Homeಮುಖಪುಟಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

- Advertisement -
- Advertisement -

-1-

’ಇಲ್ಲೇ ಹತ್ತಿರದಲ್ಲಿ ಒಂದು ಗುಡಿ ಇದೆ. ಅದರ ಮುಂದೆ ವಾಕಿಂಗ್ ಮಾಡುವಷ್ಟು ಜಾಗವಿದೆ. ಇವತ್ತು ಸಂಜೆ ಅಲ್ಲಿಗೆ ಹೋಗೋಣ’ ಅಂತ ಮಂಜುಗೆ ಗಂಟುಬಿದ್ದಿದ್ದೆ. ಆಫೀಸ್‌ನಿಂದ ಬಂದ ಕೂಡಲೇ ಆಕೆ ’ಹೋಗೋಣ ಬನ್ನಿ’ ಅಂದಳು. ಹೊರಟೆವು. ಅಲ್ಲಿ ಅಕ್ಕತಂಗಿಯರ ಹೆಸರಿನಲ್ಲಿ ಎರಡು ಗುಡಿಗಳಿದ್ದವು. ಅವು ಗುಡಿಯ ಹೆಸರಿನಂತೆ ಸಣ್ಣದಾಗೇನು ಇರಲಿಲ್ಲ. ಮೊದಲು ಸಣ್ಣಾಕಿಯ ಗುಡಿಯೊಳಗೆ ಹೋದೆವು. ಸ್ಪೀಕರ್‌ಗಳಲ್ಲಿ ಮಾರ್ದನಿಸುವ ’ಶಿಷ್ಟ’ ರಾಗದ ಸ್ತುತಿಗಳು ಅಪ್ಪಳಿಸಲಿಲ್ಲ. ಯಾವುದೇ ಸಂಸ್ಕೃತ ಮಂತ್ರಗಳಿರಲಿಲ್ಲ. ಗರ್ಭಗುಡಿಯೊಳಗೆ ಸಣ್ಣ ಹುಡುಗನೊಬ್ಬ ಪೂಜಾರಿಯಂತೆ ಕೂತಿದ್ದ. ಅವನಿಗೇನು ಕೆಲಸವಿದ್ದಂತೆ ಕಾಣಲಿಲ್ಲ. ಬರುತ್ತಿದ್ದ ಭಕ್ತರೆಲ್ಲರೂ ಸೀದಾ ಗರ್ಭಗುಡಿಯ ಒಳಗೇ ಹೋಗಿ ನಮಸ್ಕರಿಸುತ್ತಿದ್ದರು. ನಾವಿಬ್ಬರು ’ಇಂತಹ ದೊಡ್ಡ ಆಲಯದಲ್ಲಿ ಇಷ್ಟು ಸ್ವಾತಂತ್ರ್ಯವಿದೆಯಲ್ಲ?’ ಅಂಥ ದಂಗಾದೆವು. ಗರ್ಭಗುಡಿಯೊಳಗೆ ಬಗ್ಗಿ ನೋಡಿದೆವು. ಐದಾರು ಜನ ಹೆಂಗಸರು ಅಪ್ಪಣೆ ಕೇಳುವಂತೆ ಕೂತಿದ್ದರು. ಕೆಲವರು ಬೇಡಿಕೆಯಿಟ್ಟು ಧ್ಯಾನಸ್ಥರಾಗಿದ್ದರು. ನಾನು ’ಇಲ್ಲಿ ಸಾಕು ಬಾ. ದೊಡ್ಡಾಕಿಯ ಗುಡಿಯೊಳಗೆ ಹೋಗೋಣ’ ಅಂದೆ. ದೊಡ್ಡಾಕಿಯ ಗರ್ಭಗುಡಿಯೊಳಗೆ ಹೆಂಗಸರು ಗಂಡಸರು ಹೀಗೆ ಹತ್ತಾರು ಜನ ಕೂತ್ತಿದ್ದರು. ಅವರಲ್ಲಿ ಬೇಡಿಕೊಳ್ಳುವಂತೆ ಕೈಮುಗಿದು ಕೂತವರಿದ್ದರು. ಮೊಣಕಾಲೂರಿ ನಮಸ್ಕರಿಸುತ್ತಿದ್ದವರಿದ್ದರು. ದೇವಿಯನ್ನೇ ದಿಟ್ಟಿಸಿ ನೋಡುತ್ತಾ ಏನೇನೋ ಕೇಳುವವರಿದ್ದರು. ಹೀಗೆ ಡೈರಕ್ಟಾಗಿ ದೇವಿ ಮತ್ತು ಭಕ್ತರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಇವರ ನಡುವೆ ನಮಗೆ ಅದ್ಭುತವೊಂದು ಕಾಣಿಸಿತು! ಬುರ್ಖಾಧಾರಿ ಹೆಣ್ಣು ಮಗಳೊಬ್ಬಳು ತನ್ನ ಕೂಸು ಮತ್ತು ತಾಯಿಯೊಂದಿಗೆ ಒಳಗಿದ್ದಳು. ಆಕೆಯ ತಾಯಿ ಮಗು ಆಡಿಸುತ್ತಿದ್ದಳು. ಅವಳು ದೇವಿಯ ಮುಂದಿದ್ದ ಕಟ್ಟಿಗೆಯಿಂದ ಮಾಡಿದ ಪೆಟ್ಟಿಗೆಗೆ ನಮಸ್ಕರಿಸಿ, ಎತ್ತುತ್ತಾ ಇಳಿಸುತ್ತಾ, ಪುನಃ ನಮಸ್ಕರಿಸುವಲ್ಲಿ ತಲ್ಲೀನಳಾಗಿದ್ದಳು. ಆಕೆಯನ್ನು ಮಾತಾಡಿಸಬೇಕೆಂದುಕೊಂಡೆವು. ಆದರೆ ಆಕೆಯ ಭಕ್ತಿಗೇಕೆ ಅಡ್ಡಿಪಡಿಸಬೇಕೆಂದು ಸುಮ್ಮನಾದೆವು.

