ಕಳೆದ ನಾಲ್ಕು ದಿನಗಳಿಂದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಸರು ಸ್ಯಾಂಟ್ರೊ ರವಿ. ‘ಸ್ವತಃ ಮುಖ್ಯಮಂತ್ರಿಯೇ ನನ್ನನ್ನು ಸರ್ ಅಂತ ಕರೀತಾರೆ, ನೀವು ಸರ್ ಅಂತಿಲ್ಲ, ಖಾಲಿ ಡಿವೈಎಸ್ಪಿ ನೀವು, ಯಾವ ಕೆಲಸವಾದರೂ ಮಾಡಿಕೊಡುತ್ತೇನೆ, ಕುಮಾರಕೃಪ ಗೆಸ್ಟ್ ಹೌಸ್ಗೆ ಬನ್ನಿ’ ಎಂದು ಆತ ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ. ಸಿಎಂ ಬೊಮ್ಮಾಯಿವರ ಮಗನ ಜೊತೆ, ಬಿಜೆಪಿ ಸಚಿವರುಗಳ ಜೊತೆ ಆತ ಇರುವ ಫೋಟೊಗಳು ಎಲ್ಲೆಡೆ ಹರಿದಾಡುತ್ತಿವೆ.
ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಕೈಯ್ಯೊಳಗಿದ್ದಾರೆ ಎನ್ನುತ್ತಾನೆ ಸ್ಯಾಂಟ್ರೋ ರವಿ.
ತನಿಖೆಗೆ ಕರೆದ ಪೊಲೀಸರಿಗೇ ಆವಾಜ್ ಹಾಕುತ್ತಾನೆ.
ವರ್ಗಾವಣೆ ಮಾಡಿಸುವುದು ನನಗೆ ಲೀಲಾಜಾಲ ಎನ್ನುತ್ತಾನೆ.
ಗೃಹಸಚಿವರೇ ಅವನ ಈ ಆತ್ಮವಿಶ್ವಾಸದ ಹಿಂದಿನ ಶಕ್ತಿಯಾಗಿದ್ದಾರಾ?
ವೇಶ್ಯಾವಟಿಕೆಯ ಪಿಂಪ್ನೊಂದಿಗೆ @JnanendraAraga ಅವರದ್ದೇನು ನೆಂಟಸ್ತಿಕೆ? pic.twitter.com/SxalNJdQv6
— Karnataka Congress (@INCKarnataka) January 6, 2023
ಜನವರಿ 1 ರಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೊ ರವಿ ಆಲಿಯಾಸ್ ಕೆ.ಎಸ್ ಮಂಜುನಾಥ್ ವಿರುದ್ಧ ವಂಚನೆ, ಅತ್ಯಾಚಾರ, ದೌರ್ಜನ್ಯ, ಕ್ರಿಮಿನಲ್ ಪಿತೂರಿಯ ದೂರು ದಾಖಲಾಗುತ್ತದೆ. ದೂರು ನೀಡಿದ್ದು ಆತನನ್ನು ಮದುವೆಯಾಗಿ ವಂಚನೆಗೊಳಗಾಗಿದ್ದ ದಲಿತ ಯುವತಿ. ಆನಂತರ ಆತ ಡಿವೈಎಸ್ಪಿ ಜೊತೆ ಮಾತನಾಡಿದ್ದ ಆಡಿಯೋ ಲೀಕ್ ಆಗುತ್ತದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೈಸೂರು “ಪೊಲೀಸರು ಎಫ್ಐಆರ್ ದಾಖಲು ಮಾಡಿರುವ ಅತ್ಯಾಚಾರ ಆರೋಪಿ ಸ್ಯಾಂಟ್ರೊ ರವಿಯೊಂದಿಗೆ ಬಿಜೆಪಿ ಸರ್ಕಾರದ ಕೆಲ ಪ್ರಭಾವಿ ಸಚಿವರು ಸಂಪರ್ಕ ಹೊಂದಿದ್ದಾರೆ. ಆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು” ಎಂದು ಒತ್ತಾಯಿಸುತ್ತಾರೆ.
