ಸಿದ್ದರಾಮಯ್ಯನವರ ಸರಕಾರ ರಚನೆಯಾಗಿ ತಿಂಗಳೊಪ್ಪತ್ತಾಗುವಷ್ಟರಲ್ಲಿ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ವರ್ಗಾವಣೆಗೆ 30 ಲಕ್ಷ ಲಂಚ ತೆಗೆದುಕೊಳ್ಳಲಾಗುತ್ತಿದೆಯೆಂದೂ ಕುಮಾರಸ್ವಾಮಿಯವರು ಬಾಂಬು ಸಿಡಿಸಿದ್ದಾರಲ್ಲಾ. ಈ ಬಗ್ಗೆ ಕಾಂಗೈ ಪಾಳಯದಲ್ಲಿ ದೊಡ್ಡ ಚರ್ಚೆಯೇ ನಡೆದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದಕ್ಕೆ ಹಲವು ವರ್ಷಗಳ ಮೊದಲು ದೇವೇಗೌಡರ ಹದಿನೆಂಟು ತಿಂಗಳು ಮುಖ್ಯಮಂತ್ರಿಯಾಗಿದ್ದರು. ಆಗ ರೇವಣ್ಣನಿಗೆ ಮತ್ತು ಕುಮಾರಣ್ಣನಿಗೆ ದೇವೇಗೌಡರ ಸನಿಹದಲ್ಲಿ ಸುಳಿದಾಡುವ ವಿಷಯದಲ್ಲಿ ಜಗಳವೇ ಆಗಿತ್ತು. ಅದರಲ್ಲೂ ರೇವಣ್ಣ ಮುಖ್ಯಮಂತ್ರಿ ಇಲ್ಲದ ಸಮಯ ನೋಡಿ ಅವರ ಕುರ್ಚಿಯಲ್ಲಿ ಕುಳಿತು ಗೌಡರಂತೆ ಅತ್ತ ಇತ್ತ ನೋಡಿದ್ದು ಸದನದಲ್ಲಿ ಚರ್ಚೆಗೆ ಬಂದಿತ್ತು. ಮುಂದೆ ದೇವೇಗೌಡರು ಪ್ರಧಾನಿಯಾದಾಗಲೂ ಅವರ ಬೆಂಗಾವಲಿನಂತೆ ಕುಮಾರಣ್ಣ ಸುಳಿದಾಡುತ್ತಿದ್ದರು, ಆದ್ದರಿಂದ ಒಬ್ಬ ಮಾಜಿ ಮುಖ್ಯಮಂತ್ರಿ ಮಗನ ದೂರನ್ನು ಅಷ್ಟು ಸುಲಭವಾಗಿ ತೆಗೆದುಹಾಕಲಾಗುವುದಿಲ್ಲ. ಅವರ ಅನುಭವದ ಮಾತನ್ನು ಅಲ್ಲಗಳೆಯಲಾಗುವುದಿಲ್ಲ ಅದರಲ್ಲೂ ಕುಮಾರಣ್ಣ ತಮ್ಮ ಹುಡುಗರನ್ನು ಸಿದ್ದರಾಮಯ್ಯನವರ ಸುತ್ತ ಬಿಟ್ಟಿದ್ದಾರೆ. ಸದ್ಯಕ್ಕೆ ಆಡಳಿತಾತ್ಮಕವಾದ ದೂರು ಟೀಕೆಗಳಿಗಿಂತ ಕುಮಾರಣ್ಣ ಇಂತಹವುಗಳನ್ನ ಹುಡುಕಿ ಕಡ್ಡಿಗೀರುವುದರಿಂದ ತಾವೆಲ್ಲಾ ಹುಷಾರಾಗಿರಬೇಕೆಂದು ಕಾಂಗೈ ಶಾಸಕರು ಚರ್ಚಿಸಿದರಂತಲ್ಲಾ, ಥೂತ್ತೇರಿ.
*****
ಕರ್ನಾಟಕದ ವಿಧಾನಸೌಧದ ಚರಿತ್ರೆಯಲ್ಲಿ ವಿರೋಧಪಕ್ಷದ ನಾಯಕನಿಲ್ಲದೆ ಸದನ ಆರಂಭಗೊಂಡು ರಾಜ್ಯಪಾಲರು ಭಾಷಣ ಮಾಡಿದ್ದು, ಸದನ ನಡೆದದ್ದು ಇದೇ ಮೊದಲಿರಬೇಕು. ಸಂವಿಧಾನ ವಿರೋಧಿಗಳಾದವರಿಗೆ ಇದೇನು ಅವಮಾನದ ಪ್ರಸಂಗವಲ್ಲ. ಹಾಗೆ ನೋಡಿದರೆ ಬಿಜೆಪಿಗಳ ಪರಿವಾರಕ್ಕೆ ಅವಮಾನವೇ ಆಗುವುದಿಲ್ಲ; ಬೇಕಾದರೆ ಕೇಳಿ ನೋಡಿ. ಇನ್ನು ಈ ಕುರಿತು ಮಾಧ್ಯಮದ ಮಂದಮತಿಗಳು ಹೇಗಿದ್ದಾರೆಂದರೆ, ಅವರಿಗೂ ಅದೊಂದು ಸುದ್ದಿಯಲ್ಲ. ಸಿದ್ದಾರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಜಟಾಪಟಿ ಇದ್ದಾಗ, ಕಡ್ಡಿ ರಂಗ ಹನುಮ ಜೊಷಿ ಪಾಸಿಗಳು ಟಿ.ವಿಯೊಳಗಿಂದ ಈಚೆಗೆ ನೆಗೆಯುವಂತಾಡಿದರು. ಇದೇ ಜನ ಎಡೂರಪ್ಪ ಸಂಪುಟ ರಚಿಸದೆ ಪ್ರವಾಹದ ಜಾಗಕ್ಕೆ ಒಬ್ಬರೇ ಹೋದಾಗ ಕಡುಬು ತುಂಬಿದ ಬಾಯಿ ಮಾಡಿಕೊಂಡಿದ್ದರು. ಇದಕ್ಕಿಂತ ಮುಖ್ಯವಾಗಿ ಆಕಸ್ಮಾತ್ ರೈತನಿಗೆ ಲಾಟರಿ ಹೊಡೆದಂತೆ ಟೊಮೊಟೊ ಕೆ.ಜಿ.ಗೆ ನೂರು ರೂಪಾಯಿ ಏರಿದ ಕೂಡಲೇ ರಕ್ತಕಾರುವುದಕ್ಕೆ ಶುರುಮಾಡಿದರು. ಆದರೆ ಇವರ ಕಣ್ಣೆದುರಿಗೆ ಡೀಸೆಲ್ ಪೆಟ್ರೋಲ್ ಬೆಲೆ ವಿಷದಂತೆ ಏರಿದ್ದು ಇವರಿಗೆ ದೊಡ್ಡ ಸುದ್ದಿಯೇ ಆಗಲಿಲ್ಲವಲ್ಲಾ. ಅಷ್ಟಕ್ಕೂ ಈ ಚಾನಲ್ಗಳು ಮನೆಯ ಹಟ್ಟಿ ಬಾಗಿಲಲ್ಲಿ ಕುಳಿತು ವದರುವ ವ್ಯಕ್ತಿಯಂತಾಗಿರುವುದು ಹಳೆಯ ಸುದ್ದಿಯಂತಲ್ಲಾ, ಥೂತ್ತೇರಿ.
