Homeಮುಖಪುಟಯಾರೀತ, ಯಥಾಸ್ಥಿತಿಯ ಶೂಲಕ್ಕೇರಿಸುವ ಸರಹಪಾದ..

ಯಾರೀತ, ಯಥಾಸ್ಥಿತಿಯ ಶೂಲಕ್ಕೇರಿಸುವ ಸರಹಪಾದ..

- Advertisement -
- Advertisement -

ಪ್ರೊ. ನಟರಾಜ್ ಬೂದಾಳುರವರು ಅನುವಾದಿಸಿರುವ ’ಸರಹಪಾದ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಆಗಿನಿಂದ ಹಲವರ ತಲೆಯಲ್ಲಿ ಯಾರೀತ ’ಸರಹಪಾದ’ ಎಂಬ ಪ್ರಶ್ನೆ ಮೂಡಿದೆ. ಖುಷಿ ಪಡುವ ವಿಚಾರವೆಂದರೆ ಸುಮಾರು ಎರಡು ಸಾವಿರ ವರ್ಷಗಳ ನಂತರವಾದರೂ ಕನ್ನಡದ ಅಕೆಡೆಮಿಕ್ ಹಾಗೂ ಓದುಗ ವಲಯಕ್ಕೆ ’ಸರಹಪಾದ’ ಎಂಬ ’ಬೌದ್ಧಸಿದ್ಧ’ ಪರಿಚಿತನಾದನಲ್ಲ ಎಂಬುದು. ಬೌದ್ಧ ಮೀಮಾಂಸೆಯಲ್ಲಿ ಪ್ರತ್ಯೇಕವಾಗಿಯೇ ನಿಲ್ಲುವ ’ಸರಹ’ನ ದೋಹೆಗಳು ಎಂದೆಂದಿಗೂ ಪ್ರಸ್ತುತ. ಅದೆಷ್ಟೆಂದರೆ ಸರಹನ ದೋಹೆಗಳು ಸರಹನನ್ನೂ ವಿಡಂಬನೆ ಮಾಡಿಬಿಡುವಷ್ಟು ನಿತ್ಯ ನಿರಂತರ.

ಸರಹಪಾದ ಎಂದರೆ ’ಬಾಣ ಬಿಟ್ಟ ಗುರು’ ಎಂದರ್ಥ. ಈತನ ಮೂಲ ಹೆಸರು ರಾಹುಲಭದ್ರ. ನಳಂದ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿ ಅಲ್ಲಿಯೇ ಗುರುವಾದ ಈತನಿಗೆ ’ತಾಂತ್ರಿಕ ಸಿದ್ಧಿ’ ಪಡೆದ ಬಾಣ ತಯಾರಿಸುವ ಸ್ಮಶಾನವಾಸಿ ಶಬರಕನ್ಯೆ ಪರಿಚಯವಾಗುತ್ತಾಳೆ. ಮೊದಲ ಬೇಟಿಯ ಮೊದಲ ಮಾತಿನಲ್ಲಿಯೇ ’ಬುದ್ಧನ ತತ್ವವನ್ನು ಚರ್ಯೆ ಮತ್ತು ಅದರ ಗುರುತುಗಳಿಂದ ಅರಿಯಬಹುದೇ ಹೊರತು ಮಾತು ಅಥವಾ ಪುಸ್ತಕಗಳಿಂದಲ್ಲ’ ಎಂದು ರಾಹುಲಭದ್ರನಿಗೆ ’ಕಾಯಕವೇ ಜ್ಞಾನ’ ಎಂಬ ಪಾಠ ಮಾಡುತ್ತಾಳೆ. ಅಂದಿನಿಂದ ರಾಹುಲಭದ್ರ ಆಕೆಯನ್ನು ಗುರುವಾಗಿ ಸ್ವೀಕರಿಸಿ ನಂತರ ಅವಳನ್ನೇ ಮದುವೆಯಾಗಿ ಅವಳ ವೃತ್ತಿಯನ್ನೇ ತನ್ನದಾಗಿಸಿಕೊಂಡು ’ಸರಹ’ನಾಗುತ್ತಾನೆ. ಸ್ಮಶಾನದಲ್ಲಿಯೇ ವಾಸಿಸುತ್ತಾನೆ. ಆಕೆಯಿಂದಾಗಿ ಸ್ವತಃ ಯೋಗಿನಿ ತಂತ್ರ ಮತ್ತು ಮಹಾಸಿದ್ಧಿಯನ್ನು ಪಡೆದು ಮುಂದೆ ನಾಗಾರ್ಜುನನಂತಹ ಬೌದ್ಧ ಸಿದ್ಧನಿಗೆ ಗುರುವಾಗಿ ಸರಹಪಾದನಾಗುತ್ತಾನೆ.

