ಶನಿವಾರ ತಮಿಳುನಾಡಿನಲ್ಲಿ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆ, ಒಕ್ಕೂಟ ಸರ್ಕಾರವು ತಕ್ಷಣವೇ ಸೇನಾ ನೇಮಕಾತಿ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಒತ್ತಾಯಿಸಿ ಹೇಳಿಕೆ ನೀಡಿದ್ದಾರೆ. ’ಈ ಯೋಜನೆ ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ಮಾಜಿ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಜ್ ಕಾಡ್ಯಾನ್ ಅವರನ್ನು ಉಲ್ಲೇಝಿಸಿರುವ ಸಿಎಂ ಸ್ಟಾಲಿನ್, “ಕೇವಲ ನಾಲ್ಕು ವರ್ಷಗಳ ಕಾಲ ಗುತ್ತಿಗೆ ಸೇವೆಯಲ್ಲಿ ಸೈನ್ಯಕ್ಕೆ ಸೇರುವ ವ್ಯಕ್ತಿ ತನ್ನ ಪ್ರಾಣವನ್ನು ತ್ಯಾಗ ಮಾಡುವ ಮಟ್ಟಿಗೆ ಬದ್ಧನಾಗಿರುತ್ತಾನೆ ಎಂದು ನೀವು ಹೇಗೆ ನಿರೀಕ್ಷಿಸುತ್ತಿರಿ” ಎಂದಿದ್ದಾರೆ. ಜೊತೆಗೆ ನಿವೃತ್ತ ಮೇಜರ್ ಜನರಲ್ ಜಿಡಿ ಬಕ್ಷಿ ಅವರು ಈ ಯೋಜನೆಯಿಂದ ವಿಸ್ಮಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
’ಇತರ ಸೇನಾ ಪರಿಣತರು ಕೂಡ ರಕ್ಷಣಾ ಸೇವೆಗಳು ಅರೆಕಾಲಿಕ ಉದ್ಯೋಗವಾಗಲು ಸಾಧ್ಯವಿಲ್ಲ. ಅಂತಹ ನೇಮಕಾತಿಯು ಸೇನೆಯಲ್ಲಿ ಶಿಸ್ತನ್ನು ಹಾಳು ಮಾಡುತ್ತದೆ ಎಂದಿದ್ದಾರೆ’ ಎಂದು ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ: ಪರಿಷ್ಕೃತ ಪಠ್ಯ ಪುಸ್ತಕಗಳನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆ ಚಿತ್ರಗಳಲ್ಲಿ ನೋಡಿ
“ದೇಶದ ಸುರಕ್ಷತೆಯನ್ನು ಪರಿಗಣಿಸಬೇಕು. ಜೊತೆಗೆ ಈ ಯೋಜನೆಯು ಸಶಸ್ತ್ರ ಪಡೆಗಳಿಗೆ ಸೇರುವ ಲಕ್ಷಗಟ್ಟಲೆ ಯುವಕರ ಗುರಿಯನ್ನು ಹಾಳು ಮಾಡುತ್ತದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.
ಇನ್ನು 500 ಕ್ಕೂ ಹೆಚ್ಚು ಸೇನಾ ಆಕಾಂಕ್ಷಿಗಳು ಚೆನ್ನೈನ ಸೆಕ್ರೆಟರಿಯೇಟ್ ಬಳಿ ಪ್ರತಿಭಟನೆ ನಡೆಸಿದ್ದು, ಅಗ್ನಿಪಥ್ ಯೋಜನೆಯನ್ನು ಕೇಂದ್ರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇವರಲ್ಲಿ ಹೆಚ್ಚಿನವರು 19 ರಿಂದ 23 ವರ್ಷ ವಯಸ್ಸಿನವರಾಗಿದ್ದು, ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಲಿಖಿತ ಪರೀಕ್ಷೆಯ ದಿನಕ್ಕಾಗಿ ಕಾಯುತ್ತಿದ್ದಾರೆ.
“ನಾವು 2019 ರಲ್ಲಿ ಸೇನಾ ನೇಮಕಾತಿಯ ಭಾಗವಾಗಿದ್ದೇವೆ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CEE) ಇನ್ನೂ ನಡೆಸಿಲ್ಲ. ದಿನಾಂಕಗಳನ್ನು ಮಾರ್ಚ್ 2021 ರಲ್ಲಿ ಘೋಷಿಸಲಾಗಿತ್ತು. ನಂತರ ದಿನಾಂಕ ಬದಲಾಯಿಸಲಾಯಿತು. ಡಿಸೆಂಬರ್ನಲ್ಲಿ, ಪರೀಕ್ಷೆಯನ್ನು ರದ್ದುಗೊಳಿಸಲಾಯಿತು” ಎಂದು ರಾಣಿಪೇಟೆಯ ಪ್ರತಿಭಟನಾಕಾರ ಟಿ. ರಮೇಶ್ ಹೇಳಿದ್ದಾರೆ.
2019 ರಲ್ಲಿ ದೈಹಿಕ ಪರೀಕ್ಷೆಗೆ ಹಾಜರಾದವರಿಗೆ ಯಾವುದೇ ವಯಸ್ಸಿನ ಮಿತಿ ಸಡಿಲಿಕೆಯನ್ನು ಕೇಂದ್ರವು ಉಲ್ಲೇಖಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
“ಪೊಲೀಸ್ ಅನುಮತಿಯಿಲ್ಲದೆ ಪ್ರತಿಭಟನೆಯನ್ನು ನಡೆಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ತೆಲಂಗಾಣ, ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಅಷ್ಟರಮಟ್ಟಿಗೆ ಯುವಜನರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ಕೊಡಗಿನ ವೀರ ಯೋಧರೂ ಈ ಯೋಜನೆಯ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಯಾರಿಗೂ ಯಾರ ಜೀವವನ್ನು ತೆಗೆಯುವ ಹಕ್ಕು ಇಲ್ಲ- ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