ಅಷ್ಟಕ್ಕೆ ಸುಮ್ಮನಾಗದೆ ಸ್ಯಾಂಟ್ರೊ ರವಿಯ ಜೊತೆ ಸಚಿವರುಗಳಾದ ಆರಗ ಜ್ಞಾನೇಂದ್ರ, ಎಸ್.ಟಿ ಸೋಮಶೇಖರ್, ಡಾ.ಕೆ ಸುಧಾಕರ್, ಬಿ.ಸಿ ನಾಗೇಶ್ ಇರುವ ಫೋಟೊಗಳನ್ನು, ವಿಡಿಯೋಗಳನ್ನು ಬಿಡುಗಡೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕುರಿತು ಸಾಲು ಸಾಲು ಟ್ವೀಟ್ಗಳನ್ನು ಮಾಡುತ್ತದೆ. ಹಾಗಿದ್ದರೆ ಏಕಾಏಕಿ ಸುದ್ದಿಯಲ್ಲಿರುವ ಈ ಸ್ಯಾಂಟ್ರೊ ರವಿ ಯಾರು? ಆತನಿಗೂ ಸರ್ಕಾರದ ನಡುವಿನ ಸಂಬಂಧವೇನು ಎಂಬುದರ ವಿವರ ಇಲ್ಲಿದೆ.
ಬಿಜೆಪಿಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ.
ಶಿಕ್ಷಣ ಸಚಿವ @BCNagesh_bjp ಅವರೂ ಆತನ ದಂಧೆಯ ಫಲಾನುಭವಿಯೇ?@BJP4Karnataka ಸರ್ಕಾರವನ್ನು ಪಿಂಪ್ಗಳು ನಿಯಂತ್ರಿಸುತ್ತಿದ್ದಾರೆಯೇ?
ಕಮಿಷನ್ ಸರ್ಕಾರಕ್ಕೆ ಇನ್ನೆಷ್ಟು ಬ್ರೋಕರ್ಗಳಿದ್ದಾರೆ? pic.twitter.com/f8jf4Va3AQ
— Karnataka Congress (@INCKarnataka) January 6, 2023
ಮಂಜುನಾಥ್ ಕೆ.ಎಸ್ ಅಲಿಯಾಸ್ ಕಿರಣ್ ಆಲಿಯಾಸ್ ಸ್ಯಾಂಟ್ರೋ ರವಿ (53) ಮಂಡ್ಯದ ನಗರದಿಂದ ಕೂಗಳತೆ ದೂರದಲ್ಲಿರುವ ಹೊಳಲು ಗ್ರಾಮದವನು. ಅವರ ತಂದೆ ಅಬಕಾರಿ ಇಲಾಖೆಯಲ್ಲಿ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯಾಗಿದ್ದರು. ಈತನ ಪ್ರಧಾನ ಕಸುಬು ಹೆಣ್ಣು ಮಕ್ಕಳ ಕಳ್ಳಸಾಗಣೆ, ವೇಶ್ಯಾವಾಟಿಕೆ ಜಾಲವಾಗಿತ್ತು. ಹೆಣ್ಣು ಮಕ್ಕಳನ್ನು ಪ್ರೀತಿಸುವುದಾಗಿ ನಂಬಿಸಿ, ಮದುವೆಯ ನಾಟಕವಾಡಿ ಆನಂತರ ಅವರನ್ನು ಪ್ರಭಾವಿಗಳ ಬಳಿ ವೇಶ್ಯಾವಾಟಿಕೆಗೆ ತಳ್ಳುವುದು ಈತನ ಕೆಲಸವಾಗಿತ್ತು. ಇದೇ ಕೆಲಸದಲ್ಲಿ 1987ರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆಯಾದಾಗ ಸಿಕ್ಕಿಬಿದ್ದು ಮೊದಲ ಬಾರಿಗೆ ಬಂಧನಕ್ಕೊಳಗಾಗಿದ್ದ.
