Homeಮುಖಪುಟಈ ಸೋಲು ಕಾಂಗ್ರೆಸ್ಸಿನದೋ? ಪ್ರಗತಿಪರರದ್ದೋ?

ಈ ಸೋಲು ಕಾಂಗ್ರೆಸ್ಸಿನದೋ? ಪ್ರಗತಿಪರರದ್ದೋ?

- Advertisement -
- Advertisement -

ಇಲ್ಲಿ ಕಾಂಗ್ರೆಸ್ ಎಂದಾಗ ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ಎಂದೂ, ಪ್ರಗತಿಪರರು ಎಂದಾಗ ಎಡ, ಲಿಬರಲ್ ಇತ್ಯಾದಿ ಎಂದೂ ಓದಿಕೊಳ್ಳಬಹುದು. 2019ರ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ಫಲಿತಾಂಶವು ಸಮಾಜದಲ್ಲಿ ಆಗಿರುವ ಬದಲಾವಣೆಯ ಪ್ರತೀಕ ಎಂಬುದು ಈಗಂತೂ ಸಾಬೀತಾಗಿದೆ. ಸೋತು ಸೊರಗಿ ಹೋಗಿರುವ ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿಯವರು ರಾಜೀನಾಮೆ ಕೊಟ್ಟರಲ್ಲದೇ, ಅದು ನಾಟಕವಲ್ಲ ಎಂದು ಸ್ಪಷ್ಟಪಡಿಸಿದರು. ಅವರು ರಾಜೀನಾಮೆ ಕೊಟ್ಟಾಗ, ಪಕ್ಷದೊಳಗೆ ಇನ್ನಷ್ಟು ಅಧಿಕಾರ ಪಡೆದುಕೊಳ್ಳಲು ಮತ್ತು ಕೆಲವು ಹಿರಿಯರನ್ನು ದೂರಲು ಮಾಡಿರುವ ನಾಟಕ ಎಂದು ಭಾವಿಸಲಾಯಿತು. ಬಿಜೆಪಿಯು ವಂಶಾಡಳಿತದ ಮೇಲೆ ನಡೆಸುತ್ತಿರುವ ದಾಳಿಯಿಂದ ತಪ್ಪಿಸಿಕೊಳ್ಳಲು ರಾಹುಲ್‍ಗಾಂಧಿ ನಿಜಕ್ಕೂ ಅಧಿಕಾರ ತ್ಯಜಿಸುತ್ತಿದ್ದಾರೆ ಎಂದೂ ಹೇಳಲಾಯಿತು. ಇವೆರಡರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದು ಪತ್ತೆಯಾಗುವುದು ಕಷ್ಟ. ಗಾಂಧಿ ಕುಟುಂಬ ಅಧಿಕಾರ ಬೇಡವೆಂದರೂ, ಅವರಿಗೇ ಅಂಟಿಕೊಂಡಿರಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗಿರಬಹುದು. ಇಲ್ಲವೇ ಅವರಿಗೂ ಅಧಿಕಾರ ಅಭ್ಯಾಸವಾಗಿರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಸೋನಿಯಾಗಾಂಧಿ ಮತ್ತೆ ‘ಹಂಗಾಮಿ’ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಎಷ್ಟು ತಾತ್ಕಾಲಿಕ ಎಂಬುದನ್ನು ಮುಂದಿನ ದಿನಗಳು ಹೇಗೂ ತಿಳಿಸುತ್ತವೆ.

ಆದರೆ, ದೇಶಕ್ಕೊಂದು ಪ್ರತಿಪಕ್ಷವೂ ಗತಿಯಿರದ ಸ್ಥಿತಿಗೆ ಭಾರತದ ಪ್ರಜಾಪ್ರಭುತ್ವ ತಲುಪಿದೆ. ಸರ್ವಾಧಿಕಾರ ಲಕ್ಷಣಗಳು ಬಹಳ ಹಿಂದೆಯೇ ಕಾಣಿಸಿತ್ತಾದರೂ, ಅದು ಜಾರಿಗೆ ಬರುತ್ತಿರುವುದು ಕಣ್ಣ ಮುಂದೆಯೇ ಕಾಣುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದ್ದರೂ, ದೇಶವಾಳುತ್ತಿರುವ ಪಕ್ಷವನ್ನು ಕಾಪಾಡಲು ಹೊರಗೆ ಪಾಕಿಸ್ತಾನವಿದೆ. ಒಳಗೆ ಜಾತಿ-ಧರ್ಮ ಮತ್ತು ಹಣಬಲವಿದೆ. ಹೀಗಿರುವಾಗ ಜನರೊಳಗಿಂದಲೇ ಪ್ರತಿಪಕ್ಷವು ಹುಟ್ಟಿಕೊಳ್ಳಬೇಕು ಎಂಬ ಮಾತು ಎಷ್ಟೇ ಕ್ಲೀಷೆಯೆನಿಸಿದರೂ ಬೇರೆ ಯಾವ ಷಾರ್ಟ್‍ಕಟ್ ಸಹಾ ಇದಕ್ಕಿಲ್ಲ.

