Homeಸಾಮಾಜಿಕನಿರ್ದಿಷ್ಟ ಅವಧಿಯ ಉದ್ಯೋಗ: ಕಿಸ್ಕಾ ಸಾಥ್-ಕಿಸ್ಕಾ ವಿಕಾಸ್? ಕಾರ್ಮಿಕರ ಉದ್ಧಾರಕ್ಕೆ ಮೋದಿ ಕೊಡುಗೆ!

ನಿರ್ದಿಷ್ಟ ಅವಧಿಯ ಉದ್ಯೋಗ: ಕಿಸ್ಕಾ ಸಾಥ್-ಕಿಸ್ಕಾ ವಿಕಾಸ್? ಕಾರ್ಮಿಕರ ಉದ್ಧಾರಕ್ಕೆ ಮೋದಿ ಕೊಡುಗೆ!

- Advertisement -
  • ಪ್ರೊ. ಬಾಬು ಮ್ಯಾಥ್ಯು, ನ್ಯಾಶನಲ್ ಲಾ ಸ್ಕೂಲ್, ಬೆಂಗಳೂರು |
- Advertisement -

ಬಿ.ಜೆ.ಪಿಯ ಕಾರ್ಮಿಕ ವಿರೋಧಿ ನೀತಿ ಕರ್ನಾಟಕದ ಚುನಾವಣೆಯ ಪ್ರಮುಖ ವಿಷಯವಾಗಬಹುದಿತ್ತು. ಈ ಮೂಲಕ ಜನರನ್ನು ಎಚ್ಚರಿಸಬಹುದಿತ್ತು. ‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆ ಹೊರತು ಪಡಿಸಿ ಯಾರೂ ಇದನ್ನು ಬಯಲಿಗೆಳೆದಿಲ್ಲ. ಈ ಕಾಯಿದೆಯ ಹಿಂದೆ ಮತ್ತು ಮುಂದಿನ ಸತ್ಯಗಳನ್ನು ಅರಿತುಕೊಳ್ಳಲು ಈ ಲೇಖನ ಓದಿ.

ಇಡೀ ಪ್ರಪಂಚದಲ್ಲಿ ಕಾರ್ಮಿಕ ನ್ಯಾಯಶಾಸ್ತ್ರ ಹಲವಾರು ಶತಮಾನಗಳಿಂದ ರೂಪುಗೊಳ್ಳುತ್ತಾ ಬಂದಿದೆ. ಗುಲಾಮ ಪದ್ದತಿಯಿಂದ ಹಿಡಿದು, ಈ ಹೊತ್ತಿನ ಕಾರ್ಮಿಕ-ಮಾಲೀಕರ ಸಂಬಂಧದವರೆಗಿನ ಇತಿಹಾಸ ಹಲವಾರು ಹಂತಗಳನ್ನು, ಹೋರಾಟಗಳನ್ನು ದಾಟಿ ಬಂದಿದೆ. ಪ್ರಸ್ತುತ ಅದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ನಿರ್ಣಯಗಳು ಮತ್ತು ವಿವಿಧ ನ್ಯಾಯಲಯಗಳು ಕಾರ್ಮಿಕರ ಸ್ಥಾನ ಮಾನ ಕುರಿತಂತೆ ನೀಡಿರುವ ತೀರ್ಪುಗಳ ಆಧಾರದ ಮೇಲೆ ರೂಪುಗೊಂಡಿದೆ.

