Homeಮುಖಪುಟಮೋದಿ ಸರ್ಕಾರಕ್ಕೆ ಏಳು ವರ್ಷ: ಜನವಿರೋಧಿ ರಾಷ್ಟ್ರವಾದ ಮತ್ತು ಬಂಡವಾಳಶಾಹಿಯ ಮೆರವಣಿಗೆ

ಮೋದಿ ಸರ್ಕಾರಕ್ಕೆ ಏಳು ವರ್ಷ: ಜನವಿರೋಧಿ ರಾಷ್ಟ್ರವಾದ ಮತ್ತು ಬಂಡವಾಳಶಾಹಿಯ ಮೆರವಣಿಗೆ

- Advertisement -
- Advertisement -

ಮೋದಿ ಸರ್ಕಾರಕ್ಕೆ ಏಳು ವರ್ಷವೋ, ಬಿಜೆಪಿ ಸರ್ಕಾರಕ್ಕೋ ಇಲ್ಲ ಎನ್‌ಡಿಎ ಸರ್ಕಾರಕ್ಕೋ? ಅಥವಾ ಸಂಘ ಪರಿವಾರದ ಹಿಡನ್ ಅಜೆಂಡಾ ಸ್ವತಂತ್ರ ಭಾರತದಲ್ಲಿ ಗರಿಷ್ಠ ಮಟ್ಟದಲ್ಲಿ ಕಾರ್ಯರೂಪಕ್ಕೆ ಇಳಿದ ಏಳು ವರ್ಷಗಳು ಎನ್ನುವುದೋ ಅಥವಾ ಅತಿ ವೇಗದಲ್ಲಿ ಬಂಡವಾಳಶಾಹಿಗಳ ಸಂಪತ್ತು ವೃದ್ಧಿ ಮತ್ತು ಅಷ್ಟೇ ಹಿಮ್ಮುಖ ವೇಗದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಎಂದು ಈ ಏಳು ವರ್ಷಗಳ ಅವಧಿಯನ್ನು ನೋಡುವುದೋ?

ಮೇಲಿನ ಎಲ್ಲದರ ಒಂದು ಕಲಸುಮೋಲೊಗರದ ಚಿತ್ರಣವೇ ನಿಜವಾದ ಸ್ಥಿತಿ. ಕರ್ನಾಟಕ ಕೋವಿಡ್ ವಾಲಂಟಿಯರ್ಸ್ ತಂಡ ಬೆಂಗಳೂರಿನಲ್ಲಿ ಮಧ್ಯಪ್ರದೇಶದ ಆದಿವಾಸಿ ಗುಂಪೊಂದಕ್ಕೆ ನೆರವು ನೀಡುವ ಸಂದರ್ಭದಲ್ಲಿ, ಆ ಗುಂಪಿನ ಹಿರಿಯ ಸದಸ್ಯರೊಬ್ಬರು, ‘ಮೋದಿ ಇರುವವರೆಗೂ ಕೊರೋನಾ ಇರುತ್ತೆ’ ಎಂದು ಹೇಳಿದ್ದನ್ನು ಈ ಏಳು ವರ್ಷಗಳ ಆಡಳಿತದ ಪ್ರಬುದ್ಧ ವಿಮರ್ಶೆ ಎನ್ನಬಹುದು.