ನಾವು ಹಿಂದೆಲ್ಲಾ ನೋಡಿದಂತಹ ದೇವಸ್ಥಾನಗಳಲ್ಲಿ, ದೇಹಕ್ಕೆ ತೊಟ್ಟ ಮೇಲ್ಭಾಗದ ವಸ್ತ್ರವನ್ನು ತೆಗೆದು ಬಗಲಲ್ಲಿ ಇಟ್ಟುಕೊಂಡು ಹೋಗುವುದು; ನಡು ಬಗ್ಗಿಸಿ ಗರ್ಭಗುಡಿಯ ಮುಂದೆ ನಿಂತು ದೇವರ ದರ್ಶನ ಮಾಡಿಕೊಳ್ಳುವುದು; ಅರ್ಥವಾಗದ ಶ್ಲೋಕಗಳನ್ನು ಉಚ್ಚರಿಸುತ್ತಾ ತೀರ್ಥಕೊಡುವ ಅರ್ಚಕನ ಆರತಿ ತಟ್ಟಗೆ ಚಿಲ್ಲರೆ ಹಾಕುವಂತಹದ್ದು ಸಾಮಾನ್ಯವಾಗಿರುತ್ತದೆ. ಹಾಗಾಗಿಯೋ ಏನೋ ಬುರ್ಖಾಧಾರಿ ಮಹಿಳೆಯೊಬ್ಬಳನ್ನು ದೇವಿಯ ಗರ್ಭಗುಡಿಯೊಳಗೆ ನೋಡಿದ್ದು ನಮಗೆ ಅದ್ಭುತವಾಗಿ ಕಂಡಿತು. ಆದರೆ ದೇವಿಯ ಗರ್ಭಗುಡಿಯಲ್ಲಿದ್ದ ಸ್ಥಳೀಯರಿಗೆ ಅದು ಸಹಜವಾಗಿಯೇ ಇತ್ತು. ನಮ್ಮ ಸುತ್ತಲೂ ಇಂತಹ ಸಹಜ ಬದುಕನ್ನು ಸಹಿಸದವರು ಇರುವುದರಿಂದಲೇ ಗುಡಿಯಿರುವ ಊರು, ಗುಡಿಯ ಹೆಸರನ್ನು ಇಲ್ಲಿ ಬರೆಯಲಾಗಲಿಲ್ಲ.

