ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿ ಮನೆ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಹೊಸದಿಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ವಿಧ್ವಂಸಕ ಕೃತ್ಯ ನಡೆಸಿರುವ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮತ್ತು ಸುಧಾರಿತ ಭದ್ರತೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ.
“ಇದು ಸದನದ ನಿಂದನೆ ಮತ್ತು ಸಂಸತ್ತಿನ ಸ್ವಾತಂತ್ರ್ಯ ಮತ್ತು ಘನತೆಯ ಮೇಲಿನ ದಾಳಿ. ಸದನದ ಉಸ್ತುವಾರಿಯಾಗಿ, ಸದನ, ಅದರ ಸದಸ್ಯರು ಮತ್ತು ಅಧಿಕಾರಿಗಳನ್ನು ರಕ್ಷಿಸುವುದು ನಿಮ್ಮ ಕಚೇರಿಯ ಕರ್ತವ್ಯವಾಗಿದೆ ” ಎಂದು ಓವೈಸಿ ಬರೆದಿದ್ದಾರೆ.
ಇದನ್ನೂ ಓದಿ: ಹಿಂದುತ್ವ ವಿಚಾರ: RSS ಮುಖ್ಯಸ್ಥ ಮೋಹನ್ ಭಾಗವತ್ಗೆ ಓವೈಸಿ ತಿರುಗೇಟು
Wrote to @loksabhaspeaker seeking action against the vandalism of my residence & attack on my staff. pic.twitter.com/NC674kepPT
— Asaduddin Owaisi (@asadowaisi) September 24, 2021
“ಇದು ಸಂಸತ್ತಿನ ಸದಸ್ಯರ ಸಾಮೂಹಿಕ ಹಕ್ಕುಗಳ ಮೇಲಿನ ದಾಳಿ. ನನ್ನ ಉಸ್ತುವಾರಿ ಸಿಬ್ಬಂದಿ ರಾಜು ಲಾಲ್ ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅವರು ನನ್ನನ್ನು ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾರೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ಸಮಿತಿಯನ್ನು ರಚಿಸುವಂತೆ ಕೋರಿದ್ದಾರೆ. “ಇದು ನನ್ನ ನಿವಾಸದ ಮೇಲೆ ನಡೆದ ಮೊದಲ ವಿಧ್ವಂಸಕ ಕೃತ್ಯವಲ್ಲ. ಹಿಂದಿನ ದಾಳಿಗಳಲ್ಲಿಯೂ ಕಾನೂನು ಸುವ್ಯವಸ್ಥೆಯ ಬಗ್ಗೆ ಹೇಳಲು ಕೂಡ ಸಾಧ್ಯವಿಲ್ಲ. ಆದ್ದರಿಂದ, ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ನಿಮ್ಮ ಮಧ್ಯಸ್ಥಿಕೆಯನ್ನು ನಾನು ಬಯಸುತ್ತೇನೆ” ಎಂದಿದ್ದಾರೆ.
ದೆಹಲಿಯ ಹೈ-ಸೆಕ್ಯುರಿಟಿ ಅಶೋಕ ರಸ್ತೆ ಪ್ರದೇಶದಲ್ಲಿರುವ ಓವೈಸಿ ಅವರ ಮನೆಯ ಮೇಲೆ ಮಂಗಳವಾರ ಹಿಂದೂ ಸೇನೆಯ ಒಂದು ಗುಂಪು ದಾಳಿ ನಡೆಸಿತ್ತು. ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಹಾನಿಗೊಳಿಸಿ, ನಾಮಫಲಕವನ್ನು ಮುರಿದು ಹಾಕಿದ್ದರು. ಪ್ರರಣದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ್ದ ಸಂಸದ ಅಸಾದುದ್ದೀನ್ ಓವೈಸಿ “ಕಳೆದ 40 ವರ್ಷಗಳಿಂದ ಮನೆಯನ್ನು ನೊಡಿಕೊಳ್ಳುತ್ತಿರುವ ರಾಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಗುಂಪು ಕೋಮು ಘೋಷಣೆಗಳನ್ನು ಕೂಗಿ, ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ರಾಜು ಅವರ ಮೊಮ್ಮಕ್ಕಳು ಈಗ ಭಯದಿಂದ ಬದುಕುತ್ತಿದ್ದಾರೆ. ರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ಕ್ರಮ ಕೈಗೊಳ್ಳಲಾಗುವುದು ಎಂದು ಭಾವಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ: ಐವರು ಹಿಂದೂ ಸೇನೆ ಕಾರ್ಯಕರ್ತರ ಬಂಧನ