ರಾಜ್ಯ ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
“ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಕಾರ್ಯ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಮಂಡಿಸಿದ ಬಜೆಟ್ ನೋಡಿದರೆ ಇದೊಂದು “ಅಡ್ಡಕಸುಬಿ” ಬಜೆಟ್ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರ, ಗಣಿತ, ಹೀಗೆ ಯಾವ ವೃತ್ತಿಪರತೆಯೂ ಇಲ್ಲ ಎಲ್ಲವೂ ಅಸ್ಪಷ್ಟ, ಗೊಂದಲಮಯ” ಎಂದಿದ್ದಾರೆ.
“2013ರ ನನ್ನ ಮೊದಲ ಬಜೆಟ್ ಹಾಗೂ 2018ರ ಕೊನೆಯ ಬಜೆಟ್ ಗಾತ್ರದ ನಡುವಿನ ವ್ಯತ್ಯಾಸ ರೂ.1.16.000 ಕೋಟಿ. ಈ ಬಾರಿಯ ಬಜೆಟ್ ಗಾತ್ರ ಹಿಂದಿನ ಬಜೆಟ್ಗಿಂತ ಕೇವಲ 1.5% ಹೆಚ್ಚಾಗಿದೆ ಅಷ್ಟೆ. ಹೀಗಾದಾಗ ಎಲ್ಲಾ ವಲಯಗಳ ಅಭಿವೃದ್ಧಿಗೆ ಅಗತ್ಯ ಪ್ರಾಶಸ್ತ್ಯ ನೀಡಲು ಸಾಧ್ಯವಿಲ್ಲ. 14ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ರಾಜ್ಯಕ್ಕೆ 4.71% ಅನುದಾನ ಹಂಚಿಕೆಯಾಗಿತ್ತು. ಇತ್ತೀಚೆಗೆ ಮಂಡಿಸಲಾದ 15ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ಹಂಚಿಕೆ ಪಾಲು 3.64%ಗೆ ಇಳಿಕೆಯಾಗಿದೆ. ಇದರಿಂದ ರೂ.11,215 ಕೋಟಿ ನಷ್ಟವಾಗಿದೆ. ಯಡಿಯೂರಪ್ಪ ಅವರು ಎಲ್ಲದಕ್ಕೂ ಬಜೆಟ್ ಮೂಲಕ ಉತ್ತರಿಸುತ್ತೇನೆ ಅಂತಿದ್ರು, ಈಗೇನು ಹೇಳ್ತಾರೆ?” ಎಂದು ಪ್ರಶ್ನಿಸಿದ್ದಾರೆ.
“ಮಹದಾಯಿ ಯೋಜನೆಗೆ 500 ಕೋಟಿ, ಎತ್ತಿನಹೊಳೆ ಯೋಜನೆಗೆ 1,500 ಕೋಟಿ, ತುಂಗಭದ್ರಾ ಜಲಾಶಯದ ಹೂಳೆತ್ತಲು 20 ಕೋಟಿ ಅನುದಾನ ನೀಡಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ. ರಾಜ್ಯದ ಎರಡು ಜೀವನದಿಗಳಾದ ಕೃಷ್ಣ ಮೇಲ್ದಂಡೆ ಮತ್ತು ಕಾವೇರಿ ನದಿ ಯೋಜನೆಗಳ ಅನುದಾನದ ಬಗ್ಗೆ ಬಜೆಟ್ನಲ್ಲಿ ಯಾವ ಉಲ್ಲೇಖವು ಇಲ್ಲ. ಪ್ರಸಕ್ತ ಬಜೆಟ್ನಲ್ಲಿ ರೈತರ ಸಾಲಮನ್ನಾದ ಬಗ್ಗೆ ಒಂದಕ್ಷರವೂ ಮಾಹಿತಿ ಇಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರ ಹಂತ ಹಂತವಾಗಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿತ್ತು, ಅದರ ಬಗ್ಗೆ ಕನಿಷ್ಠ ಮಾಹಿತಿಯನ್ನಾದರೂ ನೀಡಬೇಕಲ್ಲವೇ?” ಎಂದರು.