-2-

ಇದರ ನಡುವೆ ಮತ್ತೊಂದು ಘಟನೆ ನೆನಪಾಗುತ್ತಿದೆ. ನ್ಯೂಸ್ ಚಾನೆಲ್ ಬಿತ್ತರಿಸಿದ್ದ 59 ಸೆಕೆಂಡಿನ ವಿಡಿಯೋವನ್ನು ನನ್ನ ಗೆಳೆಯರು ವಾಟ್ಸಪ್ ಸ್ಟೇಟಸ್‌ಗೆ ಹಾಕೊಂಡಿದ್ದರು. ಅದು ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಂಬಂಧಿಸಿತ್ತು. ಇವರು ಮೊನ್ನೆಯ ಏಕಾದಶಿಯಂದು ಇಹಲೋಕ ತ್ಯಜಿಸಿದರು. ಅವರಲ್ಲಿ ದೇವರನ್ನು ಕಂಡಂತಹ ಜನಸಾಮಾನ್ಯರು ಸುತ್ತಮುತ್ತಲಿನ ಹಳ್ಳಿಗಳಿಂದಲೂ ದೂರದೂರುಗಳಿಂದಲೂ ದೇಹ ದರ್ಶನಕ್ಕಾಗಿ ಹರಿದುಬರುತ್ತಿದ್ದರು. ಆ ಜನರಲ್ಲಿ ಬೇರೆ ಧರ್ಮದವರೂ ಇದ್ದರು. ಸದಾ ಧರ್ಮದ ಹೆಸರಲ್ಲಿ ಉರಿವ ಬೆಂಕಿಗೆ ತುಪ್ಪ ಸುರಿವ ಮಾಧ್ಯಮಗಳ ಪ್ರತಿನಿಧಿಗಳು ಅಲ್ಲಿ ಕಾಣುತ್ತಿದ್ದ ’ಬೇರೆ ಧರ್ಮ’ದವರನ್ನೇ ಕರೆದು ಮಾತನಾಡಿಸುತ್ತಿದ್ದರು. ಅಂತಹವರಲ್ಲಿ ಸ್ಥಳೀಯ ರಹೀಂನಗರದ ಹಿರಿಜೀವವೂ ಒಂದಾಗಿತ್ತು. ಇವರಿಗೆ ಮಾಧ್ಯಮ ಪ್ರತಿನಿಧಿಯೊಬ್ಬ ’ಶ್ರೀಗಳು ಇವತ್ತು ನಮ್ಮ ಜೊತೆಗಿಲ್ಲ, ತಾವೊಬ್ಬ ಬೇರೆ ಧರ್ಮವರಾಗಿ ಶ್ರೀಗಳ ದರ್ಶಕ್ಕೆ ಬಂದಿದ್ದೀರಿ, ಯಾವ ರೀತಿ ಪ್ರಭಾವ ಬೀರಿದ್ದರು?’ ಎಂಬ ಪ್ರಶ್ನೆ ಕೇಳುತ್ತಾನೆ. ಇದನ್ನು ಕೇಳಿಸಿಕೊಂಡ ಕೂಡಲೇ ಆ ಜೀವ ದುಃಖಿಸುತ್ತಾ, ಬಿಕ್ಕಳಿಸುತ್ತದೆ. ಇದರ ನಡುವೆ ಮಾಧ್ಯಮ ಪ್ರತಿನಿಧಿ ಮತ್ತೆ ’ಹೋಗುತ್ತಿದ್ರಾ, ಶ್ರೀಗಳ ಭಾಷಣಕ್ಕೆ? ಮಠಕ್ಕೆ ಹೋಗುತ್ತಿದ್ರಾ?’ ಅಂಥ ಕೇಳುತ್ತಾನೆ. ಆ ಹಿರಿಜೀವ ’ಏ… ಮಠಕ್ಕೆ ಹೋಗಿಲ್ಲ. ಹೋಗ್ಬೇಕಂತ್ಹೇಳಿ ವಿಚಾರ ಬಾಳ್ ಸರಿ ಬಂದಿತ್ತು ಖರೆ. ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾ ಹಿಂಗಾ ಅನ್ನಾಣ…. ಅಂಥ ಬಿಟ್ಬಿಟ್ಟೇವು. ಹೋಗೋ ವಿಚಾರ ಇಟ್ಟಿದ್ದೇವು. ಅಷ್ಟರಲ್ಲಿ ಹಿಂಗಾತು. ದೈವವಿಲ್ಲ’ ಅಂತ ಉತ್ತರಿಸಿದ ಮಾತುಗಳು ನನ್ನನ್ನು ಕೊರೆಯಲಾರಂಭಿಸಿದವು. ಒಮ್ಮೆಯಾದರೂ ’ನಡೆದಾಡುವ ದೇವರು’ ಬದುಕಿದ್ದಾಗ ಮಠದಲ್ಲಿ ಕಾಣಬಹುದಾಗಿದ್ದ ಹಂಬಲವನ್ನಷ್ಟೇ ಆ ಜೀವ ತೋಡಿಕೊಂಡಿದೆ.