ಆದರೆ ಚಾಲಾಕಿ ಬುದ್ದಿಯ ಆತ ಅನಾರೋಗ್ಯದ ನೆಪವೊಡ್ಡಿ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಲ್ಲಿಂದ ಪರಾರಿಯಾಗಿದ್ದ. ಆಗ ಆತನ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಪ್ರಧಾನವಾಗಿ ಮೈಸೂರನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ಆತ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹೆಣ್ಣು ಮಕ್ಕಳನ್ನು ಪೂರೈಸುವ ಅನೈತಿಕ ದಂಧೆಗಿಳಿದಿದ್ದ. ಆ ಸಂದರ್ಭದಲ್ಲಿ ಆತ ಹೊಸದಾಗಿ ಸ್ಯಾಂಟ್ರೊ ಕಾರೊಂದನ್ನು ಖರೀದಿಸಿ ಊರು ಊರು ಸುತ್ತುತ್ತಿದ್ದ. ಬಡವರಾದ, ದಲಿತ-ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಮರಳು ಮಾಡಿ ಅವರನ್ನು ಮಾರಾಟ ಮಾಡುತ್ತಿದ್ದ. ಈ ವೇಳೆ ಪೊಲೀಸರು ದಾಳಿ ಮಾಡುತ್ತಿದ್ದ ವೇಳೆಯಲ್ಲೆಲ್ಲ ತನ್ನ ಸ್ಯಾಂಟ್ರೊ ಕಾರಿನಲ್ಲಿ ತಪ್ಪಿಸಿಕೊಳ್ಳುತ್ತಿದ್ದ. ಹಾಗಾಗಿ ಆತನಿಗೆ ಸ್ಯಾಂಟ್ರೊ ರವಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.
2000 ಇಸವಿಯಿಂದ 2014ರವರೆಗೆ ಆತನ ವಿರುದ್ಧ ಹೆಣ್ಣು ಮಕ್ಕಳ ಕಳ್ಳ ಸಾಗಣಿಕೆ, ಅತ್ಯಾಚಾರ, ವಂಚನೆ, ಕ್ರಿಮಿನಲ್ ಆರೋಪದ ಮೇಲೆ ಹತ್ತಾರು ಪ್ರಕರಣಗಳನ್ನು ಒಡನಾಡಿ ಸಂಸ್ಥೆ ದಾಖಲಿಸಿತ್ತು. ಆದರೆ ಪ್ರಭಾವಿಗಳ ಕೃಪಾಕಟಾಕ್ಷದಲ್ಲಿದ್ದ ಆತ ಪೊಲೀಸರನ್ನು ಸಹ ಬುಟ್ಟಿಗೆ ಹಾಕಿಕೊಂಡು ತಪ್ಪಿಸಿಕೊಳ್ಳುತ್ತಿದ್ದ ಎನ್ನುವುದು ಅವನ ಮೇಲಿರುವ ಆರೋಪ.
2004ರಲ್ಲಿ ಸ್ಯಾಂಟ್ರೊ ರವಿ ತನ್ನ ಅನೈತಿಕ ಚಟುವಟಿಕೆಗಳನ್ನು ಮುಂದುವರೆಸಿದ್ದರಿಂದ ಆತನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿಡಲಾಗಿತ್ತು. ಅಲ್ಲಿದ್ದ ಒಂದೂವರೆ ವರ್ಷದಲ್ಲಿ ಮತ್ತಷ್ಟು ರೌಡಿಗಳ, ರಾಜಕಾರಣಿಗಳ ನಂಟು ಬೆಳೆಸಿಕೊಂಡಿದ್ದ. ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ವರ್ಗಾವಣೆ ದಂಧೆಗಿಳಿದಿದ್ದ ಎನ್ನಲಾಗಿದೆ. ಈ ಎಲ್ಲಾ ದಂಧೆಗಳಲ್ಲಿನ ಅಕ್ರಮ ಹಣವನ್ನು ತನ್ನ ಹೆಂಡತಿ ಚಂದ್ರಿಕಾ ಎಂಬುವವರ ಬ್ಯಾಂಕ್ ಖಾತೆಯಿಂದ ನಿರ್ವಹಿಸುತ್ತಿದ್ದ.
