“ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರವು ಮೌನವಾಗಿದ್ದು, ರೈತರ ಪ್ರತಿಭಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಯೋಜಿಸುತ್ತಿದೆ” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರವೇ ಮುಂದಾಗಬೇಕಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಭಾನುವಾರ ರಾತ್ರಿ ಉತ್ತರಾಖಂಡದ ಉಧಮ್ ಸಿಂಗ್ ನಗರಕ್ಕೆ ತೆರಳುವ ಮೊದಲು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಬಿಜ್ನೋರ್ನ ಅಫ್ಜಲ್ಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಕಳೆದ 15-20 ದಿನಗಳಿಂದ ಸರ್ಕಾರ ಮೌನವಾಗಿರುವುದನ್ನು ಗಮನಿಸಿದರೆ, ಏನೋ ಸಂಭವಿಸಲಿದೆ ಎಂಬುದನ್ನು ಸೂಚಿಸುತ್ತದೆ. ಅದು ರೈತ ಆಂದೋಲನದ ವಿರುದ್ಧ ಕ್ರಮ ತೆಗೆದುಕೊಳ್ಳಲು ಯೋಜಿಸುತ್ತಿದೆ” ಎಂದು ಆರೋಪಿಸಿದರು.
ಆದರೆ, ಪರಿಹಾರ ದೊರೆಯುವವರೆಗೂ ರೈತರು ಹಿಂದೆ ಸರಿಯುವುದಿಲ್ಲ. ರೈತ ತನ್ನ ಬೆಳೆ ಮತ್ತು ಆಂದೋಲನ ಎರಡನ್ನೂ ನೋಡಿಕೊಳ್ಳಲು ಸಿದ್ಧವಾಗಿದ್ದಾನೆ. ಸಮಯ ಬಂದಾಗ ಸರ್ಕಾರ ಮಾತುಕತೆ ನಡೆಸಲಿ ಎಂದು ಟಿಕಾಯತ್ ಹೇಳಿದರು.
ಇದನ್ನೂ ಓದಿ: 50ನೇ ವರ್ಷದಲ್ಲಿಯೂ ಫಿಟ್ನೆಸ್ ತೋರಿಸಿದ ರಾಹುಲ್ ಗಾಂಧಿ: ಪುಷ್-ಅಪ್ ವಿಡಿಯೋ ವೈರಲ್
ಮಾರ್ಚ್ 24 ರವರೆಗೆ ದೇಶದ ಹಲವಾರು ಸ್ಥಳಗಳಲ್ಲಿ “ಕಿಸಾನ್ ಮಹಾಪಂಚಾಯತ್” ನಡೆಯಲಿದೆ ಎಂದು ಟಿಕಾಯತ್ ಮಾಹಿತಿ ನೀಡಿದರು.
ಕಳೆದ 95 ದಿನಗಳಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಹೋರಾಟ ಮಾಡುತ್ತಿರುವವರು ರೈತರಲ್ಲ; ಖಲೀಸ್ತಾನಿಗಳು, ಭಯೋತ್ಪಾದಕರು, ನಕ್ಸಲರು ಎಂದು ಮುಂತಾಗಿ ಬಿಂಬಿಸಿ ಕೆಲವು ಮಾಧ್ಯಮಗಳಿಂದ ವರದಿ ಮಾಡಿಸಲಾಗುತ್ತಿದೆ. ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ಇದಾವುದಕ್ಕೂ ಮಣಿಯದ ರೈತರು ತಮ್ಮ ಬೇಡಿಕೆಯೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ.
ಇದನ್ನೂ ಓದಿ: ಮಾನಹಾನಿ ಪ್ರಕರಣ: ವಿಚಾರಣೆಗೆ ಹಾಜರಾಗದ ಕಂಗನಾ ರಣಾವತ್ಗೆ ವಾರೆಂಟ್!