ಸರಹನ ಕಾಲಮಾನ ಸುಮಾರು ಕ್ರಿ.ಶ ಒಂದನೇ ಶತಮಾನ ಎನ್ನಲಾಗುತ್ತದೆ. ಭಾರತದ ಜನಭಾಷೆಯಾಗಿದ್ದ ಅಪಭ್ರಂಶ ಭಾಷೆಯಲ್ಲಿ ಸರಹನ ಮೌಖಿಕ ದೋಹೆಗಳು ಹಾಡಾಗಿ ಹರಿದು ಬಂದಿವೆ. ಈತ ಪ್ರತಿಪಾದಿಸಿದ ಸಹಜಮಾರ್ಗ ಅಥವಾ ಮಧ್ಯಮಮಾರ್ಗ ಅಥವಾ ಮಹಾಸಿದ್ಧಿ ನೇಪಾಳ ಮತ್ತು ಟಿಬೆಟ್‌ಗಳಲ್ಲಿ ಶಾಖೆಗಳಾಗಿವೆ. ಈತ ಬ್ರಾಹ್ಮಣನಾಗಿದ್ದು ನಂತರದಲ್ಲಿ ಬೌದ್ಧ ಸಿದ್ಧನಾದನು. ಅಂಬೇಡ್ಕರರು ’ಪ್ರಾಚೀನ ಭಾರತದ ಇತಿಹಾಸವು ಬೌದ್ಧ ಮತ್ತು ಬ್ರಾಹ್ಮಣ ಧರ್ಮಗಳ ನಡುವಿನ ಸಂಘರ್ಷ’ ಎನ್ನುವಂತೆ ಸರಹನ ಕಾಲಕ್ಕೆ ಪ್ರಮುಖವಾಗಿ ಎರಡು ತಾತ್ವಿಕ ಧಾರೆಗಳಿದ್ದವು. ಒಂದು ಶ್ರಮಣಧಾರೆ ಮತ್ತೊಂದು ಬ್ರಾಹ್ಮಣ ಧಾರೆ. ಇವು ಜಾತಿ ಸೂಚಕವಲ್ಲದೇ ಜ್ಞಾನಸೂಚಕಗಳೆಂದು ನಟರಾಜ್ ಬೂದಾಳರು ಹೇಳುತ್ತಾರೆ. ಏಕೆಂದರೆ ಇವುಗಳ ನಡುವೆ ಚಲನೆ ಇತ್ತು. ಪೂರ್ವಮೀಮಾಂಸ ಭಾಷ್ಯಾಕಾರ ಕುಮಾರಿಲಭಟ್ಟನೇ ಇದಕ್ಕೆ ಸಾಕ್ಷಿ. ಮತ್ತೊಂದು ಬದಿಯಲ್ಲಿ ಪಂಪನೂ ಸಹ ಸಾಕ್ಷಿ ನುಡಿಯುತ್ತಾನೆ.

