ್ಥಿಸಲು ಸಾಕಷ್ಟು ದಾಖಲಾತಿಗಳಿದ್ದಾಗ ಮಾತ್ರ ಬಂಧಿಸುವ), ಅದು ಕಾನೂನು ನಿಯಮವಾಗಿರಲಿಲ್ಲ.

ಭಾರತದ ವಿಷಯಕ್ಕೆ ಬಂದರೆ, ನಮ್ಮಲ್ಲಿ ಸಂವಿಧಾನವಿದ್ದರೂ, ಸಾಂವಿಧಾನಿಕ ನೈತಿಕತೆಯು ಪ್ರಭುತ್ವ ಕಾರ್ಯನಿರ್ವಹಿಸುವ ವಿಧಾನದ ಒಂದು ಭಾಗವಾಗಿಲ್ಲ. ಇದಕ್ಕೆ ’ಭೀಮಾ ಕೊರೆಗಾಂವ್ 16’ ಎಂದು ಕರೆಯಲ್ಪಡುವ ಪ್ರಕರಣವನ್ನು ಉದಾಹರಿಸಬಹುದು. ಪ್ರಭುತ್ವವು ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಂಡಿಲ್ಲ ಎಂಬ ಅಂಶವನ್ನು ಈ ನಿರಂತರ ಬಂಧನಗಳು ಎತ್ತಿ ತೋರಿಸುತ್ತಿವೆ.

ಭೀಮಾ ಕೊರೆಗಾಂವ್ ಸಂಭ್ರಮಾಚರಣೆಯ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ, ಪ್ರಭುತ್ವ ದೇಶದುದ್ದಗಲಕ್ಕೆ ತಮಗೆ ತೊಂದರೆ ಎನಿಸಿದ ಹದಿನಾರು ಮಾನವ ಹಕ್ಕುಗಳ ಕಾರ್ಯಕರ್ತರ ವಿರುದ್ಧ ಸಂಪೂರ್ಣ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ. ಆಘಾತಕಾರಿ ಸಂಗತಿಯೆಂದರೆ, ಅವರಲ್ಲಿ ಸುಧಾ ಭಾರದ್ವಾಜ್, ಆನಂದ್ ತೆಲ್ತುಂಬ್ಡೆ ಮತ್ತು 83 ವರ್ಷದ ಫಾದರ್ ಸ್ಟಾನ್ ಸ್ವಾಮಿ ಸೇರಿ ಹಲವರಿಗೆ ಭೀಮಾ ಕೊರೆಗಾಂವ್ ಘಟನೆ ಜೊತೆ ಯಾವುದೇ ಸಂಬಂಧವಿಲ್ಲ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ(UAPA) ಅವರನ್ನು ಬಂಧಿಸಲಾಗಿದೆ ಮತ್ತು ಅವರು ಇನ್ನೂ ಜೈಲಿನಲ್ಲಿ ಬಳಲುತ್ತಿದ್ದಾರೆ.

ಭಾರತದಲ್ಲಿ ಈ ರೀತಿಯ ಉಲ್ಲಂಘನೆಗಳು ಮುಂದುವರಿಯುತ್ತಿರುವುದಕ್ಕೆ ಕಾರಣ ಇಲ್ಲಿ ಪ್ರಭುತ್ವವು ಸಾಂವಿಧಾನಿಕ ನೈತಿಕತೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವುದಿಲ್ಲ ಎಂಬುದಷ್ಟೇ ಕಾರಣವಲ್ಲ್ಲ, ಜನಮಾನಸದಲ್ಲಿ ಕೂಡ ಸಾಂವಿಧಾನಿಕ ನೈತಿಕತೆಯು ಬೇರುಗಳು ಇಲ್ಲದಿರುವುದು. ಡಾ.ಅಂಬೇಡ್ಕರ್ ಇದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ:

“ಸಾಂವಿಧಾನಿಕ ನೈತಿಕತೆಯು ಸ್ವಾಭಾವಿಕ ಭಾವನೆಯಲ್ಲ. ಅದನ್ನು ಅಳವಡಿಸಿಕೊಳ್ಳಬೇಕು. ನಮ್ಮ ಜನರು ಅದನ್ನು ಇನ್ನೂ ಕಲಿತುಕೊಳ್ಳಬೇಕಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಪ್ರಜಾಪ್ರಭುತ್ವವು ಭಾರತದಲ್ಲಿ, ಮೂಲವಾಗಿ ಪ್ರಜಾಸತ್ತಾತ್ಮಕವಲ್ಲದ ಭಾರತೀಯ ನೆಲದ ಸುತ್ತ ಇರುವ ಒಂದು ಆಕರ್ಷಕ ಹೊರ ಕವಚವಾಗಿದೆ.”

