ಈಗಾಗಲೇ ನಿಮಗೆ ಗೊತ್ತಿರುವಂತೆ ಎಸ್.ಎಂ ಕೃಷ್ಣರ ಅಳಿಯ, ಕಾಫಿ ಡೇ ಮಾಲೀಕ ಮತ್ತು ಈ ದೇಶದ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ವಿ.ಜಿ ಸಿದ್ಧಾರ್ಥ ಅವರು ನಾಪತ್ತೆ ಪ್ರಕರಣ ಸಾಕಷ್ಟು ಸುದ್ದಿಯಾಗಿದೆ. ಚಿಕ್ಕಮಗಳೂರಿನ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದ ಸಿದ್ಧಾರ್ಥ್ ನಂತರದಲ್ಲಿ ಎಸ್.ಎಂ ಕೃಷ್ಣರ ಅಳಿಯನಾಗಿದ್ದು, ಕಾಫಿ ಡೇ ಬ್ರಾಂಡ್ ನ ಎಬಿಸಿ ಕಂಪನಿಯನ್ನು ಶುರು ಮಾಡಿದ್ದು, ಮತ್ತು ಈಗ ಕಾಫಿಯಿಂದ ಆಚೆಗೆ ತನ್ನ ಸಾಮ್ರಾಜ್ಯವನ್ನು ಹಲವು ರೀತಿಯಲ್ಲಿ ವಿಸ್ತರಿಸಿಕೊಂಡಿದ್ದು, ದಕ್ಷಿಣ ಅಮೇರಿಕಾದ ಕಾಡುಗಳ ಒಡೆಯನಾಗಿದ್ದು ಇವೆಲ್ಲವುಗಳು ಕೂಡ ದೊಡ್ಡ ಇತಿಹಾಸ.
ಇಂತಹ ಸಿದ್ಧಾರ್ಥ್ ಯಾವಾಗಲೂ ತೆರೆಮರೆಯಲ್ಲಿಯೇ ಇರುತ್ತಿದ್ದು ಹಲವಾರು ರಾಜಕಾರಣಿಗಳೊಂದಿಗೆ ಸಖ್ಯವೂ ಇದ್ದಿತು. ಸಿದ್ಧಾರ್ಥ್ ರವರ ಉದ್ದಿಮಿಗಳ ಕಾರಣಕ್ಕಾಗಿಯೇ ಎಸ್.ಎಂ ಕೃಷ್ಣರವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರು ಎಂಬ ಗುಲ್ಲು ಸಹ ಎದ್ದಿತ್ತು. ಆ ಸಿದ್ಧಾರ್ಥ್ ರವರು ನಿನ್ನೆ ಸಂಜೆಯಿಂದ ಮಂಗಳೂರಿನಲ್ಲಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಮೂಲಗಳು ಇನ್ನಿತರರನ್ನು ಸಂಪರ್ಕಿಸಿದಾಗ ಗೊತ್ತಾದುದ್ದು ಹಲವಾರು ಸಂದೇಹಗಳನ್ನು ಹುಟ್ಟಿಸುತ್ತಿದೆ.
