Homeಮುಖಪುಟಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

ಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

- Advertisement -
- Advertisement -

ಸಂಶೋಧಕ, ಯುವ ಬರಹಗಾರ ಅರುಣ್ ಜೋಳದಕೂಡ್ಲಿಗಿಯವರು ತಮ್ಮ ಎಲೆ ಮರೆ-7ರ ಅಂಕಣದಲ್ಲಿ ಭಟ್ರಳ್ಳಿ ಗೂಳೆಪ್ಪನವರ ಬಗ್ಗೆ ಬರೆದಿದ್ದರು. ಈಗ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ ದೊರೆತಿದೆ.

ನಂಜುಂಡಪ್ಪ ಅವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ಚಳ್ಳಕೆರೆ ಒಳಗೊಂಡಂತೆ ಮೊಳಕಾಲ್ಮೂರು ತಾಲೂಕು ಸೇರುತ್ತದೆ. ಹಾಗೆ ನೋಡಿದರೆ ಇದು ಕರ್ನಾಟಕದ ನಡುಮಧ್ಯೆ ಬರುವ ಭೂಭಾಗ. ಈ ಬಯಲ ಬಿಸಿಲಿಗೆ ಬಿರುಕುಬಿಟ್ಟ ನೆಲದಂತೆಯೂ, ಬಟ್ಟಂಬಯಲ ಆಲಯದಂತೆಯೂ ಇದೆ. ಹಿರಿಯೂರು ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಚಲಿಸುತ್ತಿದ್ದರೆ ಈ ಭಾಗದ ಬಂಡೆಗಳಿಂದ ಸುತ್ತುವರಿದ ಬೆಟ್ಟಗಳು ಎದುರಾಗುತ್ತವೆ. ಬಿತ್ತನೆ ಇಲ್ಲದ ಹೊಲಗಳು ಬಿಸಿಲ ಉಡುಪುತೊಟ್ಟು ದುಃಖಿಸುತ್ತಿರುವಂತೆ ಭಾಸವಾಗುತ್ತದೆ. ಸಂಗಾತಿಯಾಗಿ ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳಂತಹ ಕುರುಚಲು ಕಾಡು ಅಲ್ಲಲ್ಲಿ ಕುಪ್ಪೆಕುಪ್ಪೆಯಾಗಿ ಕಾಣುತ್ತದೆ. ಈ ಮಧ್ಯೆಯೂ ಜೀವಚೈತನ್ಯದ ಕುರುಹು ಎಂಬಂತೆ ಹಾಡುವ ಹಕ್ಕಿಗಳು ಸುಳಿದಾಡುವ ಜೀವರಾಶಿ. ಉಳಿದಂತೆ ಬಯಲೆಂಬ ಬಯಲ ಜತೆ ಬಿಸಿಲೆಂಬ ಬಿಸಿಲು. ಇಂತಹ ಪರಿಸರದಲ್ಲಿ ಹಸಿರಿನ ಕನಸೊತ್ತು ಕಾಡಿನ ಕಾವಲಿಗೆ ತನ್ನ ಜೀವವನ್ನೆ ತೇದು ಗಂಧದ ವಾಸನೆ ಬೀರಿದಾತ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಟ್ರಳ್ಳಿಯ ತಳವಾರ ಗೂಳೆಪ್ಪ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾಲಸಾಗರ ವ್ಯಾಪ್ತಿಯ ರಕ್ಷಿತ ಅರಣ್ಯವನ್ನು ಪ್ರವೇಶಿಸುತ್ತಿದ್ದಂತೆ ಭಟ್ರಳ್ಳಿ ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಹಚ್ಚಹಸಿರಿನ ಕಾಡು ಸಿಗುತ್ತದೆ. ನಾನೊಮ್ಮೆ ಗೂಳೆಪ್ಪನನ್ನು ಭೇಟಿ ಮಾಡಲೆಂದು ಹೋದಾಗ ಗೂಳೆಪ್ಪ ಮಾತನಾಡುತ್ತಾ ಕಾಡಿನೊಳಗೆ ಕರೆದುಕೊಂಡು ಹೋಗತೊಡಗಿದರು. ತಾನು ಅಲ್ಲಲ್ಲಿ ತೋಡಿದ ನೀರುಗುಂಡಿಗಳನ್ನು ತೋರಿಸುತ್ತಾ ನೀರು ನಿಲ್ಲಿಸುವ ಸಾಹಸದ ಕಥೆಗಳನ್ನು ಹೇಳತೊಡಗಿದರು. ನಡಿಗೆಯ ಆರಂಭದಲ್ಲಿ ಬಿಡಿಬಿಡಿಯಾಗಿದ್ದ ಗಿಡಮರಗಳು ನಿಧಾನಕ್ಕೆ ಹೆಚ್ಚಾಗತೊಡಗಿದವು. ಮುಂದೆ ಸ್ವಲ್ಪ ದೂರದಲ್ಲಿ ಸಾಲುಸಾಲು ಆಸಿನ (ಆರಿಗಿಡ) ಮರಗಳು ಕಾಣತೊಡಗಿದವು. 50 ಹೆಕ್ಟೇರ್ ಪ್ರದೇಶದ ಈ ಕಾಡನ್ನು ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಕಾಪಿಟ್ಟಿದ್ದಾನೆ.
ಗೂಳೆಪ್ಪ ಈ ಮರಗಳನ್ನು ಯಾವಾಗ ನೆಟ್ಟವು ಎಂದು ಲೆಕ್ಕ ಇಟ್ಟು ಹೇಳುತ್ತಾರೆ. ಕೆಲವು 1995 ರಲ್ಲಿ ನೆಟ್ಟವಾಗಿದ್ದರೆ ಮತ್ತೆ ಕೆಲವು 1997 ರಲ್ಲಿ ನೆಟ್ಟವುಗಳು. ಅವೆಲ್ಲಾ ಈಗ ಎತ್ತರಕ್ಕೆ ಬೆಳೆದು ಗೂಳೆಪ್ಪನ ಹೆಸರೇಳುತ್ತಿವೆ. ಇಡೀ ಕಾಡಿನ ಜೀವನಾಡಿಯನ್ನು ಕೇಳಿಸಿಕೊಳ್ಳುವಷ್ಟು ಈ ಕಾಡಿನ ಜತೆ ಈತ ಬೆಸೆದುಕೊಂಡಿದ್ದಾನೆ. ಈ ಕಾಡನ್ನು ಸುತ್ತಿದ್ದರೆ ಕಡಿದು ಮೊಟಕಾದ ಒಂದೇ ಒಂದು ಬೊಡ್ಡೆಯೂ ಕಾಣಲು ಸಿಗುವುದಿಲ್ಲ. ಅಷ್ಟರಮಟ್ಟಿಗೆ ಗೂಳೆಪ್ಪನ ಕಾವಲು ಕಾಡನ್ನು ಸಂರಕ್ಷಿಸಿದೆ. ಆಲ, ಬೇವು, ಅರಳಿ, ನೇರಲ, ಬಿಕ್ಕೆ, ಕಮರ, ತಪ್ಸೆ, ದೊಂಡು ಜಾಲಿ, ಉಲಿಪೆ, ಸಪಳೆ, ಆಸು ಹೀಗೆ ಹತ್ತಾರು ಜಾತಿಯ ಮರಗಿಡಗಳು ನಿರಾತಂಕವಾಗಿ ಬೆಳೆಯುತ್ತಿವೆ. ಕವಳೆ, ಸೀತಾಫಲ, ಬಿಕ್ಕೆ, ಕಾರೆ, ಬರಗಿ, ಬೆಳವಿ, ಹುಣಸೆ, ಹತ್ತಿ ಮುಂತಾದ ಹಣ್ಣಿನ ಮರಗಿಡಗಳು ಕಾಲಾನುಸಾರ ಹಣ್ಣು ಕೊಡುತ್ತಿವೆ. ಕರಡಿ, ಕಾಡುಹಂದಿ, ಚಿರತೆ, ನರಿ, ಮೊಲ, ತೋಳ ಮೊದಲಾದ ಪ್ರಾಣಿಗಳು, ನವಿಲು, ಬೆಳವ, ಕೋಗಿಲೆ, ಕೌಜುಗ, ಗಿಡುಗ, ಕಾಜಾಣ, ಚಿವುಟ ಗುಬ್ಬಿ ಮೊದಲಾದ ಪಕ್ಷಿಗಳು ಒಳಗೊಂಡಂತೆ ಒಂದು ಕುಟುಂಬದ ಸದಸ್ಯರಂತೆ ನಲಿದಾಡಿಕೊಂಡಿವೆ.

