ಅರಾವಳಿ ಬೆಟ್ಟಗಳ ಹೊಸ ವ್ಯಾಖ್ಯಾನದಿಂದ ಪರಿಸರದ ಮೇಲಾಗುವ ಹಾನಿಯ ಕುರಿತು ದೇಶದ ಜನರು ತೀವ್ರ ಆತಂಕ ಮತ್ತು ಕಳವಳ ವ್ಯಕ್ತಪಡಿಸುತ್ತಿರುವ ಹಿನ್ನೆಲೆ, ಸುಪ್ರೀಂ ಕೋರ್ಟ್ ಈ ಕುರಿತು ಸ್ವಯಂ ಪ್ರೇರಿತ (Suo Motu Case) ಪ್ರಕರಣ ಕೈಗೆತ್ತಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೆ.ಕೆ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎ.ಜಿ ಮಸೀಹ್ ಅವರನ್ನೊಳಗೊಂಡ ರಜಾ ಕಾಲದ ಪೀಠವು ಡಿಸೆಂಬರ್ 29ರ ಸೋಮವಾರ ಈ ವಿಷಯವನ್ನು ವಿಚಾರಣೆ ನಡೆಸಲಿದೆ.
ನೈಸರ್ಗಿಕ ಪರಿಸರದ ವಿಚಾರದಲ್ಲಿ ಅತ್ಯಂತ ಮಹತ್ವ ಹೊಂದಿರುವ, ಭೂಮಿ ಬರಡಾಗುವುದನ್ನು ತಡೆಗಟ್ಟುವ, ಹವಾಮಾನ ವೈಪರೀತ್ಯಗಳನ್ನು ಸರಿದೂಗಿಸುವ ಮತ್ತು ಅಂತರ್ಜಲ ಮಟ್ಟವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಅರಾವಳಿ ಬೆಟ್ಟಗಳ ಪರಿಷ್ಕೃತ ವ್ಯಾಖ್ಯಾನದ ವಿರುದ್ದ ದೇಶದಾದ್ಯಂತ ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಭಟನೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ, ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದೆ.
ಅರಾವಳಿ ಬೆಟ್ಟಗಳ ವ್ಯಾಖ್ಯಾನವನ್ನು ದುರ್ಬಲಗೊಳಿಸುವ ಹೊಸ ಕ್ರಮವು ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ಕಾನೂನುಬದ್ಧಗೊಳಿಸಬಹುದು ಎಂಬ ಭಯವನ್ನು ಪರಿಸರ ಗುಂಪುಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ವ್ಯಕ್ತಪಡಿಸಿವೆ.
ಅರಾವಳಿ ಎಂಬುವುದು ಉತ್ತರ ಭಾರತದಲ್ಲಿ ಹರಡಿರುವ ಹಳೆಯ ಬೆಟ್ಟಗಳ ಶ್ರೇಣಿಯಾಗಿದೆ. ಇದು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಮೂಲಕ ಹಾದುಹೋಗುತ್ತದೆ.
ಈ ಬೆಟ್ಟಗಳು ಮತ್ತು ಶ್ರೇಣಿಗಳನ್ನು ಪ್ರತಿ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಅಂದರೆ, ಒಂದು ರಾಜ್ಯದಲ್ಲಿ ‘ಅರಾವಳಿ’ ಎಂದರೆ ಏನು ಎಂದು ಪರಿಗಣಿಸಲಾಗುತ್ತದೆಯೋ ಅದು ಮತ್ತೊಂದು ರಾಜ್ಯದಲ್ಲಿ ಬೇರೆಯಾಗಿರಬಹುದು. ಈ ವಿರೋಧಾಭಾಸದ ವ್ಯಾಖ್ಯಾನಗಳು ಕಾನೂನು ಮತ್ತು ನಿಯಂತ್ರಣದಲ್ಲಿ ಸಮಸ್ಯೆಗಳನ್ನು ಉಂಟುಮಾಡಿವೆ.
ಈ ವ್ಯತ್ಯಾಸಗಳಿಂದಾಗಿ ನಿಯಂತ್ರಣದಲ್ಲಿ ಅಂತರಗಳು ಉಂಟಾಗಿವೆ. ಅಂದರೆ, ಕೆಲವು ಪ್ರದೇಶಗಳಲ್ಲಿ ಕಾನೂನುಗಳು ಸರಿಯಾಗಿ ಅನ್ವಯಿಸಲು ಸಾಧ್ಯವಾಗದೆ, ಅಕ್ರಮ ಗಣಿಗಾರಿಕೆ ಹೆಚ್ಚಾಗಿದೆ. ಇದರಿಂದ ಪರಿಸರ ಹಾನಿ, ನೀರಿನ ಕೊರತೆ ಮತ್ತು ಇತರ ಸಮಸ್ಯೆಗಳು ಉದ್ಭವಿಸಿವೆ.
