ಜಮ್ಮು ಮತ್ತು ಕಾಶ್ಮೀರ, ಬೆಂಗಳೂರು ಮತ್ತು ದೆಹಲಿಯ ನಾಗರಿಕ ಸಮಾಜ ಗುಂಪುಗಳು ಮತ್ತು ವ್ಯಕ್ತಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ನಡೆಸಿದ ದಾಳಿಯನ್ನು ಖಂಡಿಸಿ ಸಿಪಿಐಎಂಎಲ್ ಕೇಂದ್ರ ಸಮಿತಿ (CPIML) ಬಹಿರಂಗ ಪತ್ರ ಬರೆದಿದೆ.
ಈ ದಾಳಿಗಳನ್ನು “ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ” ನಿಗ್ರಹಿಸುವುದಾಗಿ ಎಂದು ಎನ್ಐಎ ಹೇಳಿಕೊಂಡಿದೆ. ಆದರೆ ಇದು ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳು ಮತ್ತು ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸುವ, ಎಲ್ಲರನ್ನು ಕಿರುಕುಳ ನೀಡಿ ಮೌನಗೊಳಿಸಲು ಮಾಡುತ್ತಿರುವ ತಂತ್ರ ಎಂಬುದು ತಿಳಿಯುತ್ತಿದೆ ಎಂದಿದೆ.
ಮಾನವ ಹಕ್ಕುಗಳ ರಕ್ಷಕರು, ಮಾನವೀಯ ಗುಂಪುಗಳು, ಪತ್ರಕರ್ತರು ಮತ್ತು ನಾಗರಿಕರನ್ನು ಮೌನವಾಗಿಸಲು ಎನ್ಐಎಯನ್ನು ಬಳಸುವ ಮೂಲಕ, ಮೋದಿ ಆಡಳಿತವು ಜಮ್ಮು ಕಾಶ್ಮೀರ ಜನರ ವಿರುದ್ಧದ ಯಾವುದೇ ಸಾಕ್ಷಿಗಳಿಲ್ಲದೆ ಅಪರಾಧ ಹೊರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಎನ್ಐಎ ಗುರಿಯಿಟ್ಟಿರುವ ಗುಂಪುಗಳು ಮತ್ತು ವ್ಯಕ್ತಿಗಳು ಮಾನವ ಹಕ್ಕುಗಳು ಮತ್ತು ಮಾನವೀಯ ಕಾರ್ಯಗಳ ಸುದೀರ್ಘ ಮತ್ತು ಪ್ರಭಾವಶಾಲಿ ಕೆಲಸಗಳನ್ನು ಮಾಡಿದ್ದಾರೆ. ಉದಾಹರಣೆಗೆ ಜಮ್ಮು ಕಾಶ್ಮೀರ ಒಕ್ಕೂಟದ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್) ನಕಲಿ ಎನ್ಕೌಂಟರ್ಗಳು, ಲಾಕಪ್ ಡೆತ್, ಲೈಂಗಿಕ ದೌರ್ಜನ್ಯ ಮತ್ತು ಜೆ & ಕೆ ಮಕ್ಕಳ ಮೇಲಿನ ದೌರ್ಜನ್ಯದ ಪರಿಣಾಮಗಳ ಕುರಿತು ಸುದೀರ್ಘ ವರದಿಗಳನ್ನು ದಾಖಲಿಸಿದೆ ಎಂದು CPIML ಹೇಳಿದೆ.
ಇದನ್ನೂ ಓದಿ: ಎನ್ಜಿಒ ಮೇಲೆ NIA ದಾಳಿ: ಮಾನವಹಕ್ಕು ರಕ್ಷಕರ ಮೇಲಿನ ದೌರ್ಜನ್ಯ ಎಂದ ಹೋರಾಟಗಾರರು
ಎನ್ಐಎ ದಾಳಿಯ ಮತ್ತೊಂದು ಗುರಿ ದೆಹಲಿಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಮತ್ತು ಚಾರಿಟಿ ಅಲೈಯನ್ಸ್ ಎಂಬ ಎನ್ಜಿಒ ನಡೆಸುತ್ತಿರುವ ಮಿಲ್ಲಿ ಗೆಜೆಟ್ ಪತ್ರಿಕೆಯ ಸ್ಥಾಪಕ ಸಂಪಾದಕ ಜಫರುಲ್ ಇಸ್ಲಾಂ ಖಾನ್. ಖಾನ್ ನೇತೃತ್ವದಲ್ಲಿ, ದೆಹಲಿ ಅಲ್ಪಸಂಖ್ಯಾತ ಆಯೋಗವು ಫೆಬ್ರವರಿ 2020 ರ ದೆಹಲಿ ಹಿಂಸಾಚಾರದ ಬಗ್ಗೆ ಭೀಕರವಾದ ವರದಿಯನ್ನು ಪ್ರಕಟಿಸಿತ್ತು. ಮುಸ್ಲಿಮರ ವಿರುದ್ಧದ ಉದ್ದೇಶಿತ ಹಿಂಸಾಚಾರದಲ್ಲಿ ದೆಹಲಿ ಪೊಲೀಸರು ಭಾಗಿಯಾಗಿರುವುದಕ್ಕೆ ಪುರಾವೆಗಳನ್ನು ದಾಖಲಿಸಿದ್ದಾರೆ. ದೆಹಲಿ ಹಿಂಸಾಚಾರಕ್ಕೆ ಒಳಗಾದವರಿಗೆ ಚಾರಿಟಿ ಅಲೈಯನ್ಸ್ ಪರಿಹಾರ ನೀಡಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಗ್ರೇಟರ್ ಕಾಶ್ಮೀರ ಪತ್ರಿಕೆಯ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಈ ಪತ್ರಿಕೆ ಯಾವುದೇ ಕೆಟ್ಟ ವರದಿಗಳು ಪ್ರಕಟವಾಗಿಲ್ಲ ಮತ್ತು ಧೈರ್ಯಶಾಲಿ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾಗಿದೆ. ಇಂತಹ ಪತ್ರಿಕೆಯ ಮೇಲೂ ಮೋದಿ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ತಮ್ಮ ನಗರದಲ್ಲಿ ಮತ್ತು ಭಾರತದ ಇತರ ಭಾಗಗಳಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತಾ, ದನಿ ಎತ್ತಿರುವ ಸ್ವಾತಿ ಶೇಷಾದ್ರಿಯವರ ಮನೆಯ ಮೇಲೆ ಬೆಂಗಳೂರಿನಲ್ಲಿಯೂ ಎನ್ಐಎ ದಾಳಿ ನಡೆಸಿದೆ. ಲಾಕ್ ಡೌನ್ ಸಮಯದಲ್ಲಿ, ಸ್ವಾತಿ ಶೇಷಾದ್ರಿ “ವಲಸಿಗರೊಂದಿಗೆ ಬೆಂಗಳೂರು” ಎಂಬ ಅಭಿಯಾನದ ಭಾಗವಾಗಿ ಕೆಲಸ ಮಾಡಿದರು, ಆಹಾರ, ಆಶ್ರಯವಿಲ್ಲದೆ ಬೆಂಗಳೂರಿನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಪರಿಹಾರ ನೀಡಲು ಸಹಾಯ ಮಾಡಿದರು ಇಂತವರ ವಿರುದ್ಧವು ಸಂಚು ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಹೋರಾಟದಲ್ಲಿ ಮಹಿಳೆಯ ಪಾತ್ರ ಬಿಂಬಿಸುವ ಚಿತ್ರ ‘ಆಕ್ಟ್- 1978’
ಮೋದಿ ಆಡಳಿತದಲ್ಲಿ ಎನ್ಐಎ, ಇತರ ಅನೇಕ ಸಂಸ್ಥೆಗಳಂತೆ, “ಪಂಜರದ ಗಿಳಿ” ಆಗಿ ಮಾರ್ಪಟ್ಟಿದೆ. ಈಗ ಜಮ್ಮು ಕಾಶ್ಮೀರ ವಿಷಯವನ್ನಿಟ್ಟುಕೊಂಡು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಾಂಬ್ ಸ್ಫೋಟದ ಆರೋಪಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧದ ಪ್ರಕರಣವನ್ನು ದುರ್ಬಲಗೊಳಿಸಿದ ಎನ್ಐಎ, ಜೆ & ಕೆ ಪೊಲೀಸ್ ಅಧಿಕಾರಿ ದಾವಿಂದರ್ ಸಿಂಗ್ ಅವರಿಗೆ ಜಾಮೀನು ದೊರೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.
ತೂತುಕುಡಿಯಲ್ಲಿ ಜಯರಾಜ್ ಮತ್ತು ಬೆನ್ನಿಕ್ಸ್ರನ್ನು ತಮಿಳುನಾಡು ಪೊಲೀಸರು ಹತ್ಯೆಗೈದಿದ್ದು, ಭಾರತದ ಅತಿರೇಕದ ಹಿಂಸೆ ಮತ್ತು ಲಾಕಪ್ ಡೆತ್ಗಳ ಮೇಲೆ ಈ ಎನ್ಜಿಒಗಳು ಬೆಳಕು ಚೆಲ್ಲಿವೆ. ತೀರಾ ಇತ್ತೀಚೆಗೆ, ಬಿಹಾರದ ಮುಂಗೆರ್ನಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಭಕ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಇವೆಲ್ಲಾ ಪೊಲೀಸರು ಜನಸಾಮಾನ್ಯರ ಮೇಲೆ ಮಾಡುವ ದೌರ್ಜನ್ಯ. ಇವರುಗಳ ವಿರುದ್ಧ ಹೊರಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಮುಂಗೆರ್, ತೂತುಕುಡಿ ಅಥವಾ ಕಾಶ್ಮೀರ ಕಣಿವೆ ಯಾವುದೇ ಇರಲಿ, ಸತ್ಯವನ್ನು ಬಹಿರಂಗಪಡಿಸುವ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರ ಮೇಲೆ ಎನ್ಐಎ ದಾಳಿ ನಡೆಸಿ, ಬಂಧಿಸುತ್ತಿರುವುದು ಸಂವಿಧಾನ ಬಾಹಿರವಾಗಿದೆ. ಭಾರತದ ಪ್ರಜೆಗಳಾದ ನಾವು ನಮ್ಮ ಹಕ್ಕುಗಳ ರಕ್ಷಣೆ, ಸ್ವಾತಂತ್ರ್ಯಕ್ಕಾಗಿ ನಮ್ಮ ಪರ ಹೋರಾಟ ನಡೆಸಲು ಪ್ರಯತ್ನಿಸುವವರ ಪರ ನಿಲ್ಲಬೇಕು” ಎಂದು ಪತ್ರದಲ್ಲಿ ಬರೆಯಲಾಗಿದೆ.