Homeದಿಟನಾಗರಫ್ಯಾಕ್ಟ್‌‌ಚೆಕ್: ಪ್ರತಿಭಟನಾ ಮೆರವಣಿಗೆಯ ವಿಡಿಯೊವನ್ನು, ‘RSS ದಾಳಿಗೆ ಹೆದರಿ ವಲಸೆ ಹೋಗುತ್ತಿರುವ ಮುಸ್ಲಿಮರು’ ಎಂದು ವೈರಲ್‌

ಫ್ಯಾಕ್ಟ್‌‌ಚೆಕ್: ಪ್ರತಿಭಟನಾ ಮೆರವಣಿಗೆಯ ವಿಡಿಯೊವನ್ನು, ‘RSS ದಾಳಿಗೆ ಹೆದರಿ ವಲಸೆ ಹೋಗುತ್ತಿರುವ ಮುಸ್ಲಿಮರು’ ಎಂದು ವೈರಲ್‌

- Advertisement -
- Advertisement -

ನಾಸಿಕ್‌ನ ಮುಸ್ಲಿಮರನ್ನು ಆರೆಸ್ಸೆಸ್‌‌ನವರು ಹೊರ ಹಾಕುತ್ತಿದ್ದಾರೆ ಎಂಬ ಸಂದೇಶದೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೊದಲ್ಲಿ ಮಾತನಾಡುತ್ತಿರುವ ವ್ಯಕ್ತಿ, ‘‘ಆರೆಸ್ಸೆಸ್‌ನ ಕಾರ್ಯಕರ್ತರು ದಾಳಿ ಮಾಡಿರುವುದರಿಂದ ಊರಿನ ಮುಸ್ಲಿಮರು ವಲಸೆ ಹೋಗುತ್ತಿದ್ದಾರೆ. ಮುಸ್ಲಿಮರು ಮತ್ತು ಮಾಧ್ಯಮಗಳು ನಮಗೆ ಸಹಾಯ ಮಾಡಬೇಕು’’ ಎಂದು ವಿನಂತಿಸುತ್ತಾರೆ.

ಹೆಚ್ಚಾಗಿ ಈ ವಿಡಿಯೊ ವಾಟ್ಸಪ್‌‌‌ನಲ್ಲಿ ಹರಿದಾಡುತ್ತಿದೆ. “ನಾಸಿಕ್‌ನಲ್ಲಿ ಮುಸ್ಲಿಮರನ್ನು ಗ್ರಾಮದಿಂದ ಹೊರಹಾಕುತ್ತಿರುವ ಆರ್‌ಎಸ್‌ಎಸ್ ಭಯೋತ್ಪಾದಕರು. ನಿಮ್ಮ ಮನೆ ಬಾಗಿಲಿಗೂ ಆರ್‌ಎಸ್‌ಎಸ್‌ ಮತ್ತು ಸಂಘಪರಿವಾರದ ಗೂಂಡಾಗಳು ನುಗ್ಗುವ ಮುನ್ನ ಪ್ರತಿರೋಧಕ್ಕೆ ಸಿದ್ಧರಾಗಿ” ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊವನ್ನು ವಾಟ್ಸಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ವಿದ್ಯಾರ್ಥಿನಿ ಸಾವಿನ ಬಗ್ಗೆ ಸುಳ್ಳು ಬರೆದು ಕೋಮುದ್ವೇಷ ಹರಡುತ್ತಿರುವ ‘ಪೋಸ್ಟ್‌ ಕಾರ್ಡ್’!

ವಾಸ್ತವದಲ್ಲಿ, ವಿಡಿಯೊವನ್ನು ಗಮನವಿಟ್ಟು ಕೇಳಿಸಿಕೊಂಡರೆ ಅದರಲ್ಲಿ ಮಾತನಾಡುತ್ತಿರುವ ವ್ಯಕ್ತಿಯು ತನ್ನ ಹೆಸರು ‘ನಾಸಿರ್‌ ಶೇಕ್‌’ ಎಂದು ಹೇಳುತ್ತಿರುವುದು ಕೇಳುತ್ತದೆ. ಆದರೆ ಈ ವಿಡಿಯೊವನ್ನು ವೈರಲ್ ಮಾಡಿರುವವರು ಮತ್ತು ಇದರ ಬಗ್ಗೆ ತಪ್ಪಾದ ಸಂದೇಶ ಬರೆದವರು ಇದನ್ನು ಸರಿಯಾಗಿ ಕೇಳಿಸಿಕೊಳ್ಳದೆ, ಅದನ್ನು ‘ನಾಸಿಕ್‌’ ಎಂದು ಗ್ರಹಿಸಿ, ‘ನಾಸಿಕ್ ಮುಸ್ಲಿಮರು ಸಂಕಷ್ಟದಲ್ಲಿದ್ದಾರೆ’ ಎಂದು ವೈರಲ್ ಮಾಡಿದ್ದಾರೆ.