*****
ಕೆ.ಎಸ್.ಆರ್.ಟಿ.ಸಿ ಆದಾಯ ಏರಿಕೆಯಾಗಿದೆ. ಮಹಿಳಾ ಪ್ರಯಾಣಿಕರ ಹಣವನ್ನು ತುಂಬಿಕೊಟ್ಟಿರುವ ಸರಕಾರದ ಬಗ್ಗೆ ಇಲಾಖೆ ಸಂತಸ ವ್ಯಕ್ತಪಡಿಸಿದೆ. ತಮ್ಮ ಜೀವಮಾನವಿಡೀ ಎಲ್ಲೂ ಹೋಗದೆ ಅಡುಗೆ ಮನೆ, ಕೊಟ್ಟಿಗೆ ಮತ್ತು ಹೊಲ, ತೋಟದ ದಾರಿ ಸವೆಸಿದ್ದ ಮಹಿಳೆಯರು ಮೊದಲಬಾರಿಗೆ ಕಳಸ, ಹೊರನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ಮುರುಡೇಶ್ವರ, ಮಹದೇಶ್ವರಕ್ಕೆ ದಾಳಿಯಿಡುತ್ತಿದ್ದಾರೆ. ಸರಕಾರದ ಕಡೆಯಿಂದ ಅವರ ಕಡೆಗೆ ಒಳ್ಳೆ ಗಾಳಿ ಬೀಸಿದ್ದರಿಂದ ಕೆಲವರಿಗೆ ಸಹಜವಾಗಿ ಹೊಟ್ಟೆಗೆ ಸುಣ್ಣ ಹುಯ್ದಂತಾಗಿದೆ. ಮಹಿಳೆಗೆ ಸಿಗುವ ಒಂದು ಸಣ್ಣ ಸ್ವಾತಂತ್ರ್ಯ ಮತ್ತು ಸವಲತ್ತಿಗೆ ಕಂಗಾಲಾಗುವ ಕೆಲ ಪುರುಷ ಮೃಗಗಳು ಮಹಿಳೆಯರು ಬಸ್ಸತ್ತುವುದನ್ನು ಹತ್ತಲು ಹೋಗಿ ಬಾಗಿಲನ್ನೇ ಮುರಿದುದನ್ನು ದಿನವಿಡೀ ತೋರಿಸುತ್ತಿವೆ ಈ ಮಾಧ್ಯಮಗಳು. ಇತ್ತ ಕೆಲವು ಕಮಲ ಪಾರ್ಟಿಯರು ಹೆಂಗಳೆಯರನ್ನು ಹೀಗಳೆಯುತ್ತಿದ್ದಾರೆ. ಇಂತಹ ಮಹಿಳೆಯರು ಬಸ್ಸು ಹತ್ತಿದ ಕೂಡಲೆ ಟಿಕೆಟ್ ತೆಗೆದುಕೊಂಡರೆ ಎಷ್ಟು ಚಂದ ಅಲ್ಲವೆ ಎಂದು ತಮ್ಮ ಬಸ್ಸಿನಲ್ಲಿ ಫ್ರೀಯಾಗಿ ಓಡಾಡುವ ಮಹಿಳೆಯರು ಉತ್ತರವಾಗಿದೆಯಲ್ಲಾ, ಥೂತ್ತೇರಿ.
*****
ಇದನ್ನೂ ಓದಿ: ತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!
ಆಳುವ ಸರಕಾರವನ್ನು ಟೀಕಿಸುವುದು ವಿರೋಧ ಪಕ್ಷದ ಕೆಲಸ. ವಿರೋಧಿಗಳ ಮಾತುಗಳನ್ನ ಕೇಳಿಸಿಕೊಳ್ಳಬೇಕಾದರೆ ಅವರು ಘನತೆಯಿಂದಲೇ ಆರೋಪಿಸಬೇಕು. ಆದರೀಗ ವಿರೋಧಿಗಳು ಆಡುವ ಮಾತಿಗೆ ಜನಗಳು ಕನಿಕರದಿಂದ ಲೊಚಗರಿಯುತ್ತಿದ್ದಾರಲ್ಲಾ. ಉದಾಹರಣೆಗೆ ಅಕ್ಕಿ ಕೊಡಿ ಇಲ್ಲ ಹಣ ಕೊಡಿ ಎಂದು ಕೂಗುತ್ತಿದ್ದ ಬಿಜೆಪಿಗಳ ಬಾಯಿ ಬಂದ್ ಆಗುವಂತೆ ಸರಕಾರ ಐದು ಕೆ.ಜಿ ಬದಲು ಹಣಕೊಡಲು ಹೊರಟಿದೆ. ತಮ್ಮ ಮಾತು ತಮಗೇ ತಿರುಗುಬಾಣವಾದುದರಿಂದ ಗಲಿಬಿಲಿಯಾದ ಬಿಜೆಪಿಗಳು, ಮತ್ತೆ ಹಣ ಬೇಡ ಅಕ್ಕಿ ಕೊಡಿ ಎನ್ನುತ್ತಿವೆ. ಇವರ ಮಾತಿಗೆ ದನಿಗೂಡಿಸಿದ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ, ಹಣ ಕೊಟ್ಟರೆ ಜನ ಕುಡಿದು ಇಸ್ಪೀಟ್ ಆಡುತ್ತಾರೆ ಎಂದುಬಿಟ್ಟಿದ್ದಾರಂತಲ್ಲಾ ಬಿಜೆಪಿ ಜತೆಗೆ ಮೈತ್ರಿಗೆ ಹವಣಿಸುತ್ತಿರುವ ಮುಖಂಡರು. ಇದಕ್ಕೆ ಕಾಂಗೈಗಳ ಕುಹಕವೇನೆಂದರೆ ಕುಮಾರಣ್ಣನ ಕಡೆಯ ಸೈನ್ಯದಲ್ಲಿ ಎಪ್ಪತ್ತು ಭಾಗ ಕುಡಿದು ಇಸ್ಪೀಟ್ ಆಡುವಂತವರೆ; ಬೇಕಿದ್ದರೆ ಚನ್ನಪಟ್ಟಣ ರಾಮನಗರದ ಕಡೆ ಹೋದರೆ ಗೊತ್ತಾಗುತ್ತದೆ; ತಮ್ಮವರು ಕುಡಿದು ಕಾರ್ಡ್ ಆಡಿಕೊಂಡು ಹಾಳಾಗುವುದನ್ನು ನೋಡಲಾಗುವುದಲ್ಲ, ಅದಕ್ಕೆ ಅವರು ಹಣ ಬೇಡ ಎನ್ನುತ್ತಿದ್ದಾರೆ. ಇದು ಒಂದೆಡೆಯಾದರೆ ಅವರ ಮಗ ನಿಖಿಲ್ ಮಂಡ್ಯದಲ್ಲಿ ಸಂಯುಕ್ತ ಆಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸೋತು, ತಮ್ಮದೇ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಯ ಚುನಾವಣೆಯಲ್ಲಿ ರಾಮನಗರದಲ್ಲೂ ಸೋತರು. ಮುಂದೆ ಆತನ ಭವಿಷ್ಯ ಇರುವುದು ಕಾಂಗ್ರೆಸ್ನಲ್ಲಿ ಮಾತ್ರ ಎಂದು ರಾಮನಗರದ ಜೆ.ಡಿ.ಎಸ್ನ ನಿಷ್ಠಾವಂತ ಜನ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.
*****
ಫ್ರಾನ್ಸ್ ಹತ್ತಿ ಉರಿಯುತ್ತಿದೆ. ಪೊಲೀಸರು ಹುಡುಗನೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಂಗಿಯ ಗಲಭೆ ಸ್ಫೋಟಗೊಂಡು ಇಡೀ ದೇಶವೇ ಹತ್ತಿ ಉರಿದ ಉದಾಹರಣೆಯಿಲ್ಲ. ಇಂತಹ ಸ್ಫೋಟ ಸಂಭವಿಸಬೇಕಾದರೆ, ಹಲವು ಕಿಡಿಗಳು ಸೇರಿ ಸಿಡಿಮದ್ದಾಗಿರಬೇಕು. ಸಿಡಿಯಲು ಒಂದು ಕಾರಣ ಬೇಕಾಗಿತ್ತಷ್ಟೆ. ಜಗತ್ತಿನ ರಾಷ್ಟ್ರಗಳು ಎಚ್ಚೆತ್ತುಕೊಳ್ಳಬೇಕಾದ ಘಟನೆಯಿದು. ಹಾಗೆ ನೋಡಿದರೆ ಆ ದೇಶದ ಅಧ್ಯಕ್ಷ ಯಾಕೋ ನಮ್ಮ ಪ್ರಧಾನಿಯವರಂತೆ ಗೋಚರಿಸುತ್ತಿದ್ದಾನೆ. ಬೆಂಕಿ ಕಿಡಿಯನ್ನು ಆರಂಭದಲ್ಲೇ ಆರಿಸುವುದನ್ನು ಬಿಟ್ಟು ಮಹಡಿಮೇಲೆ ನಿಂತು ನೋಡುತ್ತಿರುವಂತೆ ಕಾಣುತ್ತಿದ್ದಾನೆ. ನಮ್ಮಲ್ಲೂ ಅಷ್ಟೇ ಅಲ್ಲವೆ? ನಮ್ಮ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಆ ಬಗ್ಗೆ ಈವರೆಗೂ ಸಕಾರಾತ್ಮಕ ಕ್ರಮಕ್ಕೆ ಮುಂದಾಗಿಲ್ಲ. ಈ ವಿಷಯವಾಗಿ ನಮ್ಮ ಕಿಡಿಗೇಡಿ ಮನಸ್ಸು ಏನು ಹೇಳುತ್ತಿದೆಯೆಂದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದವರು. ಪ್ರಧಾನಿಯಾದ ಅವರಿಗೆ ಭಾರತದ ಎಲ್ಲ ರಾಜ್ಯಗಳು ಗುಜರಾತಿನಂತೆಯೆ. ನಾನೀಗ ರಾಜ್ಯದ ಮುಖ್ಯಮಂತ್ರಿಯಲ್ಲ, ದೇಶದ ಪ್ರಧಾನಿ ಎಂಬ ಭಾವ ಬಂದಿದ್ದರೆ, ವಿದೇಶಕ್ಕೆ ಹೋಗಿ ಯೋಗ ಮಾಡುವುದರ ಬದಲು ಮಣಿಪುರಕ್ಕೆ ಹೋಗಿ ಜನರ ಮನಗೆಲ್ಲುತ್ತಿದ್ದರಂತಲ್ಲಾ, ಥೂತ್ತೇರಿ.