ಸರಹಪಾದನ ಬೌದ್ಧ ತಾತ್ವಿಕತೆಯು ಮಹಾಯಾನ ಹಾಗೂ ತಾಂತ್ರಿಕ ಆರಾಧನೆಯ ಸಮ್ಮಿಲನವಾಗಿದೆ. ತಾಂತ್ರಿಕ ಆರಾಧನೆಯಲ್ಲಿ ಐದು ’ಮ’ ಕಾರಗಳು ಬಹುಮುಖ್ಯವಾಗಿವೆ ಎಂದು ಅಂಬೇಡ್ಕರರು ಗುರುತಿಸುತ್ತಾರೆ. ಅವುಗಳೆಂದರೆ 1. ಮದ್ಯಪಾನ 2. ಮಾಂಸಾಹಾರ 3. ಮತ್ಸ್ಯಾಹಾರ 4. ಮುದ್ರಾಹಾರ (ಒಣಗಿದ ಅಥವಾ
ಹುರಿದ ಕಾಳು) 5. ಮೈಥುನ. ಈ ಪಂಚ ಪ್ರಾದಾನ್ಯತೆಗಳು ಸಾಂಪ್ರದಾಯಿಕ ಬೌದ್ಧ ಧಮ್ಮವನ್ನು ಬಹುದೂರದಿಂದ ಮತ್ತೆ ಬೌದ್ಧ ಸಿದ್ಧರ ಬಳಿಗೆ ಕರೆ ತರುತ್ತವೆ. ಮತ್ತೆ ಜಂಗಮಗೊಳಿಸಲು ಪ್ರಯತ್ನಿಸುತ್ತವೆ. ಲೌಕಿಕದಲ್ಲಿಯೇ ಬದುಕಬೇಕೆಂದು ಕಿವಿ ಹಿಂಡುತವೆ. ಬಯಲಾಗುತ್ತವೆ.

ಧ್ಯಾನವೂ ಬೇಡ, ವಿರಕ್ತಿಯೂ ಬೇಡ
ಮನೆಯಲ್ಲಿ ಸಂತೋಷದಿಂದಿರು
ಮಡದಿ ಮಕ್ಕಳ ಜೊತೆಗೆ ಸುಖಿಸು
ಅಲ್ಲಿ ಮುಕ್ತಿ ದೊರೆಯದೆ ಹೋದರೆ
ಸರಹ ನುಡಿಯುತ್ತಾನೆ
ಪರಿಜ್ಞಾನವ ಮತ್ತೆಲ್ಲಿಯೂ ಪಡೆಯಲಾರೆ

ಹೀಗೆ ಲೌಕಿಕ ಜೀವನ ನಡೆಸುತ್ತಲೇ ಬುದ್ಧರಾಗಬಹುದೆಂಬುದು ಸರಹಪಾದನ ಮೂಲ ಮಾರ್ಗವಾಗಿದೆ.

ಸರಹನ ಸುಪ್ರಸಿದ್ಧ ದೋಹೆಗಳು ಹೆಚ್ಚು ಸಂಗ್ರಹವಿರುವುದು ಟಿಬೆಟಿಯನ್ ಭಾಷೆಯಲ್ಲಿ. ಈತನ ದೋಹೆಗಳು ಎಲ್ಲಾ ರೀತಿಯ ವ್ಯರ್ಥ ಸಂಪ್ರದಾಯಗಳನ್ನು ವ್ಯಂಗ್ಯ ಮಾಡುತ್ತವೆ. ಕಣ್ಣು ಮುಚ್ಚಿಕೊಂಡು ’ಪುರಾತನ, ಸನಾತನ’ ಎಂಬುದನ್ನೆಲ್ಲಾ ಒಪ್ಪಿಕೊಳ್ಳಲು ಧಿಕ್ಕರಿಸುತ್ತವೆ. ಇಂದಿಗೆ ಮಾತ್ರ ಬಾಳಿ ಬದುಕು ಎಂದು ಸಾರುತ್ತವೆ. ಸರಹ ರಚಿಸಿದ ಒಟ್ಟು ಕೃತಿಗಳು 26. ಅವುಗಳಲ್ಲಿ ದೋಹೆಗಳೂ ಒಂದು ಭಾಗವಾಗಿದೆ. ಇವು ಜೆನ್ ಕತೆಗಳಷ್ಟು ಒಗಟಾಗಿರುವುದಿಲ್ಲ. ನೇರವಾಗಿಯೇ ಮುಖಾಮುಖಿಯಾಗುತ್ತವೆ. ಯಥಾಸ್ಥಿತಿವಾದವನ್ನು ಅಲ್ಲಗೆಳೆಯುವುದೇ ಅವುಗಳ ಮುಖ್ಯ ಕರ್ತವ್ಯವಾಗಿದೆ. ಸರಹಪಾದನಂತೆ ಇತಿಹಾಸದಲ್ಲಿ 84 ಬೌದ್ಧ ಸಿದ್ಧರನ್ನು ಗುರುತಿಸಲಾಗಿದೆ. ಅವರಲ್ಲಿ ತಿಲೋಪ, ಕಣ್ಹ ಇವನಷ್ಟೇ ಪ್ರಸಿದ್ಧರು.

