ಕೊರೊನಾ ಹಿನ್ನೆಲೆಯಲ್ಲಿ ನೌಕರರು/ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಡಿ, ಅವರಿಗೆ ಪೂರ್ತಿ ಸಂಬಳ ನೀಡಿ ಎಂದು ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಕ್ಯಾಪ್ಟನ್ ಮಣಿವಣ್ಣನ್ರವರು ಏಪ್ರಿಲ್ 13ರಂದು ಹೊರಡಿಸಿದ್ದ ಆದೇಶವನ್ನು ಅಚ್ಚರಿಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಿಂಪಡೆದಿದ್ದಾರೆ.
ಏಪ್ರಿಲ್ 15ರಂದು ಹಿಂಪಡೆಯಲಾದ ಆದೇಶವನ್ನು ಹೊರಡಿಸಲಾಗಿದ್ದು, ಈಗಾಗಲೇ ಉಲ್ಲೇಖ(1)ರಲ್ಲಿ ಸುತ್ತೋಲೆಯನ್ನು ಹೊರಡಿಸಲಾಗಿದೆ ಮತ್ತು ಈಗಾಗಲೇ ಕೇಂದ್ರ ಸರ್ಕಾರವು ದಿ.29-03-2020ರಂದು ಆದೇಶ ಹೊರಡಿಸಿರುವುದರಿಂದ ಸದರಿ ಉಲ್ಲೇಖ (3)ರ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಮಣಿವಣ್ಣನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಹಿನ್ನೆಲೆಯಲ್ಲಿ ನೌಕರರು/ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಡಿ, ಪೂರ್ತಿ ಸಂಬಳ ನೀಡಿ: ಸರ್ಕಾರದ ಆದೇಶ
ಮೇಲ್ನೋಟಕ್ಕೆ ಇದು ಕೇಂದ್ರದ ಆದೇಶವಿರುವುದರಿಂದ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತೋರಿದರೂ ಸಹ ಕರ್ನಾಟಕ ಎಂಪ್ಲಾಯರ್ಸ್ ಅಸೋಷಿಯೇಷನ್ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
COVID -19 ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಎಲ್ಲಾ ಸಾರ್ವಜನಿಕ/ಖಾಸಗಿ ಸಂಸ್ಥೆಗಳ ಉದ್ಯೋಗದಾತರು ತಮ್ಮ ಉದ್ಯೋಗಿಗಳನ್ನು, ವಿಶೇಷವಾಗಿ casual ಕೆಲಸಗಾರರರನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದೆಂದು ಮತ್ತು ಅವರ ವೇತನವನ್ನು ಕಡಿತಗೊಳಿಸಬಾರದೆಂದು ವಿಪತ್ತು ನಿರ್ವಹಣೆ ಕಾಯ್ದೆ 2005 ಸೆಕ್ಷನ್ 69ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಈ ಮೊದಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಈ ಸಂಬಂಧ ಮಾಡುವ ಯಾವುದೇ ಉಲ್ಲಂಘನೆಗಳು ವಿಪತ್ತು ನಿರ್ವಹಣೆ ಕಾಯ್ದೆ 2005 ರಡಿ ದಂಡನೆಯ ಕ್ರಮಕ್ಕೆ ಒಳಪಟ್ಟಿರುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿತ್ತು.
