ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿಯವರಿಗೆ ಪಂಜಾಬ್ನ ರೈತರೊಬ್ಬರು ಭಾವನಾತ್ಮಕ ಪತ್ರ ಬರೆದಿದ್ದು, ಕೃಷಿ ಕಾಯ್ದೆ ಹಿಂತೆಗೆದುಕೊಳ್ಳಲು ನಿಮ್ಮ ಮಗನಿಗೆ ಹೇಳಿ ಎಂದು ಮನವಿ ಮಾಡಿದ್ದಾರೆ.
ಪಂಜಾಬ್ನ ಫೀರೋಜ್ಪುರ್ನವರಾದ ಹರ್ಪ್ರೀತ್ ಸಿಂಗ್ ಎಂಬುವವರು ಪತ್ರ ಬರೆದವರಾಗಿದ್ದಾರೆ. ಅವರು ಶಿಮ್ಲಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೋದಿ ತಾಯಿಯವರಿಗೆ ಬರೆದ ಪತ್ರದಲ್ಲಿ “ಪ್ರಧಾನಿ ಮೋದಿಯವರು ನಿಮ್ಮ ಮಾತನ್ನು ತೆಗೆದುಹಾಕುವುದಿಲ್ಲ ಎಂಬ ನಂಬಿಕೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ. ಕಳೆದ ಎರಡು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ, ಕೊರೆಯುವ ಚಳಿಯಲ್ಲಿ ಲಕ್ಷಾಂತರ ರೈತರು ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದಾರೆ. ದಯವಿಟ್ಟು ಅವುಗಳನ್ನು ವಾಪಸ್ ಪಡೆಯುವಂತೆ ನಿಮ್ಮ ಮಗನಿಗೆ ಹೇಳುವ ಮೂಲಕ ರೈತರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ.
ಯಾವ ವ್ಯಕ್ತಿಯೂ ಕೂಡ ತನ್ನ ತಾಯಿಯ ಮನವಿಯನ್ನು ನಿರ್ಲಕ್ಷಿಸುವುದಿಲ್ಲ. ಭಾರತದ ಜನರು ತಮ್ಮ ತಾಯಿಯನ್ನು ದೇವರಂತೆ ಕಾಣುತ್ತಾರೆ. “ಪ್ರಿಯ ಅಮ್ಮ, ನಮ್ಮ ಪ್ರಧಾನಿ ನಿಮ್ಮ ಮಾತನ್ನು ತೆಗೆದುಹಾಕುವುದಿಲ್ಲ. ಹಾಗಾಗಿ ದಯವಿಟ್ಟು ರೈತರ ಕಷ್ಟವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ಈ ಕಾಯ್ದೆಗಳು ಹಿಂಪಡೆಯುವಂತೆ ಮಾಡಿ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಪತ್ರವನ್ನು ಆದಷ್ಟು ಬೇಗ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿಯವರಿಗೆ ಕಳಿಸುವುದಾಗಿ ಹರ್ಪ್ರೀತ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಅವರೊಂದಿಗೆ ಕರಣ್ದೀಪ್ ಸಂಧು, ಗುರುಪ್ರೀತ್ ಸಿಂಗ್ರನ್ನು ಪೊಲೀಸರು ಸಿಆರ್ಪಿಸಿ ಸೆಕ್ಷನ್ 107 ಮತ್ತು 151ರ ಅಡಿಯಲ್ಲಿ ಬಂಧಿಲಾಗಿತ್ತು. ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ ಎಂಬ ಆರೋಪ ಅವರ ಮೇಲಿತ್ತು. ಬಿಡುಗಡೆಯಾದ ನಂತರ ಫೀರೋಜ್ಪುರ್ ನಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲಾಗಿತ್ತು.
ಇದನ್ನೂ ಓದಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ಪರೇಡ್ನಲ್ಲಿ ನಾಲ್ವರು ರೈತ ಮುಖಂಡರನ್ನು ಕೊಲ್ಲಲು ಸಂಚು ಆರೋಪ: ಸಿಕ್ಕಿಬಿದ್ದ ಯುವಕ