ಸರಹ ಎಲ್ಲಾ ಧರ್ಮದ ಪೊಳ್ಳುತನಗಳನ್ನು ಬಯಲಿಗೆಳೆದು ವಾಸ್ತವದಲ್ಲಿ ಬದುಕುವಂತೆ ಪ್ರೇರೇಪಿಸುತ್ತಾನೆ. ಸ್ವತಃ ಬೌದ್ಧನಾಗಿದ್ದು ಬೌದ್ಧರನ್ನೂ ಬಿಡದೆ ತರಾಟೆಗೆ ತೆಗೆದುಕೊಳ್ಳುವುದು ಈತನ ವೈಶಿಷ್ಟ್ಯ. ಅಷ್ಟರಮಟ್ಟಿಗೆ ವಸ್ತುನಿಷ್ಠವಾದ ಜ್ಞಾನಶಾಖೆ ಸರಹನದ್ದು. ಶಬರಕನ್ಯೆ ಹೇಳಿಕೊಟ್ಟಂತೆ ಸರಹನ ಜ್ಞಾನದ ವ್ಯಾಖ್ಯಾನ ’ಶ್ರಮ’ವಾಗಿದೆಯೇ ಹೊರತು ಅಕ್ಷರವಲ್ಲ. ಸರಹನ ಸಹಜಮಾರ್ಗದಲ್ಲಿ ಬೆವರಿನ ತತ್ವಜ್ಞಾನವಿದೆ. ಇಂತಹ ಸಹಜ ತತ್ವಜ್ಞಾನಿ ನಿಷ್ಪಕ್ಷಪಾತವಾದ ಕೆಲವು ದೋಹೆಗಳು ಹೀಗಿವೆ.

ಬ್ರಾಹ್ಮಣ ವಿಡಂಬನೆ
ವ್ಯಾ! ಬ್ರಾಹ್ಮಣರು
ಯಾವುದು ಏನೆಂದು ಅವರಿಗೇನು ಗೊತ್ತು?
ಸುಮ್ಮನೆ ನಾಲ್ಕು ವೇದಗಳ ಬಾಯಿಪಾಠ ಒಪ್ಪಿಸುತ್ತಾರೆ
ಮನೆಯಲ್ಲಿ ಕೂತು ಮಣ್ಣು, ನೀರು
ದರ್ಬೆ ಹುಲ್ಲುಗಳನ್ನು ಹಿಡಿದು
ಮಂತ್ರಗಳನ್ನು ಗುಣುಗುಣಿಸುತ್ತಾರೆ
ಬೆಂಕಿಗೆ ಅರ್ಪಣೆ ಮಾಡುತ್ತಾರೆ

ಕೆಲಸವಿಲ್ಲದೆ ಹೋಮ ಮಾಡುತ್ತಾರೆ
ಘಾಟಿನ ಹೊಗೆಯಿಂದ ಕಣ್ಣು ಕೆಂಪಾಗಿಸಿಕೊಳ್ಳುತ್ತಾರೆ
ಏಕದಂಡಿ, ತ್ರಿದಂಡಿ, ಭಗವಾ ವೇಷ ತೊಟ್ಟು
ಜ್ಞಾನಿಗಳಂತೆ ಹಂಸೋಪದೇಶ ನೀಡುತ್ತಾರೆ

ಲೋಕವನ್ನು ಧಿಕ್ಕುತಪ್ಪಿಸುವ ಆ ಪೊಳ್ಳುಜನಕ್ಕೆ
ಧರ್ಮಾಧರ್ಮವೇನೆಂಬುದು ತಿಳಿದೇ ಇಲ್ಲ

ಪಾಶುಪತ ವಿಡಂಬನೆ
ಈ ಶೈವಸಾಧುಗಳಿಗೆ ಗೊತ್ತಿರುವುದು; ಮೈತುಂಬಾ ಬೂದಿ ಬಳಿದುಕೊಳ್ಳುವುದು
ತಲೆಯ ಮೇಲೆ ಜಡೆಗಟ್ಟಿದ ಕೂದಲ ಕುಪ್ಪೆ
ಕೂರಿಸುವುದು
ಮನೇಲಿ ಕೂತು ಯಾವಾಗಲೂ ಪೂಜೆ ಮಾಡುವುದು
ಮೂಲೇಲಿ ಕೂತು ಗಣ ಗಣ ಗಂಟೆ ಬಾರಿಸುವುದು