ವೈರಲ್ ವಿಡಿಯೊ

ವೈರಲ್ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಮಾತನಾಡುತ್ತ  ಹೀಗೆ ಹೇಳುತ್ತಾರೆ: “ನಾನು ನಾಸಿರ್‌ ಶೇಕ್ , ಇಲ್ಲಿ ನೋಡಿ ಇಡೀ ಫಿರಾನಾ ಗ್ರಾಮವೇ ಭಯದಿಂದ ವಲಸೆ ಹೋಗ್ತಿದೆ. ಗ್ರಾಮದಲ್ಲಿರುವ ಒಂದು ದರ್ಗದ ಬಗ್ಗೆ ಮಾತಾಡ್ತಿದ್ದೀನಿ, ಇಲ್ಲಿ ಸುಮಾರು 300 ರಿಂದ 400 ಜನ RSS ಕಾರ್ಯಕರ್ತರು ಫಿರಾನ ಗ್ರಾಮದ ದರ್ಗಾ ವಿಚಾರವಾಗಿ ಅಲ್ಲಿಯ ಮುಸಲ್ಮಾನರ ಮೇಲೆ ದಾಳಿ ನಡೆಸಲು ಮುಂದಾದಾಗ ಗ್ರಾಮದ ಮುಸ್ಲಿಮರು ಹೆದರಿ ಊರನ್ನು ತೊರೆದು ಹೊರಹೋಗುತ್ತಿದ್ದಾರೆ. ನಾನು ಇಡೀ ಗುಜರಾತಿನ ನಾಗರಿಕರಿಗೆ ಮನವಿ ಮಾಡುತ್ತ ನಿಮ್ಮಲ್ಲಿ ಸಹಾಯ ಬೇಡುತ್ತಿದ್ದೇನೆ. ದಯಮಾಡಿ ನೀವು ನಮಗೆ ಸಹಾಯ ಮಾಡಿ” ಎಂದು ಹೇಳುತ್ತ ಈ ವಿಡಿಯೊವನ್ನು ಎಲ್ಲರೂ ಶೇರ್ ಮಾಡಿ ಎಂದು ಮನವಿ ಮಾಡುತ್ತಾರೆ.

ಫ್ಯಾಕ್ಟ್ ಚೆಕ್:

ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುವಂತೆ ‘ನಾನುಗೌರಿ.ಕಾಂ’ಗೆ ಕೋರಿಕೆಗಳು ಬಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೊದ ಸ್ಕ್ರೀನ್‌ಶಾಟ್  ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್  ಆದ ವಿಡಿಯೊ ಕೆಲವು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಶೋಧ ನಡೆಸಿದಾಗ ಘಟನೆಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರವಾಗಿರುವ ವರದಿಗಳು ಲಭ್ಯವಾಗಿವೆ.

ವರದಿಗಳ ಪ್ರಕಾರ ಈ ಘಟನೆಯು ಗುಜರಾತಿನಲ್ಲಿ ನಡೆದಿದೆ. ಅಹಮದಾಬಾದ್‌ನಿಂದ 20 ಕಿಮೀ ದೂರದಲ್ಲಿರುವ ಪಿರಾನ್ಹಾ ಎಂಬ ಗ್ರಾಮದಲ್ಲಿ ಒಂದು ದರ್ಗಾ, ಮಸೀದಿ ಮತ್ತು  ಸ್ಮಶಾನ ಇದ್ದು, ಇದೀಗ ಈ ಸ್ಥಳದಲ್ಲಿ ವಿವಾದ ಏರ್ಪಟ್ಟಿದೆ. ಪೀರ್ ಇಮಾಮ್ ಶಾ ದರ್ಗಾ ಮತ್ತು ಮಸೀದಿ ನಡುವೆ ಗೋಡೆ ನಿರ್ಮಾಣ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಗೋಡೆ ನಿರ್ಮಾಣ ಮಾಡಬಾರದು ಎಂದು ಪಿರಾನ್ಹಾ ಗ್ರಾಮದ ನಿವಾಸಿಗಳು ಪ್ರತಿಭಟನೆ ಮಾಡಿದ್ದಾರೆ. 13 ವರ್ಷದ ಹಳೆಯದಾದ ಬೇಲಿ ತೆರವು ಮಾಡಿ ಅದೇ ಜಾಗದಲ್ಲಿ ಕಾಂಕ್ರೀಟ್ ಗೋಡೆ ನಿರ್ಮಾಣ ಮಾಡಲು ತಯಾರಿ ನಡೆಸಲಾಗಿತ್ತು. ಗೋಡೆ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು.

