ಭಾರೀ ಮಳೆಯಿಂದಾಗಿ ಕೇರಳದ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯವರೆಗೆ ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಮತ್ತು ವಿಮಾನ ನಿಲ್ದಾಣದ ಬಳಿಯ ಕಾಲುವೆಯಲ್ಲಿ ನೀರಿನ ಹರಿದು ಹೆಚ್ಚುತ್ತಿದೆ. ಗುರುವಾರದಿಂದ ಪ್ರವಾಹದಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದ್ದು ಸತ್ತವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ವಯನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಕೋಳಿಕೋಡ್ ನಾಲ್ಕು ಜಿಲ್ಲೆಗಳಿಗೆ ಕೇರಳ ಸರ್ಕಾರ ರೆಡ್ ಅಲರ್ಟ್ ಘೋಷಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಮನ್ವಯದ ಮೇಲ್ವಿಚಾರಣೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ನಿಯಂತ್ರಣ ಕೊಠಡಿಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಕೆಲವು ನದಿಗಳಲ್ಲಿನ ನೀರಿನ ಮಟ್ಟ ಅಪಾಯಕಾರಿ ಹಂತಕ್ಕೆ ಏರಲಿದೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ. ಕೇರಳದಲ್ಲಿ ಆಗಸ್ಟ್ 15 ರಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ವಯನಾಡಿನ ಟೀ ಎಸ್ಟೇಟ್ ನಲ್ಲಿ ಕಾರ್ಮಿಕರ ಮನೆಗಳ ಸಮೂಹವು ಗುರುವಾರ ಸಂಜೆ ಭೂಕುಸಿತದಿಂದ ಸಂಪೂರ್ಣ ನಾಶವಾಗಿದೆ. ಹಲವರು ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದು, 200 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂರು ಜನರನ್ನು ರಕ್ಷಿಸಲಾಗಿದ್ದು, ಎರಡು ಶವಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆಗೆ 12 ಗಂಟೆ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೈನ್ಯ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಮತ್ತು ಅಗ್ನಿಶಾಮಕ ಇಲಾಖೆಯ ತಂಡಗಳು ಸ್ಥಳದಲ್ಲಿವೆ. ಈ ಪ್ರದೇಶದಲ್ಲಿ 20 ವರ್ಷಗಳಲ್ಲಿ ಭೂಕುಸಿತ ಕಂಡುಬಂದಿಲ್ಲ. ರಕ್ಷಿಸಿದವರನ್ನು ವಿಮಾನದಲ್ಲಿ ಸಾಗಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವಾರು ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳಿಂದ 22,000 ಕ್ಕೂ ಹೆಚ್ಚು ಜನರನ್ನು, ವಯನಾಡು ಒಂದರಲ್ಲೇ 9,000 ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದಾದ್ಯಂತ ಒಟ್ಟು 315 ನಿರಾಶ್ರಿತ ಶಿಬಿರಗಳಿದ್ದು ವಯನಾಡ್ ಒಂದರಲ್ಲೆ 105 ಶಿಬಿರಗಳನ್ನು ಹೊಂದಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ದಕ್ಷಿಣ ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲಿ ಇಂದು ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಟ್ಟಿವೆ. ಇಂದು ಯಾವುದೇ ವಿಶ್ವವಿದ್ಯಾಲಯ ಪರೀಕ್ಷೆ ನಡೆಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಪ್ಪುರಂನ ನೀಲಂಬೂರು ಗ್ರಾಮವು ಅನೇಕ ಭೂಕುಸಿತಗಳಿಂದ ಬಳಲುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ ಮತ್ತು ನೀರಿನ ಮಟ್ಟವು ವೇಗವಾಗಿ ಏರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆಯ ತಂಡಗಳು ಮತ್ತು ಎನ್ಡಿಆರ್ಎಫ್ ಈ ಪ್ರದೇಶದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗುಡುಗು ಸಹಿತ ಮಳೆ ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಮತ್ತು ತ್ರಿಶೂರ್ಗಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ.
ಎನ್ಡಿಆರ್ಎಫ್ನ ಇನ್ನೂ 10 ತಂಡಗಳನ್ನು ರಾಜ್ಯಕ್ಕೆ ಕಳುಹಿಸುವಂತೆ ಕೇರಳ ಕೇಂದ್ರವನ್ನು ಕೇಳಿದೆ. ಈ ಏಳು ತಂಡಗಳು ಇಂದು ತಲುಪುವ ನಿರೀಕ್ಷೆಯಿದೆ. ಒಂದು ಎನ್ಡಿಆರ್ಎಫ್ ತಂಡವನ್ನು ಈಗಾಗಲೇ ಇಡುಕಿಯಲ್ಲಿ ಇರಿಸಲಾಗಿದೆ.
“ನಿಮ್ಮ ಸಂವಹನ ಯೋಜನೆಯಲ್ಲಿ ಬ್ಯಾಕಪ್ ಸಾಧನಗಳನ್ನು ಒಳಗೊಂಡಿರಬೇಕೆಂದು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ. ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿ. ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಿ. ಸ್ಥಳಾಂತರಿಸುವಿಕೆ ಅಥವಾ ಆಶ್ರಯ ನೀಡುವ ಬಗ್ಗೆ ಸೂಚನೆಗಳನ್ನು ಆಲಿಸಿ. ಸ್ಥಳಾಂತರಿಸಲು ಸಲಹೆ ನೀಡಿದರೆ ತಕ್ಷಣ ಅದನ್ನು ಮಾಡಿ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
“ರಾಜ್ಯದಲ್ಲಿ, ವಿಶೇಷವಾಗಿ ವಯನಾಡ್ ನಲ್ಲಿನ ಪ್ರವಾಹ ಮತ್ತು ಭೂಕುಸಿತದಿಂದ ತೀವ್ರವಾಗಿ ಹಾನಿಗೊಳಗಾದ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಕೋರಿ ಪ್ರಧಾನಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ವಿಪತ್ತಿನ ಪರಿಣಾಮಗಳನ್ನು ತಗ್ಗಿಸಲು ಅಗತ್ಯವಾದ ಯಾವುದೇ ಸಹಾಯವನ್ನು ಒದಗಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ” ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಇಂದು ಟ್ವೀಟ್ ಮಾಡಿದ್ದಾರೆ.


