“75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾರ ಮನೆಯ ಮೇಲೆ ತಿರಂಗ ಧ್ವಜಗಳಿರುವುದಿಲ್ಲವೋ ಆ ಮನೆಯ ಫೋಟೋಗಳನ್ನು ತೆಗೆದುಕೊಳ್ಳಿ” ಎಂದು ಉತ್ತರಾಖಂಡ ಬಿಜೆಪಿ ಘಟಕದ ಮುಖ್ಯಸ್ಥ ತನ್ನ ಬೆಂಬಲಿಗರಿಗೆ ಸೂಚನೆ ನೀಡಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಆಗಸ್ಟ್ 13ರಿಂದ ಆಗಸ್ಟ್ 15ರವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ “ಹರ್ ಘರ್ ತಿರಂಗ” ಅಭಿಯಾನಕ್ಕೆ ಕರೆ ನೀಡಿದ್ದಾರೆ. ಭಾರತದಾದ್ಯಂತ 20 ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಸಾಮೂಹಿಕವಾಗಿ ಪ್ರದರ್ಶನ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಉತ್ತರಾಖಂಡ್ ಮುಖ್ಯಸ್ಥ ಮಹೇಂದ್ರ ಭಟ್, “ರಾಷ್ಟ್ರಧ್ವಜವನ್ನು ಹಾರಿಸದವರನ್ನು ಭಾರತ ನಂಬಲು ಸಾಧ್ಯವಿಲ್ಲ” ಎಂದಿದ್ದಾರೆ.
“ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದರಿಂದ ಯಾರಿಗೆ ತಾನೇ ಏನು ಸಮಸ್ಯೆಯಾಗಲಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
“ಯಾರು ರಾಷ್ಟ್ರೀಯವಾದಿ ಮತ್ತು ಯಾರು ರಾಷ್ಟ್ರೀಯವಾದಿ ಅಲ್ಲ ಎಂಬುದನ್ನು ಸುತ್ತಮುತ್ತಲ ನಿವಾಸಿಗಳು ನೋಡಲು ಬಯಸುತ್ತಾರೆ” ಎಂದಿದ್ದಾರೆ.
ಉತ್ತರಾಖಂಡದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಅವರು ಪ್ರತಿಕ್ರಿಯೆ ನೀಡಿದ್ದು, “ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿರುವುದರಿಂದ ಮಹೇಂದ್ರ ಭಟ್ ಅವರು ಕ್ಷುಲ್ಲಕ ಟೀಕೆಗಳನ್ನು ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು” ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಪ್ರಸ್ತುತ ಬೆಟ್ಟಗಳ ಶ್ರೇಣಿಯ ಭಾಗದಲ್ಲಿ ಪ್ರಸಾಸ ಮಾಡುತ್ತಿದ್ದೇನೆ. ತ್ರಿವರ್ಣ ಧ್ವಜವನ್ನು ಹಾರಿಸದ ಅನೇಕ ಮನೆಗಳನ್ನು ಇಲ್ಲಿ ನೋಡಬಹುದು. ಬಹುಶಃ ಬಿಜೆಪಿ ಆಡಳಿತದಿಂದಾಗಿ ಇವರು ಆರ್ಥಿಕ ಸಮಸ್ಯೆ ಎದುರಿಸುತ್ತಿರಬಹುದು” ಎಂದಿದ್ದಾರೆ.
ಬಿಜೆಪಿಯ ಸೈದ್ಧಾಂತಿಕ ತಳಹದಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿ ಹಲವು ವರ್ಷಗಳಿಂದ ರಾಷ್ಟ್ರಧ್ವಜವನ್ನು ಹಾರಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿರಿ: ಎಸ್.ಆರ್.ಹಿರೇಮಠ ಸಂದರ್ಶನ| ಎಸಿಬಿ ರದ್ದಾಗಿದ್ದು ಐತಿಹಾಸಿಕ ಗೆಲುವು, ಆದರೆ…,
“ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಒಪ್ಪುವುದಾದರೆ, ಆರೆಸ್ಸೆಸ್ ಅನ್ನು ಯಾರೂ ನಂಬಬಾರದು” ಎಂದು ಅವರು ಮನವಿ ಮಾಡಿದ್ದಾರೆ.
ಟೀಕೆಗಳು ಬಂದ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್, “ನನ್ನ ಹೇಳಿಕೆಯನ್ನು ಕಾಂಗ್ರೆಸ್ ತಪ್ಪಾಗಿ ಅರ್ಥೈಸಿಕೊಂಡಿದೆ. ಸರ್ಕಾರವು ವಿವಿಧ ಮಾಧ್ಯಮಗಳ ಮೂಲಕ ತ್ರಿವರ್ಣ ಧ್ವಜವನ್ನು ವಿತರಿಸುತ್ತಿದೆ. ಬಿಜೆಪಿ ಕೂಡ ಅದಕ್ಕೆ ಸಹಾಯ ಮಾಡುತ್ತಿದೆ. ಸ್ವಾತಂತ್ರ್ಯ ದಿನದಂದು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸಮಸ್ಯೆಯಾದರೂ ಏನು ಎಂದು ಕೇಳಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಧ್ವಜಾರೋಹಣ ಮಾಡದವರನ್ನು ಈ ದೇಶದ ಜನರು ನಂಬುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.