ಜನ ತಮ್ಮಿಚ್ಛೆಯಂತೆ ತಮ್ಮ ಕಷ್ಟಕ್ಕೆ ನೆರವಾಗುವ, ನಂಬುವ, ಪೂಜಿಸುವ ದೇವರನ್ನು ಹೇಗೆಲ್ಲಾ ಬಂಧಿಸಿಟ್ಟಿದ್ದೇವಲ್ಲ? ಆ ಬುರ್ಖಾಧಾರಿ ಹೆಣ್ಣು ಮಗಳ ಸಂಕಟವನ್ನು ಆಲಿಸುವಂತಹ ಹಲವಾರು ಹೆಣ್ಣುದೇವರನ್ನು ದೂರವಿಟ್ಟಿದ್ದೇವಲ್ಲ? ಒಳಿತನ್ನು ಉಪದೇಶಿಸುವ ವ್ಯಕ್ತಿಯನ್ನು ಕಾಣಲು ಹೋದರೆ ’ಏನಾಗಬಹುದೋ’ ಎಂಬ ವಾತಾವರಣವನ್ನು ನಿರ್ಮಿಸಿದ್ದೇವಲ್ಲ? ’ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾಹಿಂಗಾ’ ಎಂಬುದರಲ್ಲಿ ಭಯ ಆತಂಕವೇನೂ ಕಾಣಿಸದು. ಈ ಮಾತುಗಳಲ್ಲಿ ’ನಮ್ಮಿಂದ ಏಕೆ ತೊಂದರೆ ಆಗಬೇಕು? ದೇವರಂತ ಮನುಷ್ಯನ ಮಾತುಗಳನ್ನು ಅಲ್ಲಿಇಲ್ಲಿ ಕೇಳಿಸಿಕೊಂಡರಾತು. ಯಾವ ಸಮಸ್ಯೆಯಾಗದಂತೆ ಎಂದಾದರೊಮ್ಮೆ ಕಂಡರಾತು’ ಎಂಬ ಕಳಕಳಿ ತುಂಬಿದೆ. ಇಷ್ಟೇ ಅಲ್ಲದೆ ನನಗೆ ಆ ಹಿರಿಜೀವದ ಮಾತುಗಳು ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದವರನ್ನು ಕಾಣುವುದಕ್ಕೆ ಅವಕಾಶವನ್ನೇ ಇಲ್ಲವಾಗಿಸಿದವರನ್ನು ಅಣಕಿಸುವಂತೆ ಅನುರಣಿಸುತ್ತಿವೆ. ಛೇ…! ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಡಾ. ರವಿ ಎಂ

ಡಾ. ರವಿ ಎಂ
ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಅಧ್ಯಯನಕ್ಕೆ ಪಿಎಚ್.ಡಿ. ಪದವಿ. ’ಪರ್ಯಾಯ’, ’ಪಿ. ಲಂಕೇಶ್’, ’ಶಾಸನ ಓದು’ ಪ್ರಕಟಿತ ಕೃತಿಗಳು. ಹಳಗನ್ನಡ ಸಾಹಿತ್ಯ ರವಿಯವರ ಆಸಕ್ತಿ ಕ್ಷೇತ್ರವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...