ಹಿಂದೆ ಒಂದು ಕಾಲವಿತ್ತು. ಗುಲಾಮರನ್ನು ಸಾರ್ವಜನಿಕ ಹರಾಜಿನಲ್ಲಿ ಬೆಲೆಕಟ್ಟಿ ಕೊಂಡುಕೊಳ್ಳಬಹುದಿತ್ತು. ಹೀಗೆ ಮಾರಾಟವಾದ ಗುಲಾಮ ಒಡೆಯನ ಆಸ್ತಿ ಆಗುತ್ತಿದ್ದ. ಅವನನ್ನು ಬೇಕಾದರೆ ಇನ್ನೊಬ್ಬ ಮಾಲಿಕನಿಗೆ ಮಾರಬಹುದಿತ್ತು. ಅಕಸ್ಮಾತ್ ಗುಲಾಮ ಓಡಿಹೋದರೆ, ಅವನನ್ನು ಹಿಡಿದು, ಬಂಧಿಸಿ ಮತ್ತೆ ಗುಲಾಮಗಿರಿಗೆ ತಳ್ಳಲಾಗುತ್ತಿತ್ತು. ಓಡಿಹೋದ ಗುಲಾಮನಿಗೆ ಆಶ್ರಯ ನೀಡುವುದು ಅಪರಾಧವಾಗಿತ್ತು. ವಸಾಹತುಶಾಹಿ ಕಾಲದ ಮಾಲೀಕರು ಇಂಥ ಕಾನೂನನ್ನು ಸೃಷ್ಟಿಸಿ ಅದಕ್ಕೆ ‘ಕಾರ್ಮಿಕ ಒಪ್ಪಂದದ ಉಲ್ಲಂಘನೆ ಕಾಯಿದೆ 1859’ ಎಂದು ಕರೆದಿದ್ದರು. ಈ ಕಾಯಿದೆಯನ್ನು ಬಳಸಿಕೊಂಡು ಅಸ್ಸಾಮಿನ ಚಹಾ ತೋಟದಲ್ಲಿ ಗುತ್ತಿಗೆ ಕೂಲಿ ಕೆಲಸಕ್ಕೆ ಜನರನ್ನು ನಿಯಮಿಸಲಾಗುತ್ತಿತ್ತು.

ಈ ಗುಲಾಮ ಸಂಬಂಧ ಕ್ರಮೇಣ ‘ಮಾಲೀಕ ಮತ್ತು ಸೇವಕ ಸಂಬಂಧ’ವಾಗಿ ಮಾರ್ಪಟ್ಟಿತು. ಕೂಲಿ ಕೆಲಸದ ಒಪ್ಪಂದದ ನಿಯಮಗಳನ್ನು ಮಾಲೀಕನೇ ನಿರ್ಧರಿಸಬಹುದು ಎಂಬುದೇ ಇದರರ್ಥ. ಈ ಕಾಲ ಘಟ್ಟದಲ್ಲಿ ಮಾಲೀಕ ಮತ್ತು ಸೇವಕನ ನಡುವಿನ ಸಂಬಂಧ ಒಂದು ವ್ಯಕ್ತಿಗತ ನೆಲೆಯ ಮೇಲೆ ನಿಂತಿತ್ತು. ಹೀಗಾಗಿ ಮಾಲೀಕನ ಮಾತೇ ಕಡೆಯ ವಾಕ್ಯ. ಅದರ ಮೇಲೆ ಎಲ್ಲೂ ಮನವಿ ಸಲ್ಲಿಸುವ ಹಾಗಿರಲಿಲ್ಲ. ಇಂಥ ಸಂಬಂಧಗಳಲ್ಲಿ ಸ್ವಾಭಾವಿಕವಾಗಿಯೇ ಬಿಡಿಗಾಸಿನ ಕೂಲಿ ದರವನ್ನು ಮಾತ್ರ ಕೊಡಲಾಗುತ್ತಿತ್ತು. ಕೆಲಸದ ಅವಧಿ ಸಾಮಾನ್ಯವಾಗಿ ಬೆಳಕು ಹರಿಯುವುದರಿಂದ ಹಿಡಿದು, ಸೂರ್ಯಾಸ್ತದವರೆಗೂ ವಿಸ್ತರಿಸುತ್ತಿತ್ತು. ಬೇಕಾದಾಗ ಕೆಲಸಕ್ಕೆ ತೆಗೆದುಕೊಂಡು ಬೇಡದಿದ್ದಾಗ ವಜಾ ಮಾಡುತ್ತಿದ್ದುದರಿಂದ, ಕೂಲಿಗಳ ತಲೆ ಮೇಲೆ ಒಂದು ಅನಿಶ್ಚಿತೆಯ ಕತ್ತಿ ಯಾವಾಗಲೂ ನೇತಾಡುತ್ತಿತ್ತು.

