ಸಶಸ್ತ್ರ ಪಡೆಗಳ ಅರ್ಹ ಪಿಂಚಣಿದಾರರಿಗೆ ನಾಲ್ಕು ಕಂತುಗಳಲ್ಲಿ ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ) ಅಡಿಯಲ್ಲಿ ಬಾಕಿ ಮೊತ್ತವನ್ನು ಪಾವತಿಸಲು ಮುಂದಾಗಿರುವ ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು, “ರಕ್ಷಣಾ ಸಚಿವಾಲಯ ತಾನು ಮಾಡುವ ಕೆಲಸವನ್ನು ಸರಿಪಡಿಸಿಕೊಳ್ಳಬೇಕು ಎಂದಿದೆ. ಜೊತೆಗೆ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳದಿದ್ದರೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದೆ.
“ಒಆರ್ಒಪಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಆದೇಶಗಳನ್ನು ಅನುಸರಿಸಬೇಕಾಗಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಕಂತುಗಳಲ್ಲಿ ಬಾಕಿ ಪಾವತಿಸಲು ಏಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ?” ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಬಾಕಿಯನ್ನು ನಾಲ್ಕು ಕಂತಿನ ಬದಲು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಸೈನಿಕರ ಗುಂಪು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಅರ್ಜಿಯು ಬಾಕಿ ಇರುವಾಗಲೇ ಸುಮಾರು ನಾಲ್ಕು ಲಕ್ಷ ಪಿಂಚಣಿದಾರರು ಸಾವನ್ನಪ್ಪಿದ್ದಾರೆ ಎಂದು ಮಾಜಿ ಸೈನಿಕರ ಗುಂಪು ವಿಷಾದಿಸಿದೆ.
ಸಶಸ್ತ್ರ ಪಡೆ ಪಿಂಚಣಿದಾರರಿಗೆ ಮಾರ್ಚ್ 15 ರೊಳಗೆ ಬಾಕಿ ಮೊತ್ತ ಪಾವತಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಜನವರಿ 9, 2023ರಂದು ಸೂಚಿಸಿತ್ತು. ಆದರೆ, ಕೆಲವೇ ದಿನಗಳ ನಂತರ (ಜನವರಿ 20 ರಂದು) ರಕ್ಷಣಾ ಕಾರ್ಯದರ್ಶಿಯು ಅಧಿಸೂಚನೆ ಹೊರಡಿಸಿ, “ನಾಲ್ಕು ಕಂತುಗಳಲ್ಲಿ ಬಾಕಿಯನ್ನು ಇಲಾಖೆ ಪಾವತಿಸುತ್ತದೆ” ಎಂದಿದ್ದರು.
ಇದನ್ನೂ ಓದಿರಿ: ಅಗ್ನಿಪಥ್ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾ; ದೆಹಲಿ ಹೈಕೋರ್ಟ್ ತೀರ್ಪು
ಇದೀಗ ನ್ಯಾಯಾಂಗ ಪೀಠವು ರಕ್ಷಣಾ ಕಾರ್ಯದರ್ಶಿಗೆ ತಮ್ಮ ನಿಲುವನ್ನು ವಿವರಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, “ನ್ಯಾಯಾಲಯದ ಕಲಾಪಗಳು ನ್ಯಾಯಸಮ್ಮತವಾಗಿರಬೇಕು” ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. “ಇದು ಯುದ್ಧವಲ್ಲ ಆದರೆ ಕಾನೂನಿನ ನಿಯಮ. ನಿಮ್ಮ ಮನೆಯನ್ನು ಕ್ರಮಬದ್ಧವಾಗಿ ಇರಿಸಿ” ಎಂದು ತಿಳಿಸಿದ್ದಾರೆ.
ಕೇಂದ್ರವನ್ನು ಪ್ರತಿನಿಧಿಸುವ ವಕೀಲರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಜನವರಿ 9ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, “ಈ ವಿಷಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲಾಗುವುದು. ಶೀಘ್ರದಲ್ಲೇ ಬಾಕಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲಾಗುವುದು” ಎಂದಿದ್ದರು.