’ಫ್ರೀ ಬಾರ್ನ್ ಇಂಗ್ಲಿಷ್‌ಮನ್ (ಮುಕ್ತ ಇಂಗ್ಲಿಷ್ ನಾಗರಿಕ) ಎಂಬ ಕಲ್ಪನೆಯು ಈಗ ಬ್ರಿಟಿಷ್ ಸಾಂವಿಧಾನಿಕ ಪರಂಪರೆಯ ಭಾಗವಾಗಿರುವಂತೆಯೇ, ಪ್ರಭುತ್ವದ ಹುಚ್ಚಾಟಿಕೆ ಮತ್ತು ಮೂಗಿನ ನೇರಕ್ಕೆ ಜೈಲು ಶಿಕ್ಷೆ ಸಾಧ್ಯವಾಗದ ’ಫ್ರೀ ಬಾರ್ನ್ ಇಂಡಿಯನ್’ ಎಂಬ ಕಲ್ಪನೆಯು ವ್ಯಾಪಕ ಸಾಮಾಜಿಕ ಚಿಂತನೆಯ ಭಾಗವಾಗಬೇಕಾಗಿದೆ.

ಇದು ಭಾರತದಲ್ಲಿನ ಮಾನವ ಹಕ್ಕುಗಳ ಆಂದೋಲನಗಳ ಹೋರಾಟದ ಪ್ರಯತ್ನವಾಗಿದ್ದು, ಪ್ರಭುತ್ವವು ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮಾತ್ರವಲ್ಲದೆ, ’ಅನಿಯಂತ್ರಿತ ಬಂಧನದಿಂದ ಸ್ವಾತಂತ್ರ್ಯ’ದ ಮೌಲ್ಯವು ಜನಪ್ರಿಯ ಪ್ರಜ್ಞೆಯಲ್ಲಿ ಹೆಚ್ಚು ಆಳವಾಗಿ ಸೇರಿಕೊಳ್ಳುವಂತೆ ಮಾಡಲು ಶ್ರಮಿಸುತ್ತಿವೆ.

ಈ ವಿಚಾರಗಳನ್ನು ಹೆಚ್ಚು ಆಳವಾಗಿ ಬಿತ್ತನೆ ಮಾಡುವ ಒಂದು ಮಾರ್ಗವೆಂದರೆ, ಸ್ವಾತಂತ್ರ್ಯ ಹೋರಾಟಕ್ಕೆ ಮರುಚಿತ್ರಣ ನೀಡಿ, ಆ ಆದರ್ಶಗಳಿಗೆ ಹಿಂತಿರುಗುವುದು ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಆದರ್ಶಪ್ರಾಯ ಹೋರಾಟಗಾರನಾಗಿ ಗಾಂಧೀಜಿ ವಹಿಸಿದ ಪಾತ್ರವನ್ನು ತಿಳಿದು ಅಳವಡಿಸಿಕೊಳ್ಳುವುದು. ಪ್ರಭುತ್ವವು ತನ್ನ ವಿರೋಧಿಗಳನ್ನು ಬಂಧಿಸುವುದನ್ನು ಮುಂದುವರಿಸಿದರೆ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿಲ್ಲ ಎಂದು ಗಾಂಧೀಜಿ ನಮಗೆ ಕಲಿಸಿದರು. ವಿಚಾರಣೆಯಿಲ್ಲದೆ ಮತ್ತು ಕಾನೂನು ಸಲಹೆಗಾರರ ಪ್ರಾತಿನಿಧ್ಯವಿಲ್ಲದ ತನ್ನ ವಿರೋಧಿಗಳನ್ನು ಬಂಧಿಸಲು ಪ್ರಭುತ್ವಕ್ಕೆ ಯಾವುದೇ ಹಕ್ಕಿಲ್ಲ ಎಂಬ ತತ್ವಕ್ಕಾಗಿ ಅವರು ಹೋರಾಡಿದರು. ಇಂದಿನ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಗೆ (ಯುಎಪಿಎ) ಸಮಾನಾಂತರವಾಗಿರುವ ಅಂದಿನ ಕರಾಳ ರೌಲತ್ ಕಾಯ್ದೆಯನ್ನು ರದ್ದುಗೊಳಿಸಲು ರಾಷ್ಟ್ರವ್ಯಾಪಿ ನಡೆದ ನಾಗರಿಕ ಅಸಹಕಾರ ಚಳವಳಿಯ ಹಿಂದೆ ಗಾಂಧೀಜಿಯ ಈ ಕಲ್ಪನೆ ಮಹತ್ವದ್ದಾಗಿತ್ತು.

