ಅರವಿಂದ್ ಕೇಜ್ರಿವಾಲ್ ಅವರ ಸರಕಾರವು ಆಮ್ ಆದ್ಮಿ ಪಕ್ಷದ ರಾಜಕೀಯ ಜಾಹೀರಾತಿಗೆ ₹ 163.62 ಕೋಟಿ ರೂ. ಹಣವನ್ನು ಖರ್ಚು ಮಾಡಿದೆ ಎಂದು ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ನೋಟಿಸ್ ನೀಡಿದೆ. 10 ದಿನಗಳೊಳಗೆ ಆ ಹಣವನ್ನು ಎಎಪಿ ಪಾವತಿಸಬೇಕು, ಎಂದು ಸೂಚನೆಯಲ್ಲಿ ಎಚ್ಚರಿಸಿದೆ. ವಸೂಲಿಯಾಗದೇ ಇದ್ದಲ್ಲಿ ಪಕ್ಷದ ಕಚೇರಿಗೆ ಬೀಗ ಜಡಿಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
“ಒಟ್ಟು ₹ 163,61,88,265/- ಮೊತ್ತವನ್ನು ಮರುಪಾವತಿಸಲು ಅಂತಿಮ ಅವಕಾಶವನ್ನು ನೀಡಲಾಗಿದೆ. ಈ ನೋಟಿಸ್ ಜಾರಿ ಮಾಡಿದ 10 ದಿನಗಳೊಳಗೆ ಕೆಳಗೆ ನೀಡಲಾದ ಖಾತೆಗೆ ಹಣ ಠೇವಣಿ ಮಾಡಬೇಕು. ಒಂದು ವೇಳೆ ನೀಡಿದ ಕಾಲಾವಕಾಶದಲ್ಲಿ ಹಣ ಮರುಪಾವತಿ ಮಾಡದಿದ್ದಲ್ಲಿ ಕಾನೂನಿನ ಪ್ರಕಾರ ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ,” ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
2017ರ ಮಾರ್ಚ್ 31ರವರೆಗೆ ಪಕ್ಷದ ಜಾಹೀರಾತಿಗಾಗಿ ಒಟ್ಟು ₹ 99,31,10,053 (ರೂ. 99.31 ಕೋಟಿ) ವ್ಯಯಿಸಲಾಗಿದೆ. ಇನ್ನು ಉಳಿದ ₹ 64,30,78,212 (ರೂ. 64.31 ಕೋಟಿ) ಮೊತ್ತ ದಂಡದ ಬಡ್ಡಿಯಾಗಿದೆ ಎಂದು ಹಣದ ಬಗ್ಗೆ ನೋಟಿಸ್ ನಲ್ಲಿ ವಿವರಿಸಲಾಗಿದೆ.
ಇನ್ನು ಈ ನೋಟಿಸ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ‘ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ, ಬಿಜೆಪಿ ಚುನಾಯಿತ ಸಚಿವರು ಮತ್ತು ಆಡಳಿತಾರೂಢ ಸರ್ಕಾರ ಎಎಪಿಯನ್ನು ಗುರಿಯಾಗಿಸಿಕೊಂಡು ಈ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿದರು.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಸರ್ಕಾರಿ ಜಾಹೀರಾತಿನ ಸೋಗಿನಲ್ಲಿ ರಾಜಕೀಯ ಜಾಹೀರಾತುಗಳನ್ನು ನಡೆಸುತ್ತಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಆರೋಪಿಸಿದ್ದರು. ಇದಾದ ಸುಮಾರು ಒಂದು ತಿಂಗಳ ನಂತರ ಈ ಬೆಳವಣಿಗೆಯಾಗಿದೆ.
ಡಿಸೆಂಬರ್ 20 ರಂದು ಲೆಫ್ಟಿನೆಂಟ್ ಗವರ್ನರ್ ಅವರು ಎಎಪಿಯಿಂದ ₹ 97 ಕೋಟಿ ವಸೂಲಿ ಮಾಡುವಂತೆ ಆದೇಶ ಹೊರಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಪಿ, ಅಂತಹ ಆದೇಶಗಳನ್ನು ರವಾನಿಸಲು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿತ್ತು.
ಎಎಪಿಯ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು, ಲೆಫ್ಟಿನೆಂಟ್ ಗವರ್ನರ್ ಕಳುಹಿಸಿದ ಆದೇಶವನ್ನು “ಹೊಸ ಪ್ರೇಮ ಪತ್ರ” ಎಂದು ವ್ಯಂಗ್ಯವಾಡಿದ್ದರು. “ನಮ್ಮದು ಈಗ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲದೇ ಎಂಸಿಡಿಯಲ್ಲಿ ಅಧಿಕಾರವನ್ನು ಕಿತ್ತುಕೊಂಡಿದ್ದೇವೆ ಹಾಗಾಗಿ ಬಿಜೆಪಿ ಗಲಿಬಿಲಿಗೊಂಡಿದೆ. ಎಲ್ಜಿ ಸಾಹಬ್ ಅವರು ಬಿಜೆಪಿಯ ನಿರ್ದೇಶನದಂತೆ ಎಲ್ಲವನ್ನೂ ಮಾಡುತ್ತಿದ್ದಾರೆ ಮತ್ತು ಇದು ದೆಹಲಿಯ ಜನರನ್ನು ತೊಂದರೆಗೊಳಿಸುತ್ತಿದೆ. ಲೆಫ್ಟಿನೆಂಟ್ ಗವರ್ನರ್ ನಿರ್ದೇಶನಗಳಿಗೆ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಅವರು ಹೇಳಿದರು.