Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-3)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-3)

- Advertisement -
- Advertisement -

ಪ್ರಿನ್ಸ್ ಈಗ ನಡೆದ ಸಂಭಾಷಣೆಯನ್ನು ಟೇಬಲ್ಲಿನ ಬಳಿ ಬರೆಯುತ್ತಾ ಕುಳಿತುಕೊಂಡಿದ್ದಾಗ ಇಡಿಯಾಗಿ ಕೇಳಿಸಿಕೊಂಡ. ಕೊನೆಗೂ ತನ್ನ ಬರವಣಿಗೆಯನ್ನ ಮುಗಿಸಿದ, ತನ್ನ ಶ್ರಮದ ಫಲಿತಾಂಶವನ್ನ ಜನರಲ್‌ನ ಡೆಸ್ಕ್ ಬಳಿಗೆ ತೆಗೆದುಕೊಂಡು ಬಂದ.

ಅಲ್ಲಿದ್ದ ಛಾಯಾಚಿತ್ರದ ಕಡೆಗೆ ಕುತೂಹಲದಿಂದ ಗಮನಹರಿಸಿ ನೋಡುತ್ತಾ, “ಅಂದರೆ ಇವಳೇ ನಸ್ಟಾಸಿಯ ಫಿಲಿಪೊವ್ನ” ಎಂದ. “ಅದೆಷ್ಟು ಅದ್ಭುತವಾದ ಸುಂದರಿ!” ಅವನು ತಕ್ಷಣ ಹಾರ್ದಿಕ ಭಾವದಿಂದ ತನ್ನ ಮಾತಿನ ಜೊತೆಗೆ ಸೇರಿಸಿದ. ಆ ಛಾಯಾಚಿತ್ರ ಖಂಡಿತವಾಗಿಯೂ ಅಸಾಧಾರಣವಾಗಿ ಸುಂದರವಾಗಿತ್ತು. ಅವಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಾಗ ಅವಳು ಸರಳವಾದ ವಿನ್ಯಾಸದಿಂದ ಕೂಡಿದ ಕಪ್ಪು ಬಣ್ಣದ ರೇಷ್ಮೆಯ ಉಡುಪನ್ನ ಧರಿಸಿದ್ದಳು, ಅವಳ ಕೂದಲು ಎದ್ದುಕಾಣುವಂತೆ ಕಪ್ಪು ಬಣ್ಣದ್ದಾಗಿತ್ತು ಮತ್ತು ಅದನ್ನ ಸ್ಪುಟವಾಗಿ ವ್ಯವಸ್ಥೆಗೊಳಿಸಲಾಗಿತ್ತು, ಅವಳ ಕಣ್ಣುಗಳು ಅವಳ ಆಳವಾದ ಚಿಂತನಶೀಲತೆಯನ್ನ ಬಿಂಬಿಸುತ್ತಿದ್ದವು, ಅವಳ ಮುಖಭಾವ ಭಾವೋದ್ರಿಕ್ತತೆಯಿಂದ ಮೋಹಕವಾಗಿತ್ತು ಮತ್ತು ಹೆಮ್ಮೆಯಿಂದ ಕೂಡಿತ್ತು. ಅವಳ ದೇಹ ಸಪೂರವಾಗಿತ್ತು, ಬಹುಶಃ ಸ್ವಲ್ಪ ಮಸುಕಾದ ಬಣ್ಣದಿಂದ ಕೂಡಿತ್ತು ಕೂಡ. ಗಾನಿಯಾ ಮತ್ತು ಜನರಲ್ ಇಬ್ಬರೂ ಪ್ರಿನ್ಸ್ ಕಡೆಗೆ ಬೆರಗಿನಿಂದ ನೋಡಿದರು.

“ನಿನಗೆ ಹೇಗೆ ಗೊತ್ತು ಇದು ನಸ್ಟಾಸಿಯಾ ಫಿಲಿಪೊವ್ನಳ ಚಿತ್ರವೆಂದು?” ಜನರಲ್ ಕೇಳಿದ. “ಖಂಡಿತವಾಗಿ ನೀನಾಗಲೇ ಅವಳ ಪರಿಚಯಸ್ಥನಂತೂ ಅಲ್ಲ, ಅಥವ ಹೌದೋ?”