ಆದರೆ ಈಗ ಏಕಾಏಕಿ ಸರ್ಕಾರ ತನ್ನ ಕಾರ್ಮಿಕ ಪರವಿದ್ದ ಆದೇಶವನ್ನು ಹಿಂಪಡೆದಿದ್ದು ಕರ್ನಾಟಕ ಉದ್ಯೋಗದಾತರ ಸಂಘದ ಒತ್ತಾಯಕ್ಕೆ ಮಣಿದಿದೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸರ್ಕಾರದ ಮೊದಲ ಆದೇಶಕ್ಕೆ ನಾವು ತಕರಾರು ಸಲ್ಲಿಸಿದ್ದೇವು. ನಂತರ ಸರ್ಕಾರ ಆ ಆದೇಶವನ್ನು ಹಿಂಪಡೆದಿದೆ ಎಂದು ಕರ್ನಾಟಕ ಎಂಪ್ಲಾಯರ್ಸ್ ಅಸೋಷಿಯೇಷನ್ನ ಅಧ್ಯಕ್ಷರಾದ ಬಿ.ಸಿ ಪ್ರಭಾಕರ್ರವರು ತಮ್ಮ ಸಂಘದ ಸದ್ಯಸ್ಯರಿಗೆ ಪತ್ರ ಬರೆದಿದ್ದಾರೆ.
ಇದು ಕಾರ್ಮಿಕ ದ್ರೋಹಿ ಸರ್ಕಾರ – ಎಸ್. ಬಾಲನ್
ಈ ಕುರಿತು ನಾನುಗೌರಿ.ಕಾಂ ಹಿರಿಯ ಕಾರ್ಮಿಕ ಮುಖಂಡರಾದ ಎಸ್.ಬಾಲನ್ರವರನ್ನು ಮಾತನಾಡಿಸಿತು. ಅವರು “ಏಪ್ರಿಲ್ 13ರಂದು ಸರ್ಕಾರ ಹೊರಡಿಸಿದ್ದ ಆದೇಶ ಕೇವಲ ಸಂಘಟಿತ ವಲಯದಲ್ಲಿನ casual ಕೆಲಸಗಾರ ಮತ್ತು ಗುತ್ತಿಗೆ ಕಾರ್ಮಿಕರಿಗೆ ಮಾತ್ರ ಅನ್ವಯಿಸುತ್ತಿತ್ತು. ಅವರಲ್ಲದೇ ಈ ದೇಶದಲ್ಲಿ ಅಸಂಘಟಿತ ವಲಯದಲ್ಲಿ ಕೋಟ್ಯಾಂತರ ಕಾರ್ಮಿಕರಿದ್ದಾರೆ. ಅವರೆಲ್ಲರನ್ನು ಈ ಸರ್ಕಾರ ಮರತೇಬಿಟ್ಟಿತ್ತು. ಈಗ ಸಂಘಟಿತ ವಲಯದಲ್ಲಿರುವವರನ್ನು ಕೈಬಿಟ್ಟಿದ್ದಾರೆ. ಅಂದರೆ ಈ ಸರ್ಕಾರ ಕಾರ್ಮಿಕರಿಗೆ ದ್ರೋಹ ಮಾಡುತ್ತಿರುವುದು ಸ್ಪಷ್ಟವಾಗಿದೆ” ಎಂದರು.
1979ರಲ್ಲಿ ಇಂಟರ್ಸ್ಟೇಟ್ ಕಾಂಟ್ರಾಕ್ಟ್ ಲೇಬರ್ ಆಕ್ಟ್ ಪ್ರಕಾರ ಕಾರ್ಮಿಕನ ಸ್ವಂತ ರಾಜ್ಯ ಮತ್ತು ಕಾರ್ಮಿಕ ಕೆಲಸ ಮಾಡುವ ರಾಜ್ಯ ಎರಡೂ ಸಹ ಆತನ ಬಗ್ಗೆ ಕಾಳಜಿ ವಹಿಸಬೇಕು. ಅದರ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಅಲ್ಲದೇ ಲಾಕ್ಡೌನ್ ಮಾಡುವಾಗ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಯೋಚಿಸದ ಸರ್ಕಾರಗಳು ಜನದ್ರೋಹಿಯಾಗಿವೆ. ಕಾರ್ಮಿಕರಿಗೆ ಊಟ ಹಾಕಲು ಯೋಗ್ಯತೆಯಿಲ್ಲದ ಈ ಸರ್ಕಾರ ಸೀಲ್ಡೌನ್ ಮಾಡುವ ಮಾತಾಡುತ್ತಿದೆ. ಆದೇಶ ಹಿಂಪಡೆದಿರುವುದು ಮಾನವ ಹಕ್ಕುಗಳಿಗೆ ವಿರುದ್ಧವಾಗಿದ್ದು, ಕೂಡಲೇ ಎಲ್ಲಾ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಎಂದು ಬಾಲನ್ ಆಗ್ರಹಿಸಿದ್ದಾರೆ.
