ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಸಂಪುಟದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿದ ಒಂದು ದಿನದ ನಂತರ, ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಸಮಾಜವಾದಿ ಪಕ್ಷದ ಶಾಸಕ ಹರಿ ಓಂ ಯಾದವ್ ಮತ್ತು ಎಸ್ಪಿ ನಾಯಕ ಮತ್ತು ಮಾಜಿ ಶಾಸಕ ಧರಂಪಾಲ್ ಸಿಂಗ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ದೇಶದ ಗಮನ ಉತ್ತರ ಪ್ರದೇಶದ ಕಡೆಗೆ ನೆಟ್ಟಿದೆ. ಈ ವೇಳೆಗಾಗಲೆ ಯುಪಿ ಸಂಪುಟದ ಇಬ್ಬರು ಸಚಿವರು ಸೇರಿದಂತೆ ಐವರು ಬಿಜೆಪಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಯುಪಿ ಬಿಜೆಪಿಗೆ ಎಸ್ಪಿ ಮತ್ತು ಕಾಂಗ್ರೆಸ್ನ ಶಾಸಕರಿಬ್ಬರು ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದ್ದಾರೆ.
ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ ಸ್ವತಂತ್ರ ದೇವ್ ಸಿಂಗ್, ರಾಜ್ಯ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಮತ್ತು ಪಕ್ಷದ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನಿಲ್ ಬಲುನಿ ಅವರು ಪಕ್ಷಾಂತರಿ ಶಾಸಕರನ್ನು ಸ್ವಾಗತಿಸಿದ್ದಾರೆ.
ಬಿಜೆಪಿಯ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದ್ದು, ಇದನ್ನು ಕಂಡ ಮೂವರು ನಾಯಕರು ಪಕ್ಷ ಸೇರಲು ನಿರ್ಧರಿಸಿದ್ದಾರೆ ಎಂದು ಸ್ವತಂತ್ರ ದೇವ್ ಸಿಂಗ್ ಪ್ರತಿಪಾದಿಸಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ನಾಯಕರು ಬಿಜೆಪಿಗೆ ತಮ್ಮನ್ನು ಸಮರ್ಪಿಸಿಕೊಂಡು ಅದರ ಸಿದ್ಧಾಂತಕ್ಕಾಗಿ ಶ್ರಮಿಸುವ ಮೂಲಕ ಪಕ್ಷವನ್ನು ಬಲಪಡಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 10 ರಿಂದ ಆರು ಹಂತಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಚುನಾವಣೆ ಘೋಷಿಸಿದಾಗಿನಿಂದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ನಿರತವಾಗಿವೆ. ನಾಯಕರು ತಮ್ಮ ಟಿಕೆಟ್ಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದೇ ದಿನದಲ್ಲಿ ಅರೆಸ್ಟ್ ವಾರೆಂಟ್!