“ಹೌದು, ನನಗವಳು ಗೊತ್ತು! ನಾನು ರಷ್ಯಕ್ಕೆ ಬಂದು ಒಂದೇ ದಿನವಾದರೂ, ನಾನೀ ಶ್ರೇಷ್ಠ ಸುಂದರಿಯ ಬಗ್ಗೆ ಕೇಳಿ ತಿಳಿದಿದ್ದೇನೆ!” ಮತ್ತು ಪ್ರಿನ್ಸ್ ಅವನ ರೊಗೊಜಿನ್‌ನ ಜೊತೆಯಲ್ಲಿನ ರೈಲಿನಲ್ಲಿನ ಭೇಟಿಯ ಬಗ್ಗೆ ಮತ್ತು ರೈಲಿನಲ್ಲಿ ನಡೆದ ಸಂಪೂರ್ಣ ವಿದ್ಯಮಾನಗಳನ್ನು ವಿವರಿಸಲು ಹೊರಟ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-2)

“ಇದೊಂದು ಹೊಸ ಸುದ್ದಿ!” ಅವನು ಹೇಳಿದ ಕತೆಯನ್ನ ಏಕಾಗ್ರತೆಯಿಂದ ಕೇಳಿಸಿಕೊಂಡ ನಂತರ, ಜನರಲ್ ಸ್ವಲ್ಪ ಉತ್ಸಾಹಭರಿತನಾಗಿ ಹೇಳಿದ.

“ಓ, ಇವೆಲ್ಲಾ ಅವಿವೇಕತನದ್ದಲ್ಲದೇ ಮತ್ತೇನೂ ಅಲ್ಲ!” ಸ್ವಲ್ಪ ಅಸ್ವಸ್ಥಗೊಂಡವನಂತೆ ಕಂಡ ಗಾನಿಯ ಜೋರಾಗಿ ಹೇಳಿದ. “ಇದೆಲ್ಲಾ ಸುಳ್ಳು ಸುದ್ದಿ; ಆ ಯುವ ವ್ಯಾಪಾರಿ ಏನೋ ಸ್ವಲ್ಪ ಮುಗ್ಧವಾದ ಮನರಂಜನೆಗೋಸ್ಕರ ಹಾಗೆ ಮಾಡಿದ್ದಿರಬೇಕು! ನಾನು ಆ ರೊಗೊಜಿನ್ ಬಗ್ಗೆಯೂ ಸ್ವಲ್ಪ ಕೇಳಿ ತಿಳಿದುಕೊಂಡಿದ್ದೀನಿ!”

“ಹೌದು, ನಾನೂ ಕೂಡ ಕೇಳಿದ್ದೀನಿ!” ಜನರಲ್ ಉತ್ತರಿಸಿದ. “ನಸ್ಟಾಸಿಯ ಫಿಲಿಪೊವ್ನ ನಮಗೆ ಆ ಕಿವಿಯೋಲೆಗಳ ಬಗ್ಗೆ ಎಲ್ಲವನ್ನೂ ಆ ದಿನವೇ ತಿಳಿಸಿದ್ದಾಳೆ. ಈಗ ಅದು ಬೇರೆಯದೇ ಆದ ವಿಷಯ. ನೋಡು ಆ ವ್ಯಕ್ತಿ ಈಗ ಹತ್ತಿರಹತ್ತಿರ ಒಂದು ಮಿಲಿಯನ್ ರೂಬಲ್ಲಿನಷ್ಟು ಹಣ ಹೊಂದಿದ್ದಾನೆ, ಮತ್ತು ಅವನು ಭಾವೋದ್ರಿಕ್ತನಾಗಿ ಪ್ರೀತಿಯಲ್ಲಿ ಮುಳುಗಿದ್ದಾನೆ. ಇಡೀ ಕಥೆ ಭಾವೋದ್ರಿಕ್ತತೆಯ ವಾಸನೆಯನ್ನ ಹರಡುತ್ತಿದೆ, ಮತ್ತು ನಮಗೆಲ್ಲಾ ಗೊತ್ತು, ಈ ರೀತಿಯ ವರ್ಗದ ಜನ ವ್ಯಾಮೋಹಕ್ಕೊಳಗಾದಾಗ ಯಾವ ರೀತಿಯಲ್ಲಿ ಏನನ್ನು ಬೇಕಾದರೂ ಮಾಡಬಲ್ಲವರಾಗಿರುತ್ತಾರೆ ಎನ್ನುವುದು. ನಾನೀಗ ಹೆದರುತ್ತಿರುವುದು ಅಹಿತಕರವಾದ ಹಗರಣದ ಬಗ್ಗೆ, ಖಂಡಿತವಾಗಿಯೂ ನನಗೆ ಈಗ ಹೆದರಿಕೆ ಉಂಟಾಗಿದೆ!”

