Homeಕರ್ನಾಟಕಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

ಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

- Advertisement -
- Advertisement -

ಜುಲೈ 23ರ ಮಂಗಳವಾರ ರಾತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಸೋತಕೂಡಲೇ ಯಡಿಯೂರಪ್ಪ ನಾಳೆಯಿಂದ ಅಭಿವೃದ್ದಿಪರ್ವ ಎಂದು ಹೇಳಿಕೆ ಕೊಟ್ಟರು. ಅಂದರೆ ನಾಳೆಯೇ ನಾವು ಸರ್ಕಾರ ರಚಿಸುತ್ತೇವೆ ಎಂಬ ಆತ್ಮ ವಿಶ್ವಾಸ ಅವರದ್ದಾಗಿತ್ತು. ಆದರೆ ಜುಲೈ 23ರ ಬುಧವಾರ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ.

ಅಂದರೆ ಸರ್ಕಾರ ರಚನೆಗೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಹೈಕಮಾಂಡ್ ತಡೆವೊಡ್ಡಿತ್ತು. ತಾನು ಮುಖ್ಯಮಂತ್ರಿ ಆಗಿಯೇ ತೀರಬೇಕು ತಾಳ್ಮೆಯಿಂದ ಕಾಯುತ್ತಿದ್ದ ಯಡಿಯೂರಪ್ಪನವರಿಗೆ ಇದು ಪ್ರತಿಕ್ಷಣವೂ ತಾಳಲಾರದ ನೋವಾಗಿತ್ತು. ಕಷ್ಟಪಟ್ಟು ಮೈತ್ರಿ ಸರ್ಕಾರ ಉರುಳಿಸಿದರೂ ತನಗೆ ಹೈಕಮಾಂಡ್ ಪಟ್ಟ ಕಟ್ಟಲು ಹಿಂದೇಟು ಹಾಕುತ್ತಿರುವುದು ಅವರಿಗೆ ಸಿಟ್ಟು ತರಿಸಿತ್ತು.
ಈ ನಡುವೆ ಪೂರ್ಣ ಬಹುಮತ ಇಲ್ಲದ ಕಾರಣಕ್ಕೆ ಈಗಲೇ ಸರ್ಕಾರ ರಚಿಸುವುದು ಬೇಡ, ರಾಷ್ಟ್ರಪತಿ ಆಡಳಿತ ತರೋಣ ಎಂಬ ಚರ್ಚೆಗಳು ಶುರುವಾದವು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಖ್ಯ ಕಾರಣರಾಗಿದ್ದರು ಎಂದು ಹೇಳಲಾಗುತ್ತಿತ್ತು.

ನಂತರ ಯಡಿಯೂರಪ್ಪ ಕೋಪಿಸಿಕೊಂಡು ಒಂದು ತಂಡವನ್ನು ದೆಹಲಿಗೆ ಕಳಿಸಿದರು. ಅಮಿತ್ ಶಾರನ್ನು ಭೇಟಿಯಾಗುವುದು ಈ ನಿಯೋಗದ ಕೆಲಸವಾಗಿತ್ತು. ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ವಿಜಯೇಂದ್ರ ಇಷ್ಟು ಜನ ನಿಯೋಗದಲ್ಲಿದ್ದರು. ಅಂದು ಬೆಳಿಗ್ಗೆ ಲೋಕಸಭೆಗೆ ಹೊರಡುವ ಮುನ್ನ ನಿಯೋಗವನ್ನು ಭೇಟಿ ಮಾಡಿದ ಅಮಿತ್ ಶಾ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಸಂಜೆ ಬರುತ್ತೇನೆ ಕಾಯಿರಿ ಎಂದು ಹೇಳಿಹೋದವರು ಸಂಜೆ ಬರಲೇ ಇಲ್ಲ.

ಅಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಭೆ ಸೇರಿ ಅತೃಪ್ತರನ್ನು ಮನವೊಲಿಸುವ ಅಂತಿಮ ಪ್ರಯತ್ನ ಮಾಡುವ ನಿರ್ಣಯವಾಯಿತು. ಆ ಪ್ರಕಾರ ಈಶ್ವರ್ ಖಂಡ್ರೆ ಅತೃಪ್ತರನ್ನು ಭೇಟಿಯಾಗಲು ಅವರು ಪೂನಾದಲ್ಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪೂನಾಗೆ ಹೊರಟರೆ, ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಅತೃಪ್ತ ಶಾಸಕರನ್ನು ಭೇಟಿ ಮಾಡಿ, ಅವರು ಕೇಸ್ ವಾಪಸ್ ಪಡೆದರೆ ಹೇಗೆ ಎಂದು ಚರ್ಚಿಸುವ ಉದ್ದೇಶದಿಂದ ಡಿ.ಕೆ ಶಿವಕುಮಾರ್ ದೆಹಲಿಗೆ ಹೊರಟರು.

ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಸುಧಾಕರ್ ಮತ್ತು ಗೋಪಾಲಯ್ಯ ಮತ್ತೆ ವಾಪಸ್ ಮೈತ್ರಿ ಸರ್ಕಾರಕ್ಕೆ ಬರಲು ರೆಡಿ ಇದ್ದಾರೆ ಎನ್ನುವ ಮಾಹಿತಿ ಓಡಾಡಿತು. ಅತೃಪ್ತರ ಪೈಕಿ ಈ ಆರು ಜನರ ಮೇಲೆಯೇ ಬಿಜೆಪಿಗೂ ಡೌಟ್ ಇತ್ತು. ಇವರಲ್ಲಿ ಸುಧಾಕರ್ ಮತ್ತು ಗೋಪಾಲಯ್ಯ ಹಿಂದೆಯೂ ತಮ್ಮ ಪಕ್ಷಗಳ ವಿರುದ್ಧ ಮಾತಾಡಿದ್ದರು. ಉಳಿದ ನಾಲ್ಕು ಜನ ರಾಜೀನಾಮೆ ನೀಡಬಹುದು ಎಂಬ ನಿರೀಕ್ಷೆ ಮೊದಲು ಬಿಜೆಪಿಗೇ ಇರಲಿಲ್ಲ ಇಷ್ಟು ಜನ ಶಾಸಕರಿಗೆ ಕಾಂಗ್ರೆಸ್ ಒಂದು ಆಫರ್ ಸಹ ನೀಡಿತ್ತು. ಅದು ಡಿ.ಕೆ.ಶಿವಕುಮಾರ್ ಅಥವಾ ರಾಮಲಿಂಗಾರೆಡ್ಡಿ ಸಿಎಂ ಆಗುತ್ತಾರೆ ಎನ್ನುವ ಆಫರ್ ಅದಾಗಿತ್ತು. ಇದಕ್ಕೆ ಕೆಲವರಿಗೆ ಸಹಮತ ಸಹ ಇತ್ತು ಎನ್ನಲಾಗುತ್ತಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಎಚ್ಚೆತ್ತುಕೊಂಡರು.

ಗುರುವಾರ ರಾತ್ರಿ ಅತೃಪ್ತರ ಜೊತೆ ಮಾತನಾಡಿದ ಯಡಿಯೂರಪ್ಪ ಒಂದು ಹೊಸ ದಾಳ ಉರುಳಿಸಿದರು. ಅತೃಪ್ತರ ಹತ್ತಿರ ‘ಸ್ಪೀಕರ್ ನಮ್ಮನ್ನು ಯಾವಾಗ ಅನರ್ಹಗೊಳಿಸುತ್ತಾರೆ ಹೇಳಲಿಕ್ಕೆ ಬರುವುದಿಲ್ಲ. ಹಾಗಾಗಿ ಅದಕ್ಕೂ ಮುಂಚೆ ಹೊಸ ಸರ್ಕಾರ ರಚಿಸಿಬಿಡಬೇಕು, ಇಲ್ಲದಿದ್ದರೆ ನಮ್ಮ ಪಾಡನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಹೇಳಿಸಿದರು. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಯಡಿಯೂರಪ್ಪನವರ ಪರವಾದ ನಿಯೋಗ ಜೆ.ಪಿ ನಡ್ಡಾ ಮನೆಗೆ ಹೋಯಿತು. ಶೆಟ್ಟರ್ ಮೂಲಕ ಅತೃಪ್ತ ಶಾಸಕರು ಜೆ.ಪಿ ನಡ್ಡಾರನ್ನು ಬ್ಲಾಕ್‍ಮೇಲ್ ಮಾಡಿದರು. ನಾಳೆ ಬೆಳಿಗ್ಗೆ ಒಳಗೆ ಯಡಿಯೂರಪ್ಪನವರು ಸಿಎಂ ಆಗಿಬಿಡಬೇಕು ಇಲ್ಲದಿದ್ದರೆ ನಾವು ವಾಪಸ್ ಹೋಗುತ್ತೇವೆ ಎಂದು ಬೆದರಿಕೆ ಹಾಕಿದರು.
ತದನಂತರವಷ್ಟೇ ಹೆದರಿದ ಬಿಜೆಪಿ ಹೈಕಮಾಂಡ್ ಶುಕ್ರವಾರ ಮಧ್ಯಾಹ್ನದ ವೇಳೆಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಘೋಷಿಸಬೇಕಾಯ್ತು. ಅಂದರೆ ಮೊದಲ ಬಾರಿಗೆ ಹೈಕಮಾಂಡ್ ಅನ್ನು ಬಗ್ಗಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಕ್ಯಾಬಿನೆಟ್ ವಿಸ್ತರಣೆ ಮಾತ್ರ ಹೈಕಮಾಂಡ್ ಕೈಯಲ್ಲಿದೆ.