ಹೀಗೆ ಗೂಳೆಪ್ಪ ಕಾಡಿಗೆ ಅಂಟಿಕೊಂಡ ಕಥೆಯೂ ಕುತೂಹಲಕಾರಿಯಾಗಿದೆ. ಸರಿಸುಮಾರು 30 ವರ್ಷದ ಹಿಂದೆ ಅರಣ್ಯ ಇಲಾಖೆಯು ಕಾಡಿನಲ್ಲಿ ಸಸಿ ನೆಡುವ ಕೆಲಸಕ್ಕೆ ದಿನಗೂಲಿ ಲೆಕ್ಕದಲ್ಲಿ ಗೂಳೆಪ್ಪನನ್ನು ಒಳಗೊಂಡಂತೆ ಅನೇಕರನ್ನು ಕೆಲಸಕ್ಕೆ ಹಚ್ಚಿತು. ಹೀಗೆ ಎಲ್ಲರಂತೆ ಗೂಳೆಪ್ಪನೂ ಸಸಿ ನೆಡುತ್ತಾ ಕಾಡಿನ ನಂಟಿಗೆ ಬಿದ್ದ. ಕೆಲಸ ಕಡಿಮೆಯಾದಂತೆ ಇಲಾಖೆ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಬಂತು. ನಂತರ ಮಳೆಗಾಲದ ಆರಂಭಕ್ಕಷ್ಟೇ ಒಂದೆರಡು ತಿಂಗಳುಗಳಿಗೆ ಈ ಕೆಲಸ ಸೀಮಿತವಾಯಿತು. ಬರುಬರುತ್ತಾ ನಿಂತೇ ಹೋಯಿತು. ಹೀಗಿರುವಾಗ ಗೂಳೆಪ್ಪನಿಗೆ ಕಾಡಿನ ನಂಟು ಅಷ್ಟೊತ್ತಿಗೆ ಗಟ್ಟಿಯಾಗಿತ್ತು. ಇಲಾಖೆಯವರು ಕೂಲಿ ಕೊಟ್ರೆಷ್ಟು ಬಿಟ್ರೆಷ್ಟು ಸಸಿ ನೆಡುತ್ತಾ ಕಾಡನ್ನ ಕಾಯ್ತೀನಿ ಎಂಬ ನಿರ್ಧಾರಕ್ಕೆ ಬಂದರು. ಈ ಮಧ್ಯೆ ಅರಣ್ಯ ಇಲಾಖೆಯು ನೇಮಿಸಿದ ಕಾಡಿನ ವಾಚರುಗಳು ತಮ್ಮ ಎಂದಿನ ಸಂಬಳಕ್ಕಾಗಿ ಡ್ಯೂಟಿ ಮಾಡುತ್ತಿದ್ದರೆ, ಗೂಳೆಪ್ಪ ಕೂಲಿಯೂ ಇಲ್ಲದೆ ಕಾಡು ಕಾಯುವುದನ್ನು ತನ್ನ ನಿತ್ಯದ ಕರ್ಮವನ್ನಾಗಿಸಿಕೊಂಡ.

