ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು ಬಂಧನಕ್ಕೊಳಗಾಗಿದ್ದಾರೆ. ನಿಂದನೆ ಹೇಳಿಕೆ ಹೊರಬಿದ್ದ ನಂತರ ನಿನ್ನೆ ರಾತ್ರಿ ಹೈದರಾಬಾದ್ನಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಪೊಲೀಸರು ಕ್ರಮ ಜರುಗಿಸಲಾಗಿದೆ.
ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಕಾನೂನಿನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೈದರಾಬಾದ್ನ ದಕ್ಷಿಣ ವಲಯದ ಉಪ ಪೊಲೀಸ್ ಆಯುಕ್ತ ಪಿ.ಸಾಯಿ ಚೈತನ್ಯ ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ವಿಡಿಯೊವನ್ನು ಬಿಜೆಪಿ ಶಾಸಕ ರಾಜಾ ಸಿಂಗ್ ಬಿಡುಗಡೆ ಮಾಡಿದ ನಂತರದಲ್ಲಿ ಪ್ರತಿಭಟನೆಗಳು ನಡೆದಿವೆ. ಸೋಮವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರ ಕಚೇರಿ ಎದುರು ಮತ್ತು ಹೈದರಾಬಾದ್ನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ಜರುಗಿವೆ.
Massive protests against BJP MLA T Raja Singh. India Today's Abdul Basheer with more details.#ITVideo | @akshita_n pic.twitter.com/RYU9gZgD3c
— IndiaToday (@IndiaToday) August 23, 2022
ಅವಹೇಳನಕಾರಿ ಹೇಳಿಕೆ ನೀಡಿರುವ ಸಿಂಗ್, ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ನಗರದ ಗೋಶಾಮಹಲ್ನ ಶಾಸಕ ಟಿ ರಾಜಾ ಸಿಂಗ್ ಕಳೆದ ವಾರ ಕಾಮಿಡಿ ಪ್ರೊಗ್ರಾಂಗೆ ಅಡ್ಡಿಪಡಿಸಲು ಯತ್ನಿಸಿದ್ದರು. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲು ಒತ್ತಾಯಿಸಿದ್ದರು. ಸುಮಾರು 50 ಮಂದಿ ಬೆಂಬಲಿಗರೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಅಡ್ಡಿಪಡಿಸಲು ಪ್ರಯತ್ನಿಸಿದ್ದರು. ಪೊಲೀಸರು ಕ್ರಮ ಜರುಗಿಸಿದ ಬಳಿಕ, ಕಾರ್ಯಕ್ರಮ ಸುಗಮವಾಗಿ ನಡೆಯಿತು.
ಫ್ರಿಂಜ್ ಎಲಿಮೆಂಟ್ ಆಗುತ್ತಾರೆಯೇ ಬಿಜೆಪಿ ಶಾಸಕ?
ಪ್ರವಾದಿ ಮುಹಮ್ಮದ್ ಅವರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಪಕ್ಷವು ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿತ್ತು.
“ಇಂತಹ ಜನರನ್ನು ಅಥವಾ ತತ್ವವನ್ನು ಪ್ರಚಾರ ಮಾಡುವುದಿಲ್ಲ” ಎಂದು ಬಿಜೆಪಿ ಹೇಳಿತ್ತು.
“ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ, ಇಲ್ಲಿ ಪ್ರತಿಯೊಂದು ಧರ್ಮವೂ ಅರಳಿವೆ. ಪ್ರವರ್ಧಮಾನಕ್ಕೆ ಬಂದಿವೆ. ಬಿಜೆಪಿಯು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ” ಎಂದು ತಿಳಿಸಿತ್ತು.
“ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವುದನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಬಿಜೆಪಿ ಅಂತಹ ಜನರನ್ನು ಅಥವಾ ತತ್ವವನ್ನು ಪ್ರಚಾರ ಮಾಡುವುದಿಲ್ಲ. ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ತನ್ನ ಆಯ್ಕೆಯ ಯಾವುದೇ ಧರ್ಮವನ್ನು ಆಚರಿಸಲು ಮತ್ತು ಪ್ರತಿ ಧರ್ಮವನ್ನು ಗೌರವಿಸುವ ಹಕ್ಕನ್ನು ನೀಡುತ್ತದೆ” ಎಂದು ಸ್ಪಷ್ಟಪಡಿಸಿತ್ತು.
ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು 15 ಪ್ರಮುಖ ರಾಷ್ಟ್ರಗಳು ಕಟು ಶಬ್ದಗಳಲ್ಲಿ ಖಂಡಿಸಿದ್ದವು. ಇರಾನ್, ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾ, ಓಮನ್, ಯುಎಇ, ಜೋರ್ಡಾನ್, ಅಫ್ಘಾನಿಸ್ತಾನ, ಬಹ್ರೇನ್, ಮಾಲ್ಡೀವ್ಸ್, ಲಿಬಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದವು.
ಇದನ್ನೂ ಓದಿರಿ: ಎಎಪಿ ತೊರೆದರೆ ಸಿಬಿಐ ತನಿಖೆ ನಿಲ್ಲಿಸುತ್ತೇವೆ: ಸಿಸೋಡಿಯಾಗೆ ಬಿಜೆಪಿ ಆಮಿಷ?
ಕತಾರ್, ಇರಾನ್ ಮತ್ತು ಬಹ್ರೇನ್ ದೇಶಗಳು ಭಾರತೀಯ ರಾಯಭಾರಿಯನ್ನು ಕರೆಸಿ, ತಮ್ಮ ವಿರೋಧವನ್ನು ತಿಳಿಸಿದ್ದವು. ಭಾರತ ಸರ್ಕಾರವು ಸಾರ್ವಜನಿಕವಾಗಿ ಈ ಬಗ್ಗೆ ಕ್ಷಮೆಯಾಚನೆ ಮಾಡುವುದನ್ನು ನಿರೀಕ್ಷಿಸುವುದಾಗಿ ಕತಾರ್ ಹೇಳಿತ್ತು. ಜೊತೆಗೆ ಪಕ್ಷದ ವಕ್ತಾರರ ವಿರುದ್ಧ ಬಿಜೆಪಿ ಕೈಗೊಂಡಿರುವ ಕ್ರಮವನ್ನು ಬಹ್ರೇನ್ ಮತ್ತು ಸೌದಿ ಅರೇಬಿಯಾ ಸ್ವಾಗತಿಸಿದ್ದವು.
ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಪ್ರವಾದಿ ನಿಂದನೆ ಮಾಡಿದವರನ್ನು ‘ಪ್ರಿಂಜ್ ಎಲಿಮೆಂಟ್ಸ್’ (ಕೊನೆಯ ಎಳಸುಗಳು) ಎಂದು ಸರ್ಕಾರ ಕರೆದಿತ್ತು. ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದ್ದ ಘಟನೆ ತಾಜಾ ಉದಾಹರಣೆ ನಿಂತಿರುವಾಗ ಮತ್ತೊಮ್ಮೆ ಬಿಜೆಪಿ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಕ್ಷವು ಇವರನ್ನು ‘ಪ್ರಿಂಜ್ ಎಲಿಮೆಂಟ್’ ಎಂದು ಕರೆದು ಕ್ರಮ ಜರುಗಿಸುತ್ತದೆಯೋ ಇಲ್ಲವೋ ಕಾದು ನೋಡಬೇಕು.