“ನನ್ನ ಪ್ರಕಾರ ನೀನು ಆ ಮಿಲಿಯನ್ ಬಗ್ಗೆ ಹೆದರಿದ್ದೀಯ” ಗಾನಿಯಾ ಹಲ್ಲುಕಿರಿಯುತ್ತಾ ಹೇಳಿದ.

“ಮತ್ತೆ ನೀನು ಹೆದರಿಲ್ಲ ಎಂದುಕೊಳ್ಳಬಹುದೇ? ಹಾ?”

“ನಿನಗೆ ಅವನ ಬಗ್ಗೆ ಏನನ್ನಿಸುತ್ತದೆ ಪ್ರಿನ್ಸ್?” ಗಾನಿಯಾ ಇದ್ದಕ್ಕಿದ್ದಂತೆ ಕೇಳಿದ. “ಅವನು ಗಂಭೀರ ವ್ಯಕ್ತಿಯಂತೆ ಕಂಡನೇ? ಅಥವಾ ಸಾಮಾನ್ಯ ಪುಂಡನಂತೆಯೊ? ಈ ವಿಷಯದ ಬಗ್ಗೆ ನಿನ್ನ ಸ್ವಂತ ಅಭಿಪ್ರಾಯವೇನು?”

ಗಾನಿಯಾ ಈ ಪ್ರಶ್ನೆಗಳನ್ನು ಕೇಳುತ್ತಿದ್ದಂತೆಯೇ ಅವನ ಮಿದುಳಿನಲ್ಲಿ ಒಂದು ಹೊಸ ಆಲೋಚನೆ ಮಿಂಚಿನಂತೆ ಬಂದೆರಗಿತು ಮತ್ತು ಅದು ಅಸಹನೆಯಿಂದ ಅವನ ಕಣ್ಣಿನ ಮೂಲಕ ಜ್ವಾಲೆಯಂತೆ ಕಾಣಿಸಿಕೊಂಡಿತು. ಜನರಲ್ ನಿಜವಾಗಲೂ ಅಸ್ವಸ್ಥತೆಯಿಂದ ತಳಮಳಗೊಂಡಿದ್ದ. ಪ್ರಿನ್ಸ್‌ನ ಕಡೆಗೂ ನೋಡಿದ, ಆದರೆ ಅವನ ಉತ್ತರದಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಿದಂತೆ ಕಾಣಲಿಲ್ಲ.

“ನನಗೆ ನಿಜವಾಗಲೂ ನಿಮಗೆ ಹೇಗೆ ತಿಳಿಸಬೇಕೆನ್ನುವುದು ತಿಳಿಯುತ್ತಿಲ್ಲ” ಪ್ರಿನ್ಸ್ ಉತ್ತರಿಸಿದ. “ಆದರೆ ನನಗೆ ಖಚಿತವಾಗಿ ಅನ್ನಿಸುವುದು ಆ ವ್ಯಕ್ತಿ ಸಂಪೂರ್ಣವಾಗಿ ಭಾವೋನ್ಮಾದದ ಮನುಷ್ಯ ಎಂದು ಮತ್ತು ಬಹುಶಃ ಅವನಲ್ಲಿರುವುದು ಆರೋಗ್ಯಕರವಾದ ಭಾವೋನ್ಮಾದ ಅಂತ ನನಗನ್ನಿಸುವುದಿಲ್ಲ. ಅವನಿಗೆ ಅನಾರೋಗ್ಯದಿಂದ ಇನ್ನೂ ಸುಧಾರಿಸಿಕೊಳ್ಳಲು ಬಹಳ ಸಮಯವಾಗಬಹುದು. ಅದರಲ್ಲೂ ಈ ರೀತಿ ಪುನಃ ಮೋಜಿನ ಜೀವನವನ್ನ ಮುಂದುವರಿಸಿದರೆ, ಅವನು ಇನ್ನೊಂದು ಅಥವಾ ಎರಡು ದಿನಗಳಲ್ಲಿ ಹಾಸಿಗೆ ಹಿಡಿಯುವುದಂತೂ ಖಂಡಿತ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-1)

“ಇಲ್ಲ! ನಿನಗೆ ಹಾಗೆ ಅನ್ನಿಸುತ್ತದೆಯೇ?” ಅವನ ಹೇಳಿದ್ದುದರ ಬಗ್ಗೆ ಅವಲೋಕಿಸುತ್ತಾ ಜನರಲ್ ಕೇಳಿದ.

“ಹೌದು, ನನಗೆ ಹಾಗೆಯೇ ಅನ್ನಿಸುತ್ತಿದೆ!”

“ಹೌದು, ಆದರೆ ನಾನು ಉಲ್ಲೇಖಿಸಿದ ಹಗರಣ ಯಾವುದೇ ಕ್ಷಣದಲ್ಲಿ ಬೇಕಾದರೂ ನಡೆದುಬಿಡಬಹುದು. ಅದು ಇಂದಿನ ರಾತ್ರಿಯೇ ಸಂಭವಿಸಬಹುದು” ಗಾನಿಯ ಜನರಲ್‌ಗೆ ನಗುತ್ತಾ ಹೇಳಿದ.

“ಖಂಡಿತ, ಹಾಗೇ ಆಗಬಹುದು. ಹಾಗಿದ್ದರೆ, ಎಲ್ಲವೂ ಈ ಕ್ಷಣದಲ್ಲಿ ಅವಳ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಅನ್ನುವುದರ ಮೇಲೆ ಅವಲಂಬಿತವಾಗಿದೆ.” “ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಅವಳೆಂತಹ ಸ್ವಭಾವದ ಹೆಂಗಸಾಗಿಬಿಡುತ್ತಾಳೆ ಅನ್ನುವುದು ನಿಮಗೆ ತಿಳಿದೇ ಇದೆ.”

“ಹೇಗೆ? ಅವಳು ಯಾವ ರೀತಿಯ ವ್ಯಕ್ತಿ?” ತನ್ನ ತಾಳ್ಮೆಯ ಮಿತಿಯನ್ನ ತಲುಪುತ್ತಾ ಜನರಲ್ ಜೋರಾಗಿ ಕೇಳಿದ. “ಇಲ್ಲಿ ನೋಡು ಗಾನಿಯಾ, ನೀನು ಇಂದಿನ ರಾತ್ರಿ ಅವಳಿಗೆ ಕಿರಿಕಿರಿ ಉಂಟಾಗುವಂತೆ ನಡೆದುಕೊಳ್ಳಬೇಡ. ಈ ದಿನ ನೀನು ಎಂದೂ ಇಲ್ಲದಷ್ಟು ಸ್ನೇಹಪರತೆಯನ್ನ ಅವಳಿಗೆ ತೋರಿಸಬೇಕು. ಸರಿ, ನೀನ್ಯಾವುದರ ಬಗ್ಗೆ ನಗುತ್ತಿದ್ದೀಯ? ಗಾನಿಯ, ನೀನು ಅರ್ಥಮಾಡಿಕೊಳ್ಳಬೇಕಾದದ್ದು ಏನೆಂದರೆ, ಈ ರೀತಿ ನಾನು ಮಾತನಾಡುತ್ತಿರುವುದು ನನ್ನ ಯಾವುದೇ ರೀತಿಯ ಸ್ವಂತದ ಆಸಕ್ತಿಗೋಸ್ಕರವಲ್ಲ. ಯಾವುದೇ ರೀತಿಯಲ್ಲಿ ಈಗಿನ ಪ್ರಶ್ನೆ ನಿರ್ಧಾರವಾದರೂ ಅದು ನನಗೆ ಅನುಕೂಲಕರವಾಗಿಯೇ ಇರುತ್ತದೆ. ಟಾಟ್ಸ್ಕಿಯ ಹೊಸ ನಿರ್ಣಯವನ್ನ ಯಾವುದೂ ಬದಲಾಯಿಸಲು ಸಾಧ್ಯವಿಲ್ಲ, ಆದದ್ದರಿಂದ ನಾನ್ಯಾವುದೇ ರೀತಿಯ ಅಪಾಯವನ್ನ ಎದುರಿಸುತ್ತಿಲ್ಲ. ನನಗೆ ಯಾವುದರ ಬಗ್ಗೆಯಾದರೂ ಆಸೆ ಇದೆ ಎಂದಾದರೆ ಅದು ನಿನಗೆ ಒಳಿತಾಗುವುದರ ಬಗ್ಗೆ ಮಾತ್ರ. ನನ್ನನ್ನು ನೀನು ನಂಬುತ್ತೀಯೋ ಇಲ್ಲವೋ? ನೀನೊಬ್ಬ ಪ್ರಜ್ಞಾವಂತ ಮನುಷ್ಯ, ಅಂದರೆ, ಈ ವಿಷಯದಲ್ಲಿ, ನಾನು ನಿನ್ನ ಮೇಲೆ ಭರವಸೆಯಿಟ್ಟಿದ್ದೇನೆ, ಅದು, ಅದು-”