ದಿನವೂ ಗೂಳೆಪ್ಪನ ದಿನಚರಿ ಶುರುವಾಗುವುದು ಬೆಳಗ್ಗೆ 5 ಗಂಟೆಗೆ. ಅಷ್ಟೊತ್ತಿಗೆ ಊಟ ಮಾಡಿ, ಬುತ್ತಿ ನೀರು ತಗೊಂದು ಕೈಲೊಂದು ಮಚ್ಚು ಕೋಲಿಡಿದು ಕಾಡಿಗೆ ಹೊರಟರೆ ಮತ್ತೆ ಬರುವುದು ಸಂಜೆ ಏಳರ ಹೊತ್ತಿಗೆ. ಇಂತಹ ದಿನಚರಿಯನ್ನು ಈಗ್ಗೆ 30 ವರ್ಷಗಳಿಂದ ಮಾಡುತ್ತಾ ಬಂದಿರುವುದೇ ಒಂದು ಅಪರೂಪದ ಸಂಗತಿಯಾಗಿದೆ. ಗೂಳೆಪ್ಪ ಕಾಡಿಗೆ ಹೋಗುವುದನ್ನು ನೋಡಿದರೆ ಸಾಕು ಯಾರೂ ಆ ಕಡೆ ಸುಳಿಯುವುದಿಲ್ಲ. ಮರ ಕಡಿಯುವುದಿರಲಿ ಆಡು ಕುರಿ ದನಕರು ಮೇಯಿಸುವುದೂ ಇಲ್ಲಿ ನಿಷಿದ್ಧ. ಕೆಲವೊಮ್ಮೆ ಈತನ ಕಣ್ತಪ್ಪಿಸಿ ಮರ ಕಡಿವ ಕೆಲವರನ್ನು ರೇಂಜರರಿಗೆ ಹಿಡಿದುಕೊಟ್ಟದ್ದಕ್ಕೆ ಗೂಳೆಪ್ಪ ಊರವರ ವಿರೋಧವನ್ನೂ ಎದುರಿಸಬೇಕಾಯಿತು. ಇದರಿಂದಾಗಿ ಸುತ್ತಮುತ್ತಣ ಊರವರ ಜತೆ ಸಣ್ಣಪುಟ್ಟ ಜಗಳಗಳೂ ಮನಸ್ತಾಪಗಳೂ ನಡೆದವು. ಇದೀಗ ಇಂತಹ ಯಾವ ಸಂಘರ್ಷಗಳೂ ನಡೆಯುವಂತಿಲ್ಲ. ಸುತ್ತಮುತ್ತಣ ಊರವರಿಗೆ ಗೂಳೆಪ್ಪನ ಬಗ್ಗೆ ಎಂಥದೋ ಪ್ರೀತಿಸ್ನೇಹದ ಬೆಸುಗೆ ಸಾಧ್ಯವಾಗಿದೆ.

ಗೂಳೆಪ್ಪನ ಮನದಲ್ಲಿ ಅವಿತು ಕುಳಿತು ಬಿಕ್ಕಳಿಸುವ ದುಃಖದ ಕಡಲೊಂದಿದೆ. ಅದು ಗೂಳೆಪ್ಪನನ್ನು ಇನ್ನಷ್ಟು ಗಟ್ಟಿಗೊಳಿಸಿದಂತಿದೆ. ಆರು ಜನ ಮಕ್ಕಳು ಚಿಕ್ಕವರಿರುವಾಗಲೆ ಮಡದಿ ಅಕಾಲಿಕ ಮರಣವನ್ನಪ್ಪುತ್ತಾಳೆ. ಮಡದಿಯ ಸಾವು ಗೂಳೆಪ್ಪನನ್ನು ಇನ್ನಿಲ್ಲದ ಕಷ್ಟಕ್ಕೆ ಸಿಲುಕಿಸುತ್ತದೆ. ಇಂತಹ ಕಡುಕಷ್ಟದಲ್ಲಿ ಗೂಳೆಪ್ಪ ಮಕ್ಕಳಿಗೆ ಅಡುಗೆ ಮಾಡಿಟ್ಟು, ಅವರನ್ನೆಲ್ಲಾ ಶಾಲೆಗೆ ಕಳಿಸಿ ಮತ್ತೆ ತನ್ನ ಕಾಡುಕಾಯುವ ಕಾಯಕಕ್ಕೆ ಹೋಗುತ್ತಿದ್ದರು. ಈ ಮಧ್ಯೆ ಮರುಮದುವೆಗೆ ಸಲಹೆಗಳು ಬಂದರೂ ಗೂಳೆಪ್ಪ ಅತ್ತ ಕಡೆ ಗಮನ ಹರಿಸಲಿಲ್ಲ. ಬಹುಶಃ ಕಾಡಿನ ಗಿಡ ಮರ ಬಳ್ಳಿಗಳ ಜತೆಗಿನ ಒಡನಾಟವೇ ಅವರ ಒಂಟಿತನವನ್ನು ನೀಗಿ ಜೀವನೋತ್ಸಾಹವನ್ನು ತುಂಬಿದಂತಿದೆ.