ಹೆಂಡತಿಯನ್ನೇ ಕೊಂದ ಆರೋಪ
2004ರಲ್ಲಿ ಸ್ಯಾಂಟ್ರೋ ರವಿ ಜೈಲು ಸೇರುವ ವೇಳೆಗೆ ಆತನ ಹೆಂಡತಿ ಚಂದ್ರಿಕಾರವರ ಖಾತೆಯಲ್ಲಿ 22 ಲಕ್ಷ ರೂ ಇತ್ತು ಎನ್ನಲಾಗಿದೆ. ಆದರೆ ಆತ 2006ರಲ್ಲಿ ಜೈಲಿನಿಂದ ಹೊರಬಂದಾಗ ಹಣ ಕೊಡಲು ಚಂದ್ರಿಕಾ ಮೀನಾಮೇಷ ಎಣಿಸಿದ್ದಾರೆ. ಆಗ ಹಣಕ್ಕಾಗಿ ತನ್ನ ಮಗಳನ್ನೇ ಅಪಹರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ. ಆದರೆ ಚಂದ್ರಿಕಾ ಬಗ್ಗಿಲ್ಲ. ಬದಲಿಗೆ ಆತನ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿಗೆ ಆಸಿಡ್ ಹಾಕಿ ಸುಟ್ಟು ಪಾಂಡವಪುರದ ವಿ.ಸಿ ನಾಲೆಗೆ ಎಸೆದುಕೊಂದಿದ್ದ ಎಂಬ ಆರೋಪ ಎದುರಿಸುತ್ತಿದ್ದನು.
ಆದರೆ ಈ ಸಂದರ್ಭದಲ್ಲಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದಲ್ಲದೆ, ಪತ್ರಿಕೆಗಳಲ್ಲಿ ಕಾಣೆಯಾಗಿದ್ದಾರೆ ಎಂಬ ಜಾಹೀರಾತು ಸಹ ಕೊಟ್ಟಿದ್ದ. ಆನಂತರ ಪೊಲೀಸರೊಂದಿಗೆ ಅಡ್ಜೆಸ್ಟ್ ಮಾಡಿಕೊಂಡು ಕೇಸು ಖುಲಾಸೆಗೊಳಿಸಿದ ಎಂಬ ಆರೋಪ ಆತನ ಮೇಲಿದೆ.
ವರ್ಗಾವಣೆ ದಂಧೆ
ರಾಜಕಾರಣಿಗಳಿಗೆ ಹೆಣ್ಣು ಮಕ್ಕಳನ್ನು ಪೂರೈಸುವ ಮೂಲಕ ಸ್ನೇಹ ಸಂಪಾದಿಸಿದ್ದ ಈತ ವರ್ಗಾವಣೆ ದಂಧೆಗೆ ಕೈಹಾಕಿದ್ದ. ಅದರಿಂದ ಬಂದ ಹಣದಲ್ಲಿ ಐಷರಾಮಿ ಜೀವನ ಸಾಗಿಸುತ್ತಿದ್ದ ಎಂಬುದನ್ನು ದುಡ್ಡಿನ ಕಂತೆಗಳೊಂದಿಗೆ ಆತ ಇರುವ ಫೋಟೊಗಳೆ ಸಾರಿ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಬರುವುದರಲ್ಲಿ ಈತನ ಪಾತ್ರವಿದೆ ಎನ್ನಲಾಗುತ್ತಿದೆ. ಬಾಂಬೆಗೆ ತೆರಳಿದ ಕೆಲ ಶಾಸಕರಿಗೆ ಹೆಣ್ಣು ಮಕ್ಕಳನ್ನು ಪೂರೈಸಿದ್ದು ಈತನೇ ಎಂಬ ಆರೋಪ ಕೇಳಿಬರುತ್ತಿದೆ.
ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ?
ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ @BJP4Karnataka?@mla_sudhakar ಅವರೇ, ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ? pic.twitter.com/xUYQB2EwZ1
— Karnataka Congress (@INCKarnataka) January 6, 2023
ಬಿಜೆಪಿ ಸರ್ಕಾರ ಬಂದ ಮೇಲಂತೂ ತನ್ನ ಕಾರ್ಯಚಟುವಟಿಕೆಗಳನ್ನು ಕುಮಾರ ಕೃಪಾ ಅತಿಥಿ ಗೃಹದಿಂದಲೇ ನಡೆಸುತ್ತಿದ್ದ ಸ್ಯಾಂಟ್ರೊ ರವಿ ಕೊನೆಗೂ ಬೆತ್ತಲಾಗಿದ್ದಾನೆ. ಇತ್ತೀಚಿಗೆ ಮದುವೆಯಾಗಿದ್ದ ಮಹಿಳೆಯನ್ನು ನಿವೃತ್ತ ಐಎಎಸ್ ಅಧಿಕಾರಿಯೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒತ್ತಾಯಿಸಿದ್ದ. ಒಪ್ಪದಿದ್ದಾಗ ಸುಳ್ಳು ಕೇಸು ಹಾಕಿ ಜೈಲಿಗೆ ಕಳಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಹಣಕ್ಕಾಗಿ ಯಾವ ಮಟ್ಟಕ್ಕೆ ಇಳಿಯಲೂ ಹೇಸದ ವ್ಯಕ್ತಿಯೇ ಸ್ಯಾಂಟ್ರೊ ರವಿ.
ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇಡಿ ಕಚೇರಿಗಳಿಗೆ ತಲುಪಿಲ್ಲವೇ?
ಈ ಅಕ್ರಮ ಹಣದ ಮೂಲ ಹುಡುಕುವುದು ಇಡಿಗೆ ಇಷ್ಟವಿಲ್ಲವೇ ಅಥವಾ @BJP4Karnataka ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ?
ಇಡಿ ದಾಳಿ ಯಾವಾಗ @BJP4Karnataka? pic.twitter.com/LUgxMnqiAD
— Karnataka Congress (@INCKarnataka) January 6, 2023
ಇಂತಹ ಒಬ್ಬ ವ್ಯಕ್ತಿಯನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸರ್ ಎಂದು ಕರೆಯುತ್ತಾರಂತೆ. ಸಚಿವರು ಆತನ ಪರವಾಗಿ ವರ್ಗಾವಣೆ ಮಾಡಿಕೊಡುತ್ತಾರೆ. ಅನೈತಿಕತೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರವಿದು. ದೂರು ನೀಡದ ವಾರವಾಗುತ್ತ ಬಂದರೂ ಸಹ ಆ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
40% ಕಮಿಷನ್ ಹಗರಣ, ಗುತ್ತಿಗೆದಾರನ ಆತ್ಮಹತ್ಯೆ, ಪಿಎಸ್ಐ ಹಗರಣ, ಕರಾವಳಿಯಲ್ಲಿ ಮತೀಯ ಗೂಂಡಾಗಿರಿಗಳ ಹೆಚ್ಚಳ, ಪೆಸಿಎಂ, ಪಕ್ಷಕ್ಕೆ ರೌಡಿಗಳ ಸೇರ್ಪಡೆಯಿಂದ ಟೀಕೆಗೆ ಒಳಗಾಗಿದ್ದ ರಾಜ್ಯ ಬಿಜೆಪಿ ಸರ್ಕಾರವು ಸದ್ಯ ಸ್ಯಾಂಟ್ರೊ ರವಿ ಸಹವಾಸದಿಂದ ಮುಜುಗರಕ್ಕೆ ಸಿಲುಕಿದೆ.
ಇದನ್ನೂ ಓದಿ: ದೇವಾಲಯ ಪ್ರವೇಶಿಸಿದ ದಲಿತ ಮಹಿಳೆಗೆ ಥಳಿತ, ತಲೆಗೂದಲು ಹಿಡಿದು ಹೊರಗೆಳೆದುಹಾಕಿದ ಧರ್ಮದರ್ಶಿ – ವಿಡಿಯೋ ವೈರಲ್
ನಾನು ಗೌರಿಗೆ ಯಾವುದೆ ವಿಷಯ ತಿಳಿಸಬೇಕಾದರೆ ನಿಮ್ಮ ಒಂದು ಫೊನ್ ನಂಬರ ಕಳಿಸಿ