Homeಮುಖಪುಟಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

ಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

- Advertisement -
- Advertisement -

ಸಂಶೋಧಕ, ಯುವ ಬರಹಗಾರ ಅರುಣ್ ಜೋಳದಕೂಡ್ಲಿಗಿಯವರು ತಮ್ಮ ಎಲೆ ಮರೆ-7ರ ಅಂಕಣದಲ್ಲಿ ಭಟ್ರಳ್ಳಿ ಗೂಳೆಪ್ಪನವರ ಬಗ್ಗೆ ಬರೆದಿದ್ದರು. ಈಗ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ ದೊರೆತಿದೆ.

ನಂಜುಂಡಪ್ಪ ಅವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ಚಳ್ಳಕೆರೆ ಒಳಗೊಂಡಂತೆ ಮೊಳಕಾಲ್ಮೂರು ತಾಲೂಕು ಸೇರುತ್ತದೆ. ಹಾಗೆ ನೋಡಿದರೆ ಇದು ಕರ್ನಾಟಕದ ನಡುಮಧ್ಯೆ ಬರುವ ಭೂಭಾಗ. ಈ ಬಯಲ ಬಿಸಿಲಿಗೆ ಬಿರುಕುಬಿಟ್ಟ ನೆಲದಂತೆಯೂ, ಬಟ್ಟಂಬಯಲ ಆಲಯದಂತೆಯೂ ಇದೆ. ಹಿರಿಯೂರು ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಚಲಿಸುತ್ತಿದ್ದರೆ ಈ ಭಾಗದ ಬಂಡೆಗಳಿಂದ ಸುತ್ತುವರಿದ ಬೆಟ್ಟಗಳು ಎದುರಾಗುತ್ತವೆ. ಬಿತ್ತನೆ ಇಲ್ಲದ ಹೊಲಗಳು ಬಿಸಿಲ ಉಡುಪುತೊಟ್ಟು ದುಃಖಿಸುತ್ತಿರುವಂತೆ ಭಾಸವಾಗುತ್ತದೆ. ಸಂಗಾತಿಯಾಗಿ ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳಂತಹ ಕುರುಚಲು ಕಾಡು ಅಲ್ಲಲ್ಲಿ ಕುಪ್ಪೆಕುಪ್ಪೆಯಾಗಿ ಕಾಣುತ್ತದೆ. ಈ ಮಧ್ಯೆಯೂ ಜೀವಚೈತನ್ಯದ ಕುರುಹು ಎಂಬಂತೆ ಹಾಡುವ ಹಕ್ಕಿಗಳು ಸುಳಿದಾಡುವ ಜೀವರಾಶಿ. ಉಳಿದಂತೆ ಬಯಲೆಂಬ ಬಯಲ ಜತೆ ಬಿಸಿಲೆಂಬ ಬಿಸಿಲು. ಇಂತಹ ಪರಿಸರದಲ್ಲಿ ಹಸಿರಿನ ಕನಸೊತ್ತು ಕಾಡಿನ ಕಾವಲಿಗೆ ತನ್ನ ಜೀವವನ್ನೆ ತೇದು ಗಂಧದ ವಾಸನೆ ಬೀರಿದಾತ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಟ್ರಳ್ಳಿಯ ತಳವಾರ ಗೂಳೆಪ್ಪ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾಲಸಾಗರ ವ್ಯಾಪ್ತಿಯ ರಕ್ಷಿತ ಅರಣ್ಯವನ್ನು ಪ್ರವೇಶಿಸುತ್ತಿದ್ದಂತೆ ಭಟ್ರಳ್ಳಿ ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಹಚ್ಚಹಸಿರಿನ ಕಾಡು ಸಿಗುತ್ತದೆ. ನಾನೊಮ್ಮೆ ಗೂಳೆಪ್ಪನನ್ನು ಭೇಟಿ ಮಾಡಲೆಂದು ಹೋದಾಗ ಗೂಳೆಪ್ಪ ಮಾತನಾಡುತ್ತಾ ಕಾಡಿನೊಳಗೆ ಕರೆದುಕೊಂಡು ಹೋಗತೊಡಗಿದರು. ತಾನು ಅಲ್ಲಲ್ಲಿ ತೋಡಿದ ನೀರುಗುಂಡಿಗಳನ್ನು ತೋರಿಸುತ್ತಾ ನೀರು ನಿಲ್ಲಿಸುವ ಸಾಹಸದ ಕಥೆಗಳನ್ನು ಹೇಳತೊಡಗಿದರು. ನಡಿಗೆಯ ಆರಂಭದಲ್ಲಿ ಬಿಡಿಬಿಡಿಯಾಗಿದ್ದ ಗಿಡಮರಗಳು ನಿಧಾನಕ್ಕೆ ಹೆಚ್ಚಾಗತೊಡಗಿದವು. ಮುಂದೆ ಸ್ವಲ್ಪ ದೂರದಲ್ಲಿ ಸಾಲುಸಾಲು ಆಸಿನ (ಆರಿಗಿಡ) ಮರಗಳು ಕಾಣತೊಡಗಿದವು. 50 ಹೆಕ್ಟೇರ್ ಪ್ರದೇಶದ ಈ ಕಾಡನ್ನು ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಕಾಪಿಟ್ಟಿದ್ದಾನೆ.
ಗೂಳೆಪ್ಪ ಈ ಮರಗಳನ್ನು ಯಾವಾಗ ನೆಟ್ಟವು ಎಂದು ಲೆಕ್ಕ ಇಟ್ಟು ಹೇಳುತ್ತಾರೆ. ಕೆಲವು 1995 ರಲ್ಲಿ ನೆಟ್ಟವಾಗಿದ್ದರೆ ಮತ್ತೆ ಕೆಲವು 1997 ರಲ್ಲಿ ನೆಟ್ಟವುಗಳು. ಅವೆಲ್ಲಾ ಈಗ ಎತ್ತರಕ್ಕೆ ಬೆಳೆದು ಗೂಳೆಪ್ಪನ ಹೆಸರೇಳುತ್ತಿವೆ. ಇಡೀ ಕಾಡಿನ ಜೀವನಾಡಿಯನ್ನು ಕೇಳಿಸಿಕೊಳ್ಳುವಷ್ಟು ಈ ಕಾಡಿನ ಜತೆ ಈತ ಬೆಸೆದುಕೊಂಡಿದ್ದಾನೆ. ಈ ಕಾಡನ್ನು ಸುತ್ತಿದ್ದರೆ ಕಡಿದು ಮೊಟಕಾದ ಒಂದೇ ಒಂದು ಬೊಡ್ಡೆಯೂ ಕಾಣಲು ಸಿಗುವುದಿಲ್ಲ. ಅಷ್ಟರಮಟ್ಟಿಗೆ ಗೂಳೆಪ್ಪನ ಕಾವಲು ಕಾಡನ್ನು ಸಂರಕ್ಷಿಸಿದೆ. ಆಲ, ಬೇವು, ಅರಳಿ, ನೇರಲ, ಬಿಕ್ಕೆ, ಕಮರ, ತಪ್ಸೆ, ದೊಂಡು ಜಾಲಿ, ಉಲಿಪೆ, ಸಪಳೆ, ಆಸು ಹೀಗೆ ಹತ್ತಾರು ಜಾತಿಯ ಮರಗಿಡಗಳು ನಿರಾತಂಕವಾಗಿ ಬೆಳೆಯುತ್ತಿವೆ. ಕವಳೆ, ಸೀತಾಫಲ, ಬಿಕ್ಕೆ, ಕಾರೆ, ಬರಗಿ, ಬೆಳವಿ, ಹುಣಸೆ, ಹತ್ತಿ ಮುಂತಾದ ಹಣ್ಣಿನ ಮರಗಿಡಗಳು ಕಾಲಾನುಸಾರ ಹಣ್ಣು ಕೊಡುತ್ತಿವೆ. ಕರಡಿ, ಕಾಡುಹಂದಿ, ಚಿರತೆ, ನರಿ, ಮೊಲ, ತೋಳ ಮೊದಲಾದ ಪ್ರಾಣಿಗಳು, ನವಿಲು, ಬೆಳವ, ಕೋಗಿಲೆ, ಕೌಜುಗ, ಗಿಡುಗ, ಕಾಜಾಣ, ಚಿವುಟ ಗುಬ್ಬಿ ಮೊದಲಾದ ಪಕ್ಷಿಗಳು ಒಳಗೊಂಡಂತೆ ಒಂದು ಕುಟುಂಬದ ಸದಸ್ಯರಂತೆ ನಲಿದಾಡಿಕೊಂಡಿವೆ.