ಗೂಳೆಪ್ಪನ ಈತನಕದ ಅನುಭವದಲ್ಲಿ ಹತ್ತು ಜನ ರೇಂಜರುಗಳು ಬಂದುಹೋಗಿದ್ದಾರೆ. ಇದರಲ್ಲಿ ದಿದಿಗಿ ಸಾಹೇಬರು ಎನ್ನುವ ರೇಂಜರನ್ನು ಗೂಳೆಪ್ಪ ಪ್ರೀತಿಯಿಂದ ನೆನೆಯುತ್ತಾರೆ. ಅವರು ತುಂಬಾ ಸ್ಟ್ರಿಕ್ಟ್ ಆಫೀಸರ್ ಆಗಿದ್ದರು ಯಾವ ಪಿಳ್ಳೆ ನರಿಯೂ ಕಾಡನ್ನು ಪ್ರವೇಶ ಮಾಡುವಂತಿರಲಿಲ್ಲ ಎನ್ನುವುದು ಆತನ ಅಭಿಪ್ರಾಯ. ಹಾಗಾಗಿ ಇವರಿದ್ದಾಗ ಗೂಳೆಪ್ಪನಿಗೆ ಆನೆಯ ಬಲ ಬಂದಂತಾಗಿತ್ತು. ಈ ಸಂದರ್ಭದಲ್ಲಿಯೇ ಗೂಳೆಪ್ಪನ ದಿನಗೂಲಿಯು ಸಂಬಳವಾಗಿ ಪರಿವರ್ತನೆ ಹೊಂದಿತು. ಇದರಿಂದಾಗಿ ಇದೀಗ ಗೂಳೆಪ್ಪ ನಿಯಮಿತವಾಗಿ ಒಂದಷ್ಟು ಸಂಬಳವನ್ನು ಪಡೆಯುವಂತಾಗಿದೆ. ಗೂಳೆಪ್ಪ ಕಾಯುವ ಕಾಡು ಗುಡೆಕೋಟೆ ಕರಡಿಧಾಮದ ವ್ಯಾಪ್ತಿಗೆ ಬಂದಿದೆ. ಎಂದಿನಂತೆ ಕಾಡಿನ ಮರ ಗಿಡ ಬಳ್ಳಿ ಹಕ್ಕಿ ಕ್ರಿಮಿಕೀಟ ಪ್ರಾಣಿಗಳ ಜತೆ ಪಿಸುಮಾತನ್ನಾಡುತ್ತಾ ಗೂಳೆಪ್ಪ ಕಾಡು ಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

  • ಅರುಣ್ ಜೋಳದ ಕೂಡ್ಲಿಗಿ

ಇದನ್ನೂ ಓದಿ: ಲೈಂಗಿಕ ವೃತ್ತಿಯಿಂದ ಲೇಖಕಿಯಾಗಿ ಬದಲಾದ ನಳಿನಿ ಜಮೀಲಾಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...