ಬ್ಯಾಂಕುಗಳ ಮುಂದೆ ತಮ್ಮದೇ ಹಣಕ್ಕಾಗಿ ನಿಂತ ಸರದಿ ಸಾಲುಗಳು ಈಗ ಆಸ್ಪತ್ರೆ ಮತ್ತು ಸ್ಮಶಾನಗಳ ಎದುರು ಕಾಣಿಸುತ್ತಿವೆ. ಇವೆರಡರ ನಡುವೆ ಕೆಲವೇ ಕೆಲವು ಅತಿ ಶ್ರೀಮಂತರು ಅಪರಿಮಿತ ಸಂಪತ್ತನ್ನು ಗುಡ್ಡ ಹಾಕಿದ್ದಾರೆ. ಬಿಜೆಪಿಯ ಪಾರ್ಟಿ ಫಂಡ್ ಕೂಡ ಭರ್ಜರಿ ಕಲೆಕ್ಷನ್ ಕಂಡಿದೆ, ಬಡವರು ಕಡು ಬಡವರಾಗಿದ್ದಾರೆ ಮತ್ತು ಮುಖ್ಯವಾಗಿ ಬಿಜೆಪಿ ಬೆಂಬಲಿಸುವ ವರ್ಗ ಎನ್ನಲಾದ ಮಧ್ಯಮವರ್ಗ ಈಗ ಸಂಕಷ್ಟಕ್ಕೆ ಸಿಲುಕುತ್ತಿದೆ.

ಎರಡು ವರ್ಷಗಳ ಹಿಂದೆ, 2019 ರ ಮೇ 30 ರಂದು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅದಕ್ಕೂ ಐದು ವರ್ಷಗಳ ಮೊದಲು, ಅವರು 2014 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದು, ಆರ್ಥಿಕ ಸಮೃದ್ಧಿ, ಸಾಮಾಜಿಕ ಐಕ್ಯತೆ ಮತ್ತು ಸಮಗ್ರ ಅಭಿವೃದ್ಧಿಯ ಭರವಸೆ ನೀಡಿದ್ದರು. ಅವರ ಘೋಷಣೆಗಳು – “ಅಚ್ಚೆ ದಿನ್. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಒಂದು ಕೋಟಿ ಉದ್ಯೋಗಗಳು, ಕಪ್ಪುಹಣ ವಾಪಸ್‌ ತರುವುದು ಮತ್ತು ಎಲ್ಲರ ಅಕೌಂಟಿಗೆ 15 ಲಕ್ಷ ಹಣ ಇತ್ಯಾದಿ.

ಆದರೆ ಈಗ ಇವೆಲ್ಲವೂ ಜುಮ್ಲಾ ಎಂದು ದೃಢಪಟ್ಟಿದೆ. ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ನೆರವಿನಿಂದ ಅಸ್ತಿತ್ವದಲ್ಲಿಯೇ ಇಲ್ಲದ ಗುಜರಾತ್ ಮಾಡೆಲ್ ಎಂಬ ಮರಿಚೀಕೆಯನ್ನು ಬಿತ್ತಿ ಯುವಜನತೆ ಮತ್ತು ಮಧ್ಯಮವರ್ಗವನ್ನು ದಾರಿ ತಪ್ಪಿಸುತ್ತ ಬರಲಾಗಿತು.

ಇದನ್ನೂ ಓದಿ: ಗುಜರಾತ್ ಮಾಡೆಲ್: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು & ಕೊಬ್ಬುತ್ತಿರುವ ಉದ್ಯಮಿಗಳು!

ಈಗ ಬಹುತೇಕ ಜನರು ಭ್ರಮನಿರಸನ ಹೊಂದಿದ್ದಾರೆ ಮತ್ತು ಸಿನಿಕರಾಗಿದ್ದಾರೆ. ಆದರೂ ಈ ಏಳು ವರ್ಷಗಳಲ್ಲಿ ಸೃಷ್ಟಿಯಾದ ಭಕ್ತಗಣ ಎಂಬ ವಿಕ್ಷಿಪ್ತ ಪ್ರಭೇಧವೊಂದು ಅಂಧಾನುಕರಣೆಯಲ್ಲಿ ತೊಡಗಿದೆ. ಈ ಪ್ರಭೇದಕ್ಕೆ ಬೆಂಬಲವಾಗಿ ವಿಷಯವಸ್ತು ಒದಗಿಸಲು ಗೋದಿ ಮೀಡಿಯಾ ಎಂಬ ವಿಕೃತ ಪ್ರಭೇಧವೊಂದೂ ಜನ್ಮ ತಾಳಿದೆ. ಲೋಕಸಭೆಯಲ್ಲಿ ಆರಾಮದಾಯಕ ಬಹುಮತದ ಬೆಂಬಲವಿದೆ ಮತ್ತು ಹಲವಾರು ರಾಜ್ಯ ಸರ್ಕಾರಗಳು ಬಿಜೆಪಿಯ ನಿಯಂತ್ರಣದಲ್ಲಿವೆ. (ಇತ್ತೀಚಿನ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಮೋದಿ-ಶಾಗಳ ಗರ್ವಭಂಗ ಮಾಡಿದೆ).

