Homeಮುಖಪುಟದೆಹಲಿ: ಮಾನವ ಕಳ್ಳ ಸಾಗಾಣಿಕೆ ಶಂಕೆ: ಏರ್ ಇಂಡಿಯಾ ಸಿಬ್ಬಂದಿ ಸೇರಿ ಐವರ ಬಂಧನ

ದೆಹಲಿ: ಮಾನವ ಕಳ್ಳ ಸಾಗಾಣಿಕೆ ಶಂಕೆ: ಏರ್ ಇಂಡಿಯಾ ಸಿಬ್ಬಂದಿ ಸೇರಿ ಐವರ ಬಂಧನ

- Advertisement -
- Advertisement -

ಮಾನವ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಾಲ್ವರು ಏರ್ ಇಂಡಿಯಾ ಸಿಬ್ಬಂದಿ ಮತ್ತು ಯುಕೆ ವಿಮಾನ ಏರಲು ಪ್ರಯತ್ನಿಸುತ್ತಿದ್ದ ಭಾರತೀಯ ಪ್ರಯಾಣಿಕನನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಲಾಗಿದೆ.

ಅನುಮಾನಾಸ್ಪದ ವರ್ತನೆ ಕಂಡು ಬಂದ ಹಿನ್ನೆಲೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತಿಳಿಸಿದೆ.

ಯುಕೆಗೆ ತೆರಳಲು ಸಿದ್ದನಾಗಿದ್ದ ದಿಲ್ಜೋತ್ ಸಿಂಗ್ ಎಂಬ ವ್ಯಕ್ತಿಯ ಪ್ರಯಾಣದ ದಾಖಲೆಗಳು ಇಮಿಗ್ರೇಶನ್‌ ಅಧಿಕಾರಿಗಳಿಗೆ ಸಂಶಯಾಸ್ಪದವಾಗಿ ಕಂಡು ಬಂದಿತ್ತು. ಹಾಗಾಗಿ, ಅಧಿಕಾರಿಗಳು ಆತ ವಿಮಾನ ಹತ್ತುವುದಕ್ಕೆ ಅವಕಾಶ ನಿರಕಾರಿಸಿದ್ದರು. ವಿಮಾನಯಾನ ಸಿಬ್ಬಂದಿಯೊಂದಿಗೆ ಆತನ ಕುರಿತು ಸ್ಪಷ್ಟಪಡಿಸುವಂತೆ ಸೂಚಿಸಿದ್ದರು.

ಪ್ರಯಾಣಿಕ ದಿಲ್ಜೋತ್ ಸಿಂಗ್, ದೆಹಲಿ ವಿಮಾನಯಾನ ಸಿಬ್ಬಂದಿಯನ್ನು ಸಂಪರ್ಕಿಸುವ ಬದಲು, ಏರ್ ಇಂಡಿಯಾ ಸ್ಯಾಟ್ಸ್ ಏರ್ಪೋರ್ಟ್ ಸರ್ವಿಸಸ್ ಪ್ರೈ. ಲಿಮಿಟೆಡ್ (ಎಐಎಸ್‌ಎಟಿಎಸ್‌) ಸಿಬ್ಬಂದಿಯಿಂದ ಸಹಾಯ ಕೋರಿದ್ದರು. ಇದು ಅಧಿಕಾರಿಗಳ ಅನುಮಾನ ಹೆಚ್ಚಿಸಿತ್ತು.

ತಕ್ಷಣ ಎಚ್ಚೆತ್ತ ಸಿಐಎಸ್ಎಫ್ ಸಿಬ್ಬಂದಿ, ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲಿದ್ದ ಏರ್ ಇಂಡಿಯಾ ಸಿಬ್ಬಂದಿ ಅಮಾನ್ಯ ದಾಖಲೆಗಳ ಮೂಲಕ ಸಿಂಗ್ ಮತ್ತು ಇತರ ಇಬ್ಬರ ಬೋರ್ಡಿಂಗ್ ಪ್ರಕ್ರಿಯೆ ಮುಗಿಸಿರುವುದು ಸಿಸಿಟಿವಿ ದೃಶ್ಯಗಳಿಂದ ಬಯಲಾಗಿತ್ತು.