“2018ರ ಬಜೆಟ್ನಲ್ಲಿ ನಾನು ಕೃಷಿ, ತೋಟಗಾರಿಕೆ, ನೀರಾವರಿ, ರೇಷ್ಮೆ, ಹೈನುಗಾರಿಕೆ ಸೇರಿದಂತೆ ಇದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಒಟ್ಟು ರೂ.38,073 ಕೋಟಿ ಅನುದಾನ ಮೀಸಲಿಟ್ಟಿದ್ದೆ. ಪ್ರಸಕ್ತ ಬಜೆಟ್ನಲ್ಲಿ ಇದನ್ನು ರೂ.32,259 ಕೋಟಿಗೆ ಇಳಿಕೆ ಮಾಡಲಾಗಿದೆ. ಹಾಗಿದ್ದರೆ, ಇದು ಹೇಗೆ ರೈತಪರ ಬಜೆಟ್ ಆಗಲು ಸಾಧ್ಯ?” ಎಂದು ಹೇಳಿದರು.

ಶಿಕ್ಷಣ ಕ್ಷೇತ್ರಕ್ಕೆ 2018-19ರಲ್ಲಿ ಬಜೆಟ್ನ ಶೇ.12 ಪಾಲು ಇತ್ತು. ಈ ಬಾರಿ ಶೇ.11 ಮಾತ್ರ. ಹಿಂದಿಗಿಂತ ಶೇ.1 ರಷ್ಟು ಕಡಿಮೆ ಮಾಡಲಾಗಿದೆ. ಈ ಅನುದಾನ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣಬೇಕೆ ಹೊರತು ಕಡಿಮೆಯಾಗಬಾರದು. ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಕಳೆದ ಬಾರಿ ರೂ.30,150 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ರೂ.26,131 ಕೋಟಿ ನೀಡಲಾಗಿದೆ. ಸುಮಾರು ರೂ.4000 ಕೋಟಿ ಅನುದಾನ ಕಡಿಮೆಯಾಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಅನುದಾನದ ಗಾತ್ರ ಕೂಡ ಹೆಚ್ಚಾಗಬೇಕು. ಇದು ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ ಎಂಬುದನ್ನು ತೋರಿಸುತ್ತದೆ” ಎಂದಿದ್ದಾರೆ.
“‘ಸಬ್ ಕ ಸಾಥ್, ಸಬ್ ಕ ವಿಕಾಸ್’ ಎನ್ನುವ ಬಿಜೆಪಿ ನಾಯಕರು ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. 5 ಅಲ್ಪಸಂಖ್ಯಾತ ವಸತಿ ಶಾಲೆಗಳ ಅಭಿವೃದ್ಧಿಪಡಿಸುವ ಯೋಜನೆ ಹೊರತುಪಡಿಸಿದರೆ ಈ ಸಮುದಾಯದ ಅಭಿವೃದ್ಧಿಗೆ ಬೇರೆಲ್ಲೂ ನಯಾಪೈಸೆ ಅನುದಾನ ನೀಡುವ ಕುರಿತು ಬಜೆಟ್ನಲ್ಲಿ ತಿಳಿಸಿಲ್ಲ. ಬಿಜೆಪಿ ಸರ್ಕಾರದ ‘ಕಲ್ಯಾಣ ಕರ್ನಾಟಕ’ ಎಂಬುದು ಬರೀ ಘೋಷಣೆಗಷ್ಟೇ ಸೀಮಿತವಾಗಿದೆ. ನಮ್ಮ ಸರ್ಕಾರದ ಕಡೆಯ ಎರಡು ಬಜೆಟ್ನಲ್ಲಿ ಈ ಭಾಗದ ಅಭಿವೃದ್ಧಿಗೆ ತಲಾ ರೂ.1,500 ಕೋಟಿ ಅನುದಾನ ನೀಡಿದ್ದೆ, ಈ ಬಾರಿಯೂ ಅಷ್ಟೇ ಅನುದಾನವನ್ನು ಮೀಸಲಿಡಲಾಗಿದೆ. ಹೆಸರು ಬದಲಾಯಿಸಿದ ಮಾತ್ರಕ್ಕೆ ಈ ಭಾಗದ ಕಲ್ಯಾಣವಾಗುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
“ರೂ.18,000 ಕೋಟಿ ವೆಚ್ಚದ ಉಪನಗರ ರೈಲು ಯೋಜನೆಗೆ ರಾಜ್ಯವು ಕೇವಲ ರೂ.500 ಕೋಟಿ ಅನುದಾನ ಮೀಸಲಿರಿಸಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ರೂ.1 ಕೋಟಿ ಅನುದಾನ ಮೀಸಲಿಟ್ಟಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಈ ಯೋಜನೆ ಆರಂಭವಾಗುವ ಸಾಧ್ಯತೆಗಳೇ ಇಲ್ಲ. ಹೀಗಾದರೆ ನಗರದ ಸಂಚಾರ ದಟ್ಟಣೆ ನಿವಾರಿಸುವುದು ಹೇಗೆ? 2018-19ರಲ್ಲೇ ನಾನು ನಗರೋತ್ಥಾನ ಯೋಜನೆಯಡಿ ರೂ.10,000 ಕೋಟಿಗಳನ್ನು ಬೆಂಗಳೂರು ನಗರವೊಂದಕ್ಕೆ ನೀಡಿದ್ದೆ. ಈ ಬಾರಿ ರೂ.8,772 ಕೋಟಿಗಳನ್ನು ಮೀಸಲಿರಿಸಲಾಗಿದೆ. ಯಡಿಯೂರಪ್ಪ ಅವರು 6 ತಿಂಗಳಲ್ಲಿ ಬೆಂಗಳೂರು ಚಿತ್ರಣ ಬದಲಿಸುತ್ತೀನಿ ಅಂದಿದ್ರು. ಅಧಿಕಾರಕ್ಕೆ ಬಂದು 7 ತಿಂಗಳಾಯ್ತು, ನಗರದ ಚಿತ್ರಣ ಬದಲಾಗಿದೆಯೇ?” ಎಂದು ಕೇಳಿದರು.