ಯಾವಾಗ ಕಾರ್ಮಿಕರು ಸಂಘಟಿತರಾಗತೊಡಗಿದರೋ, ಅಲ್ಲಿಂದ ಪರಿಸ್ಥಿತಿ ಬದಲಾಗಲು ಪ್ರಾರಂಭವಾಯಿತು. ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಹಕ್ಕುಗಳನ್ನು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು, ಹಾಗೂ ದುಡಿಮೆಯ ಕ್ಷೇತ್ರದಲ್ಲಿ ಒಂದು ಮಾನವೀಯ ವಾತಾವರಣ ನಿರ್ಮಿಸಲು ಮುಂದಾದವು. ಈ ಸಮರದಲ್ಲಿ ಅನೇಕ ಕಾನೂನುಗಳು ಜಾರಿಗೆ ಬಂದು ಕಾರ್ಮಿಕರಿಗೆ ಒಂದಷ್ಟು ಹಕ್ಕುಗಳು ಸಿಗುವ ಹಾಗಾಯಿತು. ಅಮೆರಿಕಾದ ಕಾರ್ಮಿಕರು ದಿನಕ್ಕೆ 8 ಗಂಟೆ ದುಡಿಮೆಯ ನಿಯಮವನ್ನು ತರಲು ನಡೆಸಿದ ಹೋರಾಟಕ್ಕೆ ಈಗ ನೂರೈವತ್ತು ವರ್ಷ ಆಗಿದೆ. ಈ ಕಾನೂನಿನ ಲಾಭ ಕೇವಲ ಆ ದೇಶಕ್ಕೆ ಸೀಮಿತಗೊಳ್ಳದೆ ಜಗತ್ತಿನ ಎಲ್ಲ ಕಾರ್ಮಿಕರಿಗೂ ಲಭಿಸಿದೆ. ನಮ್ಮ ದೇಶದಲ್ಲೂ ‘ಇಂಡಿಯನ್ ಫಾಕ್ಟರೀಸ್ ಆಕ್ಟ್’ ಕಾರ್ಮಿಕರಿಗೆ ಈ ಹಕ್ಕನ್ನು ನೀಡಿದೆ.

ಮುಂದೆ ಕಾರ್ಮಿಕ ಸಂಘಟನೆಗಳು ಸಾಮೂಹಿಕ ಕರಾರಿನ ಹಕ್ಕಗಳನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದವು. ಇದರಿಂದ ಕಾರ್ಮಿಕರ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದು, ಅವರ ಕೊಳ್ಳುವ ಶಕ್ತಿ ಹೆಚ್ಚಾಗಿದ್ದರಿಂದ, ಓದ್ಯೋಗಿಕ ವಸ್ತುಗಳ ಬೇಡಿಕೆಯಲ್ಲಿ ಹೆಚ್ಚಳ ಉಂಟಾಯಿತು. ಇದು ಕ್ರಮೇಣ ‘ಬಂಡವಾಳ ಶಾಹಿಯ ಸುವರ್ಣಯುಗ’ಕ್ಕೆ ದಾರಿ ಮಾಡಿಕೊಟ್ಟಿತು. ವಿಶ್ವ ವಿಖ್ಯಾತ ಕಾರ್ಮಿಕ ನ್ಯಾಯಶಾಸ್ತ್ರಜ್ಞನಾದ ಓಟ್ಟೊ ಕಾಹ್ನ್ ಫ್ರಾಯಿಂಡ್ ಎಂಬಾತನ ಪ್ರಕಾರ ಈ ವಿದ್ಯಮಾನ ‘ವ್ಯಕ್ತಿಗತ ಸೇವಾ ಕರಾರಿನ’ ಯುಗದಿಂದ, ಸಮಾಜ ‘ಸಾಮೂಹಿಕ ಸೇವಾ ಕರಾರಿಗೆ’ ಬದಲಾದ ಪ್ರಕ್ರಿಯೆಯ ಸೂಚನೆ. ಇದರಿಂದಾಗಿ ಕರಾರು ಕಾನೂನಿನ ನ್ಯಾಯಶಾಸ್ತ್ರ, ಕಾರ್ಮಿಕ ಕಾನೂನಿನ ನ್ಯಾಯಶಾಸ್ತ್ರವಾಗಿ ಪರಿವರ್ತನೆ ಹೊಂದಿತಲ್ಲದೆ, ಮಾಲಿಕ ಮತ್ತು ಕಾರ್ಮಿಕರ ನಡುವೆ ಒಂದು ರೀತಿಯ ಸಮಾನ ನೀತಿ ಜಾರಿಗೆ ಬರಲು ಕಾರಣವಾಯಿತು. ಇದು ಮೂಲತಃ ಬಂಡವಾಳಶಾಹಿ ಮತ್ತು ದುಡಿಮೆಯ ಸಂಬಂಧದಲ್ಲಿ , ತಾತ್ವಿಕವಾಗಿಯಾದರೂ, ಸಮಾನತೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಇದು ಬಹಳ ದೊಡ್ಡ ಹಾಗೂ ಶ್ರಮದಾಯಕವಾದ ಚಳವಳಿ ಮತ್ತು ಕಾನೂನು ಹೋರಾಟದಿಂದ ಮಾತ್ರ ದಕ್ಕಿತೆನ್ನುವುದನ್ನು ಮರೆಯಲಾಗದು. ಇವೆಲ್ಲ ಬೆಳವಣಿಗೆಗಳಿಂದಾಗಿ ಯಾವುದೇ ಸಕಾರಣವಿಲ್ಲದೆ ಕೆಲಸದಿಂದ ವಜಾಮಾಡುವುದು ನ್ಯಾಯಬಾಹಿರವಾಗಿದ್ದಷ್ಟೇ ಅಲ್ಲ, ಹಾಗೆ ವಜಾಮಾಡಲ್ಪಟ್ಟವರನ್ನು ಹಿಂದಿನ ವೇತನದೊಂದಿಗೆ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ನ್ಯಾಯಲಯಗಳು ತೀರ್ಪನ್ನು ಕೂಡ ಕೊಟ್ಟವು.