“ಹೌದು, ಅದೇ ಮುಖ್ಯವಾದ ವಿಷಯ” ಜನರಲ್‌ಗೆ ಅವನ ಕಷ್ಟದಿಂದ ಆಚೆ ಬರಲು ಪುನಃ ಸಹಾಯ ಮಾಡುತ್ತಾ, ತನ್ನ ತುಟಿಗಳನ್ನ ವಿಷಪೂರಿತ ನಗುವಿನೊಂದಿಗೆ ಕಚ್ಚಿಕೊಳ್ಳುತ್ತಾ, ಮತ್ತು ಅದನ್ನ ಮರೆಮಾಚುವ ಪ್ರಯತ್ನವನ್ನು ಮಾಡದೆಯೇ ಗಾನಿಯ ಹೇಳಿದ. ಅವನು ತನ್ನ ಮನಸ್ಸಿನಲ್ಲಿನ ಆಲೋಚನೆಗಳನ್ನ ಜನರಲ್ ಓದಿಬಿಡಬಹುದು ಅನ್ನುವ ಆತಂಕದಿಂದ, ತನ್ನ ಜ್ವರಪೂರಿತ ಕಣ್ಣುಗಳಿಂದ ನೇರವಾಗಿ ಜನರಲ್‌ನ ಕಣ್ಣುಗಳತ್ತ ದೃಷ್ಟಿ ಹಾಯಿಸಿದ.

ಜನರಲ್‌ನ ಮುಖವೆಲ್ಲಾ ಕೋಪದಿಂದ ಕೆಂಪಗಾಯಿತು.

“ಹೌದು, ಖಂಡಿತವಾಗಿಯೂ ಅದೇ ಮುಖ್ಯವಾದ ವಿಷಯ!” ಗಾನಿಯಾಗೆ ಕೂಗಿ ಹೇಳಿದ. “ನೀನು ಅದೆಂತಹ ವಿಚಿತ್ರ ಮನುಷ್ಯ ಗಾನಿಯಾ! ನೀನು ಈ ಮಿಲಿಯನೇರ್‌ನ ಆಗಮನದಿಂದ ಸಂತೋಷಪಡುತ್ತಿರುವಂತೆ ಕಾಣುತ್ತಿದೆ. ಎಲ್ಲದರಿಂದ ಆಚೆ ಬರಲು ಒಂದು ಕಾರಣ ಸಿಕ್ಕಿತು ಅನ್ನುವ ರೀತಿಯಲ್ಲಿ. ಈ ಸಂಬಧದಲ್ಲಿ ನೀನು ಎರಡೂ ಕಡೆ ಪ್ರಾಮಾಣಿಕನಾಗಿ ವರ್ತಿಸಬೇಕು ಮತ್ತು ಬೇರೆಯವರ ಜೊತೆ ಹೊಂದಾಣಿಕೆ ಮಾಡಿಕೊಳ್ಳದಿರುವಂತೆ ಎಚ್ಚರಿಕೆ ನೀಡಬೇಕು. ಆದರೆ ಈಗಲೂ ಕಾಲಾವಕಾಶ ಇದೆ. ನೀನು ನನ್ನನ್ನು ಅರ್ಥಮಾಡಿಕೊಳ್ಳುತ್ತಿದ್ದೀಯ ತಾನೆ? ನನಗೀಗ ತಿಳಿಯಬೇಕಾಗಿದ್ದುದು ಈ ವ್ಯವಸ್ಥೆಯನ್ನು ನೀನು ಇಷ್ಟಪಡುತ್ತೀಯೊ ಇಲ್ಲವೊ? ಎನ್ನುವುದು. ಇಲ್ಲ ಅಂದರೆ ಬಾಯಿಬಿಟ್ಟು ಹೇಳು ಮತ್ತು ಸ್ವಾಗತಿಸು! ಗ್ಯಾವ್ರಿಲಾ ಅರ್ಡಲಿನೋವಿಚ್, ಯಾರೂ ನಿನ್ನನ್ನು ಬಲವಂತಪಡಿಸುತ್ತಿಲ್ಲ ಅಥವ ಸಿಕ್ಕಿಹಾಕಿಸುತ್ತಿಲ್ಲ.”

“ನಾನು ಅದನ್ನೇ ಇಷ್ಟಪಡುತ್ತೇನೆ” ಮೃದವಾಗಿ ಆದರೆ ದೃಢತೆಯಿಂದ ಗಾನಿಯ ಗುನುಗಿದ. ತನ್ನ ಕಣ್ಣುಗಳನ್ನು ಕೆಳಗೆ ಮಾಡುತ್ತಾ; ಮಂಕು ಕವಿದಂತಹ ನಿಶ್ಯಬ್ದಕ್ಕೆ ಅವನು ಶರಣಾದ.

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...