*****
ಎಲ್ಲಿ ಗಲಭೆಯಾಗುತ್ತದೋ ಅಲ್ಲಿ ಜನರನ್ನು ಸಂತೈಸಲು ಕಾಣಿಸಿಕೊಳ್ಳುವಂತಹ ರಾಹುಲ್ ಗಾಂಧಿ ಮಣಿಪುರಕ್ಕೆ ಹೋದರಂತಲ್ಲಾ. ಮಣಿಪುರದ ಹೆಸರು ನಮ್ಮ ಕರ್ನಾಟಕಕ್ಕೂ ಪರಿಚಿತ. ಡಾ.ರಾಜಕುಮಾರ್ ನಟಿಸಿದ ಬಬ್ರುವಾಹನ ಚಿತ್ರದಲ್ಲಿ, ತನ್ನ ತಂದೆಯಾದ ಅರ್ಜುನನನ್ನು ಕಾಣಲು ಬಂದ ಬಬ್ರುವಾಹನನನ್ನ ಕುರಿತು ಅಣ್ಣನವರು, ’ನೀನೆಯೋ ಮಣಿಪುರದ ಅರಸು ವೀರ ಬಬ್ರುವಾಹನ? ಅಂತಹ ಹೆಸರಿನ ಮಕ್ಕಳು ನನಗಿಲ್ಲ. ಹೋಗಿ ನಿಮ್ಮಮ್ಮನನ್ನು ಕೇಳು, ನನಗೆ ಜನ್ಮ ಕೊಟ್ಟ ತಂದೆ ಯಾರು ಅಂತ’ ಎಂದು ಮೂದಲಿಸುತ್ತಾರೆ. ಹಾಗಾಗಿ ಕರ್ನಾಟಕಕ್ಕೆ ಮಣಿಪುರ ಹೀಗೆ ಪರಿಚಯ, ಉಲೂಚಿ ಚಿತ್ರಾಂಗದೆಯರೂ ಪರಿಚಯ. ಈಗಲೂ ಮಣಿಪುರದಲ್ಲಿ ಸ್ತ್ರೀ ಶಕ್ತಿಯೇ ಮುಂದೆ; ಯಾರೋ ಮೂರ್ಖ, ಅರ್ಜುನ ಮತ್ತು ನಮ್ಮ ಮೋದಿಯವರನ್ನು ಹೋಲಿಕೆ ಮಾಡಿ ವಾಟ್ಸಾಪ್ ಮಾಡಿದ್ದಾನೆ. ಏನಾದರಾಗಲಿ, ಅರ್ಜುನ ತನ್ನ ಮಗನ ಬಗ್ಗೆಯೇ ಸಂಶಯಿಸಿದಂತೆ, ಮಣಿಪುರ ನಮ್ಮ ದೇಶದ ರಾಜ್ಯವೋ ಅಲ್ಲವೋ ಎಂದು ಸಂಶಯಿಸುವ ಹಾಗೆ ಪ್ರಧಾನಿ ನಡೆದುಕೊಂಡಿರುವುದು ಇಡೀ ದೇಶವೇ ಮುಜುಗರ ಪಡುವ ಸಂಗತಿಯಂತಲ್ಲಾ, ಥೂತ್ತೇರಿ.


