ಇಂದು ಐತಿಹಾಸಿಕ ರೈತ ಹೋರಾಟದ ಟ್ರ್ಯಾಕ್ಟರ್ ರ್ಯಾಲಿ ದೇಶದೆಲ್ಲೆಡೆ ಆರಂಭವಾಗಿದೆ. ದೆಹಲಿಯಲ್ಲಿ ಬ್ಯಾರಿಕೇಡ್ಗಳನ್ನು ಮುರಿದು ರೈತರ ಪರೇಡ್ ಆರಂಭಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡುವ ವಿಚಾರ ಇನ್ನೂ ಗೊಂದಲದಲ್ಲಿದೆ. ಈ ಕುರಿತು ಸರ್ಕಾರದಲ್ಲಿ ಒಮ್ಮತವಿಲ್ಲ. ಪೊಲೀಸರು ರ್ಯಾಲಿಗೆ ಅನುಮತಿ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ನಾವು ಅನುಮತಿ ಕೊಡುವುದಿಲ್ಲ ಎನ್ನುತ್ತಿದ್ದಾರೆ.
ಕಳೆದೊಂದು ವಾರದಿಂದಲೂ ರೈತ ಸಂಘಟನೆಗಳು ಸಂಯುಕ್ತ ಹೋರಾಟ ಕರ್ನಾಟಕ ಒಕ್ಕೂಟದಡಿ ಶಾಂತಿಯುತ ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಪೊಲೀಸರು ಅನುಮತಿ ನೀಡದೆ ಸತಾಯಿಸುತ್ತಿದ್ದರು. ಕೊನೆಗೂ ಜನವರಿ 25ರ ಸೋಮವಾರ ಬೆಂಗಳೂರು ಪೊಲೀಸರು ಅನುಮತಿ ನೀಡಿದ್ದಾರೆ.
ಜಂಟಿ ಪೊಲೀಸ್ ಆಯುಕ್ತರು, (ಸಂಚಾರ) ಬಿ.ಆರ್ ರವಿಕಾಂತೇಗೌಡರವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ “ಸಹಸ್ರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ಗಳು, ಕಾರುಗಳು, ದ್ವಿಚಕ್ರ ವಾಹನಗಳಲ್ಲಿ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ” ಎಂದು ಸ್ಪಷ್ಟವಾಗಿ ಬರೆದು ಮಾರ್ಗ ನಿಗದಿ ಮಾಡಿ ಅನುಮತಿ ನೀಡಿದ್ದಾರೆ.
ಆದರೆ ಇನ್ನೊಂದೆಡೆ ಸಿಎಂ ಯಡಿಯೂರಪ್ಪ ಮಾತನಾಡಿ “ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ, ಟ್ರ್ಯಾಕ್ಟರ್ ಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತೆ. ಅದಕ್ಕೆ ಬೇಡ ಅಂತ ಹೇಳಿದ್ದೇವೆ. ಪ್ರತಿಭಟನೆ ಮಾಡುತ್ತಿರುವವರು ಯಾವ ಕಾರಣಕ್ಕೆ ಮಾಡ್ತಿದ್ದೀವಿ ಏನೂ ಅಂತ ಹೇಳ್ತಿಲ್ಲ. ಕೇವಲ ಜನರ ದಾರಿ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಅಷ್ಟೆ” ಎಂದು ವಿರೋಧಭಾಸದ ಹೇಳಿಕೆ ನೀಡಿದ್ದಾರೆ.
ಸರ್ಕಾರದ ಈ ಇಬ್ಬಂದಿತನವನ್ನು ರೈತ ಹೋರಾಟಗಾರರು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. ಕೆಂಗೇರಿ, ನೆಲಮಂಗಲ, ನಂದಿ ಕ್ರಾಸ್, ಹೊಸಕೋಟೆ ಟೋಲ್ಗಳಲ್ಲಿ ಸಾವಿರಾರು ಟ್ರ್ಯಾಕ್ಟರ್ಗಳೊಂದಿಗೆ ನೆರೆದಿರುವ ರೈತರು ನಾವು ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಬೆಂಗಳೂರು ನಗರದೊಳಕ್ಕೆ ಹೋಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಬೆಂಗಳೂರಿನಲ್ಲಿ 10,000 ರೈತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ ಟ್ರಾನ್ಸ್ ಜೆಂಡರ್ ಸಮುದಾಯ!