ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು ವರದಿಯಾಗಿದೆ.
ಮೇ 22, 2026 ರಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ. ಬಿ ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ.
2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನವರಿ 2026ರಲ್ಲಿ ಸುಪ್ರೀಂ ಕೋರ್ಟ್ನ ದ್ವಿಸದ್ಯ ಪೀಠವು ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. ಆದರೆ, ಮೇ 18, 2026 ರಂದು ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಮತ್ತೊಂದು ಪೀಠವು “ಯುಎಪಿಎ ಪ್ರಕರಣಗಳಲ್ಲೂ ಜಾಮೀನು ನಿಯಮ, ಜೈಲು ಅಪವಾದ” ಎಂದು ಹೇಳಿ, ಹಿಂದಿನ ತೀರ್ಪಿನ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿತ್ತು.
ಸಮಾನ ಬಲದ (Co-ordinate Bench) ಒಂದು ಪೀಠವು ಮತ್ತೊಂದು ಪೀಠದ ತೀರ್ಪನ್ನು ಹೀಗೆ ಟೀಕಿಸುವುದು ನ್ಯಾಯಾಂಗ ಶಿಸ್ತಿಗೆ ವಿರುದ್ಧ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಪೀಠ ಅಭಿಪ್ರಾಯಪಟ್ಟಿದೆ.
ಯುಎಪಿಎನಂತಹ ಕಠಿಣ ಕಾನೂನುಗಳ ಅಡಿಯಲ್ಲಿ, ಕೇವಲ ವಿಚಾರಣೆ ವಿಳಂಬವಾಗಿದೆ ಮತ್ತು ದೀರ್ಘಕಾಲ ಜೈಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಜಾಮೀನು ನೀಡಬಹುದೇ? ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ಬಗೆಹರಿಸಲು ಈ ಪ್ರಕರಣವನ್ನು ಈಗ ವಿಸ್ತೃತ ಪೀಠಕ್ಕೆ ಒಪ್ಪಿಸಲಾಗಿದೆ.
ಮಧ್ಯಂತರ ಜಾಮೀನು ಮಂಜೂರು: ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡುವ ಸಂದರ್ಭದಲ್ಲೇ, ಗಲಭೆ ಪ್ರಕರಣದ ಆರೋಪಿಗಳಾದ ಅಬ್ದುಲ್ ಖಾಲಿದ್ ಸೈಫಿ ಮತ್ತು ತಸ್ಲೀಮ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ 6 ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇಬ್ಬರೂ ಆರೋಪಿಗಳು ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ ಮತ್ತು ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡಬಾರದು ಎಂಬ ಕಠಿಣ ಶರತ್ತುಗಳನ್ನು ವಿಧಿಸಲಾಗಿದೆ.
ಉಮರ್ ಖಾಲಿದ್ಗೆ ನಿಯಮಿತ (ಖಾಯಂ) ಜಾಮೀನು ದೊರೆತಿಲ್ಲ. ಆದರೆ, ಮೇ 22, 2026 ರಂದು ದೆಹಲಿ ಹೈಕೋರ್ಟ್ ಅವರ ತಾಯಿಯ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಮಾನವೀಯತೆಯ ಆಧಾರದ ಮೇಲೆ ಅವರಿಗೆ 3 ದಿನಗಳ ಅವಧಿಗೆ ಮಧ್ಯಂತರ (ತಾತ್ಕಾಲಿಕ) ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಮಧು ಜೈನ್ ಅವರಿದ್ದ ದ್ವಿಸದಸ್ಯ ಪೀಠವು ಉಮರ್ ಖಾಲಿದ್ಗೆ ಜೂನ್ 1 ರಿಂದ ಜೂನ್ 3, 2026 ರವರೆಗೆ ಮಾತ್ರ ತಾತ್ಕಾಲಿಕವಾಗಿ ಬಿಡುಗಡೆ ಹೊಂದಲು ಅನುಮತಿ ನೀಡಿದೆ.
ತಮ್ಮ ತಾಯಿಯ ವೈದ್ಯಕೀಯ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆರೈಕೆ ಮಾಡಲು ಮತ್ತು ಮೃತ ಚಿಕ್ಕಪ್ಪನ ಶ್ರಾದ್ಧದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಉಮರ್ ಖಾಲಿದ್ 15 ದಿನಗಳ ಮಧ್ಯಂತರ ಜಾಮೀನು ಕೋರಿದ್ದರು.