ಇದುವರೆಗೂ ಮೋದಿ-ಅಮಿತ್ ಶಾರನ್ನು ಬಗ್ಗಿಸಿ ಸಿಎಂ ಆದವರು ಯಾರು ಇರಲಿಲ್ಲ. ಮಾಸ್ ಫಾಲೋವರ್ಸ್ ಇಲ್ಲದವರನ್ನು ಮೋದಿ ಅಮಿತ್ ಶಾ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದರು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್, ಗುಜರಾತಿನಲ್ಲಿ ವಿಜಯ್ ರೂಪಾಣಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಜಾರ್ಖಂಡ್‍ನಲ್ಲಿ ಆದಿವಾಸಿಯಲ್ಲದವರು ಸಿಎಂ, ಹರಿಯಾಣದಲ್ಲಿ ಪಂಜಾಬ್‍ನ ವ್ಯಕ್ತಿಯೊಬ್ಬನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿತ್ತು, ಆದರೆ ಈಗ ಯಡಿಯೂರಪ್ಪ ಮಾತ್ರ ಅದಕ್ಕೆ ಬಗ್ಗಿಲ್ಲ.

ಪ್ರಾದೇಶಿಕವಾಗಿ ಪ್ರಬಲ ಮಾಸ್ ಲೀಡರ್ ಇರಬಾರದು ಎಂಬುದು ಸಾಮಾನ್ಯವಾಗಿ ದೆಹಲಿ ನಾಯಕರುಗಳ ಇರಾದೆಯಾಗಿರುತ್ತದೆ. ಈ ಸದ್ಯ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಗೆ ಕಷ್ಟವೇನಲ್ಲ. ಅದರಲ್ಲೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಸರಳ ಬಹುಮತವೂ ಇಲ್ಲ. ಆದರೆ, ಇಂತಹ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಪ್ರಾದೇಶಿಕವಾಗಿ ಪ್ರಬಲವಾಗಿರುವ ನರೇಂದ್ರ ಮೋದಿ ಮತ್ತು ಅಮಿತ್‍ಶಾ ಸಮಕಾಲೀನರಾಗಿರುವ ಶಿವರಾಜ್ ಚೌಹಾಣ್ ಮತ್ತು ವಸುಂದರರಾಜೇ ಸಿಂಧಿಯಾ ಅವರನ್ನೇ ಸಿಎಂಗಳನ್ನಾಗಿಸಬೇಕಾಗುತ್ತದೆ. ಅದು ಬೇಡ ಎಂಬ ಕಾರಣಕ್ಕೂ ಅಲ್ಲಿ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುತ್ತಿಲ್ಲ.

ಕರ್ನಾಟಕದಲ್ಲಿ ಯಡಿಯೂರಪ್ಪನವರು ಅಷ್ಟು ಕಾಯಲು ಸಿದ್ಧರಿಲ್ಲ. ಜೊತೆಗೆ ದಕ್ಷಿಣ ಭಾರತದ ಒಂದು ರಾಜ್ಯದಲ್ಲಾದರೂ ಸರ್ಕಾರ ಇರುವುದು ಬಿಜೆಪಿಗೂ ಬೇಕು. ಹೀಗಾಗಿ ಕರ್ನಾಟಕ ಸರ್ಕಾರ ಉರುಳಿಸಿ ಚುನಾವಣೆಗೆ ಹೋಗೋಣ ಎಂಬ ಬಗ್ಗೆ ದೆಹಲಿ ನಾಯಕರು ಯೋಚಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅತೃಪ್ತರ ಮೂಲಕ ಯಡಿಯೂರಪ್ಪನವರು ಒಂದು ಷಾಕ್ ಟ್ರೀಟ್‍ಮೆಂಟ್ ಕೊಟ್ಟಿದ್ದಲ್ಲದೇ ಇನ್ನೂ ಖಚಿತವಾದ ಸಂದೇಶವನ್ನೂ ನೀಡಿದರು ಎನ್ನಲಾಗುತ್ತದೆ.