ಆದರೆ ಇಷ್ಟು ದೀರ್ಘ ಹೋರಟದಿಂದ ಕಾರ್ಮಿಕರು ಗಳಿಸಿಕೊಂಡಿದ್ದ ನ್ಯಾಯಬದ್ಧ ಹಕ್ಕುಗಳನ್ನು ಮೋದಿ ಸರ್ಕಾರ ಮೊಟಕುಗೊಳಿಸಲು ಹೊರಟಿದೆ. 32ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಕಾಯಿದೆಗಳನ್ನು ರದ್ದುಮಾಡಿ, ಅದರ ಜಾಗದಲ್ಲಿ ನಾಲ್ಕು ಕಾರ್ಮಿಕ ಕಾನೂನಗಳನ್ನು ಜಾರಿ ಮಾಡಿದೆ. ಕುತೂಹಲದ ವಿಷಯವೆಂದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘ ಕೂಡ ಇದನ್ನು ವಿರೋಧಿಸಿದೆ. ಇದಕ್ಕೆ ಸಂಬಂಧಿಸಿದ ಕಾಯಿದೆಗಳು ಸಂಸತ್ತಿನ ಮುಂದಿವೆ.

ಇದರಲ್ಲಿ ಬಹು ಮುಖ್ಯವಾದದ್ದು ಇಂಡಸ್ಟ್ರಿಯಲ್ ಎಂಪ್ಲಾಯಮೆಂಟ್ ಸ್ಟಾಂಡಿಂಗ್ ಆರ್ಡಸ್ ಆಕ್ಟ್, 1946 ಅಡಿಯಲ್ಲಿರುವ ಕಾನೂನಿಗೆ ಬಹು ದೂರಗಾಮಿ ದುಷ್ಪರಿಣಾಮಗಳನ್ನು ಉಂಟುಮಾಡುವ ಬದಲಾವಣೆಗಳು. ಈ ತಿದ್ದುಪಡಿ ನೇರವಾಗಿ “ಆಗ್‍ಮೆಂಟೆಡ್ ವಾಷಿಂಗ್‍ಟನ್ ಕನ್‍ಸೆನ್ಸಸ್” ಎನ್ನುವ ಅಂತರಾಷ್ಟ್ರೀಯ ಒಡಂಬಡಿಕೆಯಿಂದ ಪ್ರೇರಣೆ ಪಡೆದಿದೆ. ಇದನ್ನು ಅಂತರಾಷ್ಟ್ರೀಯ ಸಂಸ್ಥೆಗಳ ಒತ್ತಡವೆಂದರೂ ಸರಿ. ಸಾರಾಂಶದಲ್ಲಿ ಇದರ ಸರಳ ಅರ್ಥವೆಂದರೆ ‘ಹೊಂದಿಕೊಳ್ಳಬಲ್ಲ ದುಡಿಮೆ’ಯನ್ನು ಉತ್ತೇಜಿಸುವುದು. ಹಾಗೆಂದರೇನು? ಇದರ ಪ್ರಕಾರ ಉದ್ಯೋಗದಾತ ದಣಿಗಳು ತಮ್ಮ ನೌಕರರಿಗೆ ಉದ್ಯೋಗದ ಆದೇಶಗಳನ್ನು ನೀಡುವಾಗಲೇ ಅವರನ್ನು ಉದ್ಯೋಗದಿಂದ ತೆಗೆದುಹಾಕುವ ದಿನಾಂಕವನ್ನು ನಮೂದಿಸಬಹುದಾಗಿದೆ. ಇದಕ್ಕೆ ಬೇಕಾದ ಕಾನೂನಿನ ಬದಲಾವಣೆಗಳನ್ನು ತಂದು ಅಂತಹ ಆದೇಶಗಳನ್ನು ಅಧಿಕೃತಗೊಳಿಸುವಂತೆ ಈಗಾಗಲೇ ಮಾಡಲಾಗಿದೆ. ಉದಾಹರಣೆಗೆ ಈ ಮೇಲ್ಕಂಡ ಕಾಯ್ದೆಯ ಮೊದಲನೇ ಶೆಡ್ಯೂಲಿನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಬಿ ಜೆ ಪಿ ಹೊಸರೀತಿಯ ಉದ್ಯೋಗ ನೀತಿಯನ್ನು ಸದ್ದಿಲ್ಲದೆ ಜಾರಿಗೊಳಿಸಿದಂತಾಗಿದೆ. ಅದನ್ನು ಅದು ‘ನಿರ್ದಿಷ್ಟ ಅವಧಿಯ ಉದ್ಯೋಗ’ ಎಂದು ಕರೆದಿದೆ. ಇದಕ್ಕಿಂತಲೂ ಹೆಚ್ಚಿನ ಅನುಕೂಲವನ್ನು ಉದ್ಯೋಗದಾತರಿಗೂ, ಮಾಲೀಕರಿಗೂ ಒದಗಿಸಲು ಸಾಧ್ಯವೇ? ಬಹುಷಃ ಇದು ಅವರು ಬಯಸಿದ್ದಕ್ಕಿಂತಲೂ ದೊಡ್ಡದಾದ, ಅವರುಗಳ್ಯಾರೂ ಕನಸಿನಲ್ಲೂ ಕಂಡಿರದಿದ್ದ ಕೊಡುಗೆ. ಇದರಿಂದ ಬಿ ಜೆ ಪಿ ಯಾರ ಪರ ಇದೆ ಎನ್ನುವುದು ಅಂಗೈ ಮೇಲಿನ ಹುಣ್ಣಿನಷ್ಟೇ ಸ್ಪಷ್ಟವಾಗಿದೆ. ಭಾರರದ ಬಂಡವಾಳ ಶಾಹಿ ಈಗ 500 ದಶಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯ ‘ಹೊಂದಿಕೊಳ್ಳಬಲ್ಲ’ (ಅಂದರೆ, ಯಾವಾಗ ಬೇಕಾದರೂ ವಜಾಗೊಳಿಸಬಹುದಾದ) ಕಾರ್ಮಿಕರನ್ನು ಹೊಂದಲಿದೆ. ಮೋದಿ ತಮ್ಮ ಭಾಷಣಗಳಲ್ಲಿ ಯಾವಾಗಲೂ ತಮ್ಮ ಸರ್ಕಾರ ‘ಸುಗಮ ವ್ಯವಹಾರ’ವನ್ನು ಜಾರಿತರಲಿದೆ ಎಂದು ಹೇಳುತ್ತಿರುತ್ತಾರೆ. ಅವರ ಪ್ರಕಾರ ಬಹುಷಃ ಭಾರತದ ಬಂಡವಾಳಿಗರಿಗೆ ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸುವುದಕ್ಕೆ ಮೋದಿ ಕೊಟ್ಟ ಉಡುಗೊರೆ ಇದೇ ಇರಬಹುದು.

