ಧಾರ್ಮಿಕ ಕ್ಷೇತ್ರ ವಾರಣಾಸಿಯಲ್ಲಿ ಗಂಗಾ ನದಿಯ ಘಾಟ್ಗಳು ಮತ್ತು ನದಿಯುದ್ದಕ್ಕೂ ಇರುವ ದೇವಾಲಯಗಳಿಂದ ಹಿಂದೂಯೇತರರು ದೂರವಿರುವಂತೆ, ಪ್ರವೇಶ ನಿಷೇಧಿಸಲಾಗಿದೆ ಎಂದು ಹೇಳುವ ಪೋಸ್ಟರ್ಗಳು ವಾರಣಾಸಿಯಲ್ಲಿ ಕಾಣಿಸಿಕೊಂಡಿವೆ.
ಬಲಪಂಥೀಯ ಸಂಘಟನೆಗಳು ನಗರದಲ್ಲಿ ಈ ಪೋಸ್ಟರ್ಗಳನ್ನು ಹಾಕಿದ್ದಾರೆ ಎಂದು ಶಂಕಿಸಲಾಗಿದ್ದು, ಪೊಲೀಸರು ಅವುಗಳನ್ನು ತೆರವುಗೊಳಿಸುತ್ತಿದ್ದಾರೆ. ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಕಾಶಿಯಲ್ಲಿ ಗಂಗಾ ಮಾತೆಯ ಉದ್ದಕ್ಕೂ ಇರುವ ಘಾಟ್ಗಳು ಮತ್ತು ದೇವಾಲಯಗಳು ಸನಾತನ ಧರ್ಮ, ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಯ ಸಂಕೇತಗಳಾಗಿವೆ. ಸನಾತನ ಧರ್ಮದಲ್ಲಿ ಭಕ್ತಿ ಮತ್ತು ನಂಬಿಕೆ ಇರುವವರಿಗೆ ಸ್ವಾಗತ. ಇಲ್ಲದಿದ್ದರೆ, ಇದು ಪಿಕ್ನಿಕ್ ಸ್ಪಾಟ್ ಅಲ್ಲ” ಎಂದು ಹಿಂದಿಯಲ್ಲಿ ಬರೆದ ಪೋಸ್ಟರ್ಗಳು ನಗರದುದ್ದಕ್ಕೂ ಕಾಣಿಸಿಕೊಂಡಿವೆ.
ಇದನ್ನೂ ಓದಿ: ದ್ವೇಷ ಭಾಷಣ, ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಮಾತನಾಡುವಂತೆ ಪ್ರಧಾನಿ ಮೋದಿಗೆ ಐಐಎಂ ವಿದ್ಯಾರ್ಥಿಗಳು, ಅಧ್ಯಾಪಕರ ಪತ್ರ
ಪೋಸ್ಟರ್ನಲ್ಲಿ “ಇದು ವಿನಂತಿಯಲ್ಲ, ಎಚ್ಚರಿಕೆ” ಎಂದು ಬರೆಯಲಾಗಿದ್ದು, ವಿಶ್ವ ಹಿಂದೂ ಪರಿಷತ್ ಮತ್ತು ಬವಜರಂಗದಳ ಹೆಸರನ್ನು ಸೇರಿಸಲಾಗಿದೆ. ಈ ಪೋಸ್ಟರ್ಗಳ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಕಾಣಿಸಿಕೊಂಡಿವೆ.
“ಈ ಘಟನೆ ಕುರಿತು ಸ್ಥಳೀಯ ಭೇಲುಪುರ ಪೊಲೀಸ್ ಠಾಣೆಯಿಂದ ತನಿಖೆ ನಡೆಸಲಾಗುತ್ತಿದೆ. ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜನರನ್ನು ಗುರುತಿಸಲಾಗುತ್ತಿದೆ. ಇಲ್ಲಿಯವರೆಗೆ, ಪೊಲೀಸರಿಗೆ ಯಾವುದೇ ಲಿಖಿತ ದೂರು ಬಂದಿಲ್ಲ. ಕೆಲವು ಸ್ಥಳೀಯ ಗುಂಪುಗಳು ಅದನ್ನು ಹೈಲೈಟ್ ಮಾಡಿದ ನಂತರ ಪೊಲೀಸರು ಜನರ ಸಹಾಯದಿಂದ ಪೋಸ್ಟರ್ಗಳನ್ನು ತೆಗೆದುಹಾಕುತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಹಿಂದೂಯೇತರರು ಘಾಟ್ಗಳ ಶುದ್ಧತೆಯನ್ನು ಉಲ್ಲಂಘಿಸುತ್ತಾರೆ. ಅದಕ್ಕಾಗಿಯೇ ಅವರಿಗೆ ಈ ಎಚ್ಚರಿಕೆ ನೀಡಲಾಗಿದೆ. ಇವರು ಘಾಟ್ಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವಿಸುತ್ತಾರೆ” ಎಂದು ಬಜರಂಗದಳದ ಕಾಶಿ ಮಹಾನಗರದ ಸಂಯೋಜಕ ನಿಖಿಲ್ ತ್ರಿಪಾಠಿ ರುದ್ರ ಅವರನ್ನು ಪಿಟಿಐ ಉಲ್ಲೇಖಿಸಿದೆ.