ಜೈನ ವಿಡಂಬನೆ
ಉದ್ದ ಉಗುರುಗಳ ಕೊಳಕು ಕ್ಷಪಣಕರು
ಬೆತ್ತಲೆ ತಿರುಗುತ್ತಾರೆ ಕೂದಲು ಕಿತ್ತುಕೊಳ್ಳುತ್ತಾರೆ
ನಗೆಪಾಟಲಿನ ಕ್ಷಪಣಕರು ಹೊರಗೆಲ್ಲೋ ಮೋಕ್ಷವ ಹುಡುಕಿ
ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಾರೆ

ಬೆತ್ತಲಾಗುವುದರಿಂದ ಮುಕ್ತಿ ಸಿಗುವುದಾದರೆ
ನಾಯಿನರಿಗಳಿಗೂ ಸಿಗಬೇಕು
ಬೋಳುಮಂಡೆಯಿಂದ ಸಿದ್ಧಿಯೆಂದಾದರೆ
ಯುವತೀ ನಿತಂಬಕ್ಕೆ ಸಿಗಬೇಕು
ಪಿಂಛದಿಂದ ಮುಕ್ತಿ ಎಂದಾದರೆ ನವಿಲು ನರಿಗಳಿಗೆ ಸಿಗಬೇಕು
ಸಸ್ಯಾಹಾರದಿಂದ ಜ್ಞಾನ ಸಿಗುವುದಾದರೆ
ಆನೆ ಕುದುರೆಗಳಿಗೆ ಸಿಗಬೇಕು
ಸರಹ ನುಡಿಯುತ್ತಾನೆ
ಕ್ಷಪಣಕರ ಮೋಕ್ಷದ ದಾರಿ ನನಗೆ ಒಪ್ಪಿಗೆಯಾಗದು
ತತ್ವರಹಿತ ಸಾಧನೆಯಿಂದ ಕೇವಲ ಜ್ಞಾನ ದೊರಕದು

ಬೌದ್ಧ ವಿಡಂಬನೆ
ಚೇಲಾ, ಭಿಕ್ಕು, ಸ್ಥವಿರರು ಎಂದು
ವೇಷವ ತೊಟ್ಟ ಪರಿವ್ರಾಜಕರು
ಕೆಲವರು ಸೂತ್ರಗಳಿಗೆ ವ್ಯಾಖ್ಯಾನ ಮಾಡಲು ಕುಳಿತರೆ
ಕೆಲವರು ಮಾಯಾದೃಷ್ಟಿಯ ಚಿಂತೆಯಲ್ಲಿ ಮುಳುಗುತ್ತಾರೆ
ಕೆಲವರು ಮಹಾಯಾನದ ಹಿಂದೆ ಧಾವಿಸಿದರೆ
ಮತ್ತೆ ಕೆಲವರು ಮಂಡಲ ಚಕ್ರಗಳಲ್ಲಿ ಸಿಕ್ಕಿಕೊಳ್ಳುತ್ತಾರೆ
ಇನ್ನು ಕೆಲವರು ಚತುಷ್ಕೋಟಿಯ ಸಾರಾಂಶ
ಹೇಳುವುದರಲ್ಲಿ ಮುಳುಗುತ್ತಾರೆ
ಮತ್ತೆ ಕೆಲವರಿಗೆ ನಿಜವೆನ್ನುವುದು ಆಕಾಶದಂತೆ ನಿಚ್ಛಳ
ಇನ್ನು ಕೆಲವರಿಗೆ ನಿಜವೆನ್ನುವುದು ಶೂನ್ಯಸಮ
ಇವರೆಲ್ಲ ಸಹಜವ ತೊರೆದು ನಿಬ್ಬಾಣದ ಹಿಂದೆ ಓಡುತ್ತಾರೆ
ಇವರ್‍ಯಾರಿಗೂ ಪರಮಾರ್ಥ ದೊರಕುವುದಿಲ್ಲ