ಒಂದು ರಾಜ್ಯದಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದ್ದರೂ, ಮತ್ತೊಂದು ರಾಜ್ಯದ ವ್ಯಾಖ್ಯಾನದಿಂದಾಗಿ ಗಡಿ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದು ಒಟ್ಟಾರೆಯಾಗಿ ಸರ್ಕಾರದ ನಿಯಂತ್ರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಮತ್ತು ಪರಿಸರ ಸಂರಕ್ಷಣೆಗೆ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಏಕರೂಪದ ವ್ಯಾಖ್ಯಾನ ಮತ್ತು ಕಾನೂನುಗಳ ಅಗತ್ಯವಿದೆ.
ಇದನ್ನು ಪರಿಹರಿಸಲು, ಸುಪ್ರೀಂ ಕೋರ್ಟ್ ಈ ಹಿಂದೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.
ಈ ವರ್ಷದ ನವೆಂಬರ್ನಲ್ಲಿ ನೀಡಿದ ತೀರ್ಪಿನಲ್ಲಿ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ನೇತೃತ್ವದ ಪೀಠವು, ಗಣಿಗಾರಿಕೆಯ ವಿಷಯದಲ್ಲಿ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸಮಿತಿಯು ಶಿಫಾರಸು ಮಾಡಿದ ಕಾರ್ಯಾಚರಣೆಯ ವ್ಯಾಖ್ಯಾನವನ್ನು ಒಪ್ಪಿಕೊಂಡಿತ್ತು.
ಹೊಸ ಶಿಫಾರಸು ಅಥವಾ ವ್ಯಾಖ್ಯಾನದ ಪ್ರಕಾರ, ‘ಅರಾವಳಿ ಬೆಟ್ಟ’ ಎಂದರೆ ಸ್ಥಳೀಯ ಎತ್ತರದಿಂದ (ಅಂದರೆ ಆ ಭೂರೂಪವನ್ನು ಸಂಪೂರ್ಣವಾಗಿ ಆವರಿಸುವ ಕನಿಷ್ಠ ಕಾಂಟೂರ್ ಲೈನ್ನಿಂದ) 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಿರುವ ಯಾವುದೇ ಭೂರೂಪ. ಇದರಲ್ಲಿ ಬೆಟ್ಟದ ಇಳಿಜಾರುಗಳು, ಸಣ್ಣ ಬೆಟ್ಟಗಳು ಮತ್ತು ಸಂಬಂಧಿತ ಪ್ರದೇಶಗಳು ಸೇರಿವೆ.
ಇನ್ನು ‘ಅರಾವಳಿ ಶ್ರೇಣಿ’ ಎಂದರೆ ಎರಡು ಅಥವಾ ಹೆಚ್ಚಿನ ಅರಾವಳಿ ಬೆಟ್ಟಗಳು ಪರಸ್ಪರ 500 ಮೀಟರ್ ಒಳಗೆ ಇದ್ದರೆ, ಅವುಗಳ ನಡುವಿನ ಎಲ್ಲ ಭೂರೂಪಗಳು (ಎತ್ತರ ಕಡಿಮೆ ಇದ್ದರೂ ಸಹ) ಶ್ರೇಣಿಯ ಭಾಗವಾಗಿವೆ ಮತ್ತು ರಕ್ಷಣೆಗೆ ಒಳಪಡುತ್ತವೆ.
ಈ ವ್ಯಾಖ್ಯಾನವು ಹಿಂದಿನ ವಿಭಿನ್ನ ನಿಯಮಗಳಿಂದ ಉಂಟಾದ ಅಂತರಗಳನ್ನು ನಿವಾರಿಸಿ, ಅಕ್ರಮ ಗಣಿಗಾರಿಕೆ ತಡೆಯುವ ಗುರಿಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಆದರೆ, 100 ಮೀಟರ್ಗಿಂತ ಕಡಿಮೆ ಎತ್ತರದ ಬೆಟ್ಟಗಳು ಮತ್ತು ಪ್ರದೇಶಗಳು ಈ ವ್ಯಾಖ್ಯಾನದಿಂದ ಹೊರಗುಳಿದು, ಗಣಿಗಾರಿಕೆ ಅಥವಾ ಅಭಿವೃದ್ಧಿಗೆ ತೆರೆಯಬಹುದು ಎಂಬ ಆತಂಕವಿದೆ. ಪರಿಸರವಾದಿಗಳು ಇದನ್ನು ಅರಾವಳಿಯ ನಿರಂತರತೆ ಮತ್ತು ಜೈವಿಕ ವೈವಿಧ್ಯತೆಗೆ ಹಿನ್ನಡೆ ಎಂದು ಟೀಕಿಸಿದ್ದಾರೆ.
ಕೋರ್ಟ್ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನಿಷೇಧಿಸಿದ್ದು, ಸುಸ್ಥಿರ ಗಣಿಗಾರಿಕೆ ಯೋಜನೆ (MPSM) ತಯಾರಾಗುವವರೆಗೆ ಯಾವುದೇ ಹೊಸ ಚಟುವಟಿಕೆಗಳು ನಿರ್ಬಂಧಿತ ಎಂದಿವೆ.