ಮೂಲಗಳ ಪ್ರಕಾರ ಮಂಗಳೂರಿನ ಜಪ್ಪಿನಮೊಗರು ಬಳಿ ಇರುವ ನೇತ್ರಾವತಿ ಸೇತುವೆಯ ಬಳಿ ಸಿದ್ಧಾರ್ಥ್ ತನ್ನ ಡ್ರೈವರ್ ಗೆ ಕಾರು ನಿಲ್ಲಿಸಲು ಹೇಳಿ ಅಲ್ಲಿ ಸೇತುವೆಯ ಬಳಿ ಹತ್ತುವುದು ಇಳಿಯುವುದು ಮಾಡುತ್ತಿದ್ದರು. ಮಾಧ್ಯಮಗಳಲ್ಲಿ ಬಂದಿರುವುದಕ್ಕೆ ವ್ಯತಿರಿಕ್ತವಾಗಿ ಅವರು ಕಣ್ಮರೆಯಾದ ಸಂದರ್ಭದಲ್ಲಿಯೂ ಸಹ ಕಾರು ಡ್ರೈವರ್ ಅವರನ್ನು ನೋಡುತ್ತಲೇ ಇದ್ದರು. ಆಗ ನೋಡನೋಡುತ್ತಿದ್ದಂತೆಯೇ ಸೇತುವೆಯ ಬಳಿ ಸಿದ್ಧಾರ್ಥ್ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿದ್ದಾರೆ. ಈ ಕಾರಣದಿಂದಾಗ ಅವರು ನೇತ್ರಾವತಿ ನದಿಗೆ ಬಿದ್ದಿರಬಹುದಾಗಿದ್ದು ಇದು ಆತ್ಮಹತ್ಯೆಯೇ, ಅಥವಾ ಆಕಸ್ಮಿಕವೇ? ಏನು ಎಂಬುದು ಖಚಿತವಾಗಿಲ್ಲ. ಆದರೆ ಬೆಂಗಳೂರಿನಿಂದ ಕಾರಿನಲ್ಲಿ (ಕೆಎ-03, ಎನ್.ಸಿ 2592) ಅಲ್ಲಿಗೆ ಪ್ರಯಾಣ ಮಾಡಿರುವುದು, ಅಲ್ಲಿ ನೇತ್ರಾವತಿ ಬಳಿ ಕಾರು ನಿಲ್ಲಿಸುವಂತೆ ಹೇಳಿದ್ದು, ಮತ್ತು ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿರುವುದು ಇವೆಲ್ಲವೂ ಇದು ಬಹುತೇಕ ಆತ್ಮಹತ್ಯೆಯೇ ಆಗಿರುವ ಸಾಧ್ಯತೆಯಿದೆ ಎಂಬ ಅನುಮಾನಗಳೀಗೆ ದಾರಿ ಮಾಡಿಕೊಟ್ಟಿದೆ.
ತನ್ನ ಉದ್ದಿಮೆಯಲ್ಲಿ ಬಂದ ನೂರಾರು ಸವಾಲುಗಳನ್ನು ಎದುರಿಸಿ ಬೃಹತ್ ಆಗಿ ಬೆಳೆದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದಕ್ಕೆ ಹೆಚ್ಚು ತರ್ಕ ಕಾಣುತ್ತಿಲ್ಲ. ಆದರೆ ಯಾವುದೇ ವ್ಯಕ್ತಿಯ ವ್ಯಕ್ತಿಗತ ತುಮುಲಗಳು, ಇಂತಹ ಉದ್ದಿಮೆಗಳಲ್ಲಿ ಬರಬಹುದಾದ ನೂರೆಂಟು ಸಮಸ್ಯೆಗಳು ಇವೆಲ್ಲವೂ ಕೂಡ ಇದರ ಕುರಿತು ಅನುಮಾನಗಳು ಬರುವುದು ಸಹಜ. ಇದರಾಚೆಗೆ ಅಪಹರಣ ಆಗಿರುವ ಕುರಿತ ಶಂಕೆಯನ್ನು ಹರಿಯಬಿಟ್ಟಿವೆ. ಆದರೆ ಸದ್ಯದಲ್ಲಿ ಹೇಳಬಹುದಾದುಷ್ಟು ಇಷ್ಟೇ. ನೇತ್ರಾವತಿ ಸೇತುವೆಯ ಮೇಲೆ ಇದ್ದಕ್ಕಿದ್ದ ಹಾಗೆ ಸಿದ್ಧಾರ್ಥ್ ನಾಪತ್ತೆ ಆಗಿರುವ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿದೆ. ಬಹುಶಃ ಇಂದು ಅಥವಾ ನಾಳೆಯೊಳಗೆ ಸುಳಿವು ಸಿಗಬಹುದು.