ಹೀಗೆ ಸರಹ ಯಥಾಸ್ಥಿತಿವಾದಿಗಳಲ್ಲಿ ಯಾರನ್ನೂ ವಿಡಂಬನೆ ಮಾಡದೆ ಬಿಡಲಾರನು. ಈತನ ಸಿದ್ಧ ಪರಂಪರೆಯು ನಂತರದ ಭಕ್ತಿ, ಸೂಫಿ, ನಾಥ, ದತ್ತ, ಕಾಪಾಲಿಕ ಪಂಥದ ಮೇಲೂ ಪ್ರಭಾವ ಬೀರಿರುವಂತಿದೆ. ಕರ್ನಾಟಕದ ವಚನ ಚಳವಳಿ ಮತ್ತು ನೀಲಗಾರರು, ಗುಡ್ಡಪ್ಪ ಪರಂಪರೆಯ ಮೇಲೂ ಪ್ರಭಾವ ಬೀರಿದಂತಿದೆ.
ಸಂಶೋಧಿಸಲು ಇದೊಂದು ಸಮುದ್ರವಾಗಿದೆ. ಸರಹಪಾದನ ಬಾಣಗಳು ಅದೆಲ್ಲೆಲ್ಲಿ ನಾಟಿವೆಯೋ ಸಂಶೋಧಕರೇ ಕಂಡುಹಿಡಿಯಬೇಕಿದೆ. ಈ ಸಂಶೋಧನೆಗೆ ಸರಿಯಾದ ಅಡಿಪಾಯವನ್ನು ಪ್ರೊ. ನಟರಾಜ್ ಬೂದಾಳರು ಹಾಕಿಕೊಟ್ಟಿದ್ದಾರೆ. ಎರಡು ಸಾವಿರ ವರ್ಷಗಳ ಹಿಂದಿನ ಸರಹಪಾದ 1928ರಲ್ಲಿ ಫ್ರೆಂಚರಿಗೂ, 1954ರಲ್ಲಿ ಇಂಗ್ಲೀಷರಿಗೂ ದೋಹೆಗಳ ಮೂಲಕ ಪರಿಚಿತನಾಗಿದ್ದನು. ಆದರೆ ಭಾರತದ ಕರ್ನಾಟಕಕ್ಕೆ ಪರಿಚಯವಾಗಲು 2016ರವರೆಗೂ ಕಾಯಬೇಕಾಯಿತು. ಯಾಜಮಾನ್ಯ ಸಂಸ್ಕೃತಿಯೊಂದು ಸರಹಪಾದನನ್ನು ಭಾರತದಿಂದ ಓಡಿಸಿರುವಾಗ ಬೂದಾಳರಿಂದಾಗಿ ಸರಹಪಾದ ಮತ್ತೆ ಮನೆಗೆ ಮರಳಿದ್ದಾನೆ. ದಕ್ಕಿಸಿಕೊಳ್ಳುವುದು ಇಂದಿನ ಮತ್ತು ಮುಂದಿನ ತಲೆಮಾರಿಗೆ ಬಿಟ್ಟದ್ದು. ಸರಹಪಾದನ ಅಪಭ್ರಂಶವನ್ನು ಕನ್ನಡದ ಜೊತೆಗೆ ಮಾತಿಗಿಳಿಸಿದ ಬೂದಾಳರಿಗೆ ಕನ್ನಡಿಗರ ಕೃತಜ್ಞತೆಗಳು ಸಲ್ಲುತ್ತವೆ.

(ಈ ಲೇಖನ ಒಳಗೊಂಡಿರುವ ಎಲ್ಲ ಅನುವಾದಗಳು ಪ್ರೊ. ನಟರಾಜ್ ಬೂದಾಳು ಅವರದ್ದೇ)


ಇದನ್ನೂ ಓದಿ: ಬೌದ್ಧ ತಾತ್ವಿಕತೆಯ ಚಿಂತಕ ನಟರಾಜ ಬೂದಾಳು

ಇದನ್ನೂ ಓದಿ: ಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...