Homeಮುಖಪುಟವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

ವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

- Advertisement -
- Advertisement -

ಕನ್ನಡದ ಪ್ರತಿಭಾನ್ವಿತ ಪತ್ರಕರ್ತರು -ಅಂಕಣಕಾರರಲ್ಲೊಬ್ಬರಾದ ನಟರಾಜು.ವಿ ಅವರು ತಣ್ಣನೆಯ ಶೈಲಿಯಲ್ಲೇ ಕಟುಸತ್ಯಗಳನ್ನು ಬಿಡಿಸಿಡುವ ಬರಹಗಾರರು. ಸಾಮಾಜಿಕ ರಾಜಕೀಯ ವಿಶ್ಲೇಷಣೆ, ಸಮಕಾಲೀನ ವಿದ್ಯಮಾನಗಳ ಕುರಿತ ಅವರ ಅಂಕಣ ‘ಪಠ್ಯ – ಪ್ರಮಾಣ’ ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ವಿಜಯನೆಕ್ಸ್ಟ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಇವರು ‘ದಿ ಸ್ಟೇಟ್’ ನಲ್ಲಿ ಸೀನಿಯರ್ ಅಸಿಸ್ಟೆಂಟ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಟೆಕ್ ಕನ್ನಡ ವೆಬ್‍ಜಾಲದ ‘ತಂತ್ರ ತಾಂಡವ’ ಅಂಕಣದ ಜೊತೆಗೆ, ನಟರಾಜುರವರು ನ್ಯಾಯಪಥ ಪತ್ರಿಕೆಯಲ್ಲಿ ಪ್ರಮುಖ ವಿಶ್ಲೇಷಕ ಬರಹಗಳನ್ನು ಬರೆಯುತ್ತಿದ್ದಾರೆ.

ಈ ವಿಶೇಷ ಸಂಚಿಕೆಯನ್ನು ಕೈಯಲ್ಲಿ ಹಿಡಿದು ಕಣ್ಣಾಡಿಸುತ್ತಿರುವ ಈ ಹೊತ್ತಿನಲ್ಲಿ ಬಹುಶಃ ನಿಮಗೆ ಮೇಲುನೋಟಕ್ಕೇ ಸಮಕಾಲೀನ ಭಾರತೀಯ ಸಮಾಜ ಎದುರಿಸುತ್ತಿರುವ ಹತ್ತು ಹಲವು ತಲ್ಲಣಗಳು, ಪ್ರಜಾಪ್ರಭುತ್ವ, ಸಂವಿಧಾನಗಳಿಗೆ ಎದುರಾಗಿರುವ ಗಂಭೀರ ಸವಾಲುಗಳ ಕುರಿತಾದ ತೀವ್ರ ಕಾಳಜಿ ಈ ಬರಹಗಳಲ್ಲಿ ಕಾಣಬಹುದು. ಇದಾಗಲೇ ಜಾತಿವ್ಯವಸ್ಥೆಯಲ್ಲಿ ಸಿಲುಕಿ ಶತಶತಮಾನಗಳಿಂದ ಹೈರಾಣಾಗಿಹೋಗಿರುವ ಭಾರತೀಯ ಸಮಾಜದ ಸೂಕ್ಷ್ಮ ನೇಯ್ಗೆಗಳು ಇಂದು ಮೂಲಭೂತವಾದದ ತೀವ್ರ ಹೆಚ್ಚಳದೊಂದಿಗೆ ಮತ್ತೂ ಗಂಭೀರವಾಗಿ ಘಾಸಿಗೊಂಡಿವೆ. ನಮ್ಮ ಸುತ್ತಣ ಸಮಾಜದ ಆಲೋಚನೆಗಳನ್ನು ಮೂಲಭೂತವಾದವು ವ್ಯಾಪಿಸಿಕೊಳ್ಳುತ್ತಿರುವ ಪರಿ, ಪಡೆಯುತ್ತಿರುವ ರೂಪ, ಭಾಷೆ ಎಲ್ಲ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಬಹುತೇಕ ಲೇಖನಗಳು ವಿವಿಧ ಆಯಾಮಗಳಿಂದ ಈ ಸವಾಲುಗಳನ್ನು ಸಂಕೀರ್ಣವಾಗಿಯೂ, ಚಿಕಿತ್ಸಕವಾಗಿಯೂ ಎದುರುಗೊಂಡಿವೆ. ಪ್ರಸಕ್ತ ಲೇಖನ ಇದರಾಚೆಗಿನ ಕೆಲ ಸಂದಿಗ್ಧಗಳು, ಸವಾಲುಗಳ ಬಗ್ಗೆ ಗಮನ ಹರಿಸಲಿದೆ. ಆದರ್ಶ, ವಾಸ್ತವ, ಬೂಟಾಟಿಕೆ, ನೈತಿಕ ವಿರೋಧಾಭಾಸಗಳ ಗೋಜಲುಗಳ ಸುತ್ತಲಿನ ಚರ್ಚೆ ಈ ಲೇಖನದ ತಿರುಳು.

