ಶೃಂಗೇರಿಯಲ್ಲಿ ಶಂಕರಾಚಾರ್ಯ ಗೋಪುರದ ಮೇಲೆ ಬಾವುಟವನ್ನು ಹಾಕಿದ್ದನ್ನು ಎಸ್ಡಿಪಿಐ ಪಕ್ಷದ ಹಾಗೂ ಸ್ಥಳೀಯ ಮುಸ್ಲಿಂ ಸಮುದಾಯದ ತಲೆಗೆ ಕಟ್ಟಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಮಾಜಿ ಶಾಸಕ ಜೀವರಾಜ್ ಹಾಗೂ ಸಂಗಡಿಗರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ರಾಜ್ಯ ಸಮಿತಿ ಆಗ್ರಹಿಸಿದೆ.
ಘಟನೆಯನ್ನು ಅತ್ಯಂತ ಕಳವಳಕಾರಿಯೂ ಗಂಭೀರವೂ ಆಗಿದೆ ಎಂದಿರುವ ಪಕ್ಷವು ಇದು ಸಮಾಜದಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಹುಟ್ಟಿಸುವ ಉದ್ದೇಶಪೂರ್ವಕ ಕೃತ್ಯವಾಗಿದೆ ಹಾಗೂ ಕೋಮು ಸೌಹಾರ್ದತೆಯನ್ನು ಕೆಡಿಸಿ ಸಮಾಜದ ಶಾಂತಿ ಹಾಗೂ ನೆಮ್ಮದಿ ಕೆಡಿಸುವ ಷಡ್ಯಂತ್ರವೂ ಆಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಶೃಂಗೇರಿ ಘಟನೆಯ ಸಿಸಿಟಿವಿ ವಿಡಿಯೋ ನೋಡಿ: ಮಸೀದಿಯಿಂದ ಧ್ವಜ ಕದ್ದುಕೊಂಡು ಹೋದದ್ದು ಯಾರು?
ಕೃತ್ಯ ಎಸಗಿದ ಮಿಲಿಂದ್ ಮೇಲೆ ಇನ್ನೂ ಎಫ್ಐಆರ್ ದಾಖಲಿಸದೆ ಇರುವುದನ್ನು ಉಲ್ಲೇಖಿಸಿದ ಪಕ್ಷವು, “ಅವರ ಮೇಲೆ ಸ್ವಯಂ ಪ್ರಕರಣ ದಾಖಲಿಸಬೇಕಾದ ಪ್ರಕರಣ ಇದಾಗಿದ್ದರೂ ಪೋಲೀಸರಿಂದ ಇನ್ನೂ ದೂರು ದಾಖಲಾಗಿಲ್ಲ. ಮುಸ್ಲಿಮರು ಕೂಡಾ ದೂರು ದಾಖಲು ಮಾಡಿದ್ದರು ಈವರೆಗೂ ಪೋಲೀಸರು ಎಫ್ಐಆರ್ ದಾಖಲಿಸಲಿಲ್ಲ. ಪೋಲೀಸರಿಗೆ ಧಮಕಿ ಹಾಕಿದ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸದ ಜೀವರಾಜ್ ಹಾಗೂ ಆತನ ಸಂಗಡಿಗರ ಮೇಲೆ ದೂರು ದಾಖಲಿಸಿದರೂ ಪೊಲೀಸರು ಎಫ್ಐಆರ್ ಮಾಡಿಲ್ಲ. ಇದು ಅತ್ಯಂತ ಅನ್ಯಾಯವಾಗಿದೆಯಲ್ಲದೆ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರಲ್ಲಿ ಅಭದ್ರತೆಯನ್ನು ಹಾಗೂ ಪ್ರಶ್ನೆಯನ್ನು ಹುಟ್ಟುಹಾಕಿದೆ” ಎಂದು ಹೇಳಿದೆ.
“ಪೊಲೀಸರು ಸ್ಥಳೀಯ ಮೂವರು ಮುಸ್ಲಿಂ ಯುವಕರ ಮೇಲೆ ಎಫ್ಐಆರ್ ದಾಖಲಿಸಿ ಅಂದು ರಾತ್ರಿ ಇಡೀ ಠಾಣೆಯಲ್ಲಿ ಕೂಡಿಹಾಕಿದ್ದರು. ಆ ಬಾವುಟವು ಎಸ್ಡಿಪಿಐ ಪಕ್ಷದ್ದಾಗಿರಲಿಲ್ಲ. ಅದು ಶೃಂಗೇರಿಯ ಮಸೀದಿಯಲ್ಲಿ ಕಟ್ಟಿದ ಬಾವುಟವಾಗಿತ್ತು. ಮಸೀದಿಯ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮನೋಹರ್ ಯಾನೆ ಮಿಲಿಂದ್ ಎಂಬಾತನು ಮಾಡಿದ್ದು ಕಂಡು ಬಂತು. ಒಂದು ವೇಳೆ ಮಸೀದಿಯಲ್ಲಿ ಸಿಸಿಟಿವಿ ಇಲ್ಲದಿದ್ದಲ್ಲಿ ಆ ಕೃತ್ಯ ಮುಸ್ಲಿಂ ಹುಡುಗರು ಮಾಡಿದ್ದೆಂದು ಮತ್ತು ಅದರಿಂದ ಶೃಂಗೇರಿಯಲ್ಲಿ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇತ್ತು.” ಎಂದು ಪಕ್ಷ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆ ಮೇಲೆ ಹಸಿರು ಬಾವುಟ; ಕೋಮು ಗಲಭೆ ಸೃಷ್ಟಿಸಲು ಸಂಚು?
ಶೃಂಗೇರಿಯಲ್ಲಿ ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಸಂಚು ಹೂಡಿದ ಮಿಲಿಂದ್, ಜೀವರಾಜ್ ಮತ್ತು ಅವರ ಸಂಗಡಿಗರ ಮೇಲೆ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಅಡ್ಡಿಯಾಗಿರುವುದು ಏನು ಎನ್ನುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ ಪಕ್ಷವು ಮಿಲಿಂದ್, ಜೀವರಾಜ್ ಮತ್ತು ಸಂಗಡಿಗರ ಮೇಲೆ ಕೂಡಲೇ ಎಫ್ಐಆರ್ ದಾಖಲಿಸಬೇಕು ಹಾಗೂ ಅವರನ್ನು ಬಂಧಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲೆತ್ನಿಸಿದ ಅವರ ಸಂಚನ್ನು ಹಾಗೂ ಅವರ ಹಿಂದಿರುವ ಶಕ್ತಿಯನ್ನು ಪೊಲೀಸರು ಬಯಲಿಗೆಳೆಯಬೇಕೆಂದು ಕೋರಿದೆ.
ಚಿಕ್ಕಮಗಳೂರು ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಫರಂಗಿಪೇಟೆ, ಎಸ್ಡಿಪಿಐ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಅಝ್ಮತ್ ಪಾಷಾ, ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಿಕಂದರ್ ಪಾಷಾ ಉಪಸ್ಥಿತರಿದ್ದರು.
ಓದಿ: ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ ಮತ್ತು ಶೃಂಗೇರಿಯಲ್ಲಿ ತಾಲಿಬಾನಿಗಳು – ಬಿ.ಚಂದ್ರೇಗೌಡ