Homeಮುಖಪುಟಗುಜರಾತ್‌ ಪೊಲೀಸರಿಂದ ಮೂರನೇ ಬಾರಿಗೆ ಸಾಕೇತ್‌ ಗೋಖಲೆ ಬಂಧನ

ಗುಜರಾತ್‌ ಪೊಲೀಸರಿಂದ ಮೂರನೇ ಬಾರಿಗೆ ಸಾಕೇತ್‌ ಗೋಖಲೆ ಬಂಧನ

- Advertisement -
- Advertisement -

ಗುಜರಾತ್ ಪೊಲೀಸರು ಗುರುವಾರ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರನ್ನು ಮೂರನೇ ಬಾರಿಗೆ ಬಂಧಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ. ಒಂದೇ ತಿಂಗಳಲ್ಲಿ ಸಾಕೇತ್‌ ಮೂರನೇ ಸಲ ಬಂಧನಕ್ಕೆ ಒಳಗಾಗಿದ್ದಾರೆ.

ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಗೋಖಲೆ ಅವರನ್ನು ಗುರುವಾರ ತಡರಾತ್ರಿ ದೆಹಲಿಯಲ್ಲಿ ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋಖಲೆ ಮತ್ತು ಅಪರಾಧ ವಿಭಾಗದ ಅಧಿಕಾರಿಗಳು ಶುಕ್ರವಾರ ಸಂಜೆ ಅಹಮದಾಬಾದ್ ತಲುಪುವ ನಿರೀಕ್ಷೆಯಿದೆ.

“ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ತಂಡವು ನವದೆಹಲಿ ಜಿಲ್ಲೆಗೆ ಬರುತ್ತಿದೆ ಮತ್ತು ದಾಳಿ ನಡೆಸಲಿದೆ ಎಂದು ಗುಜರಾತ್ ಪೊಲೀಸರು ನಮಗೆ ತಿಳಿಸಿದ್ದಾರೆ” ಎಂದು ಅಪರಿಚಿತ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. “ನಂತರ ಅವರು ಗೋಖಲೆ ಅವರನ್ನು ಬಂಧಿಸಿದ್ದಾರೆ. ಗೋಖಲೆ ಬಂಧನದ ಬಗ್ಗೆ ನಮಗೆ ತಿಳಿದಿರಲಿಲ್ಲ. ದಾಳಿಯ ಸ್ಥಳ ಮತ್ತು ಬಂದ ತಂಡದ ಬಗ್ಗೆ ಮಾತ್ರ ನಮಗೆ ತಿಳಿಸಲಾಗಿದೆ” ಎಂದಿದ್ದಾರೆ ಅಧಿಕಾರಿ.

ತೃಣಮೂಲ ಕಾಂಗ್ರೆಸ್ ಮೂಲಗಳು ‘ಸ್ಕ್ರಾಲ್‌.ಇನ್‌’ಗೆ ಪ್ರತಿಕ್ರಿಯಿಸಿದ್ದು, “ಗೋಖಲೆ ಅವರನ್ನು ದೆಹಲಿಯ ಬಂಗಾ ಭವನದಲ್ಲಿ ಅರೆಸ್ಟ್ ಮಾಡಲಾಗಿದೆ. ಸೈಬರ್‌ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ” ಎಂದಿವೆ. ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರಿಂದ ಗೋಖಲೆಯವರ ಬಂಧನವಾಗಿದೆ ಎಂದು ಟಿಎಂಸಿ ಆರೋಪಿಸಿದೆ.

“ಮೋರ್ಬಿ ತೂಗು ಸೇತುವೆ ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು. ಆ ವೇಳೆ 30 ಕೋಟಿ ರೂಪಾಯಿ ಖರ್ಚಾಗಿದೆ” ಎಂದು ಪ್ರತಿಪಾದಿಸಿದ ಸುದ್ದಿ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಗೋಖಲೆ ಹಂಚಿಕೊಂಡ ಬಳಿಕ ಪ್ರಕರಣ ದಾಖಲಾಗಿತ್ತು. ಗೋಖಲೆ ಅವರು ನಾಲ್ಕು ದಿನಗಳಲ್ಲಿ ಎರಡು ಬಾರಿ ಬಂಧಿಸಲ್ಪಟ್ಟಿದ್ದರು. ಆದರೆ, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಈ ಮಾಹಿತಿಯು ಸುಳ್ಳು ಎಂದು ಪ್ರತಿಕ್ರಿಯಿಸಿತ್ತು.