ಅಲ್ಲಿಂದಾಚೆಗೆ ಅಮಿತ್ ಶಾಗೆ ಹೆಚ್ಚಿನ ಸಾಧ್ಯತೆಗಳಿರಲಿಲ್ಲ. ಗವರ್ನರ್ ಮತ್ತು ಯಡಿಯೂರಪ್ಪ ಇಬ್ಬರಿಗೂ ಗೋ ಅಹೆಡ್ ಎಂಬ ಸೂಚನೆಯನ್ನು ರವಾನಿಸಿದರು. ಆದರೆ, ಅಲ್ಲಿಂದ ಮುಂದಕ್ಕೆ ಎಲ್ಲಾ ವಿಚಾರಗಳೂ ಯಡಿಯೂರಪ್ಪ ಹೇಳಿದಂತೆ ನಡೆಯಲು ಬಿಡಬಾರದು ಅಂತಲೂ ತೀರ್ಮಾನಿಸಿದರು. ಹಾಗಾಗಿಯೇ ಯಡ್ಡಿ ಒಬ್ಬರನ್ನೇ ಪ್ರಮಾಣವಚನ ಸ್ವೀಕರಿಸಲು ಹೇಳಿದರು. ಸ್ಪೀಕರ್ ರಮೇಶ್‍ಕುಮಾರ್ ರಾಜೀನಾಮೆ ನೀಡಿದ ನಂತರ, ಆ ಸ್ಥಾನಕ್ಕೆ ಬೋಪಯ್ಯನವರನ್ನು ತರಬೇಕು ಎಂಬ ಯಡಿಯೂರಪ್ಪನವರ ಇರಾದೆಗೂ ಸೊಪ್ಪು ಹಾಕಲಿಲ್ಲ. ಸಂಘಪರಿವಾರಕ್ಕೆ ನಿಷ್ಠರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಯಡಿಯೂರಪ್ಪನವರ ಆಯ್ಕೆಯಾಗಿರಲಿಲ್ಲ.

ಹೊಸ ಮುಖ್ಯಮಂತ್ರಿಗೆ ಇನ್ನು ಮುಂದೆ ಅಡಿಗಡಿಗೂ ತೊಡಕುಂಟಾಗಲಿರುವುದು ವಿರೋಧ ಪಕ್ಷಗಳಲ್ಲ. ಬದಲಿಗೆ ಬಿಜೆಪಿ ಹೈಕಮಾಂಡ್ ಮತ್ತು ಅದರ ದಾಳಗಳಾಗಿ ಕರ್ನಾಟಕದಲ್ಲಿ ಬಳಕೆಯಾಗಲಿರುವ ಬಿಜೆಪಿ ನಾಯಕರುಗಳು. ಇದನ್ನು ಬಲ್ಲ ಯಡ್ಡಿ, ಅಗತ್ಯಕ್ಕಿಂತಲೂ ಹೆಚ್ಚೇ ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಮಾತುಗಳನ್ನು ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಆಡಿದರು. ದ್ವೇಷದ ಕ್ರಮಗಳಿಗೆ ತಾನು ಮುಂದಾಗುವುದಿಲ್ಲ ಎಂತಲೂ ಹೇಳಿದರು.