ಈ ಹೊಸ ಕಾರ್ಮಿಕ ಕಾಯಿದೆ ತಿದ್ದುಪಡಿಯಿಂದಾಗಿ 500 ಮಿಲಿಯನ್ ಕಾರ್ಮಿಕ ವೃಂದಕ್ಕೆ ಈಗಲೇ ‘ಅಚ್ಚೇ ದಿನ’ ಬಂದಿದೆ. ಇದರೊಂದಿಗೆ ‘ಎಲ್ಲರೊಡನೆ ಸೇರಿ, ಎಲ್ಲರ ವಿಕಾಸ’ ಎಂಬ ಮೋದಿ ಅವರ ಮೆಚ್ಚಿನ ಘೋಷಣೆಗೆ ಜಾರಿಯಾಗಿದೆ ಎಂದುಕೊಳ್ಳೋಣವೇ? ಆದರೆ ಸ್ವದೇಶಿ ಕಾರ್ಮಿಕರ ಹಿತಕ್ಕೇ ಕೊಡಲಿ ಪೆಟ್ಟು ನೀಡುವ ಈ ತಿದ್ದುಪಡಿಯ ಹಿಂದೆ ಕೆಲಸಮಾಡಿರುವ ಒತ್ತಡ ಮಾತ್ರ ವಿದೇಶದಲ್ಲಿ ತಯಾರಾದ ‘ವಾಷಿಂಗ್‍ಟನ್ ಒಪ್ಪಂದ’ ಎನ್ನುವುದು ಒಂದು ದೊಡ್ಡ ವ್ಯಂಗ್ಯ. ನೂರು ವರ್ಷಗಳ ಹೋರಾಟದಿಂದ ಕಾರ್ಮಿಕರು ಗಳಿಸಿಕೊಂಡಿದ್ದ ಉದ್ಯೋಗ ಭದ್ರತೆಗೆ ಸಂಬಂಧಿಸಿದ ಹಕ್ಕುಗಳನ್ನು ಈ ಒಪ್ಪಂದ ಒಂದೇ ಬೀಸಿಗೆ ಎತ್ತಿ ಹೊರಗೆಸಿದಿದೆ. ಅಂದರೆ ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವಿನ ಸಂಬಂಧವನ್ನು ಬದಿಗಿಟ್ಟು ಹಳೆಯ ‘ಮಾಲೀಕ-ಗುಲಾಮ’ ಸಂಬಂಧವನ್ನು ಈ ಕಾಯ್ದೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಇದರಿಂದ ‘ಹೈರ್ ಅಂಡ್ ಫೈರ್’ ಎನ್ನುವ ಜಂಗ್ಲೀ ಕಾನೂನು ಮತ್ತೆ ಅಧಿಕೃತವಾಗಿ ಜಾರಿಗೆ ಬರಲಿದೆ. ಹಾಗಾದರೆ ಇದು ‘ಯಾರ ಸಾಥ್ ಮತ್ತು ಯಾರ ವಿಕಾಸ್’ ಎಂದು ನಾವು ಕೇಳಲೇಬೇಕಾಗಿದೆ. ಮತ್ತೆ ಊಳಿಗಮಾನ್ಯ ಕಾಲದ ‘ಮಾಲೀಕ-ಗುಲಾಮ’ ಪದ್ಧತಿಗೆ ನಮ್ಮ ಸಮಾಜ ಹೊರಳಿಕೊಳ್ಳದಂತೆ ನಾವು ಈಗ ಜಾಗರೂಕವಾಗಬೇಕಿದೆ.

ಮುಂದಿರುವ ಸಭಿಕರನ್ನು ನೋಡಿ, ಆ ಕ್ಷಣಕ್ಕೆ ಅವರನ್ನು ಓಲೈಸುವ ಮಾತುಗಳನ್ನು ಒಗೆಯುವುದರಲ್ಲಿ ಮೋದಿ ನಿಪುಣರು. ಇತ್ತೀಚೆಗೆ, ಕರ್ನಾಟಕದ ಸಂತೆಮಾರನಹಳ್ಳಿಯಲ್ಲಿ ಕಾರ್ಮಿಕರ ದಿನದಂದು ಮೋದಿ ಕಾರ್ಮಿಕರನ್ನು ಇನ್ನಿಲ್ಲದಂತೆ ಹೊಗಳುತ್ತಾ, ಇಂದು ದೇಶವನ್ನು ಮುನ್ನಡೆಸುವುದರಲ್ಲಿ ಕಾರ್ಮಿಕರ ಕೊಡುಗೆಯನ್ನು ಯದ್ವಾತದ್ವಾ ಕೊಂಡಾಡಿದರು. ಅವರಿಲ್ಲದೆ ದೇಶದ ಪ್ರಗತಿ ಅಸಾಧ್ಯ ಎಂದ ಅದೇ ಮೋದಿ ಕೆಲವೇ ವಾರಗಳ ಹಿಂದೆ ಕಾರ್ಮಿಕರ ಕತ್ತನ್ನು ಕೊಯ್ಯುವ, ಅವರ ಉದ್ಯೋಗ ಭದ್ರತೆಯನ್ನೇ ಕಿತ್ತುಕೊಳ್ಳುವ ಕಾಯಿದೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕಿಂತಲೂ ಬೂಟಾಟಿಕೆ ಇನ್ನೊಂದಿರಲಾರದು.

ಅನು: ವಿ.ಎಸ್. ಶ್ರೀಧರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...