ವಿಚಾರಣೆಗೆ ಮುಂಚಿನ ಬಂಧನದಿಂದ ರಕ್ಷಿಸುವ ಹಕ್ಕು, ಕಾನೂನು ಸಲಹೆಯ ಬೆಂಬಲ (ವಕೀಲರ ನೆರವು) ಮತ್ತು ಮುಕ್ತ ನ್ಯಾಯಾಲಯದಲ್ಲಿ ಸಾರ್ವಜನಿಕ ವಿಚಾರಣೆ ಒಳಗೊಂಡಂತೆ ಆರೋಪಿಗಳಿಗೆ ಅರ್ಹವಾದ ಎಲ್ಲ ಸುರಕ್ಷತೆಗಳನ್ನು ತೆಗೆದುಹಾಕುವ ಮೂಲಕ ರೌಲತ್ ಕಾಯ್ದೆ ಅಪರಾಧ ಕಾನೂನಿನ ತತ್ವಗಳ ಚೌಕಟ್ಟನ್ನು ಮೀರಿತ್ತು.

ರೌಲತ್ ಕಾಯ್ದೆಯ ವಿರುದ್ಧ ಭಾರತದ ಸಾರ್ವಜನಿಕ ಅಭಿಪ್ರಾಯ ಕೆರಳಿದ್ದರಲ್ಲಿ ಮತ್ತು ಭಾರತದಾದ್ಯಂತ ಸರಣಿ ಪ್ರತಿಭಟನೆಗಳು ಮತ್ತು ಪ್ರದರ್ಶನಗಳಿಗೆ ಇದು ಕಾರಣವಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಈ ಕಾಯಿದೆಗಳ ಬಗ್ಗೆ ಗಾಂಧಿಯವರು ಬರೆದ ವರದಿಯಲ್ಲಿ ಹೀಗೆಂದಿದ್ದರು: “ಭಾರತದಲ್ಲಿ ಮೊದಲೆಂದೂ ಕಂಡಿರದ ವಿರೋಧದ ಬಿರುಗಾಳಿಯನ್ನು ಈ ಕಾಯ್ದೆ ಎಬ್ಬಿಸಿತು… ನಮ್ಮ ಅಭಿಪ್ರಾಯದಲ್ಲಿ, ಯಾವುದೇ ಸ್ವಾಭಿಮಾನಿ ವ್ಯಕ್ತಿಯು ಸಮಾಜದ ಮೇಲಿನ ಆಕ್ರೋಶವನ್ನು ಸಹಿಸುವುದಿಲ್ಲ…”.

ನಾವು ಮತ್ತೆ ಸಾಂವಿಧಾನಿಕ ಪರಂಪರೆಯನ್ನು ಹೋರಾಟದ ಪ್ರತಿಫಲವೆಂದು ಭಾವಿಸಬೇಕಾದರೆ, ತಮ್ಮ ಮೇಲೆ ದೇಶದ್ರೋಹದ ಆರೋಪ ಬಂದಾಗ ಗಾಂಧಿ ಆಡಿದ ಈ ಪ್ರಸಿದ್ಧ ಮಾತುಗಳನ್ನು ನೆನಪಿಸಿಕೊಳ್ಳಬೇಕು: ದೇಶದ್ರೋಹವು ’ಪ್ರಭುತ್ವದ ವಿರುದ್ಧ ಉತ್ಸಾಹಿ ಅಸಮಾಧಾನ’ದ ಅಪರಾಧವಾಗಿದೆ. ದೇಶದ್ರೋಹದ ಈ ಆರೋಪಕ್ಕೆ ಸಂಬಂಧಿಸಿದಂತೆ, ಸೆರೆಮನೆಯಿಂದ ಗಾಂಧಿ ಈ ಹೇಳಿಕೆಯನ್ನು ನೀಡಿದ್ದರು:

“ಸೆಕ್ಷನ್ 124-ಎ ಅಡಿಯಲ್ಲಿ ನನ್ನ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ನಾಗರಿಕರ ಸ್ವಾತಂತ್ರ್ಯವನ್ನು ನಿಗ್ರಹಿಸಲು ವಿನ್ಯಾಸಗೊಳಿಸಿರುವ ಭಾರತೀಯ ಅಪರಾಧ ಸಂಹಿತೆಯ ರಾಜಕೀಯ ವಿಭಾಗಗಳಲ್ಲಿ ಸೆಕ್ಷನ್ 124-ಎನೇ ಬಹುಶಃ ರಾಜ. ವಾತ್ಸಲ್ಯವನ್ನು (affection) ಕಾನೂನಿನಿಂದ ಉತ್ಪಾದಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಅಥವಾ ವ್ಯವಸ್ಥೆಯ ಬಗ್ಗೆ ಒಬ್ಬನಿಗೆ ವಾತ್ಸಲ್ಯವಿಲ್ಲದಿದ್ದರೆ, ಎಲ್ಲಿವರೆಗೆ ಆತ/ಆಕೆ ಹಿಂಸಾಚಾರವನ್ನು ಆಲೋಚಿಸುವುದಿಲ್ಲವೋ, ಉತ್ತೇಜಿಸುವುದಿಲ್ಲವೋ ಅಥವಾ ಪ್ರಚೋದಿಸುವುದಿಲ್ಲವೋ ಅಲ್ಲಿವರೆಗೆ, ತನ್ನ ಅಸಮಾಧಾನಕ್ಕೆ ಪೂರ್ಣ ಅಭಿವ್ಯಕ್ತಿ ನೀಡಲು ಆಕೆ/ಆತ ಮುಕ್ತನಾಗಿರಬೇಕು… ಈ ಹಿಂದಿನ ಯಾವುದೇ ವ್ಯವಸ್ಥೆಗಳಿಗಿಂತ ಭಾರತಕ್ಕೆ ಒಟ್ಟಾರೆಯಾಗಿ ಹೆಚ್ಚು ಹಾನಿ ಮಾಡಿರುವ ಈ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವುದು ಅತ್ಯುನ್ನತ ಮೌಲ್ಯ ಎಂದು ನಾನು ತಿಳಿದುಕೊಳ್ಳುತ್ತೇನೆ.”

ಸಮಕಾಲೀನ ಸನ್ನಿವೇಶದಲ್ಲಿ ಭೀಮಾ ಕೊರೆಗಾಂವ್ ಪ್ರಕರಣದ ನೆಪದಲ್ಲಿ ಬಂಧಿಸಲ್ಪಟ್ಟವರು ಗಾಂಧಿಯವರು ಮಾಡಿದ್ದನ್ನು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ, ಅಂದರೆ, ತಮ್ಮ ಬರಹ ಮತ್ತು ಭಾಷಣಗಳ ಮೂಲಕ ’ಅವರ ಅಸಮಾಧಾನಕ್ಕೆ ಪೂರ್ಣ ಅಭಿವ್ಯಕ್ತಿ ನೀಡುವ’ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ಬಂಧಿತರಾಗಿರುವ ಸುಧಾ ಭಾರದ್ವಾಜ್, ಆನಂದ್ ತೆಲ್ತುಂಬ್ಡೆ ಆಗಿರಲಿ ಅಥವಾ ಸ್ಟಾನ್ ಸ್ವಾಮಿ ಆಗಿರಲಿ, ದಲಿತರು ಮತ್ತು ಬುಡಕಟ್ಟು ಜನಾಂಗದವರ ಕಳವಳಗಳನ್ನು ಬೇರೆ ರೂಪಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಇವುಗಳಿಗೆ ಕಾರಣವಾದ ಸರ್ಕಾರದ ನೀತಿಗಳನ್ನು ಟೀಕಿಸುತ್ತಾ ಇದ್ದಾರೆ. ಇದು ಸರ್ಕಾರವು ಇಷ್ಟಪಡದ ಅಭಿಪ್ರಾಯವಾಗಿದೆ, ಆದರೆ ಅದು ಸಾಂವಿಧಾನಿಕ ನೈತಿಕತೆಯ ಆಧಾರದ ಮೇಲೆ ಮುಂದುವರಿಯಬೇಕಾದರೆ, ದೀರ್ಘಕಾಲದ ಸೆರೆವಾಸದ ಮೂಲಕ ಸೆನ್ಸಾರ್ ಮಾಡುವ ಹಕ್ಕನ್ನು ಅದು ಹೊಂದಿಲ್ಲ.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಮೌಲ್ಯಗಳನ್ನು ಒಳಗೊಳ್ಳುವ ಸಾಂವಿಧಾನಿಕ ನೈತಿಕತೆಗೆ ಅನುಗುಣವಾಗಿ ಸರ್ಕಾರ ಕಾರ್ಯನಿರ್ವಸಬೇಕಿರುವುದು ಕಡ್ಡಾಯವಾಗಿದೆ. ಅದು ಮಾಡದಿದ್ದರೆ, ಭಾರತದ ಸಂವಿಧಾನದಿಂದ ಮಾನ್ಯತೆ ಪಡೆದ ಹಕ್ಕುಗಳನ್ನು ಗೌರವಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಸಾಮಾನ್ಯ ನಾಗರಿಕರ ಕೆಲಸವಾಗಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು


ಇದನ್ನೂ ಓದಿ: ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...