ಮಚ್ಚು ನದಿಯ ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ ಒಂದು ದಿನದ ನಂತರ ನವೆಂಬರ್ 1 ರಂದು ಪ್ರಧಾನಿ ಮೊರ್ಬಿಗೆ ಭೇಟಿ ನೀಡಿದ್ದರು.

ಗೋಖಲೆಯವರನ್ನು ಮೊದಲು ಡಿಸೆಂಬರ್ 5 ರಂದು ಜೈಪುರದಲ್ಲಿ ಗುಜರಾತ್ ಪೊಲೀಸರು, ರಾಜಸ್ಥಾನ ಪೊಲೀಸರಿಗೆ ತಿಳಿಯದಂತೆ ಬಂಧಿಸಿದ್ದರು. ಅವರನ್ನು ಅಹಮದಾಬಾದ್‌ಗೆ ಕರೆತಂದ ನಂತರ ಔಪಚಾರಿಕವಾಗಿ ಬಂಧಿಸಲಾಯಿತು. ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ರಾಜಕೀಯ ಮೈಲೇಜ್ ಪಡೆಯಲು ಮೋದಿಯವರ ಕುರಿತು ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದಾರೆ ಎಂದು ಗುಜರಾತ್ ಪೊಲೀಸರು ಆರೋಪಿಸಿದ್ದರು.

ಡಿಸೆಂಬರ್ 8ರಂದು ಅಹಮದಾಬಾದ್ ನ್ಯಾಯಾಲಯವು ಸಾಕೇತ್‌ ಅವರಿಗೆ ಜಾಮೀನು ನೀಡಿತು, ಆದರೆ ಮೊರ್ಬಿ ಜಿಲ್ಲೆಯಲ್ಲಿ ದಾಖಲಾದ ಮತ್ತೊಂದು ಪ್ರಕರಣದಲ್ಲಿ ಅವರನ್ನು ಶೀಘ್ರದಲ್ಲೇ ಮರು ಬಂಧಿಸಲಾಯಿತು. ಗೋಖಲೆಯವರು ಮೋದಿಯವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ಹೊರತುಪಡಿಸಿ “ಚುನಾವಣೆಗಳ ಸಮಯದಲ್ಲಿ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ” ಎಂದು ಮೋರ್ಬಿ ಪೊಲೀಸರು ದೂರಿದ್ದರು.

ಡಿಸೆಂಬರ್ 9 ರಂದು ಗೋಖಲೆ ಎರಡನೇ ಪ್ರಕರಣದಲ್ಲೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು. ಗುರುವಾರ ಅವರನ್ನು ಮೂರನೇ ಬಾರಿಗೆ ಬಂಧಿಸಲ್ಪಡುವ ಕೆಲವು ಗಂಟೆಗಳ ಮೊದಲು, ಗೋಖಲೆಯವರು ಗುಜರಾತ್ ಪೊಲೀಸರ ಕುರಿತು ಟ್ವೀಟ್ ಮಾಡಿದ್ದರು. “ಮೊದಲ ಪ್ರಕರಣದಲ್ಲಿ ನನ್ನನ್ನು ಗುಜರಾತ್ ಪೊಲೀಸರು ಬಂಧಿಸಿದ್ದರ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕಾನೂನುಬಾಹಿರ ಬಂಧನದ ಪ್ರಕರಣವನ್ನು ದಾಖಲಿಸಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

“3 ವಾರಗಳ ಹಿಂದೆ ನನ್ನ ಬಂಧನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಗುಜರಾತ್ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಘೋಷಿಸಲು ಸಂತೋಷವಾಗಿದೆ. ಜೈಪುರದಿಂದ ಅಹಮದಾಬಾದ್‌ಗೆ ಟ್ರಾನ್ಸಿಟ್ ರಿಮಾಂಡ್ ಇಲ್ಲದೆ (ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ) ನನ್ನನ್ನು ಅಕ್ರಮವಾಗಿ ಬಂಧಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ” ಎಂದು ಮಾಹಿತಿ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಾಯುವ ಮುನ್ನ ‘ಹೇ ರಾಮ್’ ಎಂದ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತೇವೆ: ಪ್ರಿಯಾಂಕಾ ಗಾಂಧಿ

0
"ನಮ್ಮ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತದೆ; ಅವರು ಸಾಯುವ ಮೊದಲು 'ಹೇ ರಾಮ್' ಎಂದು ಉಚ್ಚರಿಸಿದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ವಿರೋಧಿ ಎಂದು ಆರೋಪಿಸುವುದು...