ಮುಂದಣ ದಾರಿಯನ್ನು ಕಂಡುಕೊಳ್ಳುವಾಗ, ಹಿಂದಣ ಹೆಜ್ಜೆಯನ್ನು ಒಮ್ಮೆ ತಿರುಗಿ ನೋಡಿಕೊಳ್ಳಬೇಕು. ಕಳೆದ ಎರಡು ದಶಕಗಳಿಂದ, ಅದರಲ್ಲೂ 2019ರ ಚುನಾವಣೆಯ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಒಂದು ವಾದವನ್ನು ಒರೆಗೆ ಹಚ್ಚಿ ನೋಡುವ ಅಗತ್ಯವಿದೆ. ಬಿಜೆಪಿಗೆದುರಾಗಿ ಕಾಂಗ್ರೆಸ್ ಬಿಟ್ಟರೆ ಬೇರೆ ದಾರಿಯಿಲ್ಲವೆಂತಲೂ, ಕಾಂಗ್ರೆಸ್‍ನ ನೇತೃತ್ವದಲ್ಲಿ ಪ್ರತಿಪಕ್ಷಗಳೆಲ್ಲವೂ ಒಂದಾಗಬೇಕೆಂತಲೂ ಬಿಜೆಪಿ ವಿರೋಧಿಗಳು ಬಯಸಿದರು. ಅದೇ ಮುಳುವಾಯಿತು ಎಂದು ಹೇಳಲಾಗದಿದ್ದರೂ, ಅದು ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬರಲಿಲ್ಲ ಎಂಬುದಂತೂ ವಾಸ್ತವ.

ಈ ಒತ್ತಡವನ್ನು ವಿವಿಧ ರಾಜಕೀಯ ಪಕ್ಷಗಳ ಮೇಲೆ ಜನಪರವಾಗಿ ಆಲೋಚನೆ ಮಾಡುವ ಶಕ್ತಿಗಳಿಗಿಂತಲೂ ಮುಸ್ಲಿಂ ಮತಗಳ ಪ್ರಮಾಣವು ಉಂಟು ಮಾಡಿದ್ದವು. ಅದಕ್ಕೆ ಬೇಕಾದ ಆಟವನ್ನು ಒಂದಲ್ಲಾ ಒಂದು ರೀತಿಯಲ್ಲಿ ವಿವಿಧ ಪಕ್ಷಗಳು ಹೂಡಿದವು. ಆಮ್‍ಆದ್ಮಿ ಪಕ್ಷವು ಕಾಂಗ್ರೆಸ್‍ನೊಂದಿಗೆ ನಡೆಸಿದ ಮೈತ್ರಿಯ ವಿಫಲ ನಾಟಕವೂ ಅದಕ್ಕೇ ಆಗಿತ್ತು. ಬಲಶಾಲಿಯಲ್ಲದ ಕಾಂಗ್ರೆಸ್‍ಗೆ ಮತ ಹಾಕಬೇಡಿ ಎಂದು ಮಾಯಾವತಿಯವರು ಕರೆ ಕೊಟ್ಟಿದ್ದೂ ಮುಸ್ಲಿಮರಿಗೆ.