ಆದರೆ ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳು ಮಾತ್ರ ವಿರೋಧ ಪಕ್ಷಗಳ ಹಿತಾಸಕ್ತಿಗಳನ್ನು ಸಿಟ್ಟಿಗೇಳಿಸುವ ರೀತಿಯೇ ಇದೆ. ಇನ್ನೂ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾಗಲೇ, ಹಿಂದಿನ ಸರ್ಕಾರದ ಆದೇಶಗಳನ್ನು ಪೆಂಡಿಂಗ್ ಇರಿಸಿದರು; ಕುಮಾರಸ್ವಾಮಿಯವರ ಬಜೆಟ್‍ಗೆ ಮೂರು ತಿಂಗಳ ಲೇಖಾನುದಾನ ಮಾತ್ರ ಪಡೆದುಕೊಂಡು, ಇನ್ನೊಂದು ಬಜೆಟ್ ಮಂಡಿಸುವ ಸುಳಿವು ನೀಡಿದ್ದಾರೆ. ಇನ್ನೂ ಸಚಿವ ಸಂಪುಟ ರಚನೆಯಾಗುವ ಮೊದಲೇ, ಸಚಿವ ಸಂಪುಟದ ತೀರ್ಮಾನವಾಗಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಕೆಜೆಪಿಗೆ ಹೋದಾಗ ಟಿಪ್ಪು ಟೋಪಿಯನ್ನು ಹಾಕಿಕೊಂಡು, ಖಡ್ಗ ಹಿಡಿದುಕೊಂಡು ಮಿಂಚಿದ್ದ ಯಡಿಯೂರಪ್ಪನವರ ಮೇಲೆ ಬಿಜೆಪಿಯ ಬೇರೆ ಶಕ್ತಿಗಳ ಒತ್ತಡದ ಪರಿಣಾಮವೂ ಇವಾಗಿರುವ ಸಾಧ್ಯತೆ ಇದೆ.

ಈ ಸಾರಿ ಆಪರೇಷನ್ ಮಾಡಿದ್ದು ಯಡ್ಡಿಯೇ
ಸ್ಥಳೀಯ ಬಿಜೆಪಿಗೆ ಗೊತ್ತಿಲ್ಲದೆಯೇ ಡೀಲ್ ನಡೆದಿದೆಯಂತೆ, ಹೈಕಮಾಂಡೇ ಎಲ್ಲರನ್ನೂ ಸಂಪರ್ಕಿಸಿ ಬುಟ್ಟಿಗೆ ಹಾಕಿಕೊಂಡಿದೆಯಂತೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಆದರೆ ಇದು ಯಡಿಯೂರಪ್ಪ ಮತ್ತು ಹೈಕಮಾಂಡ್ ಜೊತೆ ಸೇರಿ ನಡೆಸಿದ ಆಪರೇಷನ್ ಆಗಿತ್ತು. ಅರವಿಂದ ಲಿಂಬಾವಳಿ, ಯಡ್ಡಿ ಪಿ.ಎ. ಸಂತೋಷ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಯೋಗೇಶ್ವರ್ ಮತ್ತು ಆರ್.ಅಶೋಕ್ ಅವರುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಫೈನಾನ್ಸ್ ಡೀಲ್ ಮಾಡಿದ್ದು ಪಿಯೂಷ್ ಗೋಯೆಲ್ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಹೈಕಮಾಂಡ್ ನೇರವಾಗಿ ಇಳಿದು ಕಾರ್ಯಾಚರಣೆ ನಡೆಸಲಾರಂಭಿಸಿದ್ದು, ರಾಜೀನಾಮೆಗಳ ನಂತರವೇ. ರಾಜೀನಾಮೆಯ ನಂತರ ಮಹಾರಾಷ್ಟ್ರಕ್ಕೆ ಬರುವುದು ಮತ್ತು ಅಲ್ಲಿ ಬೇಕಾದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದು ಕೇಂದ್ರ ಬಿಜೆಪಿ – ಸ್ಥಳೀಯ ಸರ್ಕಾರದ ನೆರವಿನೊಂದಿಗೆ. ಅಲ್ಲಿಂದಾಚೆಗೆ ಆ ಎಲ್ಲಾ ಶಾಸಕರೂ ಗಟ್ಟಿಯಾಗಿ ಉಳಿಯುತ್ತಾರೆ ಎಂಬ ಭರವಸೆ ಬಿಜೆಪಿಗೇ ಇರಲಿಲ್ಲ. ಆಗ ಶಾಸಕರಿಗೆ ಪರೋಕ್ಷವಾಗಿ ಇಡಿ-ಐಟಿಯ ಭಯವನ್ನು ಹುಟ್ಟಿಸಲಾಯಿತು. ಅದರಲ್ಲೂ ಹೈಕಮಾಂಡ್‍ನ ನೇರ ಭಾಗವಹಿಸುವಿಕೆ ಇತ್ತು. ಎಂಟಿಬಿ ನಾಗರಾಜ್‍ರ ವಿಚಾರದಲ್ಲೂ ಬಿಜೆಪಿಯ ಕೇಂದ್ರ ನಾಯಕರ ಪಾತ್ರವಿತ್ತು (ಕಳೆದ ಸಂಚಿಕೆಯಲ್ಲಿ ಈ ಕುರಿತು ಬರೆಯಲಾಗಿದೆ)
ಇದೆಲ್ಲಾ ಏನೇ ಇದ್ದರೂ, ಈ ಸಾರಿಯ ಆಪರೇಷನ್‍ನ ಮೂಲ ಸೂತ್ರಧಾರಿ ಸ್ವತಃ ಯಡಿಯೂರಪ್ಪನವರೇ ಆಗಿದ್ದರು. ಆಪರೇಷನ್ ನಡೆಯಲಿ ಎಂಬ ಅಭಿಪ್ರಾಯ ಬಿಜೆಪಿ ಹೈಕಮಾಂಡ್‍ದಾಗಿತ್ತಾದರೂ, ಕೂಡಲೇ ಬಿಜೆಪಿ ಸರ್ಕಾರ ರಚಿಸಬೇಕೇ ಎಂಬ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಯಡಿಯೂರಪ್ಪನವರನ್ನು ಈಗಲೇ ಪಕ್ಕಕ್ಕೆ ಸರಿಸುವುದು ಕಷ್ಟ; ಆದರೆ ಅವರನ್ನೇ ಕರ್ನಾಟಕದ ಬಲಿಷ್ಠ ನಾಯಕನನ್ನಾಗಿ ಬಿಂಬಿಸಬಾರದು ಎಂಬುದು ಅವರ ಲೆಕ್ಕಾಚಾರವಿದ್ದಂತೆ ತೋರುತ್ತದೆ.