ಇದು ಮಾಲೀಕರ ಪರ ಸರಕಾರ – ಆರ್ ಮಾನಸಯ್ಯ
ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI)ದ ರಾಜ್ಯಧ್ಯಕ್ಷರಾದ ಕಾರ್ಮಿಕ ಸಂಘಟನೆಯ ಮುಖಂಡರಾದ ಆರ್.ಮಾನಸಯ್ಯನವರು ಈ ವಿಚಾರಕ್ಕೆ ಪ್ರತಿಕ್ರಿಯಿಸಿ, “ಕರ್ನಾಟಕ ರಾಜ್ಯ ಸರಕಾರವು ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ, ಕೆಲಸ ಇರಲಿ, ಇಲ್ಲದಿರಲಿ ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ ವೇತನ ಪಾವತಿ ಮಾಡಬೇಕೆಂದು ದಿ 13-4-2020 ಸುತ್ತೋಲೆ ಹೊರಡಿಸಿತ್ತು. ಆದರೆ ಕರ್ನಾಟಕ ಉದ್ಯೋಗದಾತರ ಸಂಘದ ಒತ್ತಾಯಕ್ಕೆ ಮಣಿದು ಸದರಿ ಆದೇಶವನ್ನು ಹಿಂಪಡೆದಿದೆ. ಕೆಲಸ ಹಾಗೂ ಕೂಲಿ ಇಲ್ಲದೆ ರಾಜ್ಯದ ಖಾಸಗೀ ಕಾಖಾ೯ನೆಗಳ,ಹೋಟೆಲ್ ಅಂಗಡಿ ಮುಂಗಟ್ಟುಗಳ ,ಸರಕಾರಿ ಇಲಾಖೆಗಳ ಎಲ್ಲ ಕಾಮಿ೯ಕರ ಜೀವನಕ್ಕೆ ಗಂಡಾಂತರ ತರಲಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ಸರಕಾರದ ಬಣ್ಣ ಇನ್ನಷ್ಟು ಬದಲಾಗಿದೆ. ಸಂಪೂಣ೯ ಸಂಕಷ್ಟಕ್ಕೆ ತುತ್ತಾದ ಕಾಮಿ೯ಕರನ್ನು ನಡು ನೀರಲ್ಲಿ ಕೈಬಿಟ್ಟು ತಾನು ಮಾಲೀಕರ ಸರಕಾರ ಎಂದು ಸಾಬೀತು ಪಡಿಸಿದೆ. ಇದೇ ರೀತಿ ಕೇಂದ್ರ ಹಾಗೂ ರಾಜ್ಯಸರಕಾರದ ಎಲ್ಲಾ ಕೊರೊನಾ ಪರಹಾರ ಭರವಸೆಗಳು ಮೋಸದಿಂದ ಕೂಡಿವೆ. ಈ ತೀರ್ಮಾನವನ್ನು ಸರಕಾರ ಕೈ ಬಿಡಬೇಕು. 13-4-2020ರ ಸುತ್ತೋಲೆಯನ್ನು ಮತ್ತೆ ಜಾರಿಗೆ ತರಬೇಕು. ಇದಾಗದಿದ್ದರೆ, ಕಾರ್ಮಿಕರು ಬಹಿರಂಗವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರಕಾರಕ್ಕೆ ಈ ಮೂಲಕ ಎಚ್ಚರಿಸುತ್ತೇವೆ” ಎಂದಿದ್ದಾರೆ.