ಘಟನೆಗೆ ಸಂಬಂಧಿಸಿದ ವರದಿಯನ್ನು Indian express ಮತ್ತು  Times of Indiaನಲ್ಲಿ ನೋಡಬಹುದು.

ಇದನ್ನೂ ಓದಿ: ಮೋದಿ ಭಾಷಣದ ಅಡಚಣೆಗೆ ಟೆಲಿಫ್ರಾಮ್ಟರ್‌ ಕಾರಣವಲ್ಲ: ಆಲ್ಟ್‌ ನ್ಯೂಸ್‌ ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಗೋಡೆ ನಿರ್ಮಾಣದ ವಿರೋದಕ್ಕೆ ಕಾರಣ ಏನು?

ಒಂದೇ ಜಾಗಕ್ಕೆ ಹೊಂದಿಕೊಂಡಂತೆ ದರ್ಗಾ, ಮಸೀದಿ ಮತ್ತು ಸ್ಮಶಾನವಿದ್ದು, ದರ್ಗಾದಿಂದ ಮಸೀದಿ ಹಾಗೂ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗೋಡೆಯ ನಿರ್ಮಾಣದಿಂದ ಆವರಣದಲ್ಲಿರುವ ಮಸೀದಿ ಮತ್ತು ಸ್ಮಶಾನದಿಂದ ದರ್ಗಾಕ್ಕೆ ಇರುವ ಪ್ರವೇಶ ದ್ವಾರವನ್ನು ಮುಚ್ಚಿದಂತಾಗುತ್ತದೆ ಎಂದು ಆರೋಪಿಸಿ ಪಿರಾನಾ ಗ್ರಾಮದ ನಿವಾಸಿಗಳು, ಹೆಚ್ಚಾಗಿ ಸೈಯದ್ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಸ್ಲಾಲಿ ಪೊಲೀಸರು 64 ಮಹಿಳೆಯರು ಸೇರಿದಂತೆ ಒಟ್ಟು 133 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಗೋಡೆ ನಿರ್ಮಾಣ ವಿರೋಧಿಸಿ ಮುಸ್ಲಿಂ ಸಮುದಾಯದವರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ನಾಸಿರ್ ಶೇಕ್ ಎಂಬ ವ್ಯಕ್ತಿಯು ಮೆರವಣಿಗೆಯ ದೃಶ್ಯಗಳನ್ನು ಸೆರೆಹಿಡಿದು ಪ್ರತಿಭಟನಾ ಮರೆವಣಿಗೆಯನ್ನು ಸಾಮೂಹಿಕ ವಲಸೆ ಎಂದು ಹೇಳಿ ವಿಡಿಯೊವನ್ನು ಮಾಡಿದ್ದಾರೆ. ಆ ವಿಡಿಯೊದಲ್ಲಿ, “RSS ಕಾರ್ಯಕರ್ತರಿಂದ ಮುಸ್ಲಿಂ ಸಮುದಾಯದವರು ಗ್ರಾಮ ತೊರೆದು ವಲಸೆ ಹೋಗುತ್ತಿದ್ದಾರೆ” ಎಂದು ತಪ್ಪು ಹೇಳಿಕೆ ನೀಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಹಮದಾಬಾದ್‌ನ ಪಿರಾನಾ ಗ್ರಾಮದಲ್ಲಿ ಸಾಮೂಹಿಕ ವಲಸೆಯ ಕುರಿತು ನಕಲಿ ಟ್ವೀಟ್ ಆತಂಕ ಮೂಡಿಸಿತ್ತು. ಅಲ್ಲಿ ಮಾತನಾಡಿರುವ ವ್ಯಕ್ತಿಯು ‘ಹಿಂದೂ ಭಯೋತ್ಪಾದಕರಿಂದಾಗಿ ಮುಸ್ಲಿಮರು ವಲಸೆ ಹೋಗುತ್ತಿದ್ದಾರೆ’ ಎಂದು ಹೇಳಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು.