ಈ ಹಿನ್ನೆಲೆ ದಿಲ್ಜೋತ್ ಸಿಂಗ್ ಜೊತೆಗೆ ರೋಹನ್ ವರ್ಮಾ, ಮೊಹಮ್ಮದ್ ಜಹಾಂಗೀರ್, ಯಶ್ ಮತ್ತು ಅಕ್ಷಯ್ ನಾರಂಗ್ ಎಂದು ಗುರುತಿಸಲಾದ ಸಿಬ್ಬಂದಿಯನ್ನು ಬಂಧಿಸಿದ ಸಿಐಎಸ್‌ಎಫ್ ಅಧಿಕಾರಿಗಳು, ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಎಐಎಸ್‌ಎಟಿಎಸ್‌ ಸಿಇಒ ಸಂಜಯ್ ಗುಪ್ತಾ, “ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಸಿಐಎಸ್‌ಎಫ್ ಸಹಯೋಗದಲ್ಲಿ ಮಾನವ ಕಳ್ಳಸಾಗಣೆ ಯತ್ನವನ್ನು ತಡೆಯುವಲ್ಲಿ ಕಂಪನಿಯು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹೇಳಿದ್ದಾರೆ.

ಮೂವರು ವ್ಯಕ್ತಿಗಳು ಅಕ್ರಮವಾಗಿ ಯುಕೆಗೆ ತೆರಳಲು ಪ್ರಯತ್ನಿಸಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದ ನಮ್ಮ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಕಾರ್ಯಾಚರಣೆಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಸುರಕ್ಷತೆ, ಕಾನೂನುಬದ್ಧತೆ ಮತ್ತು ನೈತಿಕ ನಡವಳಿಕೆಯ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಲು ಸಂಸ್ಥೆಯು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಟಾಟಾ ಒಡೆತನದ ಏರ್ ಇಂಡಿಯಾ ಮತ್ತು ಸ್ಯಾಟ್ಸ್ ಏರ್ಪೋರ್ಟ್ ಸರ್ವಿಸಸ್ ಪ್ರೈ. ಲಿಮಿಟೆಡ್ ಜಂಟಿಯಾಗಿ ಬ್ಯಾಗೇಜ್ ನಿರ್ವಹಣೆ ಮತ್ತು ವಿಮಾನ ನಿರ್ವಹಣೆ ಸೇರಿದಂತೆ ವಿವಿಧ ವಿಮಾನ ನಿಲ್ದಾಣ ಸೇವೆಗಳನ್ನು ಒದಗಿಸುತ್ತಿದೆ.

ಈ ವಾರದ ಆರಂಭದಲ್ಲಿ ಸುಮಾರು 300 ಭಾರತೀಯರನ್ನು ಹೊತ್ತ ವಿಮಾನವನ್ನು ಮಾನವ ಕಳ್ಳ ಸಾಗಾಣಿಕೆಯ ಸಂಶಯದ ಮೇಲೆ ಫ್ರಾನ್ಸ್ ಅಧಿಕಾರಿಗಳು ತಡೆದಿದ್ದರು. ಆ ಬಳಿಕ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ನಿಗಾ ವಹಿಸಲಾಗಿದೆ.

ಇದನ್ನೂ ಓದಿ : ಪ್ರತಿಪಕ್ಷ ನಾಯಕರಿಗೆ ಎಚ್ಚರಿಕೆ ಸಂದೇಶ: ಹೇಳಿಕೆ ಬದಲಿಸಲು ಅ್ಯಪಲ್‌ ಕಂಪನಿಗೆ ಸರ್ಕಾರದ ಒತ್ತಡ; ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ರಾಜಕೀಯ ಲಾಭಕ್ಕಾಗಿ ದ್ವೇಷವನ್ನು ಪ್ರಚಾರ ಮಾಡುತ್ತಿದ್ದಾರೆ’: ವಿಡಿಯೋ ಸಂದೇಶದಲ್ಲಿ ಮೋದಿ, ಬಿಜೆಪಿ ವಿರುದ್ಧ ಸೋನಿಯಾ...

0
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗರು ದೇಶದಲ್ಲಿ ಸಂಕಷ್ಟದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ, ರಾಜಕೀಯ ಲಾಭಕ್ಕಾಗಿ ದ್ವೇಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಜ್ವಲ ಭವಿಷ್ಯಕ್ಕಾಗಿ ನಾಗರಿಕರು...