ಹೀಗೆ ಗೂಳೆಪ್ಪ ಕಾಡಿಗೆ ಅಂಟಿಕೊಂಡ ಕಥೆಯೂ ಕುತೂಹಲಕಾರಿಯಾಗಿದೆ. ಸರಿಸುಮಾರು 30 ವರ್ಷದ ಹಿಂದೆ ಅರಣ್ಯ ಇಲಾಖೆಯು ಕಾಡಿನಲ್ಲಿ ಸಸಿ ನೆಡುವ ಕೆಲಸಕ್ಕೆ ದಿನಗೂಲಿ ಲೆಕ್ಕದಲ್ಲಿ ಗೂಳೆಪ್ಪನನ್ನು ಒಳಗೊಂಡಂತೆ ಅನೇಕರನ್ನು ಕೆಲಸಕ್ಕೆ ಹಚ್ಚಿತು. ಹೀಗೆ ಎಲ್ಲರಂತೆ ಗೂಳೆಪ್ಪನೂ ಸಸಿ ನೆಡುತ್ತಾ ಕಾಡಿನ ನಂಟಿಗೆ ಬಿದ್ದ. ಕೆಲಸ ಕಡಿಮೆಯಾದಂತೆ ಇಲಾಖೆ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಬಂತು. ನಂತರ ಮಳೆಗಾಲದ ಆರಂಭಕ್ಕಷ್ಟೇ ಒಂದೆರಡು ತಿಂಗಳುಗಳಿಗೆ ಈ ಕೆಲಸ ಸೀಮಿತವಾಯಿತು. ಬರುಬರುತ್ತಾ ನಿಂತೇ ಹೋಯಿತು. ಹೀಗಿರುವಾಗ ಗೂಳೆಪ್ಪನಿಗೆ ಕಾಡಿನ ನಂಟು ಅಷ್ಟೊತ್ತಿಗೆ ಗಟ್ಟಿಯಾಗಿತ್ತು. ಇಲಾಖೆಯವರು ಕೂಲಿ ಕೊಟ್ರೆಷ್ಟು ಬಿಟ್ರೆಷ್ಟು ಸಸಿ ನೆಡುತ್ತಾ ಕಾಡನ್ನ ಕಾಯ್ತೀನಿ ಎಂಬ ನಿರ್ಧಾರಕ್ಕೆ ಬಂದರು. ಈ ಮಧ್ಯೆ ಅರಣ್ಯ ಇಲಾಖೆಯು ನೇಮಿಸಿದ ಕಾಡಿನ ವಾಚರುಗಳು ತಮ್ಮ ಎಂದಿನ ಸಂಬಳಕ್ಕಾಗಿ ಡ್ಯೂಟಿ ಮಾಡುತ್ತಿದ್ದರೆ, ಗೂಳೆಪ್ಪ ಕೂಲಿಯೂ ಇಲ್ಲದೆ ಕಾಡು ಕಾಯುವುದನ್ನು ತನ್ನ ನಿತ್ಯದ ಕರ್ಮವನ್ನಾಗಿಸಿಕೊಂಡ.

ದಿನವೂ ಗೂಳೆಪ್ಪನ ದಿನಚರಿ ಶುರುವಾಗುವುದು ಬೆಳಗ್ಗೆ 5 ಗಂಟೆಗೆ. ಅಷ್ಟೊತ್ತಿಗೆ ಊಟ ಮಾಡಿ, ಬುತ್ತಿ ನೀರು ತಗೊಂದು ಕೈಲೊಂದು ಮಚ್ಚು ಕೋಲಿಡಿದು ಕಾಡಿಗೆ ಹೊರಟರೆ ಮತ್ತೆ ಬರುವುದು ಸಂಜೆ ಏಳರ ಹೊತ್ತಿಗೆ. ಇಂತಹ ದಿನಚರಿಯನ್ನು ಈಗ್ಗೆ 30 ವರ್ಷಗಳಿಂದ ಮಾಡುತ್ತಾ ಬಂದಿರುವುದೇ ಒಂದು ಅಪರೂಪದ ಸಂಗತಿಯಾಗಿದೆ. ಗೂಳೆಪ್ಪ ಕಾಡಿಗೆ ಹೋಗುವುದನ್ನು ನೋಡಿದರೆ ಸಾಕು ಯಾರೂ ಆ ಕಡೆ ಸುಳಿಯುವುದಿಲ್ಲ. ಮರ ಕಡಿಯುವುದಿರಲಿ ಆಡು ಕುರಿ ದನಕರು ಮೇಯಿಸುವುದೂ ಇಲ್ಲಿ ನಿಷಿದ್ಧ. ಕೆಲವೊಮ್ಮೆ ಈತನ ಕಣ್ತಪ್ಪಿಸಿ ಮರ ಕಡಿವ ಕೆಲವರನ್ನು ರೇಂಜರರಿಗೆ ಹಿಡಿದುಕೊಟ್ಟದ್ದಕ್ಕೆ ಗೂಳೆಪ್ಪ ಊರವರ ವಿರೋಧವನ್ನೂ ಎದುರಿಸಬೇಕಾಯಿತು. ಇದರಿಂದಾಗಿ ಸುತ್ತಮುತ್ತಣ ಊರವರ ಜತೆ ಸಣ್ಣಪುಟ್ಟ ಜಗಳಗಳೂ ಮನಸ್ತಾಪಗಳೂ ನಡೆದವು. ಇದೀಗ ಇಂತಹ ಯಾವ ಸಂಘರ್ಷಗಳೂ ನಡೆಯುವಂತಿಲ್ಲ. ಸುತ್ತಮುತ್ತಣ ಊರವರಿಗೆ ಗೂಳೆಪ್ಪನ ಬಗ್ಗೆ ಎಂಥದೋ ಪ್ರೀತಿಸ್ನೇಹದ ಬೆಸುಗೆ ಸಾಧ್ಯವಾಗಿದೆ.

ಗೂಳೆಪ್ಪನ ಮನದಲ್ಲಿ ಅವಿತು ಕುಳಿತು ಬಿಕ್ಕಳಿಸುವ ದುಃಖದ ಕಡಲೊಂದಿದೆ. ಅದು ಗೂಳೆಪ್ಪನನ್ನು ಇನ್ನಷ್ಟು ಗಟ್ಟಿಗೊಳಿಸಿದಂತಿದೆ. ಆರು ಜನ ಮಕ್ಕಳು ಚಿಕ್ಕವರಿರುವಾಗಲೆ ಮಡದಿ ಅಕಾಲಿಕ ಮರಣವನ್ನಪ್ಪುತ್ತಾಳೆ. ಮಡದಿಯ ಸಾವು ಗೂಳೆಪ್ಪನನ್ನು ಇನ್ನಿಲ್ಲದ ಕಷ್ಟಕ್ಕೆ ಸಿಲುಕಿಸುತ್ತದೆ. ಇಂತಹ ಕಡುಕಷ್ಟದಲ್ಲಿ ಗೂಳೆಪ್ಪ ಮಕ್ಕಳಿಗೆ ಅಡುಗೆ ಮಾಡಿಟ್ಟು, ಅವರನ್ನೆಲ್ಲಾ ಶಾಲೆಗೆ ಕಳಿಸಿ ಮತ್ತೆ ತನ್ನ ಕಾಡುಕಾಯುವ ಕಾಯಕಕ್ಕೆ ಹೋಗುತ್ತಿದ್ದರು. ಈ ಮಧ್ಯೆ ಮರುಮದುವೆಗೆ ಸಲಹೆಗಳು ಬಂದರೂ ಗೂಳೆಪ್ಪ ಅತ್ತ ಕಡೆ ಗಮನ ಹರಿಸಲಿಲ್ಲ. ಬಹುಶಃ ಕಾಡಿನ ಗಿಡ ಮರ ಬಳ್ಳಿಗಳ ಜತೆಗಿನ ಒಡನಾಟವೇ ಅವರ ಒಂಟಿತನವನ್ನು ನೀಗಿ ಜೀವನೋತ್ಸಾಹವನ್ನು ತುಂಬಿದಂತಿದೆ.