ಜನಪರವಾಗಿ ಆಲೋಚನೆ ಮಾಡುವ ಚುನಾವಣೇತರ ಶಕ್ತಿಗಳು ಮತ್ತು ಎಡಚಿಂತಕರು ಕಾಂಗ್ರೆಸ್ ಮೇಲೆ ಒಂದು ಒತ್ತಡ ಸೃಷ್ಟಿಸಲು ಯಶಸ್ವಿಯಾಗಿದ್ದರು. ಅದು ಒಂದು ಅಸಲೀ ಜನಪರ ನೆರೇಟಿವ್ ಮುಂದಿಡಬೇಕು ಮತ್ತು ಜನಸಾಮಾನ್ಯರ ನಿಜವಾದ ಕಷ್ಟಗಳಿಗೆ ಸ್ಪಂದಿಸಲು ಬೇಕಾದ ನೀತಿಗಳನ್ನು ಜಾರಿಗೆ ತರುವ ಆಶ್ವಾಸನೆ ಕೊಡಬೇಕು ಎಂಬ ಒತ್ತಡ ಕಾಂಗ್ರೆಸ್‍ನ ಮೇಲೆ ಉಂಟಾಗಿತ್ತು. ರಾಹುಲ್‍ಗಾಂಧಿ ನೇರವಾಗಿ ಅನಿಲ್ ಅಂಬಾನಿಯ ಮೇಲೆ ಪದೇ ಪದೇ ಆರೋಪಗಳನ್ನು ಮಾಡಿದ್ದಲ್ಲದೇ, ದೇಶದ 15-20 ಉದ್ದಿಮೆಪತಿಗಳ ಹಿತಕ್ಕಾಗಿ ಈ ಸರ್ಕಾರವು ನಡೆಯುತ್ತಿದೆ ಎಂದು ಯಾವ ಮುಲಾಜಿಲ್ಲದೇ ಹೇಳಿದರು. ಅದರ ಪ್ರಣಾಳಿಕೆಯಲ್ಲಿದ್ದ ನ್ಯಾಯ್, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಹಿಂಪಡೆತ, ರೈತರ ಸಾಲಮನ್ನಾ ಒಳಗೊಂಡಂತೆ ಹಲವು ಜನಪರ ಅಂಶಗಳು ಅದನ್ನು ಸೂಚಿಸುತ್ತಿತ್ತು. ಇವತ್ತಿನ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್ ಪಕ್ಷವೊಂದು ಮುಂದಿಡಬಹುದಾದ ಹಲವು ಭರವಸೆಗಳು ಅದರಲ್ಲಿದ್ದವು.

ಪಿ.ಚಿದಂಬರಂರಂತಹ ಮುಕ್ತ ಮಾರುಕಟ್ಟೆ ಪ್ರತಿಪಾದಕ, ಭಾರತದಲ್ಲಿ ಜಾಗತೀಕರಣ ನೀತಿಗಳನ್ನು ಜಾರಿಗೆ ತಂದ ಮನಮೋಹನ್‍ಸಿಂಗ್‍ರಿಂದ ಹಿಡಿದು, ಕಾಂಗ್ರೆಸ್ ಪಕ್ಷವು ತನ್ನ ಮಧ್ಯಮ ಮಾರ್ಗಕ್ಕೆ ಅಂಟಿಕೊಂಡಿರಬೇಕು ಎಂದು ಒತ್ತಾಯಿಸುವ ಕ್ವಿಂಟ್‍ನ ಸಂಪಾದಕ ರಾಘವ್ ಬೆಹ್ಲ್ ಸಹಾ ಅದನ್ನು ಸಮರ್ಥಿಸಿ ಮಾತನಾಡಿದರು. ಹೆಚ್ಚು ಕಡಿಮೆ ಒಂದು ವರ್ಷದ ಮುಂಚೆಯೇ ಪ್ರಣಾಳಿಕೆ ತಯಾರಿಯ ಪ್ರಕ್ರಿಯೆ ಆರಂಭಿಸಿದ ಕಾಂಗ್ರೆಸ್ಸು, ಅದನ್ನು ಬಿಡುಗಡೆ ಮಾಡಿದ್ದು ತಡವಾಗಿ. ಅದನ್ನು ಜನರಿಗೆ ತಲುಪಿಸಲು ಬೇಕಿದ್ದ ಸಮಯವಾಗಲೀ, ತಲುಪಿಸಬಲ್ಲ ಯಂತ್ರಾಂಗವಾಗಲೀ ಅದಕ್ಕಿರಲೇ ಇಲ್ಲ. ಒಂದು ವೇಳೆ ತಲುಪಿದ್ದರೂ ಅಂತಹ ದೊಡ್ಡ ಪ್ರಯೋಜವಾಗುತ್ತಿರಲಿಲ್ಲ ಎಂಬುದನ್ನು ಫಲಿತಾಂಶವು ಎತ್ತಿ ತೋರಿಸಿತು.