ಮೊದಲ ಬಾರಿಗೆ, 2014ರಲ್ಲಿ, ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸುಮಾರು ಶೇ. 38 ಮತಗಳನ್ನು ಪಡೆದಿವೆ, ಅದು 2019ರಲ್ಲಿ ಸುಮಾರು ಶೇ. 43ಕ್ಕೆ ಏರಿದೆ. ಮತ ಚಲಾಯಿಸಿದವರಲ್ಲಿ ಹೆಚ್ಚಿನವರು ಇನ್ನೂ ಬಿಜೆಪಿಯನ್ನು ವಿರೋಧಿಸಿದ್ದಾರೆ ಎಂದು ಇದು ತೋರಿಸಿದರೂ, ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಬಿಜೆಪಿಯೇ ವಿಜಯಶಾಲಿ ಹೌದು.

ಮೋದಿಯ ಆಡಳಿತದ ಎರಡು ನಿರ್ಣಾಯಕ ಲಕ್ಷಣಗಳು ಒಂದು ನವ-ಉದಾರವಾದಿ ಸಿದ್ಧಾಂತ. ಇದು ಅಂಬಾನಿ-ಅದಾನಿ ತರಹದವರಿಗೆ ಎಲ್ಲ ನೆರವು ನೀಡುವ ಪಾಲಿಸಿ. ಎರಡನೆಯದು ಭಾರತವು ಹಿಂದೂ ರಾಷ್ಟ್ರ ಅಥವಾ ಕೇವಲ ಹಿಂದೂಗಳ ರಾಷ್ಟ್ರ ಎಂಬ ಕಲ್ಪನೆ. ಈ ಎರಡೂ ಸಿದ್ದಾಂತಗಳು ಕೈ ಜೋಡಿಸಿವೆ. ಹೀಗಾಗಿ ಇಲ್ಲಿ ಅಕ್ರಮ ಸಂಪತ್ತು ಮತ್ತು ಜನವಿರೋಧಿ ರಾಷ್ಟ್ರವಾದದ ನಡುವೆ ಸಹಜವಾಗಿಯೇ ಹೊಂದಾಣಿಕೆಯಾಗಿದೆ. ಈ ಏಳು ವರ್ಷಗಳಲ್ಲಿ ಈ ಎರಡರ ನಡುವಿನ ಪ್ರೀತಿ-ಪ್ರೇಮ, ಕೊಡುಕೊಳ್ಳುವಿಕೆ ತುಂಬ ಆಪ್ತವಾಗಿದೆ. ಇವತ್ತು ದೇಶದ ಎದುರು ಈ ಮೈತ್ರಿಯೇ ದುಸ್ವಪ್ನವಾಗಿದೆ. ಮೋದಿ ಎಂಬ ಕೃತಕ ಸೃಷ್ಟಿತ ಇಮೇಜ್ ಅನ್ನು ಬಳಸಿಕೊಂಡು ಈ ಶಕ್ತಿಗಳು ತಮ್ಮ ತಮ್ಮ ಹಿಡೆನ್ ಅಜೆಂಡಾ ಜಾರಿ ಮಾಡುತ್ತಿವೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: “ನನ್ನನ್ನು ಈ ರೀತಿ ಅವಮಾನಿಸಬೇಡಿ”: ಪಿಎಂ ಜೊತೆಗಿನ ಭೇಟಿ ನಂತರ ಮಮತಾ ಅಸಮಾಧಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...