ಲಖಿಂಪುರ್ ಖೇರಿ ರೈತರ ಹತ್ಯಾಕಾಂಡ ಘಟನೆಯು ಯೋಜಿತ ಪಿತೂರಿ ಎಂದು ಎಸ್ಐಟಿ ವರದಿ ಹೇಳಿದೆ. ಈ ವರದಿಯನ್ನು ಉಲ್ಲೇಖಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗೋವಾಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಎಸ್ಐಟಿ ವರದಿ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ಗೃಹ ಸಚಿವರು ರಾಜೀನಾಮೆ ನೀಡಬೇಕಲ್ಲ? ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಧಾನಿ ಚರ್ಚಿಸುವುದಿಲ್ಲವೇ?” ಎಂದು ಕೇಳಿದ್ದು, ರೈತರು ಮತ್ತು ಕಾರ್ಮಿಕರ ಬಗ್ಗೆ ಬಿಜೆಪಿಯಿಂದ ನಾವು ಕಲಿಯಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT
ಎಂಟು ಮಂದಿ ಪ್ರಾಣ ಕಳೆದುಕೊಂಡ ಲಖಿಂಪುರ ಖೇರಿ ಹತ್ಯಾಕಾಂಡ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(SIT) ಪ್ರತಿಭಟನಾ ನಿರತ ರೈತರ ಹತ್ಯೆಗೆ ಯೋಜಿತ ಸಂಚು ನಡೆದಿದೆ ಎಂದು ಹೇಳಿದೆ.
ತಮ್ಮ ತನಿಖೆಯ ಹಿನ್ನೆಲೆಯಲ್ಲಿ, ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧದ ಆರೋಪಗಳನ್ನು ನವೀಕರಿಸಲು ತನಿಖಾಧಿಕಾರಿ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಆಶಿಶ್ ಮಿಶ್ರಾ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಾಗಿದೆ. ನಂತರದ ತನಿಖೆಯ ಸಂದರ್ಭದಲ್ಲಿ ಹೊಸ ಸಾಕ್ಷ್ಯಗಳು ಸಿಕ್ಕಿದ್ದರಿಂದ ಈಗ ಎಲ್ಲಾ 13 ಆರೋಪಿಗಳ ಮೇಲೆ ಕೊಲೆಯತ್ನ ಪ್ರಕರಣ ಸೇರಿಸಲು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:700 ಕ್ಕೂ ಹೆಚ್ಚು ರೈತರ ಸಾವು ಮತ್ತು ಲಖಿಂಪುರ್ ಖೇರಿ ಹತ್ಯಾಕಾಂಡ ತಡೆಯಬಹುದಿತ್ತು: ಸಂಯುಕ್ತ ಕಿಸಾನ್ ಮೋರ್ಚಾ
ಜೊತೆಗೆ ಆರೋಪಿಗಳ ವಿರುದ್ಧದ ಮೂರು ಆರೋಪಗಳನ್ನು ಕೈಬಿಡುವಂತೆ ಸಹ ಎಸ್ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಅವುಗಳೆಂದರೆ ಐಪಿಸಿ ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ), 338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ).
ತನಿಖಾಧಿಕಾರಿ ವಿದ್ಯಾ ರಾಮ್ ದಿವಾಕರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಲಖಿಂಪುರ ಖೇರಿಯಲ್ಲಿ ನಡೆದ ಘಟನೆಯು ಅಪಘಾತವಲ್ಲ, ಬದಲಾಗಿ ಶಸ್ತ್ರಸಜ್ಜಿತ ಕೊಲೆ ಯತ್ನದ ಯೋಜಿತ ಸಂಚು ಎಂದು ಹೇಳಿದ್ದಾರೆ.
ಲಖಿಂಪುರ ಜಿಲ್ಲಾ ನ್ಯಾಯಾಲಯವು ಮಂಗಳವಾರ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆಸಿದೆ.
ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ, ಒಕ್ಕೂಟ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಆಶಿಶ್ ಮಿಶ್ರಾ ಕಾರನ್ನು ಹರಿಸಿದ್ದರು.
ಆಶಿಶ್ ಮಿಶ್ರಾ ಸೇರಿದಂತೆ ಪ್ರಕರಣದ ಇತರ ಆರೋಪಿಗಳು ಪ್ರಸ್ತುತ ಪೊಲೀಸ್ ವಶದಲ್ಲಿದ್ದಾರೆ.