ಗೂಳೆಪ್ಪನ ಈತನಕದ ಅನುಭವದಲ್ಲಿ ಹತ್ತು ಜನ ರೇಂಜರುಗಳು ಬಂದುಹೋಗಿದ್ದಾರೆ. ಇದರಲ್ಲಿ ದಿದಿಗಿ ಸಾಹೇಬರು ಎನ್ನುವ ರೇಂಜರನ್ನು ಗೂಳೆಪ್ಪ ಪ್ರೀತಿಯಿಂದ ನೆನೆಯುತ್ತಾರೆ. ಅವರು ತುಂಬಾ ಸ್ಟ್ರಿಕ್ಟ್ ಆಫೀಸರ್ ಆಗಿದ್ದರು ಯಾವ ಪಿಳ್ಳೆ ನರಿಯೂ ಕಾಡನ್ನು ಪ್ರವೇಶ ಮಾಡುವಂತಿರಲಿಲ್ಲ ಎನ್ನುವುದು ಆತನ ಅಭಿಪ್ರಾಯ. ಹಾಗಾಗಿ ಇವರಿದ್ದಾಗ ಗೂಳೆಪ್ಪನಿಗೆ ಆನೆಯ ಬಲ ಬಂದಂತಾಗಿತ್ತು. ಈ ಸಂದರ್ಭದಲ್ಲಿಯೇ ಗೂಳೆಪ್ಪನ ದಿನಗೂಲಿಯು ಸಂಬಳವಾಗಿ ಪರಿವರ್ತನೆ ಹೊಂದಿತು. ಇದರಿಂದಾಗಿ ಇದೀಗ ಗೂಳೆಪ್ಪ ನಿಯಮಿತವಾಗಿ ಒಂದಷ್ಟು ಸಂಬಳವನ್ನು ಪಡೆಯುವಂತಾಗಿದೆ. ಗೂಳೆಪ್ಪ ಕಾಯುವ ಕಾಡು ಗುಡೆಕೋಟೆ ಕರಡಿಧಾಮದ ವ್ಯಾಪ್ತಿಗೆ ಬಂದಿದೆ. ಎಂದಿನಂತೆ ಕಾಡಿನ ಮರ ಗಿಡ ಬಳ್ಳಿ ಹಕ್ಕಿ ಕ್ರಿಮಿಕೀಟ ಪ್ರಾಣಿಗಳ ಜತೆ ಪಿಸುಮಾತನ್ನಾಡುತ್ತಾ ಗೂಳೆಪ್ಪ ಕಾಡು ಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

  • ಅರುಣ್ ಜೋಳದ ಕೂಡ್ಲಿಗಿ

ಇದನ್ನೂ ಓದಿ: ಲೈಂಗಿಕ ವೃತ್ತಿಯಿಂದ ಲೇಖಕಿಯಾಗಿ ಬದಲಾದ ನಳಿನಿ ಜಮೀಲಾಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...