ಇಂದು ಸಾಮಾಜಿಕ ಕಾರ್ಯಕರ್ತರು, ಸಮಾಜಮುಖಿ ಚಿಂತಕರು, ಪ್ರಜ್ಞಾವಂತರು, ಪತ್ರಕರ್ತರೆಲ್ಲರನ್ನೂ ಒಂದಿಲ್ಲೊಂದು ಬಗೆಯಲ್ಲಿ ನೈತಿಕ ತಳಮಳಗಳು ಬಾಧಿಸುತ್ತಿವೆ. ಮೌಲ್ಯಗಳ ಹೆಸರಿನಲ್ಲಿ ತಾವು ಕಟ್ಟಿಕೊಂಡಿದ್ದ ಕೋಟೆ ಎಲ್ಲ ದಿಕ್ಕಿನಲ್ಲಿಯೂ ಕುಸಿದು ಬೀಳುತ್ತಿರುವುದು ಕಣ್ಣುಮುಚ್ಚಿದರೂ ಗೋಚರಿಸುತ್ತಿದೆ. ಈ ಸತ್ಯಕ್ಕೆ ಮುಖಾಮುಖಿಯಾಗುವುದೋ ಅಥವಾ ಕೋಟೆ ಕುಸಿದರೇನು ನಮ್ಮ ಸುತ್ತ ನಾವೇ ಒಂದು ಗೂಡು ಕಟ್ಟಿಕೊಂಡು ಚಿಟ್ಟೆಯಾಗಿ ಪರಿವರ್ತನೆ ಹೊಂದೋಣ, ಯಾರ ಜಪ್ತಿಗೂ ಸಿಗದೆ ಹಾರಿಬಿಡೋಣ ಎಂದು ರಮ್ಯವಾಗಿ ಉತ್ತರಿಸುವುದೋ ತಿಳಿಯುತ್ತಿಲ್ಲ. ನಾವು ನಿಂತಿರುವ ನೆಲದ ಮೇಲೆಯೇ ಸಂಶಯವೇಳುತ್ತಿರುವ ಈ ಹೊತ್ತಿನಲ್ಲಿ ತಲೆಯನ್ನು ನೆಲದಲ್ಲಿ ಹುದುಗಿಸಿಕೊಂಡು ಎಲ್ಲದಕ್ಕೂ ಕಣ್ಣುಮುಚ್ಚಿಕೊಂಡು ಬಿಡುವುದು ಸಂವೇದನಾಶೀಲರ ಆಯ್ಕೆಯೂ ಅಲ್ಲ.