ಜಾಮೀನಿನ 3 ದಿನಗಳ ಅವಧಿಯಲ್ಲಿ ಖಾಲಿದ್ ಕೇವಲ ಒಂದು ಮೊಬೈಲ್ ಫೋನ್ ಬಳಸಬೇಕು ಮತ್ತು ತನಿಖಾಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ ಎಂದು ಕಠಿಣ ಶರತ್ತುಗಳನ್ನು ವಿಧಿಸಲಾಗಿದೆ.
ಮತ್ತೆ ಮುನ್ನೆಲೆಗೆ ಬಂದ ಖಾಲಿದ್, ಇಮಾಮ್ ಪ್ರಕರಣ
ಜನವರಿ 5, 2026 ರಂದು ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು.
ಇವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ತೋರುವುದರಿಂದ, ಯುಎಪಿಎ ಕಾಯ್ದೆಯ ಅಡಿಯಲ್ಲಿ ಸುದೀರ್ಘ ಜೈಲುವಾಸದ ಕಾರಣ ನೀಡಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿತ್ತು. ಅಷ್ಟೇ ಅಲ್ಲದೆ, ಮುಂದಿನ ಒಂದು ವರ್ಷದವರೆಗೆ ಅವರು ಮತ್ತೆ ಜಾಮೀನು ಅರ್ಜಿ ಸಲ್ಲಿಸದಂತೆ ನಿರ್ಬಂಧ ಹೇರಿತ್ತು.
ಮೇ 18, 2026 ರಂದು ಮತ್ತೊಂದು ಪ್ರಕರಣದ (ಸೈಯದ್ ಇಫ್ತಿಕಾರ್ ಅಂದ್ರಾವಿ ಕೇಸ್) ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಜನವರಿ ತಿಂಗಳ ತೀರ್ಪಿನ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿತು.
2021ರ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠ ನೀಡಿರುವ ‘ಕೆ.ಎ. ನಜೀಬ್ ತೀರ್ಪನ್ನು’ ಜನವರಿ ತಿಂಗಳ ಆದೇಶದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಈ ಪೀಠ ಆಕ್ಷೇಪಿಸಿತ್ತು.
‘ಕೆ.ಎ ನಜೀಬ್ ತೀರ್ಪಿನ’ ಪ್ರಕಾರ, ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಸಹ, ಸುದೀರ್ಘ ಕಾಲ ವಿಚಾರಣೆ ನಡೆಯದೆ ಜೈಲಿನಲ್ಲಿ ಇಟ್ಟಿರುವುದು ಸಂವಿಧಾನದ 21ನೇ ವಿಧಿಯ (ವೈಯಕ್ತಿಕ ಸ್ವಾತಂತ್ರ್ಯ) ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಜಾಮೀನು ನೀಡುವುದು ನಿಯಮವೇ ಹೊರತು ಜೈಲು ವಿನಾಯಿತಿಯಲ್ಲ ಎಂದು ನಾಗರತ್ನ ಅವರ ಪೀಠ ಪ್ರತಿಪಾದಿಸಿತ್ತು.
ಸುಪ್ರೀಂ ಕೋರ್ಟ್ನ ಎರಡು ಸಮಾನ ಪೀಠಗಳ (Two-judge Coordinate Benches) ನಡುವೆ ತೀರ್ಪಿನ ಅರ್ಥವಿವರಣೆಯಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯ ಮೂಡಿದ್ದರಿಂದ, ದೆಹಲಿ ಪೊಲೀಸರು ಈ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದರು.
“ಒಂದೇ ಶಕ್ತಿಯ ಪೀಠವು ಮತ್ತೊಂದು ಸಮಾನ ಪೀಠದ ತೀರ್ಪನ್ನು ಭಾಷೆಯ ಮೂಲಕ ದುರ್ಬಲಗೊಳಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ. ಬಿ ವರಾಳೆ ಅವರಿದ್ದ ದ್ವಿಸದಸ್ಯ ಪೀಠವು, ಈ ವಿಷಯದಲ್ಲಿ ಕಾನೂನಿನ ಸ್ಪಷ್ಟತೆ ಅತ್ಯಗತ್ಯ ಎಂದು ಹೇಳಿದೆ.
ಹೀಗಾಗಿ, ಯುಎಪಿಎ ಕಾಯ್ದೆಯ ಸೆಕ್ಷನ್ 43D(5) ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸುದೀರ್ಘ ಜೈಲುವಾಸದ ಆಧಾರದ ಮೇಲೆ ಜಾಮೀನು ನೀಡುವುದರ ಕುರಿತು ಅಂತಿಮ ಹಾಗೂ ಅಧಿಕೃತ ತೀರ್ಪು ನೀಡಲು ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಸೂಕ್ತವಾದ ವಿಸ್ತೃತ ಪೀಠವನ್ನು ರಚಿಸಬೇಕು ಎಂದು ಪ್ರಕರಣವನ್ನು ವರ್ಗಾಯಿಸಲಾಗಿದೆ.