ಜನಪರವಾದ ನೆರೇಟಿವ್ ಕಟ್ಟಿಕೊಟ್ಟಿದ್ದು ತಪ್ಪಲ್ಲ. ಅದಕ್ಕಿಂತ ಒಳ್ಳೆಯದೇನಿದೆ? ಆದರೆ ಕಾಂಗ್ರೆಸ್ಸಿನ ಬಾಯಲ್ಲಿ ಜನಪರವಾದ, ಉದ್ದಿಮೆಪತಿಗಳ ವಿರುದ್ಧದ ಮಾತುಗಳನ್ನು ಜನರು ನಂಬುವುದು ಕಷ್ಟ. ಈ ಮಾತುಗಳನ್ನು ಅದರ ಸರ್ವೋಚ್ಚ ನಾಯಕ ಆಡುತ್ತಿರುವಾಗಲೇ ಅದೇ ಪಕ್ಷದಲ್ಲಿ ಸಾವಿರಾರು ಕೋಟಿ ಆಸ್ತಿ ಹೊಂದಿರುವ ಎಷ್ಟೋ ಮರಿನಾಯಕರಿದ್ದಾರೆ. ಬಿಜೆಪಿಯ ನೀತಿಗಳಿಗಿಂತ ಭಿನ್ನವಾದ ಸಾಮಾಜಿಕ ನಿಲುವನ್ನೇನೂ ಹೊಂದಿರದ ಕಾಂಗ್ರೆಸ್ ನಾಯಕರನ್ನು ಜನರು ತಮ್ಮ ಕಣ್ಣೆದುರಿಗೆ ನೋಡುತ್ತಿದ್ದರು. ಇದನ್ನೆಲ್ಲಾ ಜನರನ್ನು ಮೋಸಗೊಳಿಸಿ ಓಟು ಪಡೆಯಲು ಮಾತ್ರ ಮಾಡಬೇಕೆಂದಿದ್ದಲ್ಲಿ ಅದನ್ನು ಬಿಜೆಪಿ ಇನ್ನೂ ಅದ್ಭುತವಾಗಿ ಮಾಡುತ್ತಿತ್ತು.

ಕಾಂಗ್ರೆಸ್ಸು ಒಂದು ಮಧ್ಯಮಮಾರ್ಗದ ಪಕ್ಷವಾಗಿಯೇ ಉಳಿದುಕೊಳ್ಳುವುದು ಒಳಿತು. ದೆಹಲಿಯಿಂದ ಹಳ್ಳಿಯ ಮೂಲೆಗಳ ತನಕ ಅದಕ್ಕಿರುವ ತಳಹದಿಯನ್ನು ರಾಹುಲ್‍ಗಾಂಧಿಯೂ ಬದಲಿಸುವುದು ಸಾಧ್ಯವಿಲ್ಲ. ಹೊಸ ಅಧ್ಯಕ್ಷೆಗೂ ಸಾಧ್ಯವಿಲ್ಲ.

ಇಲ್ಲಿ ನಿಜಕ್ಕೂ ಸೋಲುಂಡಿದ್ದು ಜನಪರ ಶಕ್ತಿಗಳು. ತಮ್ಮದೇ ಪರ್ಯಾಯವನ್ನು ಸಮಾಜದಲ್ಲಿ ಮತ್ತು ಸಂಸತ್ತಿನಲ್ಲಿ ಕಟ್ಟಲು ಸಾಧ್ಯವಾಗದೇ ಈಗಾಗಲೇ ತಿರಸ್ಕೃತಗೊಂಡಿರುವ ರಾಜಕೀಯ ಪಕ್ಷಗಳೇ ಅದನ್ನು ಮಾಡಲಿ ಎಂದು ಅವು ಬಯಸಿದವು. ಫಲಿತಾಂಶದ ತಕ್ಷಣದ ಶಾಕ್‍ನಿಂದ ಹೊರಬಂದ ಮೇಲಾದರೂ ಆ ನಿಟ್ಟಿನಲ್ಲಿ ಯೋಚಿಸಿ ಸಮಾಜದಲ್ಲೂ, ಸಂಸತ್ತಿನಲ್ಲೂ ಬದಲಾವಣೆ ತರಲು ಬೇಕಾದ ಸುದೀರ್ಘ ಕಷ್ಟಕರ ಪ್ರಯಾಣಕ್ಕೆ ಮುಂದಾದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...