ಕಪ್ಪುಬಿಳುಪು ಇವೆರಡನ್ನು ಮಾತ್ರವೇ ಗುರುತಿಸಲು, ಬೇರ್ಪಡಿಸಲಷ್ಟೇ ಕಲಿತಿರುವವರಿಗೆ ಜಗವೆಲ್ಲಾ ಕಂದು ಬಣ್ಣದಲ್ಲೇ ಇರುವಾಗ ಅದನ್ನು ಹೇಗೆ ವರ್ಗೀಕರಿಸುವುದು ತಿಳಿಯದಾಗಿದೆ. ಮಾಧ್ಯಮವೂ ಸೇರಿದಂತೆ ಇಂದು ಎಲ್ಲ ಉದ್ಯಮಗಳೂ ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ, ಅಧಿಕಾರಸ್ಥರ ಸಹಾಯ, ಸಹಕಾರಗಳನ್ನು ಅವಲಂಬಿಸಿವೆ. ಈ ಅವಲಂಬನೆ ಕೆಲವೆಡೆ ಅಲ್ಪವೇ ಇರಬಹುದು ಮತ್ತೆ ಹಲವೆಡೆ ಅವಕಾಶವಾದಿತನ, ವಶೀಲಿಬಾಜಿಗಾಗಿಯೇ ಈ ಉದ್ಯಮಗಳು ಆರಂಭವಾಗಿಯೂ ಇರಬಹುದು.

ಮೌಲ್ಯಗಳೆನ್ನುವುದು ಇಂದು ತುಲನಾತ್ಮಕವಾಗಿ ನೋಡಬಹುದಾದ ವಿಷಯವಾಗಿದೆಯೇ ಹೊರತು ಪಾವಿತ್ರ್ಯದ ವಿಷಯವಾಗಿ ಉಳಿದಿಲ್ಲ. ಅವರಿಗಿಂತ ಇವರು ಉತ್ತಮ, ಆ ಸಂಸ್ಥೆಗಿಂತ ಈ ಸಂಸ್ಥೆ ಉತ್ತಮ ಎನ್ನಬಹುದೇ ಹೊರತು ಪರಮಪವಿತ್ರವೂ, ಅಗ್ನಿದಿವ್ಯವೂ ಆದ ಸಾಂಸ್ಥಿಕ ರಚನೆಗಳು ಸಾರ್ವಜನಿಕವಾಗಿ ಕಾಣೆಯಾಗಿವೆ. ಇದಕ್ಕೆ ಸರ್ಕಾರಿ, ಖಾಸಗಿ ಎನ್ನುವ ಭೇದಭಾವವಿಲ್ಲ. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ತಾನು ದುಡಿದು ತಿಂದಿರುವುದಾಗಿ ಯಾರೇ ಹೇಳಿದರೂ ಆ ದುಡಿಮೆಯನ್ನು ಬಳಸಿಕೊಂಡ ಸಂಸ್ಥೆಗಳು ಸಂಬಳಕ್ಕಾಗಿ ತೆತ್ತ ಹಣದ ಹರಿವು ಎಲ್ಲಿಯದು, ಆ ಸಂಸ್ಥೆಗಳ ವ್ಯಾವಹಾರಿಕ ಚೌಕಟ್ಟಿನ ಸ್ವರೂಪವೇನು ಎನ್ನುವುದನ್ನು ಅರಿತರೆ ಭ್ರಷ್ಟತೆ ಎನ್ನುವುದು ನಮ್ಮೆಲ್ಲರನ್ನೂ ಒಂದಿಲ್ಲೊಂದು ಹಂತದಲ್ಲಿ ತಾಕಿಯೂ ಅರಿವಿಗೇ ಬಾರದೆ ಉಳಿದಿರುವುದು ಗಮನಕ್ಕೆ ಬರುತ್ತದೆ.