ಇದರ ನಂತರ, ವೈರಲ್ ವಿಡಿಯೊದಲ್ಲಿ ನಾಸಿರ್ ಶೇಕ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, “ಕೋಮು ಸೌಹಾರ್ದತೆಗೆ ದಕ್ಕೆ ತರುವ ಹೇಳಿಕೆ” ಎಂದು ಪರಿಗಣಿಸಿ ಆತನನ್ನು ಬಂಧಿಸಿದ್ದರು. ನಂತರ ಆ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ.  ಕ್ಷಮೆಯಾಚಿಸುವ ವೀಡಿಯೊವನ್ನು ಕೆಲವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊದಲ್ಲಿ ತಾನು ಘಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದನ್ನು ನಾಸಿರ್‌ ಶೇಕ್ ಒಪ್ಪಿಕೊಂಡಿದ್ದಾರೆ. ನಾಸಿರ್‌ ಶೇಕ್ ನನ್ನು ಪೊಲೀಸರು ಬಂಧಿಸಿದ ನಂತರ ಕ್ಷಮೆ ಕೇಳುತ್ತಿರುವ ವೀಡಿಯೋವನ್ನು ಕೆಳಗೆ ನೋಡಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಈ ಯೋಗಿ ಹಿಮಾಲಯದವರೂ ಅಲ್ಲ, ಅವರ ಮೈಮೇಲೆ ಇರುವುದು ಹಿಮವೂ ಅಲ್ಲ!

ಇಷ್ಟೇ ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಇಮಾಮ್ ಶಾಯಿ ಸದಾತ್ ಕಮಿಟಿಯು ಪತ್ರಿಕಾ ಹೇಳಿಕೆಯನ್ನು ಕೂಡಾ ಬಿಡುಗಡೆ ಮಾಡಿದೆ. ಅದರಲ್ಲಿ, “ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಯದ್ ಟ್ರಸ್ಟ್ ಮತ್ತು ಸತ್ಪಂಥಿ ಟ್ರಸ್ಟ್ ನಡುವೆ ವ್ಯಾಜ್ಯ ಇದ್ದು ಇದನ್ನು ಹಿಂದೂ ಮುಸ್ಲಿಂ ಘರ್ಷಣೆ ಎಂದು ಬಿಂಬಿಸುವುದು ಬೇಡ. ಪಿರಾನ ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಇದ್ದೇವೆ. ಸುಳ್ಳು ಸುದ್ದಿಗಳನ್ನು ಹರಡಬೇಡಿ” ಎಂದು ವಿನಂತಿಸಿದೆ.

ಒಟ್ಟಾರೆಯಾಗಿ ವೈರಲ್ ವಿಡಿಯೊದಲ್ಲಿ ಹೇಳಲಾಗಿರುವಂತೆ, RSS ಮತ್ತು ಸಂಘಪರಿವಾದ ಭಯೋತ್ಪಾಧಕ ಗೂಂಡಾಗಳಿಂದ ಪಿರಾನ ಗ್ರಾಮದವರನ್ನು ರಕ್ಷಿಸಿ ಎಂದು ಹೇಳಿರುವ ಈ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ. ಘಟನೆಯು ದರ್ಗಾ ಮತ್ತು ಮಸೀದಿ ನಡುವೆ ಗೋಡೆ ನಿರ್ಮಾಣವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಾಗಿದೆ.

ಕೋಮು ಸಾಮರಸ್ಯಕ್ಕೆ ದಕ್ಕೆಯುಂಟಾಗಿ ಅಶಾಂತಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ನಾಸಿರ್ ಶೇಕ್‌‌ನನ್ನು ಬಂಧಿಸಲಾಗಿದೆ.  ನಂತರ ಆತ ಕ್ಷಮೆ ಯಾಚಿಸಿದ್ದಾನೆ. ಹಾಗಾಗಿ ವೈರಲ್ ವಿಡಿಯೊದಲ್ಲಿ ಪ್ರತಿಪಾದಿಸಲಾಗಿರುವ ಹೇಳಿಕೆ ಸುಳ್ಳಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...