34 ಜೀವಗಳನ್ನು ಬಲಿ ತೆಗೆದುಕೊಂಡ ಈಶಾನ್ಯ ದೆಹಲಿಯ ಕೋಮು ಗಲಭೆಯ ಕುರಿತು ಹರಿಯಾಣ ವಿದ್ಯುತ್ ಸಚಿವ ರಂಜಿತ್ ಸಿಂಗ್ ಚೌತಲಾ “ಗಲಭೆಗಳು ಜೀವನದ ಒಂದು ಭಾಗ, ಅವು ನಡೆಯುತ್ತಲೇ ಇರುತ್ತದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಗಲಭೆಗಳು ನಡೆಯುತ್ತಲೇ ಇರುತ್ತವೆ. ಹಿಂದಿನಿಂದಲೂ ಅದು ನಡೆಯುತ್ತಿದೆ… ಇಂದಿರಾ ಗಾಂಧಿ ಹತ್ಯೆಯಾದಾಗ ಇಡೀ ದೆಹಲಿ ಉರಿದಿತ್ತು. ಇದು ಜೀವನದ ಒಂದು ಭಾಗವಾಗಿದೆ, ಅದು ನಡೆಯುತ್ತಲೇ ಇರುತ್ತದೆ” ಎಂದು ಚೌತಾಲ ಹೇಳಿದ್ದಾರೆ.
“ಸರ್ಕಾರವು ಗಲಭೆಯನ್ನು ತಕ್ಷಣವೇ ನಿಯಂತ್ರಿಸಿದೆ. ನಿನ್ನೆ ಆ ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ….ಇದು ದೆಹಲಿಗೆ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯವಾಗಿದೆ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಹೇಳಿದ್ದಾರೆ.
#WATCH Haryana Minister Ranjit Chautala on #DelhiViolence: Dange toh hote rahe hain. Pehle bhi hote rahe hain, aisa nahi hai. Jab Indira Gandhi ka assassination hua, toh puri Delhi jalti rahi. Yeh toh part of life hai, jo hote rehte hain. pic.twitter.com/b2zeJRbfmp
— ANI (@ANI) February 27, 2020
ಚೌತಲಾ ಅವರು ಹರಿಯಾಣ ವಿದ್ಯುತ್ ಮಂತ್ರಿಯಾದ ನಂತರ “ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅನುಮತಿಸಬಾರದು” ಎಂದು ಹೇಳುವ ಮೂಲಕ ಈ ಹಿಂದೆಯೂ ವಿವಾದವನ್ನು ಸೃಷ್ಟಿಸಿದ್ದರು.
ಬಿಜೆಪಿ ಹರಿಯಾಣದ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯುವಲ್ಲಿ ವಿಫಲವಾದಾಗ ಪಕ್ಷೇತರ ಶಾಸಕರಾದ ರಂಜಿತ್ ಚೌತಲಾರನ್ನು ಮನೋಹರ್ ಲಾಲ್ ಖಟ್ಟರ್ ಸಂಪುಟದಲ್ಲಿ ಸೇರಿಸಲಾಗಿತ್ತು.