ದೆಹಲಿ ಪೊಲೀಸರು ದಾಖಲಿಸಿರುವ ‘ಪಿತೂರಿ’ ಪ್ರಕರಣವು ಮುಖ್ಯವಾಗಿ ಒಂದು ವಿಷಯದ ಮೇಲೆ ನಿಂತಿದೆ. ಅದೇನೆಂದರೆ, ಸಿಎಎ ಕಾಯ್ದೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಾಗ, ಆರೋಪಿತ ಹೋರಾಟಗಾರರು ವಾಟ್ಸಾಪ್ ಗ್ರೂಪ್ಗಳಲ್ಲಿದ್ದರು ಮತ್ತು ಅದರಲ್ಲಿ ಭಾಗವಹಿಸಿದ್ದರು ಎಂಬುದಾಗಿದೆ.
ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಹಲವು ಬಾರಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯಗಳು ಇವುಗಳನ್ನು ಪದೇ ಪದೇ ಮುಂದೂಡಿವೆ ಮತ್ತು ತಿರಸ್ಕರಿಸಿವೆ. ಜಗತ್ತಿನಾದ್ಯಂತ ಇರುವ ಮಾನವ ಹಕ್ಕುಗಳ ಹೋರಾಟಗಾರರು ಇದನ್ನು ‘ನ್ಯಾಯದ ಅಪಹಾಸ್ಯ’ ಎಂದು ತೀವ್ರವಾಗಿ ಖಂಡಿಸಿದ್ದಾರೆ.
ಫೆಬ್ರವರಿ 2020ರಲ್ಲಿ ನಡೆದ ಮತ್ತು 50ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಹಿಂಸಾಚಾರದ ತನಿಖೆಯಲ್ಲಿ ದೆಹಲಿ ಪೊಲೀಸರ ಪಕ್ಷಪಾತದ ಪಾತ್ರದ ಬಗ್ಗೆ ಪ್ರಶ್ನೆಗಳು ಮುಂದುವರಿದಿವೆ. ಪೊಲೀಸರು ಆರೋಪಿಗಳ ಚಟುವಟಿಕೆಗಳನ್ನು “ಸರ್ಕಾರವನ್ನು ಬದಲಾಯಿಸುವ ಕಾರ್ಯಾಚರಣೆ” ಎಂದು ಕರೆದಿದ್ದಾರೆ. ಅಲ್ಲದೆ, ಈ ಕಾಯ್ದೆಯ ವಿರುದ್ಧದ ಅವರ ಹೋರಾಟವು “ಶಾಂತಿಯುತ ಪ್ರತಿಭಟನೆಯ ಹೆಸರಿನಲ್ಲಿ ಮರೆಮಾಚಲ್ಪಟ್ಟ ತೀವ್ರಗಾಮಿ ಪ್ರಚೋದನೆ” ಎಂದು ಪೊಲೀಸರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ, ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠದ ಇತ್ತೀಚಿನ ಪರಾಮರ್ಶೆ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈಗ ವಿಸ್ತೃತ ಪೀಠಕ್ಕೆ ರವಾನೆಯಾಗಿರುವ ವಿಚಾರದ ತೀರ್ಪು ಕೇವಲ ಖಾಲಿದ್, ಶಾರ್ಜೀಲ್ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಇಂತಹ ಎಲ್ಲಾ ಪ್ರಕರಣಗಳಿಗೂ ಅನ್ವಯಿಸಲಿದೆ. ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ ವಿಚಾರದಲ್ಲಿ ವಿಸ್ತೃತ ಪೀಠ, ಸಂವಿಧಾನ 21ನೇ ವಿಧಿಯಡಿ ರಕ್ಷಿಸಲ್ಪಟ್ಟ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರೆ ಖಾಲಿದ್ ಮತ್ತು ಶಾರ್ಜೀಲ್ ನಿರಾಳರಾಗುವ ಸಾಧ್ಯತೆ. ಒಂದು ವೇಳೆ ಯುಎಪಿಎಯ ಕಠಿಣ ನಿಯಮಗಳನ್ನು ಎತ್ತಿ ಹಿಡಿದರೆ ಮತ್ತೆ ನ್ಯಾಯ ಮರೀಚಿಕೆಯಾಗಬಹುದು.
ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ ವಿಚಾರದಲ್ಲಿ ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್ನ ವಿಸ್ತೃತ ಪೀಠವೇ ಅಂತಿಮ ಪರಿಹಾರ ನೀಡಬೇಕಿದೆ.


