30 ವರ್ಷಗಳಿಂದ ನಡೆಯುತ್ತಿರುವ ಒಳಮೀಸಲಾತಿ ಹೋರಾಟ ಕಳೆದ ತಿಂಗಳು ಪುನಾರಂಭವಾಗಿ ಒಂದು ತಿಂಗಳು ಪೂರೈಸುತ್ತಿದೆ. ಆದರೆ ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಸರ್ಕಾರ ಕ್ರಮ ವಹಿಸದ ಹಿನ್ನೆಲೆಯಲ್ಲಿ ಎಡಗೈ (ಮಾದಿಗ), ಬಲಗೈ (ಹೊಲೆಯ) ಸಮುದಾಯಗಳು ಜನವರಿ 10ರಂದು ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿವೆ. ಹಲವು ಮಠಾಧೀಶರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಳೆದೊಂದು ತಿಂಗಳಿನಿಂದ ಹೋರಾಟ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ತರಾತುರಿಯಲ್ಲಿ ಶಿಫಾರಸ್ಸು ಮಾಡಬಾರದೆಂದು ಆಗ್ರಹಿಸಿ, ಭೋವಿ, ಲಂಬಾಣಿ ಸಮುದಾಯದ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣಾ’ ಇದೇ ದಿನ (ಜ.10) ಹೋರಾಟ ಹಮ್ಮಿಕೊಂಡಿದೆ. ಎರಡು ಹೋರಾಟಗಳು ಒಮ್ಮೆಲೆ ನಡೆದರೆ ಸಂಘರ್ಷಕ್ಕೀಡಾಗಬಹುದು ಎಂದು ಪೊಲೀಸರು ಒಳಮೀಸಲಾತಿ ಪರ ಹೋರಾಟಗಾರರಿಗೆ ಪತ್ರ ಬರೆದಿದ್ದಾರೆ.
ಒಳಮೀಸಲಾತಿ ಪರ ಹೋರಾಟವನ್ನು ‘ಸಂಭ್ರಮಾಚರಣೆ’ ಎಂದು ಪೊಲೀಸರು ತಮ್ಮ ಬಣ್ಣಿಸಿರುವುದನ್ನು ಹೋರಾಟಗಾರರು ಖಂಡಿಸಿದ್ದಾರೆ. ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಹೋರಾಟಗಾರರಾದ ಅಂಬಣ್ಣ ಅರೋಲಿಕರ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ನಮ್ಮ ಹೋರಾಟ ಮೂವತ್ತು ದಿನಗಳನ್ನು ಪೂರೈಸುತ್ತಿದೆ. ಹೀಗಾಗಿ ಜ.10ರಂದು ಸಾಂಕೇತಿಕವಾಗಿ ಐದು ನೂರು ಜನರು ಸೇರಬೇಕೆಂದು ಯೋಚಿಸಿದ್ದೇವೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಯಾರ ಮೀಸಲಾತಿಯನ್ನೂ ನಾವು ಕಬಳಿಸುವುದಿಲ್ಲ. ಸಂವಿಧಾನಬದ್ಧ ಮೀಸಲಾತಿ ಹಂಚಿಕೆಗಾಗಿ ನಾವು ಆಗ್ರಹಿಸುತ್ತಿದ್ದೇವೆ. ಯಾರನ್ನೂ ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆದು ಹಾಕಬೇಕೆಂಬ ಪ್ರಶ್ನೆಯೇ ಇಲ್ಲ ಎಂಬುದನ್ನು ಮನವರಿಕೆ ಮಾಡುವುದಕ್ಕಾಗಿ ಒಂದು ಸೌಹಾರ್ದ ಸಭೆಯನ್ನು ಮಂಗಳವಾರ ಆಯೋಜಿಸಿದ್ದೇವೆ. ನಮ್ಮ ನೋವಿನ ಗಳಿಗೆಯು ಪೊಲೀಸರಿಗೆ ಸಂಭ್ರಮಾಚರಣೆಯಂತೆ ಕಂಡಿದ್ದು, ಕಾರ್ಯಕ್ರಮ ಮುಂದೂಡುವಂತೆ ಪತ್ರ ಬರೆದಿದ್ದಾರೆ. ನಾವು ನಮ್ಮ ಸಭೆಯನ್ನು ನಡೆಸುವುದು ಖಚಿತ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿರಿ: ಸದಾಶಿವ ಆಯೋಗದ ವರದಿಗೆ ಅಲೆಮಾರಿಗಳ ವಿರೋಧವೆಂದು ಅಪಪ್ರಚಾರ: ಅನಂತ್ ನಾಯ್ಕ್ ಹೇಳಿಕೆಗೆ ಸಮುದಾಯದ ಮುಖಂಡರ ಸ್ಪಷ್ಟನೆ
“ಜ್ಞಾನಪ್ರಕಾಶ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ ನಮ್ಮ ಸೌಹಾರ್ದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಗೋಪಾಲ್ ಸೇರಿದಂತೆ ಹಲವು ಹೋರಾಟಗಾರು ಸೇರಲಿದ್ದಾರೆ. ಮಾದಿಗ ಹಾಗೂ ಹೊಲೆಯ ಸಮುದಾಯ ಒಟ್ಟಿಗೆ ಸೇರುತ್ತಿದೆ. ಒಳಮೀಸಲಾತಿಯ ಕುರಿತು ಅರಿವು ಮೂಡಿಸಲು ಸಮುದಾಯ ಮುಂದಾಗಿದೆ. ಇದರ ನಡುವೆ ಪೊಲೀಸರು ತಕರಾರು ತೆಗೆದಿದ್ದು ಸಭೆ ಮುಂದೂಡಲು ಸೂಚಿಸಿದ್ದಾರೆ. ಪತ್ರದಲ್ಲಿ ಸಂಭ್ರಮಾಚರಣೆ ಎಂದು ಉಲ್ಲೇಖಿಸಿದ್ದಾರೆ. ನಾವು ಸಂಕಟದಲ್ಲಿದ್ದೇವೆಯೇ ಹೊರತು ಸಂಭ್ರಮದಲ್ಲಿ ಅಲ್ಲ. ನಮ್ಮ ಸಂಕಟಗಳಿಗೆ ಸಂಬಂಧಿಸಿದಂತೆ ಸಂವಾದ ಹಮ್ಮಿಕೊಂಡಿದ್ದೇವೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಗಾಬರಿಯಾಗುವ ಅಗತ್ಯವೂ ಇಲ್ಲ ಎಂದು ಮನವರಿಕೆ ಮಾಡುತ್ತಿದ್ದೇವೆ. ಇದು ಯಾವುದೇ ಸಮುದಾಯದ ವಿರುದ್ಧದ ಹೋರಾಟವಲ್ಲ” ಎಂದು ತಿಳಿಸಿದರು.
“ಸ್ಪೃಶ್ಯ ಸಮುದಾಯಗಳನ್ನು ನಮ್ಮ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಮೀಸಲಾತಿ ಸೌಲಭ್ಯದಿಂದ ಸ್ಪೃಶ್ಯರನ್ನು ತೆಗೆದುಹಾಕಲಾಗುತ್ತದೆಂದು ಸುಳ್ಳು ಹಬ್ಬಿಸಲಾಗಿದೆ. ಈ ಸುಳ್ಳಿನ ವಿರುದ್ಧ ನಾವು ಸೌಹಾರ್ದ ಸಭೆ ನಡೆಸುತ್ತಿದ್ದೇವೆ. ನೂರೊಂದು ಜಾತಿಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವನ್ನು ತಿರುಚಿ, ಇದು ಸ್ಪೃಶ್ಯರ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರವೆಂದು ಬಿಂಬಿಸುವುದು ಸರಿಯಲ್ಲ. ನಾವು ನಮ್ಮ ಸಂಕಷ್ಟಗಳನ್ನು ಸಭೆಯಲ್ಲಿ ಹೇಳಿಕೊಳ್ಳಲಿದ್ದೇವೆ” ಎಂದರು.