ಮಾರುಕಟ್ಟೆ ಎನ್ನುವುದು ಸರ್ವವ್ಯಾಪಿಯಾಗಿರುವ ಈ ಯುಗದಲ್ಲಿ ಅರ್ಥವ್ಯವಸ್ಥೆಯ ಸ್ವರೂಪ ಸಂಕೀರ್ಣವೂ, ಪರಸ್ಪರ ವ್ಯಾಪಕವಾಗಿ ಅವಲಂಬಿತವೂ ಆಗಿರುವಂಥದ್ದು. ಮಾರುಕಟ್ಟೆ ಆಧರಿತ ಜೀವನ ವಿಧಾನದ ಈ ದಿನಗಳಲ್ಲಿ ಹಣವೆನ್ನುವುದು ಎಲ್ಲರ ಬದುಕಿನ ಕೇಂದ್ರದಲ್ಲಿದೆ. ಇದಕ್ಕೆ ನಗರ ಹಾಗೂ ಗ್ರಾಮೀಣ ಎನ್ನುವ ವ್ಯತ್ಯಾಸಗಳಿಲ್ಲ, ಪ್ರಮಾಣದಲ್ಲಿ ಕೊಂಚಮಟ್ಟಿಗಿನ ಅಂತರವಿರಬಹುದು ಅಷ್ಟೇ. ಹೀಗೆ ಹಣದ ಹರಿವು ಮತ್ತು ಅದರ ಅವಲಂಬನೆಗಳು ಹೆಚ್ಚಾದಂತೆಲ್ಲಾ ವ್ಯವಸ್ಥೆಯಲ್ಲಿ ಕಪ್ಪುಬಿಳುಪು ಎನ್ನುವ ವರ್ಗೀಕರಣವೇ ಕ್ರಮೇಣ ಅಪ್ರಸ್ತುತವೂ, ಗೊಂದಲಮಯವೂ ಆಗತೊಡಗುತ್ತದೆ. ಹಣದ ಮೌಲ್ಯವು ಪೂರ್ವನಿರ್ಧರಿತವಾಗಿದ್ದು ಅದು ತನ್ನ ಮೌಲ್ಯವನ್ನು ತನ್ನನ್ನು ಗಳಿಸಿದ, ದುಡಿದ ಮಾರ್ಗದಿಂದಾಗಿ ಪಡೆಯುವುದಿಲ್ಲ. ಶ್ರಮಿಕರು, ಜ್ಞಾನಿಗಳು, ಪ್ರತಿಭಾವಂತರು, ವಯೋವೃದ್ಧರು, ವಿಶೇಷಚೇತನರು ಕಷ್ಟಪಟ್ಟು ದುಡಿದ ಹಣಕ್ಕೂ, ಭ್ರಷ್ಟವೂ, ಅನೈತಿಕವೂ, ವಾಮಮಾರ್ಗದಿಂದಲೂ ಗಳಿಸಿದ ಹಣಕ್ಕೂ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಇದು ಆಧುನಿಕ ಅರ್ಥವ್ಯವಸ್ಥೆಯಲ್ಲಿನ ದೊಡ್ಡ ನ್ಯೂನತೆ. ಹಣವೆನ್ನುವುದು ಗುಣಗ್ರಾಹಿಯಾಗಿಲ್ಲ. ಜಾತಿ, ಧರ್ಮ, ಜನಾಂಗ, ಬಣ್ಣಗಳ ಆಧಾರದಲ್ಲಿ ಶ್ರೇಷ್ಠತೆಯ ವ್ಯಸನ ಮೆರೆಯುವ ನಮ್ಮ ನಾಗರಿಕತೆಗಳು, ಇದಕ್ಕೆ ಬದಲಾಗಿ ಮೌಲ್ಯ, ನೈತಿಕತೆಯ ಹೆಸರಿನಲ್ಲಿ ಶ್ರೇಷ್ಠತೆಯ ವ್ಯಸನ ಬೆಳೆಸಿಕೊಂಡಿದ್ದರೆ ಹಣಕ್ಕೆ ಗುಣಗ್ರಾಹಿಯಾಗುವ ಅಗತ್ಯ ಖಂಡಿತ ಬರುತ್ತಿತ್ತು. ಆದರೆ, ವಾಸ್ತವ ಹಾಗಿಲ್ಲ. ಹಣ ಇಂದು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿದೆ, ನಮ್ಮೆಲ್ಲರ ಜೀವನಾವಶ್ಯಕತೆಗಳನ್ನು, ಬದುಕು, ಭವಿಷ್ಯವನ್ನು ನಿರ್ಧರಿಸುವ ಪ್ರಖರ ಮಾಧ್ಯಮವಾಗಿದೆ. ಹೀಗೆ ನಮ್ಮೆಲ್ಲರ ಬದುಕನ್ನು ನಿಯಂತ್ರಿಸುವ, ನಿರ್ಧರಿಸುವ ಹಣಕ್ಕೆ ನ್ಯಾಯನೀತಿಯ ಪರಿವೆಯೇ ಇಲ್ಲ! ಗುಣಕ್ಕೆ, ಮೌಲ್ಯಗಳಿಗೆ ಕುರುಡಾಗಿರುವ ಇಂತಹ ಹಣವನ್ನು ಕೇಂದ್ರದಲ್ಲಿರಿಸಿಕೊಂಡೇ ನವ ನಾಗರಿಕತೆಗಳು ಅಸ್ತಿತ್ವ ಕಟ್ಟಿಕೊಂಡಿವೆ. ದೇಶ, ಮಾರುಕಟ್ಟೆಗಳು ಉಸಿರಾಡುತ್ತಿವೆ. ಇಂದು ಇಡೀ ಜಾಗತಿಕ ಅರ್ಥವ್ಯವಸ್ಥೆಯವೆನ್ನುವುದು ಹೃದಯಹೀನವೂ, ಅಮಾನವೀಯವೂ ಆಗಿ ಪರಿವರ್ತಿತವಾಗಲು ಈ ಲೋಪವೇ ಕಾರಣ. ಈ ಸಂಕೀರ್ಣತೆಗಳನ್ನು ಅರಿಯದೆ ಭ್ರಷ್ಟಾಚಾರದ ಬಗ್ಗೆ ತೆಳುಗ್ರಹಿಕೆಯಲ್ಲಿ ಮಾತನಾಡುವುದು ಯಾವತ್ತೂ ಅಪಾಯಕಾರಿ.

ಇಷ್ಟೆಲ್ಲಾ ಹೇಳಲು ಕಾರಣ, ಇಂದು ಮಾನವೀಯ, ಜನಪರ, ಜನಮುಖಿ ಚಿಂತನೆಗಳುಳ್ಳವರಲ್ಲಿ ಯಾವ ವಿಚಾರಗಳಲ್ಲಿ ಒಮ್ಮತ ಮೂಡಬೇಕಿತ್ತೋ ಅದು ಸಾಧ್ಯವಾಗದೆ ಹೋಗಿರುವುದರಿಂದಾಗಿ. ಬಹುತೇಕ ಸಂದರ್ಭಗಳಲ್ಲಿ ಹಣದ ವಿಚಾರದಲ್ಲಿ ಕೆಲವೊಂದು ಸೀಮಿತ ಕಲ್ಪನೆಗಳಿಂದ ನಾವು ವ್ಯವಹರಿಸುವುದು ಇದಕ್ಕೆಲ್ಲಾ ಕಾರಣವಾಗುತ್ತದೆ. ಇಂದು ಸಮಾಜದ ಕೇಂದ್ರಕ್ಕೆ ಮತ್ತೆ ಮಾನವೀಯ ಮೌಲ್ಯಗಳನ್ನು ತರಬೇಕೆಂದರೆ ಗುಣಗ್ರಾಹಿಯಾಗಿಲ್ಲದ ಹಣದ ವಿಚಾರವಾಗಿ ಅತಿ ಎನಿಸುವಷ್ಟು ಪ್ರಾಮಾಣಿಕವಾಗಿಯೂ, ಕಟುವಾಗಿಯೂ ವರ್ತಿಸುವಂತೆ ಮಾಡಿರುವ ಸ್ಥಾಪಿತ ಮೌಲ್ಯಗಳ ಬಗ್ಗೆಯೇ ನಾವು ಸಂಶಯವನ್ನಿರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ಚಿಂತನೆಗಳು ಹೆಚ್ಚು ಉದಾರವಾಗಬೇಕಿದೆ. ಉತ್ತಮ ಉದ್ದೇಶಗಳು, ಕೆಲಸಕ್ಕಾಗಿ ಹಣ ಹಾಗೂ ಶ್ರಮವನ್ನು ಹೇಗೆ ಒಗ್ಗೂಡಬೇಕು ಎನ್ನುವ ವಿಚಾರದಲ್ಲಿ ಶ್ರೇಷ್ಠತೆಯ ವ್ಯಸನಗಳಿಂದ ನಾವಿಂದು ಹೊರಬರಬೇಕಿದೆ. ಉತ್ತಮ ಉದ್ದೇಶ, ದೂರದರ್ಶಿತ್ವ, ಸಮತೆಯಲ್ಲಿ ನಂಬಿಕೆಯಿಟ್ಟವರನ್ನು ಅಧಿಕಾರದ ಕೇಂದ್ರಕ್ಕೆ ತರಲು ಲಾಬಿ ಮಾಡುವುದು, ಉತ್ತಮ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಸಂಪನ್ಮೂಲ ಸಂಗ್ರಹದ ವಿಚಾರದಲ್ಲಿ ಅವಾಸ್ತವವೂ, ಅಪ್ರಾಯೋಗಿಕವೂ ಆಗಿರದೆ ಸಮಾಜಕಂಟಕವಲ್ಲದ ಮಾರ್ಗಗಳ ಬಗ್ಗೆ ಪುನರ್ ಪರಿಶೀಲಿಸುವುದು ಇಂದಿನ ಅಗತ್ಯವಾಗಿದೆ. ಒಳಿತನ್ನು ಕೆಟ್ಟದ್ದರಿಂದ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವುದು ದಿಟ. ಹಾಗೆಂದು, ಒಳಿತನ್ನು ಒಳಿತಿನಿಂದಲೇ ಸೋಲಿಸಬಾರದು ಕೂಡ. ವಿಚಾರಶೀಲರಿಗೆ ಇವೆರಡರ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗಲಾರದು.

ಒಳಿತಿನ ಬೇರುಗಳು ಸಮಾಜದಲ್ಲಿ ಆಳವಾಗಬೇಕೆಂದರೆ, ಮೊದಲು ಉತ್ತಮರ ಪರವಾಗಿ ಪ್ರಜ್ಞಾವಂತರೆಲ್ಲರೂ ಸಕಾರಾತ್ಮಕವಾಗಿ ಲಾಬಿ ಮಾಡಬೇಕಿದೆ. ಸಜ್ಜನರ ಒಳ್ಳೆಯತನಕ್ಕೆ ಪ್ರಾಮಾಣಿಕತೆಯ ಬೇಡಿ, ಸಲಾಕೆಗಳನ್ನು ಹಾಕಿ, ವಸ್ತುನಿಷ್ಠತೆಯ ಲಕ್ಷ್ಮಣರೇಖೆಯನ್ನೆಳೆದು ಪಂಜರದಲ್ಲಿರಿಸಿ ಆ ಮೂಲಕ ಅಧಿಕಾರ ಕೇಂದ್ರಗಳಿಗೆ, ಆಯಕಟ್ಟಿನ ಸ್ಥಳಗಳಿಗೆ ಒತ್ತರಿಸಿಕೊಳ್ಳುವ ದುಷ್ಟರು, ಧನದಾಹಿಗಳು, ಅಯೋಗ್ಯರನ್ನು ದೂರವಿರಿಸಬೇಕಿದೆ. ಉತ್ತಮರು, ಪ್ರತಿಭಾವಂತರು, ಮಾನವೀಯ ಮೌಲ್ಯಗಳುಳ್ಳವರನ್ನು ಅಧಿಕಾರ ಹಾಗೂ ಸಂಪನ್ಮೂಲಗಳಿರುವೆಡೆ ಕೂರಿಸಿ ರಚನಾತ್ಮಕ ಹಾಗೂ ಮಾನವೀಯ ಕೆಲಸಗಳಿಗೆ ಹೆಚ್ಚೆಚ್ಚು ಶಕ್ತಿ, ಸಂಪನ್ಮೂಲಗಳನ್ನು ಹರಿಸಬೇಕಿದೆ. ಇದು ಸಾಧ್ಯವಾಗಬೇಕೆಂದರೆ ನಾವುಗಳು ಅವಾಸ್ತವ ನೆಲೆಗಳಲ್ಲಿ ರೂಢಿಸಿಕೊಂಡಿರುವ ಶ್ರೇಷ್ಠತೆಯ ವ್ಯಸನವನ್ನು ಬದಿಗಿರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...