ಜಗತ್ತಿನಾದ್ಯಂತ 18.5 ಲಕ್ಷ ಜನರಿಗೆ ಕೊರೋನಾ ಸೋಂಕು ಅಂಟಿದೆ. ಈ ಮಹಾಮಾರಿ ವೈರಸ್ನಿಂದ 1.14 ಲಕ್ಷ ಮಂದಿ ಈಗಾಗಲೇ ಅಸುನೀಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 9000 ದಾಟಿದ್ದು, 250ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲೂ 247ಜನಕ್ಕೆ ಸೋಂಕು ತಗುಲಿದ್ದು 6ಜನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಗತ್ತಿಗೆ ಪಿಡುಗಾಗಿ ಪರಿಣಮಿಸುತ್ತಿರುವ ಕೊರೋನಾ ಸದ್ಯದ ಮಟ್ಟಿಗಂತೂ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣವೂ ಗೋಚರವಾಗುತ್ತಿಲ್ಲ.
ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಜಗತ್ತಿನ ಎಲ್ಲಾ ಸರ್ಕಾರಗಳು ಜನಪ್ರತಿನಿಧಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಪೊಲೀಸರು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ತಮ್ಮ ದೇಶದ ಜನ ಪ್ರಾಣವನ್ನು ಉಳಿಸಿಕೊಳ್ಳಲು ಕಟಿಬದ್ಧರಾಗಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಆದರೆ, ಈ ನಡುವೆ ಕರ್ನಾಟಕದ ಆರೋಗ್ಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಡಿರುವ ಆ ಒಂದು ಕೆಲಸ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಏನಿದು ಸುಧಾಕರ್ ಪ್ರಕರಣ?
ಸಚಿವ ಕೆ. ಸುಧಾಕರ್ ಭಾನುವಾರ ಮಕ್ಕಳ ಜೊತೆ ಈಜುಕೊಳದಲ್ಲಿ ಆಟವಾಡುತ್ತಿದ್ದ ಪೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, “ತುಂಬಾ ದಿನಗಳ ನಂತರ ನಾನು ನನ್ನ ಮಕ್ಕಳ ಜೊತೆ ಈಜುಕೊಳದಲ್ಲಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ” ಎಂದು ಬರೆದಿದ್ದಾರೆ.
ಆದರೆ ಸಚಿವರ ಈ ಟ್ವೀಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. “ಲಾಕ್ ಡೌನ್ ಸಮಯದಲ್ಲಿ ವೈದ್ಯರು, ಪೊಲೀಸರು ಕಷ್ಟ ಪಡುತ್ತಿದ್ದಾರೆ. ನೀವು ಈ ಸಮಯದಲ್ಲಿ ಎಂಜಾಯ್ ಮಾಡುತ್ತಿದ್ದೀರ? ವೈದ್ಯಕೀಯ ಮಂತ್ರಿಯಾಗಿ ನಿಮಗೆ ಜವಾಬ್ದಾರಿ ಇಲ್ಲವೇ? ಹೀಗೆ ಮನೆಮಂದಿಯೊಂದಿಗೆ ನೀವು ವಿಶ್ರಾಂತಿ ಮೂಡ್ನಲ್ಲಿ ಇರುವುದು ಸರಿಯಾದರೂ ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಅಗತ್ಯ ಏನಿತ್ತು?” ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಚಿವ ಕೆ. ಸುಧಾಕರ್ ತಮ್ಮ ಟ್ವಿಟರ್ ಅಕೌಂಟ್ನಿಂದ ಆ ಪೋಟೋವನ್ನು ಡಿಲೀಟ್ ಮಾಡಿದ್ದಾರೆ.
When the whole world is going through a health crisis, the Corona in-charge Minister Dr. Sudhakar is behaving irresponsibly by spending time in a swimming pool.
It's a matter of moral & ethical standards. He must resign out of his own accord & CM should sack him from the cabinet pic.twitter.com/ZQlRzMoqrb
— DK Shivakumar (@DKShivakumar) April 13, 2020
ಈ ಪ್ರಕರಣದ ಕುರಿತು ಇಂದು ಟ್ವೀಟ್ ಮಾಡುವ ಮೂಲಕ ಸಚಿವ ಕೆ. ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಇಡೀ ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ, ಕೊರೋನಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಈಜುಕೊಳದಲ್ಲಿ ಸಮಯ ಕಳೆಯುವ ಮೂಲಕ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಇದು ನೈತಿಕ ಮಾನದಂಡಗಳ ವಿಷಯವಾಗಿದ್ದು, ಅವರು ತಮ್ಮ ಸ್ವಂತ ಇಚ್ಚೆಯಿಂದ ರಾಜೀನಾಮೆ ನೀಡಬೇಕು ಅಥವಾ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಸಚಿವ ಸಂಪುಟದಿಂದ ಸಚಿವ ಸುಧಾಕರ್ ಅವರನ್ನು ಹೊರಹಾಕಬೇಕು” ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ದಣಿದು ಬೆವರ ತೊಳೆಯುತ್ತಿರುವ ಡಾ.ಸುಧಾಕರ್ ಗೊಂದು ಲೈಕ್ ಕೊಡೋಣವೇ???
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡ್ತಾ ಇರೋ ವೈದ್ಯಕೀಯ ಸಿಬ್ಬಂದಿಗೆ ಕೂಡಾ ಈ ಅವಕಾಶ ಇದೆಯಾ? ಎಂದು ಡಾ.ಮಹೇಂದ್ರ ಕೆ ರಂಗಪ್ಪ ಎಂಬುವವರು ಪ್ರಶ್ನಿಸಿದ್ದಾರೆ.