ವಿರೋಧ ಪಕ್ಷದ ನಾಯಕ ಯಾರು?
ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡುವಾಗ, ಉಪಸಭಾಧ್ಯಕ್ಷರ ಪಕ್ಕದ ಸೀಟು – ಅಂದರೆ ವಿರೋಧ ಪಕ್ಷದ ನಾಯಕರ ಸೀಟು – ಯಾರಿಗೆ ಎಂಬುದು ನಿರ್ಧಾರವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಅದು ತನಗೇ ಮೀಸಲಾದದ್ದು ಎಂಬ ರೀತಿಯಲ್ಲಿ ಅಲ್ಲಿ ಕೂತರು. ವಿರೋಧ ಪಕ್ಷದ ನಾಯಕನಿಗಿಂತಲೂ ತಾನೇ ಮುಖ್ಯಮಂತ್ರಿ ಎಂಬ ರೀತಿಯಲ್ಲಿ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಮತ್ತು ನಡವಳಿಕೆ ಇತ್ತು. ಒಮ್ಮೆ ಯಡಿಯೂರಪ್ಪನವೂ ಬಾಯಿ ತಪ್ಪಿ, ‘ಮಾನ್ಯ ಮುಖ್ಯಮಂತ್ರಿಗಳೇ’ ಎಂದು ಸಿದ್ದರಾಮಯ್ಯನವರನ್ನು ಸಂಬೋಧಿಸಿದರು.

ಸರ್ಕಾರ ಉಳಿಯುವವರೆಗೆ ಸಿದ್ದರಾಮಯ್ಯನವರನ್ನು ವಿರೋಧಿಸದಿದ್ದ, ಇತರ ಕಾಂಗ್ರೆಸ್ ನಾಯಕರು ಇದೀಗ ‘ಸರ್ಕಾರ ಉರುಳಲು ಸಿದ್ದರಾಮಯ್ಯನವರು ತಮ್ಮ ಆಪ್ತರನ್ನು ಹಿಡಿದಿಟ್ಟುಕೊಳ್ಳದಿದ್ದುದೂ ಕಾರಣ’ ಎಂದು ಪಕ್ಷದ ವಲಯಗಳೊಳಗೆ ಮಾತಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ‘ಪಕ್ಷ ಹೇಳಿದರೆ, ಸದನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ’ ಎಂದೂ ಹೇಳಿಯಾಗಿದೆ.

ಶಾಸಕರು ರಾಜೀನಾಮೆ ಕೊಟ್ಟ ನಂತರ, ಸರ್ಕಾರ ಬೀಳುವವರೆಗೆ ಅಪೂರ್ವ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್-ಜೆಡಿಎಸ್ ನಾಯಕರ ಮುಂದಿನ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ಆದರೆ, ಆ ಒಂದು ವಾರದ ಒಗ್ಗಟ್ಟಂತೂ ಉಳಿಯುವುದಿಲ್ಲ ಎಂಬುದಕ್ಕೆ ಸೂಚನೆಗಳು ಈಗಾಗಲೇ ಸಿಕ್ಕಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...