“ಮೊನ್ನೆತಾನೆ ಶೇ.10 ರಷ್ಟು ಬಸ್ ದರವನ್ನು ಹೆಚ್ಚಿಸಲಾಗಿತ್ತು. ಏಪ್ರಿಲ್-2020 ರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.1.60, ಡಿಸೇಲ್ ಬೆಲೆ ರೂ.1.59 ರಷ್ಟು ಹೊಸ ತೆರಿಗೆ ಪ್ರಕಾರ ಏರಿಕೆಯಾಗಲಿದೆ. ಇದರ ಜೊತೆಗೆ ಸ್ಲೀಪರ್ ಕೋಚ್ ಬಸ್ ಹಾಗೂ ಮಿನಿ ಬಸ್ಗಳ ಮೇಲೆ ಹೊಸದಾಗಿ ಹೆಚ್ಚುವರಿ ತೆರಿಗೆ ವಿಧಿಸಲು ಹೊರಟಿದ್ದಾರೆ. ವಿತ್ತೀಯ ಜವಾಬ್ದಾರಿ ನೀತಿಯಲ್ಲೇ ಸಾಲ ಪಡೆಯಲು ಅವಕಾಶಗಳಿದ್ದರೂ ನಮ್ಮ ಸರ್ಕಾರವಿದ್ದಾಗ ಸಾಲ ಮಾಡಿ ಹೋಳಿಗೆ ತಿನ್ನುತ್ತೀರಿ ಎಂದು ಬಿಜೆಪಿಯವರು ಹಂಗಿಸುತ್ತಿದ್ದರು. ಈಗ ಅವರೇ ರೂ.52,000 ಕೋಟಿ ಸಾಲ ಮಾಡಲು ಹೊರಟಿದ್ದಾರೆ. ಇದೊಂದು ರೀತಿ ‘ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬಂತೆ ಆಯಿತಲ್ಲವೇ?” ಎಂದು ವ್ಯಂಗ್ಯವಾಡಿದರು.
“ರಾಜ್ಯದ 44 ಇಲಾಖೆಗಳನ್ನು ಆರು ವಲಯಗಳಲ್ಲಿ ವಿಂಗಡಿಸಿ ಇಲಾಖಾವಾರು ಯೋಜನೆ ಮತ್ತು ಅನುದಾನಗಳನ್ನು ಪ್ರತ್ಯೇಕವಾಗಿ ನಮೂದಿಸದೆ ತೆರಿಗೆದಾರರ ದಾರಿ ತಪ್ಪಿಸುವ ಹುನ್ನಾರವನ್ನು ಬಜೆಟ್ನಲ್ಲಿ ಕಾಣಬಹುದು. ತಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಇಂತಹದ್ದೊಂದು ಕುತಂತ್ರವನ್ನು ಮಾಡಿದ ಹಾಗೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಬಜೆಟ್ ತಯಾರಿಕೆಯನ್ನು ಗಂಭೀರವಾಗಿ ಸ್ವೀಕರಿಸದೆ ಕಾಟಾಚಾರಕ್ಕೆ ಮಾಡಿ ಮುಗಿಸಿದಂತಿದೆ. ಈ ಬಜೆಟ್ನ ಇನ್ನಷ್ಟು ಹುಳುಕುಗಳನ್ನು ಒಂದೊಂದಾಗಿ ಮುಂದಿನ ದಿನಗಳಲ್ಲಿ ಜನತೆಯ ಮುಂದೆ ಬಿಚ್ಚಿಡುತ್ತೇನೆ” ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.


